Site icon Vistara News

Karnataka Politics: 40 ದಿನದ ಕಾಂಗ್ರೆಸ್‌ ಸರ್ಕಾರದ ವಿರುದ್ಧ HDK ಬಾಂಬ್‌: ಸಿಎಂ ಕಚೇರಿಯಲ್ಲಿ 30 ಲಕ್ಷ ರೂ. ಬೇಡಿಕೆ ಇಟ್ಟವರಾರು?

HD Kumaraswamy

ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತ ಅಧಿಕಾರ ಹಿಡಿದ ಕಾಂಗ್ರೆಸ್‌ ಸರ್ಕಾರ ರಚನೆಯಾಗಿ ಇನ್ನೂ 40 ದಿನಗಳಷ್ಟೆ ಆಗಿದ್ದು, ಸರ್ಕಾರದ (Karnataka Politics) ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪವನ್ನು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮಾಡಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್‌ ಪಡೆಯಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಆದರೆ ಈ ಸರ್ಕಾರದಲ್ಲಿ 40%ಗೆ 5% ಸೇರಿ 45% ಕಮಿಷನ್‌ ಪಡೆಯಲಾಗುತ್ತಿದೆ ಎಂದು ಈ ಹಿಂದೆ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದರು. ಆದರೆ ಇದೀಗ ನೇರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧವೇ ಗುಡುಗಿದ್ದಾರೆ. ಸಿಎಂ ಕಚೇರಿಯಲ್ಲೇ, ವರ್ಗಾವಣೆ ಆದೇಶವೊಂದಕ್ಕೆ 30 ಲಕ್ಷ ರೂ. ಬೇಡಿಕೆಯಿಟ್ಟಿದ್ದಾರೆ ಎಂಬ ಆರೋಪ ಮಾಡಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಎಚ್‌.ಡಿ. ಕುಮಾರಸ್ವಾಮಿ ಮಹತ್ವದ ದಾಖಲೆಯನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ. ವರ್ಗಾವಣೆ ಮಾಡಿ ಎಂದು ಕೇಳಲು ಹೋದಾಗ ನಡೆದಿರುವ ಮಾತುಕತೆಯ ವಿಡಿಯೋ ಕುಮಾರಸ್ವಾಮಿ ಅವರ ಬಳಿ ಇದೆ ಎನ್ನಲಾಗಿದ್ದು, ಸಿಎಂ ವಿರುದ್ಧವೋ..ಇಲ್ಲವೇ ಪ್ರಭಾವಿ ಸಚಿವರ ವಿಡಿಯೋ. ಎಂಬುದು ಸ್ಪಷ್ಟವಾಗಿಲ್ಲ. ಬಜೆಟ್ ಅಧಿವೇಶನದ ಸಮಯದಲ್ಲೇ ವಿಡಿಯೊ ಬಿಡುಗಡೆ ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದ್ದಾರೆ. ಅಧಿಕಾರಿಗಳಿಂದಲೇ ವಿಡಿಯೋ ಲಭಿಸಿದೆ ಎನ್ನಲಾಗಿದ್ದು, ಬಜೆಟ್‌ ಅಧಿವೇಶನದ ದಿನವೇ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಜಂಟಿ ಸದನವನ್ನುದ್ದೇಶಿಸಿ ರಾಜ್ಯಪಾಲರ ಭಾಷಣದ ಕುರಿತು ಪ್ರತಿಕ್ರಿಯಿಸಿದ ಎಚ್‌.ಡಿ. ಕುಮಾರಸ್ವಾಮಿ, ಇಂದು ಕಾಂಗ್ರೆಸ್ ಸರ್ಕಾರ ಮೊದಲ ರಾಜ್ಯಪಾಲರ ಭಾಷಣ ಮಾಡಿಸಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ರಾಜ್ಯದ ಹಲವಾರು ಸಮಸ್ಯೆಗಳ ಬಗ್ಗೆ ರಾಜ್ಯಪಾಲರ ಮೂಲಕ ಸದನಕ್ಕೆ, ರಾಜ್ಯದ ಜನೆತೆಗೆ ಸಂದೇಶ ಕೊಟ್ಟಿದ್ದಾರೆ. ರಾಜ್ಯದ ಸಾಧಕರ ಹೆಸರುಗಳನ್ನು ನೆನಪಿಸಿ, ಅವರ ಮಾತನ್ನು ಸ್ಮರಿಸಿದ್ದಾರೆ. ಐದು ಗ್ಯಾರಂಟಿಗಳನ್ನು ಜಾರಿಗೆ ತಂದ ಪಕ್ಷ ಎಂದು ಹೇಳಿಕೊಂಡಿದ್ದಾರೆ. ನಾಡಿನ ಸಾಮಾಜಿಕ ಸಮಸ್ಯೆಗಳು, ವಿವಿಧ ಸಮಸ್ಯೆಗಳು ಬಗಹರಿಸುವ ಸಂದೇಶ ನೀಡಿದ್ದಾರೆ.

