Site icon Vistara News

Karnataka Bandh : ಸಚಿವ ಜಮೀರ್‌ ನಿಂಬೆ ಹಣ್ಣು ಕೊಟ್ಟರು ಎಂದ ಕರವೇ ನಾರಾಯಣ ಗೌಡ; ನಾಯಕತ್ವಕ್ಕಾಗಿ ಮುನಿಸು!

Karave narayana gowda infront of kpcc office

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ (Cauvery water Dispute) ಸಂಬಂಧಪಟ್ಟಂತೆ ರಾಜ್ಯಾದ್ಯಂತ ಜನರ ಆಕ್ರೋಶ ಭುಗಿಲೆದ್ದಿದೆ. ಕರ್ನಾಟಕ ಬಂದ್‌ (Karnataka Bandh) ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹುತೇಕ ಕರ್ನಾಟಕ ಸ್ತಬ್ಧವಾಗಿದೆ. ಆದರೆ, ಕರ್ನಾಟಕ ಬಂದ್‌ಗೆ ಕರವೇ ಅಧ್ಯಕ್ಷ ಕೆ. ನಾರಾಯಣ ಗೌಡ (Karve President K Narayana Gowda) ಬೆಂಬಲ ವ್ಯಕ್ತಪಡಿಸಿಲ್ಲ. ಬದಲಾಗಿ ಶುಕ್ರವಾರ ನಾರಾಯಣ ಗೌಡ ಅವರು ಕೆಪಿಸಿಸಿ ಕಚೇರಿಯಲ್ಲಿ (KPCC Office) ಸಚಿವ ಜಮೀರ್‌ ಅಹ್ಮದ್‌ ಖಾನ್‌ (Minister Zameer Ahmed Khan) ಅವರನ್ನು ಭೇಟಿ ಮಾಡಿ ಗೌಪ್ಯ ಮಾತುಕತೆ ನಡೆಸಿದ್ದಾರೆ. ಬಳಿಕ ಈದ್‌ ಮಿಲಾದ್‌ಗೆ ಶುಭ ಕೋರಲು ಬಂದಿದ್ದಾಗಿ ಹೇಳಿದ್ದಾರೆ. ಅಲ್ಲದೆ, ತಮಗೆ ಜಮೀರ್‌ ನಿಂಬೆ ಹಣ್ಣು ಕೊಟ್ಟಿದ್ದಾರೆ ಎಂದು ಸಹ ತಿಳಿಸಿದ್ದಾರೆ. ಇನ್ನು ಕರ್ನಾಟಕ ಬಂದ್‌ಗೆ ನಾರಾಯಣ ಗೌಡ ಬೆಂಬಲ ವ್ಯಕ್ತಪಡಿಸದೇ ಇರುವ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇದರ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಯಾರದ್ದೋ ನಾಯಕತ್ವದ ಹಿಂದೆ ನಾನು ಹೋಗಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

ಸಚಿವ ಜಮೀರ್‌ ಅಹ್ಮದ್‌ ಖಾನ್‌ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣ ಗೌಡ, ನಾನು ವಿಚಾರದಲ್ಲಿ ರಾಜಿ ಆಗುತ್ತೇನೆ. ಆದರೆ, ಪ್ರತಿಷ್ಠೆಯಲ್ಲಿ ಅಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಈ ಬಂದ್‌ಗೆ ನಾಯಕತ್ವವನ್ನು ಯಾರು ವಹಿಸಬೇಕೆಂಬ ವಿಚಾರದಲ್ಲಿ ತಮ್ಮ ಮುನಿಸು ಇದೆ ಎಂದು ನೇರವಾಗಿಯೇ ಹೇಳಿದ್ದಾರೆ.

ಇದನ್ನೂ ಓದಿ: Karnataka Bandh : ಕನ್ನಡ ಹೋರಾಟಗಾರರ ಬಂಧನಕ್ಕೆ ಎಚ್‌ಡಿಕೆ ಆಕ್ಷೇಪ, ತಕ್ಷಣ ಬಿಡುಗಡೆಗೆ ಆಗ್ರಹ

ನನ್ನ ನೇತೃತ್ವ ಬೇಕಿತ್ತು

ಇದೇ ವೇಳೆ ಕರವೇ ನಾರಾಯಣಗೌಡ ಅವರು ಬಹಿರಂಗವಾಗಿ ಕನ್ನಡಪರ ಸಂಘಟನೆಗಳ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಹೌದು, ನನ್ನ ನೇತೃತ್ವದಲ್ಲಿ ಹೋರಾಟ ಕರೆಯಬೇಕಿತ್ತು. ಯಾರೋ ನಿನ್ನೆ ಮೊನ್ನೆ ಬಂದವರ ಹಿಂದೆ ನಾನು ಹೋಗಲೇ? ಯಾರೋ ಎರಡು ಸಾವಿರ, ಮೂರು ಸಾವಿರ ಖರ್ಚು ಮಾಡುವವನ ಹಿಂದೆ ನಾನು ಹೋಗಲೇ? ಎಂದು ಪ್ರಶ್ನೆ ಮಾಡಿದರು. ವಾಟಾಳ್ ಹೋರಾಟದ ಬಗ್ಗೆ ಆಕ್ಷೇಪ ಇಲ್ಲ. ಆದರೆ, ಅವರ ಸುತ್ತಮುತ್ತ ಇರುವವರ ಬಗ್ಗೆ ಆಕ್ಷೇಪ ಇದೆ ಎಂದು ಹೇಳಿದರು.

