Site icon Vistara News

Karnataka Politics : ನಾನು ಲೋಕಸಭೆ ಆಕಾಂಕ್ಷಿ; ಟಿಕೆಟ್‌ ಸಿಗದಿದ್ದರೆ ನನ್ನ ದಾರಿ ನನ್ನದು: ರೇಣುಕಾಚಾರ್ಯ

MP Renukacharaya and BS Yediyurappa

ದಾವಣಗೆರೆ: ನಾನು ಲೋಕಸಭಾ ಚುನಾವಣೆ (Lok Sabha Election 2024) ಆಕಾಂಕ್ಷಿ ಆಗಿದ್ದೇನೆ. ಟಿಕೆಟ್ ಬಗ್ಗೆ ಕಾದು ನೋಡುತ್ತೇನೆ. ಒಂದು ವೇಳೆ ಬಿಜೆಪಿಯಿಂದ ಟಿಕೆಟ್ ಸಿಗದೇ ಇದ್ದರೆ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ (Former Chief Minister BS Yediyurappa) ಅವರ ನೆನಪು ಪಕ್ಷಕ್ಕೆ ಈಗ ಆಯಿತೇ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ (Former minister MP Renukacharya) ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) ಏನು ಬೇಕಾದರೂ ಆಗಬಹುದು ಎಂಬ ಸಂದೇಶ ನೀಡಿದ್ದಾರೆ.

ಮಾಜಿ ಶಾಸಕ ಗುರುಸಿದ್ದನಗೌಡ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿ ಭೇಟಿ ಮಾಡಿ ಮಾತನಾಡಿದ ಎಂ.ಪಿ. ರೇಣುಕಾಚಾರ್ಯ, ದೇಶಕ್ಕೆ ಹೇಗೆ ನರೇಂದ್ರ ಮೋದಿ (PM Narendra MOdi) ಅವರೋ ಹಾಗೆಯೇ ರಾಜ್ಯಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ‌ ಅವರಿದ್ದಾರೆ. ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮಹಾನ್ ನಾಯಕರು ಅವರು. ವ್ಯವಸ್ಥಿತವಾಗಿ ಯಡಿಯೂರಪ್ಪ ಅವರನ್ನು ಇಳಿಸುವ ಕೆಲಸ ಮಾಡಿದ್ದರು. ಸಂಚು ಮಾಡಿ ಜೈಲಿಗೆ ಕಳುಹಿಸಿದರು. ನಮ್ಮವರೇ ಆರೋಪ ಹೊರಿಸಿ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರು. 2010-12ರಲ್ಲಿ ಆರೋಪವನ್ನು ಹೊರಿಸಿ ಜೈಲಿಗೆ ಕಳುಹಿಸಿದರು. ಆದರೆ, ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಮಾತನಾಡಿದವರು ಯಾರಿಗೂ ನೋಟಿಸ್ ನೀಡಲಿಲ್ಲ ಎಂದು ಕಿಡಿಕಾರಿದರು.

ಈಗ ನಿಮಗೆ ಬಿ.ಎಸ್.‌ ಯಡಿಯೂರಪ್ಪ ಬೇಕಾ?

ನನ್ನ ಹೋರಾಟ ಯಾರ ವಿರುದ್ಧ ಕತ್ತಿ ಮಸಿಯೋಕೆ ಅಲ್ಲ. ಬಹಳ ಮಾತನಾಡುವವರ ಕೊಡುಗೆ ಏನು? ಸಂಘಟನೆ ಉಳಿಯೋಕೆ ಕೆಲಸ ಮಾಡುತ್ತೇನೆ‌. ನಾಳೆ ಮಾಡಾಳು ವಿರುಪಾಕ್ಷಪ್ಪ ಅವರನ್ನು ಭೇಟಿ ಮಾಡುತ್ತೇನೆ. ನನ್ನನ್ನು ರೆಬೆಲ್ ರೇಣುಕಾಚಾರ್ಯ ಎಂದು ಕರೆದುಕೊಳ್ಳಲಿ. ನನ್ನ ಮೇಲೆ ತೂಗುಗತ್ತಿ ತೂಗುತ್ತಾ ಇದೆ. ನಾನು ಯಾವುದಕ್ಕೂ ಹೆದರಲ್ಲ. ನೋಟಿಸ್‌ಗೆ ಉತ್ತರ ಕೊಡುವುದಿಲ್ಲ. ಬಿ.ಎಸ್.‌ ಯಡಿಯೂರಪ್ಪ ಅವರ ವಿರುದ್ಧ ಮಾತನಾಡಿದವರ ಮೇಲೆ ಮೊದಲು ಕ್ರಮ ಕೈಗೊಳ್ಳಲಿ. ಈಗ ನಿಮಗೆ ಬಿಎಸ್‌ವೈ ಬೇಕಾ ಎಂದು ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ.

ದಾವಣಗೆರೆಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ವಾಗ್ದಾಳಿ

ಸಾಕಷ್ಟು ಡ್ಯಾಮೇಜ್ ಆದ ಮೇಲೆ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಂದೆ ತರಲಾಗಿದೆ. ಆಡು ಮುಟ್ಟದ ಸೊಪ್ಪಿಲ್ಲ, ಬಿಎಸ್‌ವೈ ನೋಡದ ಹಳ್ಳಿ ಇಲ್ಲ. ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೇ ಪಕ್ಷದ ಸೋಲಿಗೆ ಕಾರಣವಾಗಿದೆ. ಗ್ರಾಮ ಪಂಚಾಯಿತಿಯನ್ನು ಗೆಲ್ಲೋಕೆ ಆಗದೇ ಇರುವವರು ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಇವರ ಮುಖ ನೋಡಿ ಪಕ್ಷ ಹೀನಾಯ ಸ್ಥಿತಿಗೆ ತಲುಪಿದೆ. ಈಗ ಮತ ಬೇಕು ಎಂದು ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ಮಾತನಾಡುತ್ತಾ ಇದ್ದಾರೆ ಎಂದು ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದರು.

ನೋಟಿಸ್‌ ನೀಡದೆ ಉಚ್ಚಾಟನೆ ಮಾಡಿದ್ದು ಸರಿಯಲ್ಲ

ನೋಟಿಸ್‌ ನೀಡದೆ ಮಾಜಿ ಶಾಸಕ ಗುರುಸಿದ್ದನಗೌಡ ಅವರನ್ನು ಉಚ್ಚಾಟನೆ ಮಾಡಿದ್ದು ಖಂಡನೀಯ. ಚುನಾವಣೆಯ ಸಂದರ್ಭದಲ್ಲಿ ಓಡಾಡಿ ಪಕ್ಷ ಕಟ್ಟಿದವರು ಅವರು. ಕಳೆದ ವಾರ ಉಚ್ಚಾಟನೆ ಮಾಡುತ್ತಾರೆ ಎಂದರೆ ಹೇಗೆ? ಚುನಾವಣೆಯಲ್ಲಿ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದರೆ ನೋಟಿಸ್ ನೀಡಬೇಕು. ಆದರೆ, ಯಾವುದೇ ನೋಟಿಸ್ ನೀಡದೆ ಪಕ್ಷದಿಂದ ಗುರುಸಿದ್ದನಗೌಡ ಹಾಗೂ ಕುಟುಂಬಸ್ಥರನ್ನು ಉಚ್ಚಾಟನೆ ಮಾಡಿದ್ದಾರೆ. ಇನ್ನು ಅವರ ಪುತ್ರ ರವಿ ಕುಮಾರ್ ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದ್ದರಿಂದ ಅವರು ಬೆಳೆಯಬಾರದು ಎಂದು ಉಚ್ಚಾಟನೆ ಮಾಡಲಾಗಿದೆ. ಇದು ಖಂಡನೀಯ ಎಂದು ಎಂ.ಪಿ. ರೇಣುಕಾಚಾರ್ಯ ಸ್ವಪಕ್ಷ ಬಿಜೆಪಿ ಮೇಲೆಯೇ ಕಿಡಿಕಾರಿದರು.

ಇದನ್ನೂ ಓದಿ: JDS Politics : ಎಚ್‌.ಡಿ. ಕುಮಾರಸ್ವಾಮಿಗೆ ಬಿಜೆಪಿ ಸೇರಿ ಸಿಎಂ ಆಗಲು ಮೋದಿ ಆಫರ್‌ ಕೊಟ್ಟಿದ್ದರು: ಎಚ್.ಡಿ. ದೇವೇಗೌಡ

ರವೀಂದ್ರನಾಥ, ಗುರುಸಿದ್ದನಗೌಡ ಅವರನ್ನು ಮೂಲೆಗುಂಪು ಮಾಡುತ್ತಾರೆ. ಜಿಲ್ಲೆಯ ಐದು ಶಾಸಕರು ಒಟ್ಟಾಗಿ ಸಚಿವ ಸ್ಥಾನ ಕೇಳಿದರೂ ಕೊಡಲು ಬಿಡಲಿಲ್ಲ. ಸಚಿವ ಸ್ಥಾನ ತಪ್ಪಿಸಿದರು. ಏಕಪಕ್ಷೀಯವಾಗಿ ಜಿಲ್ಲಾ ಅಧ್ಯಕ್ಷರು ನಿರ್ಧಾರ ಕೈಗೊಂಡಿದ್ದಾರೆ ಎಂದು ಎಂ.ಪಿ. ರೇಣುಕಾಚಾರ್ಯ ಹೇಳಿದರು.

Exit mobile version