ವಸತಿರಹಿತರಿಗೆ ಮನೆ ಕಟ್ಟಿಕೊಡುವುದಾಗಿ ಹೇಳಿದ್ದಾರೆ. ರಾಜ್ಯಪಾಲರ ಸಹಭಾಗಿತ್ವದಲ್ಲಿ ಗ್ರಾಮೀಣ ಮತ್ತು ನಗರಪ್ರದೇಶದ ಅಭಿವೃದ್ಧಿ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಪಶುಸಂಗೋಪನೆಯಿಂದ ಗ್ರಾಮೀಣ ಬದುಕು ಅನೂಕೂಲ ಆಗುತ್ತೆ ಎಂದು ಹೇಳಿದ್ದಾರೆ. ಆದರೆ ಸರ್ಕಾರ ಹಾಲು ಉತ್ಪಾದಕರಿಗೆ ಹಣ ಕಡಿತ ಮಾಡಿದೆ. ಸಿಎಂ ಹೇಳಿದರೂ ಪ್ರೋತ್ಸಾಹ ಧನ ಕಡಿತಗೊಳಿಸಿಲಾಗಿದೆ. ಅನುಗ್ರಹ ಅನ್ನೋ ಯೋಜನೆ ಅನುಷ್ಠಾನ ಮಾಡೋದಾಗಿ ಹೇಳಿದ್ದಾರೆ. ಸರ್ಕಾರದ ಪಕ್ಷಿನೋಟದಲ್ಲಿ ಸ್ಪಷ್ಟತೆ ಇಲ್ಲ. ಹಣದ ಕ್ರೋಢೀಕರಣದ ಬಗ್ಗೆ ಸ್ಪಷ್ಟತೆ ಇಲ್ಲ.

ಭ್ರಷ್ಟಾಚಾರ ಬಗ್ಗೆ ರಾಜ್ಯಪಾಲರು ಮಾತನಾಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡೋಕೆ ಈ ಸರ್ಕಾರಕ್ಕೆ ಯಾವ ನೈತಿಕತೆ ಇದೆ? ಭ್ರಷ್ಟಾಚಾರ ನಿಗ್ರಹಿಸಲು ಯಾವ ಕ್ರಮ ಕೈಗೊಂಡಿದ್ಸೀರಾ? ಸರ್ಕಾರದ ಮಟ್ಟದಲ್ಲಿ ಏನು ನಡೆಯುತ್ತಿದೆ ಎಂದು ಜನ ಮಾತನಾಡುತ್ತಿದ್ದಾರೆ. ವಿರೋಧ ಪಕ್ಷದ ಸದಸ್ಯನಾಗಿ ಸರ್ಕಾರವನ್ನು ಟೀಕಿಸಬೇಕು ಅಂತ ನಾನು ಟೀಕಿಸುತ್ತಿಲ್ಲ. ನಾನು ನಾಲ್ಕೈದು ಬಾರಿ ಶಾಸಕನಾದವನು. ದೇಶ ಮತ್ತು ರಾಜ್ಯಗಳಲ್ಲಿನ ರಾಜಕೀಯ, ಆರ್ಥಿಕ ಪರಿಸ್ಥಿತಿ ಏನಿದೆ ಅಂತ ಕಣ್ಣಮುಂದಿದೆ.