ಬಂದ್ ಬಿಟ್ಟರೆ ನಾನು ಎಲ್ಲರ ಜತೆಗೆ ಹೋರಾಡುತ್ತೇನೆ. ಅವರ ಹಿಂದೆ ಹೋಗಬೇಕಾ ನಾನು? ಇತಿಹಾಸ ಇಲ್ವಾ ನನಗೆ? ನಾಯಕತ್ವವನ್ನು ನಾನು ವಹಿಸಿಕೊಳ್ಳುತ್ತೇನೆ. ಅವರೆಲ್ಲರೂ ಬರಲಿ ಎಂದು ನಾರಾಯಣ ಗೌಡ ಗುಡುಗಿದರು.

ಸಚಿವ ಜಮೀರ್‌ ಅಹ್ಮದ್‌ ಅವರಿಗೆ ಹಬ್ಬದ ಶುಭಾಶಯ ಕೋರಲು ಬಂದಿದ್ದೆ. ಜಮೀರ್ ಇಲ್ಲೇ ಇದ್ದೇನೆ ಬನ್ನಿ ಅಂತ ಹೇಳಿದ್ದರು. ಹಾಗಾಗಿ ಕೆಪಿಸಿಸಿ ಕಚೇರಿಗೆ ಬಂದೆ. ಅವರು ನನಗೆ ನಿಂಬೆ ಹಣ್ಣು ಕೊಟ್ಟರು ಎಂದು ನಾರಾಯಣ ಗೌಡ ಹೇಳಿದರು.

ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ

ಕಾವೇರಿ ವಿಚಾರ ಬಂದಾಗ ನನ್ನಷ್ಟು ಹೋರಾಟವನ್ನು ಯಾರೂ ಮಾಡಿಲ್ಲ. ಸರ್ಕಾರವನ್ನು ನನ್ನಷ್ಟು ಯಾರೂ ಪ್ರಶ್ನೆ ಮಾಡಿಲ್ಲ. ರಾಜ್ಯದ 31 ಜಿಲ್ಲೆಗಳಲ್ಲಿಯೂ ನಾವು ಪ್ರತಿಭಟನೆಯನ್ನು ಮಾಡಿದ್ದೇವೆ. ಗುರುವಾರ (ಸೆ. 28) ಕರವೇ ಮಹಿಳಾ ಘಟಕದ ಕಾರ್ಯಕರ್ತೆಯರು ರಾಜ್ಯದ 28 ಸಂಸದರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಬೃಹತ್‌ ರ‍್ಯಾಲಿ ನಡೆಸಿದೆ. ಶುಕ್ರವಾರ ಸಹ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ ಎಂದು ಕರವೇ ನಾರಾಯಣಗೌಡ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: Karnataka Bandh : ಮಂಡ್ಯದಲ್ಲಿ ದಶಪಥ ಹೆದ್ದಾರಿ ಬಂದ್‌ಗೆ ತಯಾರಿ, ತಡೆಯಲು ಪೊಲೀಸರು ರೆಡಿ

ನಮ್ಮಂತೆ ಯಾರಿಂದಲೂ ಹೋರಾಟ ಸಾಧ್ಯವಿಲ್ಲ

ಅಕ್ಟೋಬರ್‌ 10ರಂದು ಕರವೇ ವತಿಯಿಂದ 10 ಸಾವಿರ ಜನ ನವ ದೆಹಲಿಗೆ ಹೋಗುತ್ತಿದ್ದೇವೆ. ಭಾನುವಾರ ಒಂದು ಲಕ್ಷ ಜನ ಕಾರ್ಯಕರ್ತರು ಸೇರಿ ಪ್ರಧಾನಿ ನರೇಂದ್ರ ಮೋದಿಗೆ ರಕ್ತದಲ್ಲಿ ಪತ್ರ ಬರೆಯುತ್ತಿದ್ದೇವೆ. ನಮ್ಮಂತೆ ಯಾರೂ ಸಹ ಹೋರಾಟವನ್ನು ಮಾಡಿಲ್ಲ. ಮಾಡಲು ಸಾಧ್ಯವೂ ಇಲ್ಲ ಎಂದು ಕರವೇ ನಾರಾಯಣ ಗೌಡ ಹೇಳಿದರು.

Exit mobile version