Site icon Vistara News

Road accident : ಬೈಕ್‌- ಸ್ಕೂಟರ್‌ ನಡುವೆ ಅಪಘಾತ; ಕಾಲೇಜು ವಿದ್ಯಾರ್ಥಿನಿ ದಾರುಣ ಸಾವು

Accident at kushalanagara

#image_title

ಮಡಿಕೇರಿ: ಬೈಕ್ ಹಾಗೂ ಸ್ಕೂಟರ್ ನಡುವೆ‌ ಸಂಭವಿಸಿದ ಅಪಘಾತದಲ್ಲಿ (Road accident) ಕಾಲೇಜು ವಿದ್ಯಾರ್ಥಿನಿಯೊಬ್ಬರು (College student) ದಾರುಣವಾಗಿ ಮೃತಪಟ್ಟಿದ್ದಾರೆ. ಕೊಡಗು ಜಿಲ್ಲೆ ಕುಶಾಲನಗರದಲ್ಲಿ (kodagu News) ಈ ಅಪಘಾತ ನಡೆದಿದೆ. ಕುಶಾಲನಗರದ ಇಂದಿರಾ ಬಡಾವಣೆ ನಿವಾಸಿ ಪೂಣಚ್ಚ ಎಂಬುವರ ಪುತ್ರಿ ಭಾವನ(21) ಮೃತ ಕಾಲೇಜು ವಿದ್ಯಾರ್ಥಿನಿ.

ಕುಶಾಲ ನಗರದ ಕೂರ್ಗ್ ಸಿನಿಪ್ಲೆಕ್ಸ್ ಬಳಿ ಈ ಅಪಘಾತ ಸಂಭವಿಸಿದ್ದು ಕುಶಾಲ ನಗರ ಕಡೆಯಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಬುಲೆಟ್ ಬೈಕ್ ಹಾಗೂ ಮಡಿಕೇರಿ ಕಡೆಯಿಂದ ಕುಶಾಲ ನಗರ ಕಡೆಗೆ ಬರುತ್ತಿದ್ದ ಸ್ಕೂಟರ್‌ ಡಿಕ್ಕಿ ಹೊಡೆದುಕೊಂಡಿವೆ.

ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ‌.ಎಂ ಕಾರ್ಯಪ್ಪ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ಸ್ಕೂಟರ್‌ನಲ್ಲಿ ಸಾಗುತ್ತಿದ್ದಾಗ ಬೈಕ್‌ ನಡುವೆ ಅಪಘಾತ ನಡೆದಿದೆ. ಗಂಭೀರ ಗಾಯಗೊಂಡ ಭಾವನಾ (21) ಅವರನ್ನು ಕೂಡಲೇ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಯಿತಾದರೂ ಸಾಗಿಸುವಾಗ ಮಾರ್ಗಮಧ್ಯದಲ್ಲೇ ಅವರು ಮೃತಪಟ್ಟರು. ಮತ್ತೊಬ್ಬ ವಿದ್ಯಾರ್ಥಿನಿ ಸ್ಥಿತಿ ಗಂಭೀರವಾಗಿದ್ದು ಅವರನ್ನೂ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ. ಸ್ಥಳಕ್ಕೆ ಕುಶಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ‌ ಕ್ರಮ ಕೈಗೊಂಡಿದ್ದಾರೆ.

ಸೋದರಿಯನ್ನು ಪ್ರೀತಿಸಿದ ಸ್ನೇಹಿತನ ಬರ್ಬರ ಕೊಲೆ

ಮೈಸೂರು: ಮೈಸೂರಿನಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಸ್ನೇಹಿತರೇ ಕೊಲೆ (murder case) ಮಾಡಿದ್ದಾರೆ. ಹೇಮಂತ್ ಅಲಿಯಾಸ್ ಸ್ವಾಮಿ (23) ಕೊಲೆಯಾದ ಯುವಕ. ಮೈಸೂರು ತಾಲೂಕು ಬೆಳವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಲ್ಲಿನಿಂದ ಜಜ್ಜಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಮೂವರು ತಡೆದು ನಿಲ್ಲಿಸಿ ಈ ಕೃತ್ಯ ಎಸಗಿದ್ದಾರೆ. ಸಾಗರ್, ಪ್ರತಾಪ್, ಮಂಜು ಎಂಬುವವರಿಂದ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.