ಈ ಸರ್ಕಾರ ಐಸಿಯುಗೆ ಹೋಗುವ ದಿನಗಳು ದೂರವಿಲ್ಲ. ಈ ಸರ್ಕಾರ ಐಸಿಯು ವೆಂಟಿಲೇಟರ್ ಮೂಲಕ ನಡೆಯಬಹುದು. ಐಸಿಯು ಪರಿಸ್ಥಿತಿಗೆ ಈ ಸರ್ಕಾರದ ಕಾರ್ಯಕ್ರಮಗಳು ಬರಲಿದೆ. ಆರ್ಥಿಕ ಪರಿಸ್ಥಿತಿಗಳು ವೆಂಟಿಲೇಟರ್ ತಲುಪುವ ದಿನ ದೂರವಿಲ್ಲ. ಕಳೆದ ಒಂದೆರೆಡು ವರ್ಷಗಳಲ್ಲಿ ಕಾಂಗ್ರೆಸ್ ನಾಯಕರು ಜಾಗಟೆ ಹೊಡೆದರಲ್ಲ, ಪೇಸಿಎಂ ಅಂತ? ರೋಡ್‌ನಲ್ಲಿ ಪೋಸ್ಟರ್ ಹಾಕಿದ್ರಲ್ಲ ಆಗ ದಾಖಲೆ ಇತ್ತಾ? ಮಧ್ಯಪ್ರದೇಶದಲ್ಲಿ ಕೂಡ ಅದನ್ನೆ ಎಕ್ಸ್‌ಪೆರಿಮೆಂಟ್ ಮಾಡಲಾಗಿದೆ. ಸಿಎಂ ಕಚೇರಿ ಏನಾಗಿದೆ ಅಂತ ಜಗಜ್ಜಾಹಿರಾಗಿದೆ.

ಶಾಸಕರ ಪತ್ರವನ್ನು ಸಿಎಂ ಕಚೇರಿಗೆ ತೆಗೆದುಕೊಂಡು ಹೋದರೆ 30 ಲಕ್ಷ ರೂ. ಕೊಡಿ ಎಂದು ಕೇಳಿದ್ದಾರೆ. ಸಿಎಂ ಕಚೇರಿಯಲ್ಲೆ ದುಡ್ಡು ಕೇಳುತ್ತಿದ್ದಾರೆ. ಬೆಂಗಳೂರು ಕುಲಗೆಡಿಸಿದವರು ಯಾರು? ಬೆಂಗಳೂರು ಯಾಕೆ ಈ ಪರಿಸ್ಥಿತಿಗೆ ಬಂತು? ನಿಮ್ಮ ಯೋಗ್ಯತೆಗೆ ಮಾಸ್ಟರ್ ಪ್ಲಾನ್ ಬಿಡುಗಡೆ ಮಾಡಬೇಕಿತ್ತು. ಯಾಕೆ ಬಿಡಿಎ ಇಟ್ಕೊಂಡಿದ್ದೀರಾ? ಬೆಂಗಳೂರನ್ನ ಐದು ಆರು ಡಿವಿಷನ್ ಮಾಡ್ತಾರಂತೆ. ಹೀಗೆ ಮಾಡಿದ್ರೆ ಮಣ್ಣು ಹಾಕಿಕೊಳ್ಳಬೇಕು. ಬೆಂಗಳೂರು ಕೆರೆ ನಾಶ ಮಾಡಿದ್ದಾರೆ. ಬೆಂಗಳೂರು ಕೆರೆ ಉಳಿಸಿಕೊಂಡಿದ್ರೆ ಈ ಪರಿಸ್ಥಿತಿ ಬರುತ್ತಾ?

