Site icon Vistara News

Elephant attack : ಕೊಡಗಿನಲ್ಲಿ ಮುಂದುವರಿದ ಆನೆ ದಾಳಿ; ಕ್ಷಿಪ್ರ ಕಾರ್ಯಾಚರಣೆ ಸಿಬ್ಬಂದಿಯೇ ಬಲಿ

Elephant attack

ಮಡಿಕೇರಿ: ಕೊಡಗಿನಲ್ಲಿ ಆನೆಗಳ ಹಾವಳಿ (Elephant Menace) ತೀವ್ರವಾಗಿದೆ. ಈ ಬಾರಿ ಅದು ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರನ್ನೇ (Forest department Employee) ಬಲಿ ಪಡೆದಿದೆ. ಈ ಭಾಗದಲ್ಲಿ ಆನೆಗಳ ಹಾವಳಿಯನ್ನು ನಿಯಂತ್ರಿಸುವುದಕ್ಕಾಗಿ ರೂಪಿಸಲಾದ ರ‍್ಯಾಪಿಡ್‌ ರೆಸ್ಪಾನ್ಸ್‌ ಟೀಮ್‌ನ (Rapid Response Team- RRT) ಸದಸ್ಯರೊಬ್ಬರು ಆನೆಯ ದಾಳಿಗೆ (Elephant Attack) ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.

ಕೊಡಗಿನ ಆನೆಕಾಡು ಅರಣ್ಯ ಪ್ರದೇಶದಲ್ಲಿ ಕ್ಷಿಪ್ರ ಪ್ರತಿಕ್ರಿಯೆ ದಳವೊಂದು (Rapid Response Team- RRT) ಕಾರ್ಯಾಚರಿಸುತ್ತಿದ್ದು, ಇದು ಆನೆಗಳ ಚಲನವಲನಗಳ ಮೇಲೆ ಗಮನ ಇಡುತ್ತದೆ. ಈ ತಂಡದಲ್ಲಿ RRT ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಗಿರೀಶ್ (35) ಅವರೇ ದಾಳಿಗೆ ಒಳಗಾಗಿ ಪ್ರಾಣ ಕಳೆದುಕೊಂಡವರು.

ಮಡಿಕೇರಿ ಸಮೀಪದ ಕೆದಕಲ್ ಬಳಿ ಗಿರೀಶ್‌ ಅವರು ತಂಡದ ಇದರ ಸದಸ್ಯರ ಜತೆಗೆ ಆನೆ ಕಾರ್ಯಾಚರಣೆಗೆ ತೆರಳಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಾಡಾನೆ ದಾಳಿ ದಾಳಿ ನಡೆಸಿದೆ. ಗಿರೀಶ್‌ ಅವರು ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಆನೆ ಗಿರೀಶ್‌ ಅವರನ್ನು ಅಟ್ಟಾಡಿಸಿಕೊಂಡು ಹೋಗಿ ದಾಳಿ ಮಾಡಿದೆ. ಅದಕ್ಕೂ ಮುನ್ನ ಆನೆ ಅದೇ ಭಾಗದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನವೊಂದರ ಮೇಲೆ ದಾಳಿ ಮಾಡಿತ್ತು.

14 ದಿನದಲ್ಲಿ ಮೂರನೇ ಸಾವು

ಕೊಡಗಿನಲ್ಲಿ ಆನೆ ಮತ್ತು ಮನುಷ್ಯರ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಮಿತಿಮೀರಿದೆ. ಕಾಫಿ ತೋಟ, ಹೊಲ ಗದ್ದೆ ಮಾತ್ರವಲ್ಲ, ಎಲ್ಲಿ ಬೇಕೆಂದರಲ್ಲಿ ಆನೆಗಳು ಲಗ್ಗೆ ಇಡುತ್ತಿವೆ. ಗದ್ದೆಗೆ ಹೋದವರು, ವಾಕಿಂಗ್‌ ಹೋದವರನ್ನೂ ಬಿಡದೆ ಅದು ದಾಳಿ ಮಾಡುತ್ತಿರುವುದು ಕಂಡುಬಂದಿದೆ.

