Site icon Vistara News

Karnataka Elections | ನನ್ನ ಸ್ಪರ್ಧೆ ಏನಿದ್ದರೂ ಕಾರ್ಕಳದಲ್ಲೇ, ಬೇರೆ ಎಲ್ಲೂ ಹೋಗಲ್ಲ ಎಂದ ಸಚಿವ ಸುನಿಲ್‌ ಕುಮಾರ್‌

V Sunil kumar

ಉಡುಪಿ: ʻʻಸುನಿಲ್ ಕುಮಾರ್‌ಗೆ ಕಾರ್ಕಳದಲ್ಲೇ ರಾಜಕೀಯ ಜನ್ಮ. ಸುನಿಲ್ ಕುಮಾರ್‌ ರಾಜಕೀಯ ಕೊನೆಯೂ ಇಲ್ಲೇʼʼ- ಹೀಗೆಂದು ಸ್ಪಷ್ಟವಾಗಿ ಹೇಳಿದರು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌. ಸುನಿಲ್‌ ಕುಮಾರ್‌ ಈ ಬಾರಿ (Karnataka Elections) ಕಾರ್ಕಳದಿಂದ ಸ್ಪರ್ಧಿಸುತ್ತಿಲ್ಲವಂತೆ, ಬೆಂಗಳೂರಿನೀಂದ ಕಣಕ್ಕಿಳಿಯುತ್ತಾರಂತೆ ಎಂಬಿತ್ಯಾದಿ ವದಂತಿಗಳಿಗೆ ಸಚಿವರೇ ಶನಿವಾರ ಸ್ಪಷ್ಟನೆ ನೀಡಿದರು.

ʻʻಕಾರ್ಕಳದಿಂದ ನಾನು ಸ್ಪರ್ಧಿಸುವ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಯಾರೋ ನಾಲ್ಕೈದು ಜನ ಮಾತನಾಡುತ್ತಾರೆ. ಅದರೆ, ಸಾವಿರಾರು ಜನ ಕಾರ್ಯಕರ್ತರಿಗೆ ಅದನ್ನು ತಡೆಯುವ ಶಕ್ತಿ ಇದೆ. ಅಪಪ್ರಚಾರದ ಬಾಯಿಗಳನ್ನು ಮುಚ್ಚಿಸುವ ಶಕ್ತಿ ಇದೆʼʼ ಎಂದು ಮಾಧ್ಯಮ ಗೋಷ್ಠಿಯಲ್ಲಿ ಸುನಿಲ್‌ ಹೇಳಿದರು.

ʻʻಸುನಿಲ್ ಕುಮಾರ್ ಹತ್ರ 100 ಲಾರಿ ಇದೆ ಅಂದ ಪ್ರಚಾರ ಮಾಡಿದ್ರು. ನನ್ನ ಜಾತಿ ಯಾವುದು ಗೊಂದಲ ಇದೆ ಅಂದಿದ್ದರು. ನಗರದ ಜಿಎಸ್‌ಬಿ ಸಮುದಾಯ ನನ್ನನ್ನು ವಿರೋಧಿಸುತ್ತಿದೆ ಎಂದೆಲ್ಲಾ ಹೇಳಿದರು. ಸುನಿಲ್ ಕುಮಾರ್‌ಗೆ ಬಂಟ ಸಮುದಾಯ ವಿರೋಧವಿದೆ, ಬಿಲ್ಲವರು ಅವರಿಗೆ ವೋಟು ಹಾಕಲ್ಲ ಎಂದೆಲ್ಲ ಸುಳ್ಳು ಸುದ್ದಿ ಹಬ್ಬಿಸಿದರು. ಈಗ ನಾನು ಕಾರ್ಕಳದಲ್ಲಿ ಸ್ಪರ್ಧಿಸಲ್ಲ ಬೆಂಗಳೂರಿನಲ್ಲಿ ಚುನಾವಣೆಗೆ ನಿಲ್ತೇನೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ.. ಎಲ್ಲವೂ ಸುಳ್ಳುʼʼ ಎಂದರು ಸುನಿಲ್‌ ಕುಮಾರ್‌.