ವಿರೋಧ ಪಕ್ಷದ ನಾಯಕನಾಗಿ ಅಂತ ಹೇಳಲ್ಲ ಸದಸ್ಯನಾಗಿ ಸರ್ಕಾರದ ಲೋಪದೋಷಗಳ ಬಗ್ಗೆ ಟೀಕೆ ಮಾಡುತ್ತೇನೆ. ಕುಮಾರಸ್ವಾಮಿ ಹಿಟ್ ಆಂಡ್ ರನ್ ಮಾಡುವವನಲ್ಲ. ಕುಮಾರಸ್ವಾಮಿ ಮಾತನಾಡಿದ್ರೆ ವಿಚಾರ ಇಲ್ಲದೇ ಮಾತನಾಡಲ್ಲ. ಸದನದಲ್ಲಿ ಮಾತನಾಡ್ತೀನಿ. ಆಡಳಿತ ಪಕ್ಷದ ಸಚಿವರಿಗೆ ಪ್ರಶ್ನೆ ಕೇಳೊದು, ಬಿಜೆಪಿಗರ ಮೇಲೆ ಅಷ್ಟು ಆರೋಪ ಮಾಡಿದ್ರಲ್ಲ ಒಂದಾದ್ರೂ ದಾಖಲೆ ಕೊಟ್ಡಿದ್ದೀರಾ? ಜೆಡಿಎಸ್‌ನವರಿಗೆ ಮಾತನಾಡೋಕೆ ಅವಕಾಶವನ್ನೆ ಕೊಟ್ಟಿಲ್ಲ. ಮಾತುಮಾತಿಗೂ ಬಾವಿಗೆ ಇಳಿಯುತ್ತಿದ್ದರೂ ಅವಕಾಶ ನೀಡಿಲ್ಲ.

ಸಾರಿಗೆ ಇಲಾಖೆಯಲ್ಲಿ ವರ್ಗಾವಣೆಯ ಸಿಂಡಿಕೇಟ್ ಇದೆ. ಸಬ್‌ರಿಜಿಸ್ಟ್ರಾರ್‌ ಸಿಂಡಿಕೇಟ್ ಇದೆ. ನನ್ನ ಸರ್ಕಾರದ ಅವಧಿಯಲ್ಲಿ 450 ಜನರ ಲಿಸ್ಟ್ ತಂದಿದ್ರು, ಈಗ ಕಮರ್ಷಿಯಲ್ ಟ್ಯಾಕ್ಸ್ ಸಿಂಡಿಕೇಟ್ ಶುರುವಾಗಿದೆ. ವರ್ಗಾವಣೆ ಸಿಂಡಿಕೇಟ್ ಶುರುವಾಗಿದೆ.

ಇದನ್ನೂ ಓದಿ: Assembly Session: ಹಸಿದವರಿಗೆ ಅನ್ನ ನೀಡದವರು ಜನದ್ರೋಹಿಗಳು: ರಾಜ್ಯಪಾಲರ ಮೂಲಕ ಕೇಂದ್ರಕ್ಕೆ ಚಾಟಿ ಬೀಸಿದ ಸಿದ್ದು ಸರ್ಕಾರ

ನಾನು ಯಾರಿಗೂ ಹೆದರಲ್ಲ. ಹೇಳಬೇಕಾದದನ್ನೆಲ್ಲ ಹೇಳುತ್ತೇನೆ. ಆಯಾ ಇಲಾಖೆಯಲ್ಲಿ ಸರ್ಕಾರದ ಮುಂದೆ ವರ್ಗಾವಣೆ ಲಿಸ್ಡ್ ಕೊಡುತ್ತಾರೆ. ನಮ್ಮ ಸರ್ಕಾರದಲ್ಲೂ ಇದನ್ನು ನಿಲ್ಲಿಸಬಹುದಾಗಿತ್ತು ಎಂದು ಯಾರಾದರೂ ಪ್ರಶ್ನೆ ಮಾಡಬಹುದು. ಆದರೆ ನಾನು ಸ್ವತಂತ್ರನಾಗಿರಲಿಲ್ಲ. ನಾನು ಲಾಟರಿ ನಿಷೇಧ ಮಾಡಿದೆ. ಲಾಟರಿ ನಿಷೇಧ ಮಾಡುವಾಗ ನನಗೆ ಎಷ್ಟು ಜನ ಎಷ್ಟು ಕೋಟಿ ಆಫರ್ ಮಾಡಿದ್ರು? ಬಿಡಿಎ ಪೋಸ್ಟಿಂಗ್‌ಗೆ ಏನೆಲ್ಲ ನಡೀತು? ಆದರೂ ನಾನು ಪೋಸ್ಟಿಂಗ್ ಕೊಟ್ಡಿಲ್ಲ. ನನ್ನ ಸರ್ಕಾರ ಹೋದ 24 ಗಂಟೆಯಲ್ಲಿ ಆ ವ್ಯಕ್ತಿ ಪೋಸ್ಡಿಂಗ್‌ಗೆ ಬಂದ. ನನಗೆ ನೈತಿಕತೆ ಇದೆ ಎಂದರು.