ಆಗಸ್ಟ್‌ 27ಕ್ಕೆ ಹಸುವನ್ನು ಹುಡುಕಲು ಹೋದ ರೈತ ಸಾವು

ಕಳೆದ ಆಗಸ್ಟ್‌ 27ರಂದು ಸೋಮವಾಪೇಟೆ ತಾಲ್ಲೂಕಿನ ಅಡಿಯನಾಡೂರು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಆನೆಯೊಂದು 60 ವರ್ಷದ ಕೃಷಿಕ ಈರಪ್ಪ ಎಂಬವರನ್ನು ಆನೆ ಕೊಂದು ಹಾಕಿತ್ತು.

ಅಂದು ಮುಂಜಾನೆ ಈರಪ್ಪ ತಮ್ಮ‌‌ ಮನೆಯ ಹಾಲು ಕರೆಯುವ ಹಸು ಕಾಣುತ್ತಿಲ್ಲ ಅಂತ ಹುಡುಕಿಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಗೌರಿ ಗದ್ದೆಯ ಸಮೀಪ ಏಕಾಏಕಿ ನುಗ್ಗಿ ಬಂದ ಕಾಡಾನೆ ಈರಪ್ಪ ಮೇಲೆ ದಾಳಿ ನಡೆಸಿದೆ.‌ ಆನೆ ಈರಪ್ಪ ಅವರ ಎದೆಯ ಮೇಲೆಯೇ ನೇರವಾಗಿ ಕಾಲಿಟ್ಟಿದೆ. ದಾಳಿಗೆ ಸಿಲುಕಿದ ಈರಪ್ಪ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.

ಇದನ್ನೂ ಓದಿ: Elephant attack : ಕಾಡಾನೆ ದಾಳಿಗೆ ಮತ್ತೊಬ್ಬ ವೃದ್ಧ ಬಲಿ!

ಆಗಸ್ಟ್‌ 20ರಂದು ವಾಕಿಂಗ್‌ ಮಾಡುತ್ತಿದ್ದ ಮಹಿಳೆ ಮೃತ್ಯು

ಕಳೆದ ಆಗಸ್ಟ್‌ 2೦ರಂದು ವಿರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲ ಗ್ರಾಮದಲ್ಲಿ ಮನೆ ಸಮೀಪ ವಾಕಿಂಗ್‌ ಮಾಡುತ್ತಿದ್ದ ಆಯಿಶಾ (63) ಎಂಬವರು ಆನೆ ದಾಳಿಗೆ ಒಳಗಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಅದಕ್ಕಿಂತ ಒಂದು ವಾರದ ಹಿಂದೆ ಕೂಡ ಆನೆ ದಾಳಿಗೆ ಟ್ರಾಕ್ಟರ್ ಚಾಲಕರೊಬ್ಬರು ಮೃತ ಪಟ್ಟಿದ್ದರು. ಕಳೆದ ಒಂದು ತಿಂಗಳಲ್ಲಿ ಮರಗೋಡು, ಸಿದ್ದಾಪುರ ಸಮೀಪದ ಬಾಣಂಗಾಲ ಇದೀಗ ಸೋಮವಾರಪೇಟೆ ಭಾಗದಲ್ಲಿ ಕಾಡಾನೆ ದಾಳಿಯಾಗಿದ್ದು ಕಾಡಾನೆ ದಾಳಿಯಲ್ಲಿ ಮೂರು ಜನ ಮೃತಪಟ್ಟಂತಾಗಿದೆ.

ನಾಲ್ಕು ದಿನದ ಹಿಂದೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಮಹಿಳೆ ಮೇಲೆ ಆನೆ ದಾಳಿ ಮಾಡಿ ಮೃತಪಟ್ಟಿದ್ದರು. ಕೆಲವು ತಿಂಗಳ ಹಿಂದೆ ಕೊಡಗಿನಲ್ಲಿ ಒಂದೇ ದಿನ ಅಜ್ಜ ಮತ್ತು ಮೊಮ್ಮಗನನ್ನು ಆನೆ ಬಲಿ ಪಡೆದಿತ್ತು.

Exit mobile version