ಸಾಗರ್ ಸಹೋದರಿಯನ್ನು ಸ್ವಾಮಿ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಸಾಗರ್ ಹಾಗೂ ಸ್ವಾಮಿ‌ ನಡುವೆ ವೈಷಮ್ಯ ತಲೆದೋರಿದೆ. ಆಕೆಯಿಂದ ದೂರವಿರುವಂತೆ ಸಾಗರ್‌ ಎಚ್ಚರಿಸಿದ್ದ. ಆದರೆ ಸ್ವಾಮಿ ಕೇಳಿರಲಿಲ್ಲ. ಹೀಗಾಗಿ ಸ್ನೇಹಿತರನ್ನು ಜತೆ ಸೇರಿಸಕೊಂಡು ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಿಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಯುವತಿಯ ಇರಿದು ಕೊಲೆ

ವಿಜಯಪುರ: ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ಬರ್ಬರವಾಗಿ ಕೊಲೆ ಮಾಡಿದ (Woman Murder) ಘಟನೆ ವಿಜಯಪುರ ಜಿಲ್ಲೆಯ (Vijayapura News) ಸಿಂದಗಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಇಲ್ಲಿನ ಟ್ರಾಕ್ಟರ್ ಶೋ ರೂಂ ಹತ್ತಿರ ಸ್ಕೂಟರ್‌ ತಡೆದ ದುಷ್ಕರ್ಮಿಗಳು ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಕೊಲೆಯಾದ ಮಹಿಳೆಯನ್ನು ಗಂಗೂಬಾಯಿ ಯಂಕಂಚಿ (28) ಎಂದು ಗುರುತಿಸಲಾಗಿದೆ. ಇವರು ಸಿಂದಗಿ ಪಟ್ಟಣದ ನಿವಾಸಿಯಾಗಿದ್ದಾರೆ. ಗಂಗೂಬಾಯಿ ಅವರು ಚಿಕ್ಕ ಸಿಂದಗಿ ಮಾರ್ಗವಾಗಿ ಸಿಂದಗಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು.

ಸಹೋದರ ಸಂಬಂಧಿಯೊಬ್ಬರ ಜೊತೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಮಾರ್ಗ ಮಧ್ಯ ಅಡ್ಡಗಟ್ಟಿದ ದುಷ್ಕರ್ಮಿಗಳು ಆಕೆಯನ್ನು ಹಿಡಿದು ಕುತ್ತಿಗೆಗೆ ಚೂರಿ ಹಾಕಿ ಕೊಂದಿದ್ದಾರೆ. ಕೊಲೆ ಮಾಡಿದ ಬಳಿಕ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಕ್ರೌರ್ಯ ಎಷ್ಟಿತ್ತೆಂದರೆ ಹಾಕಿದ ಚೂರಿಯನ್ನು ಕೂಡಾ ಅವರು ಕೊರಳಲ್ಲೇ ಬಿಟ್ಟು ಹೋಗಿದ್ದಾರೆ. ಜಮೀನು ವಿವಾದಕ್ಕೆ ಸಂಬಂಧಿಸಿ ಈ ಕೊಲೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ : ವೈದ್ಯೆಯಾಗಬೇಕು ಎಂಬ ಕನಸಿಗಿಂತಲೂ, ಪ್ರೀತಿಯೇ ಹೆಚ್ಚಾಯ್ತು; ನೇಣು ಬಿಗಿದುಕೊಂಡ ವಿದ್ಯಾರ್ಥಿನಿ

Exit mobile version