ಮಾಜಿ ಸಚಿವರುಗಳಾದ ಮುನಿರತ್ನ, ಎಸ್‌.ಟಿ. ಸೋಮಶೇಖರ್‌ ಹಾಗೂ ಬೈರತಿ ಬಸವರಾಜು ಅವರ ಕುರಿತು ಪ್ರಸ್ತಾಪಿಸಿದ ಎಚ್‌.ಡಿ. ಕುಮಾರಸ್ವಾಮಿ, ಎಸ್‌ಬಿಎಂ ಎಂದು ಕರೀತಾರಲ್ಲ ಆ ಮೂರು ಜನ ಶಾಸಕರಿಗೆ ಎಷ್ಟು ಅನುದಾನ ಕೊಟ್ಡಿದ್ದೇನೆ‌ ಕೇಳಿ. ಆ ಮೂರು ಕ್ಷೇತ್ರಕ್ಕೆ ಎಷ್ಟು ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದೆ ಅಂತ ಸಿದ್ದರಾಮಯ್ಯ ದಾಖಲೆ ಬಿಡುಗಡೆ ಮಾಡ್ತಾರಾ? ಅನುದಾನ ಕೊಟ್ಡಿಲ್ಲ ಅಂತ ಹೇಳಿದ್ದಾರಲ್ಲ, ಎಷ್ಟು ಕೊಟ್ಡದ್ದೇನೆ ಎಂದು ಹೇಳಿದ್ದಾರಾ? ಕಾಂಗ್ರೆಸ್‌ನ 79 ಜನ ಶಾಸಕರಿಗೆ 19 ಸಾವಿರ ಕೋಟಿ ಅನುದಾನ‌ ಕೊಟ್ಡಿದ್ದೇನೆ.

ಮಹಾರಾಷ್ಟ್ರದಲ್ಲಿ ಒಬ್ಬ ಅಜಿತ್ ಪವಾರ್ ಬಂದಿತ್ತು ಆಯ್ತು. ಕರ್ನಾಟಕದಲ್ಲಿ ಅಂತದ ಅಜಿತ್ ಪವಾರ್ ಯಾವಾಗ ಬರ್ತಾರೋ ನೋಡಬೇಕು ಎಂದು ಮಾರ್ಮಿಕವಾಗಿ ನುಡಿದರು. ಸಿಎಂ ಕಚೇರಿಯಿಂದ ವರ್ಗಾವಣೆ ಆದೇಶ ಬಂದಿದ್ದಕ್ಕೆ ನನ್ನ ಗಮನಕ್ಕೆ ಬರದೇ ಯಾಕೆ ಬಂದಿದ್ದೀಯ ಎಂದು ತಡೆಹಿಡಿದರು. ಈಗಲೂ ಅದು ಮುಂದುವರಿದಿದೆ. ಅದಕ್ಕೆ ಬಿಜೆಪಿಯವರು ಸಮ್ಮಿಶ್ರ ಸರ್ಕಾರ ಎಂದು ಇದನ್ನು ಹೇಳುತ್ತಿರಬಹುದು ಎಂದರು.

Exit mobile version