Site icon Vistara News

ಮರಾಠ ಮೀಸಲಾತಿ ಕಿಚ್ಚು; 2ನೇ ದಿನವೂ ಕರ್ನಾಟಕ-ಮಹಾರಾಷ್ಟ್ರ ಬಸ್ ಸಂಚಾರ ಸ್ಥಗಿತ

Bus Stop

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟದ (Maratha Reservation) ಕಿಚ್ಚು ಮುಂದುವರಿದ ಹಿನ್ನೆಲೆಯಲ್ಲಿ ಎರಡನೇ ದಿನವಾದ ಬುಧವಾರವೂ ಕರ್ನಾಟಕ- ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಸ್ಥಗಿತಗೊಂಡಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಚಿಕ್ಕೋಡಿ ವಿಭಾಗದಿಂದ ಮಹಾರಾಷ್ಟ್ರಕ್ಕೆ ತೆರಳುವ 215ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ಇನ್ನು ಬಸ್ ಸಂಚಾರ ಸ್ಥಗಿತವನ್ನೇ ಖಾಸಗಿ ವಾಹನ ಚಾಲಕರು ಬಂಡವಾಳ ಮಾಡಿಕೊಂಡಿಕೊಂಡು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ಮಾರ್ಗಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಪ್ಪಾಣಿವರೆಗೆ, ಮೀರಜ್ ಮಾರ್ಗದಲ್ಲಿ ತೆರಳುವ ಬಸ್‌ಗಳು ಕಾಗವಾಡವರೆಗೆ ಹಾಗೂ ಇಚಲಕರಂಜಿಗೆ ತೆರಳುವ ಬಸ್‌ಗಳು ಬೋರಗಾಂವವರೆಗೆ ಮಾತ್ರ ಸಂಚರಿಸುತ್ತಿವೆ. ಹೀಗಾಗಿ ನಿಪ್ಪಾಣಿಯಿಂದ ಕೊಲ್ಹಾಪುರದತ್ತ ತೆರಳಲು ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.

MES Protest at Belagavi

ನಿಪ್ಪಾಣಿಯಿಂದ ಕೊಲ್ಹಾಪುರಕ್ಕೆ 69 ರೂ. ದರ ಇದ್ದರೆ ಖಾಸಗಿ ವಾಹನಗಳಲಲ್ಲಿ 150 ರೂಪಾಯಿ ಚಾರ್ಜ್ ಮಾಡಲಾಗುತ್ತಿದೆ. ನಿತ್ಯ ಕರ್ನಾಟಕದಿಂದ ಕೊಲ್ಹಾಪುರ ಮಹಾಲಕ್ಷ್ಮಿ ದೇವಿ ದರ್ಶನಕ್ಕೆ ತೆರಳುವ ಸಾವಿರಾರು ಭಕ್ತರು, ಮತ್ತೊಂದೆಡೆ ಮೀರಜ್‌ನ ಆಸ್ಪತ್ರೆಗೆ ತೆರಳುವ ರೋಗಿಗಳು, ಬಸ್‌ ಸಂಚಾರವಿಲ್ಲದೆ ತೊಂದರೆ ಪಡುವಂತಾಗಿದೆ.

ಇದನ್ನೂ ಓದಿ | Karnataka Rajyotsava: ನಾಡದ್ರೋಹಿ ಎಂಇಎಸ್‌ನಿಂದ ಕರಾಳ ದಿನಾಚರಣೆಗೆ ಕರೆ, ಶಿವಸೇನೆ ಬೆಂಬಲ

ಪ್ರತಿಭಟನೆ ಮಾಡಿ ಮನವಿ ನೀಡಿ, ಆದರೆ ಬಸ್‌ಗಳಿಗೆ ಬೆಂಕಿ ಹಚ್ಚಬೇಡಿ ಎಂದು ಪ್ರಯಾಣಿಕರ ಮನವಿ ಮಾಡುತ್ತಿದ್ದು, ಕರ್ನಾಟಕ- ಮಹಾರಾಷ್ಟ್ರ ಉಭಯ ಸರ್ಕಾರಗಳು ಮಾತುಕತೆ ನಡೆಸಿ ಸಂಚಾರ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.