ʻʻಕೆಲವರು ಮಿಂಚು ಹುಳದ ರೂಪದಲ್ಲಿ ಬರುತ್ತಾರೆ. ಮಳೆಗಾಲದಲ್ಲಿ ಅಣಬೆಗಳ ತರ ಹುಟ್ಟಿಕೊಳ್ಳುತ್ತಾರೆ. ಮಳೆ ಇಲ್ಲದಾಗ ಇವರಿಗೆ ಅಸ್ತಿತ್ವವೇ ಇರುವುದಿಲ್ಲ. ಬಿಜೆಪಿ ಕಾರ್ಕಳದಲ್ಲಿ ಒಂದು ಆಲದ ಮರದಂತೆ ಬೆಳೆದು ನಿಂತಿದೆʼʼ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಇಷ್ಟೆಲ್ಲ ಆಗಿರುವುದು ಬಿಜೆಪಿ ಸರಕಾರದಿಂದಲೇ
ʻʻರಾಜ್ಯದಲ್ಲಿ ಗೋ ಹತ್ಯೆ ನಿಷೇಧವಾಗಬೇಕಾದರೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಬೇಕಾಯಿತು. ನಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಸರ್ಕಾರಿ ಗೋಶಾಲೆ ಘೋಷಣೆಯಾಗಿದೆ. ಲವ್ ಜಿಹಾದ್ ವಿರುದ್ಧ ಕಾನೂನು ರಚನೆ ಚಿಂತನೆ ನಡೆದಿರುವುದು ನಮ್ಮ ಕಾಲದಲ್ಲಿ. ಮತಾಂತರ ನಿಷೇಧ ಕಾಯಿದೆ ಜಾರಿ ಮಾಡಿದ್ದು ನಾವು. ಹನುಮಗಿರಿಗೆ 100 ಕೋಟಿ ರೂಪಾಯಿ ನೀಡಿದ್ದು ನಮ್ಮ ಸರ್ಕಾರ. ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಆಗಬೇಕು ಎಂದು ತೀರ್ಮಾನ ತೆಗೆದುಕೊಂಡಿದ್ದು ಬಿಜೆಪಿ ಸರಕಾರ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದ ಕಾರಣಕ್ಕೆ ಇಷ್ಟೆಲ್ಲಾ ಕೆಲಸವಾಗಿದೆʼʼ ಎಂದು ಸುನಿಲ್‌ ಕುಮಾರ್‌ ನೆನಪಿಸಿದರು.

ಶಿವಸೇನೆ ಗಟ್ಟಿ ಎಂದು ನಂಬಿದ್ದೆವು
ʻʻಹಿಂದೆ ಶಿವಸೇನೆಯ ಹಿಂದುತ್ವ ಬಹಳ ಒಳ್ಳೆಯದು ಎಂದು ನಮಗೆ ಅನಿಸುತ್ತಿತ್ತು. ಶಿವಸೇನೆಯ ನಾಯಕರು ಹೇಳಿಕೆ ಕೊಟ್ಟರೆ ಶಹಬ್ಬಾಸ್ ಎನ್ನುತ್ತಿದ್ದೆವು. ಬಿಜೆಪಿ-ಸಂಘ ಪರಿವಾರದ ಹಿಂದುತ್ವಕ್ಕಿಂತ ಶಿವಸೇನೆ ಗಟ್ಟಿ ಎಂದು ಭಾವಿಸಿದ್ದೆವು. ಆದರೆ, ಈಗ ಅದೇ ಶಿವಸೇನೆ ವೈಯಕ್ತಿಕ ಹಿತಾಸಕ್ತಿಗೋಸ್ಕರ, ಅಧಿಕಾರದ ಲಾಲಸೆಗೋಸ್ಕರ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದನ್ನು ಈ ದೇಶ ಯಾವತ್ತು ಮರೆಯಲು ಸಾಧ್ಯವಿಲ್ಲʼʼ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವರೂ ಆಗಿರುವ ಸುನಿಲ್‌ ಹೇಳಿದರು.

Exit mobile version