ಕರಾಳ ದಿನ ಆಚರಿಸಿ ಉದ್ಧಟತನ ಮೆರೆದ ಎಂಇಎಸ್‌; ಕೈಕಟ್ಟಿ ಕುಳಿತ ಜಿಲ್ಲಾಡಳಿತ

MES Protest at Belagavi

ಬೆಳಗಾವಿ: ಕರ್ನಾಟಕದಲ್ಲಿದ್ದು ಇಲ್ಲಿನ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಜೀವನ ಸಾಗಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ (Maharashtra Ekikaran Samiti – ಎಂಇಎಸ್‌) ಪುಂಡಾಟಿಕೆ ಮಿತಿಮೀರಿದೆ. ಕನ್ನಡ ರಾಜ್ಯೋತ್ಸವ ದಿನದಂದು (Karnataka Rajyotsava) ಕರಾಳ ದಿನ ಆಚರಣೆಗೆ (Black Day celebrations) ಅನುಮತಿ ನೀಡದಿದ್ದರೂ ಪ್ರತಿಭಟನಾ ರ‍್ಯಾಲಿ ಮಾಡಿರುವ ನಾಡದ್ರೋಹಿಗಳು ನಿಪ್ಪಾಣಿ, ಕಾರವಾರ, ಬೆಳಗಾವಿ, ಬಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿದ್ದಾರೆ. ಒಂದು ಕಡೆ ಅದ್ಧೂರಿ ಕನ್ನಡ ರಾಜ್ಯೋತ್ಸವ (Kannada Rajyotsava) ಕಾರ್ಯಕ್ರಮ ನಡೆದರೆ, ಇನ್ನೊಂದು ಕಡೆ ಎಂಇಎಸ್ ಪುಂಡರು ಕರಾಳ ದಿನವನ್ನು ಆಚರಿಸಿದ್ದಾರೆ. ಕಪ್ಪು ಪಟ್ಟಿ ಧರಿಸಿ ಮೆರವಣಿಗೆ ಮಾಡಲಾಗಿದೆ.

ನಿಷೇಧದ ಮಧ್ಯೆಯೂ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಮೆರೆದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವರು ಕಪ್ಪು ಬಣ್ಣದ ಉಡುಪು ತೊಟ್ಟಿದ್ದರೆ, ಮತ್ತೆ ಕೆಲವರು ಕಪ್ಪು ಪಟ್ಟಿಯನ್ನು ಧರಿಸಿದ್ದರು. ಬೆಳಗಾವಿಯ ಸುಭಾಷ್ ನಗರದ ಆಟದ ಮೈದಾನದಿಂದ ಮೆರವಣಿಗೆಯನ್ನು ಪ್ರಾರಂಭಿಸಲಾಗಿತ್ತು. ಜಿಲ್ಲಾಡಳಿತದ ನಿಷೇಧದ ಮಧ್ಯೆಯೂ ಮೆರವಣಿಗೆ ಮಾಡಲಾಗಿದೆ.

ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಎಂಇಎಸ್ ಕಾರ್ಯಕರ್ತರು ದಿಕ್ಕಾರ ಕೂಗಿದ್ದಾರೆ. ಅಲ್ಲಿಂದ ಮೆರವಣಿಗೆ ಮೂಲಕ ಬೆಳಗಾವಿಯ ಮರಾಠ ಮಂದಿರಕ್ಕೆ ಬಂದು ಸಭೆ ನಡೆಸಿದ್ದಾರೆ. ನಿಪ್ಪಾಣಿ, ಕಾರವಾರ, ಬೆಳಗಾವಿ, ಬಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿದ್ದಾರೆ. ಈ ಬಗ್ಗೆ ಸಭೆಯಲ್ಲಿಯೂ ಚರ್ಚೆ ನಡೆಸಿದ್ದಾರೆ.

ಪೊಲೀಸರಿಂದ ಏಕೆ ಕ್ರಮವಿಲ್ಲ?

ಯಾವುದೇ ಕಾರಣಕ್ಕೂ ನಾಡದ್ರೋಹಿ ಎಂಇಎಸ್‌ನಿಂದ ಕರಾಳ ದಿನವನ್ನು ಆಚರಿಸಲು ಬಿಡುವುದಿಲ್ಲ ಎಂದು ಹಲವು ಸಚಿವರಿಂದ ಹಿಡಿದು ಜಿಲ್ಲಾಧಿಕಾರಿ ಸಹ ಗುಡುಗಿದ್ದರು. ಆದರೆ, ಬುಧವಾರ (ನ. 1) ಎಂಇಎಸ್‌ ಪುಂಡರು ಯಾವುದೇ ಅಡೆತಡೆ ಇಲ್ಲದೆ ಬೆಳಗಾವಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಕಪ್ಪು ಪಟ್ಟಿ ಧರಿಸಿ ಆಕ್ರೋಶವನ್ನು ಹೊರಹಾಕಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧವೂ ಘೋಷಣೆಗಳನ್ನು ಕೂಗಿದ್ದಾರೆ. ಇದಕ್ಕೆ ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದು, ಪೊಲೀಸರು ಏಕೆ ಕ್ರಮಗಳನ್ನು ಕೈಗೊಂಡಿಲ್ಲ? ಎಂಇಎಸ್‌ ಪುಂಡರನ್ನು ಬಂಧಿಸಬೇಕಿತ್ತ ಎಂಬ ಆಗ್ರಹಗಳು ಕೇಳಿ ಬಂದಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version