Site icon Vistara News

Elephant Attack : ನಿಶಾನಿ ಬೆಟ್ಟದಲ್ಲಿ ಆನೆ ದಾಳಿಗೆ ವೃದ್ಧ ಬಲಿ; ಟ್ರೆಕಿಂಗ್‌ಗೆ ಹೋದವರಿಗೆ ಕಂಡಿತು ಶವ

Elephant Attack New

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿ ಆನೆ ದಾಳಿಗೆ (Elephant Attack) ಬಲಿಯಾಗಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಹಲವಾರು ಮಂದಿಯನ್ನು ಆನೆ ದಾಳಿಗೆ ಕಳೆದುಕೊಂಡಿರುವ ಕೊಡಗು ಜಿಲ್ಲೆಯಲ್ಲಿ (Kodagu News) ಇನ್ನೊಂದು ಜೀವ ಬಲಿಯಾಗಿದೆ.

ಕೊಡಗು ಜಿಲ್ಲೆ ಮಡಿಕೇರಿ ಸಮೀಪ ನಿಶಾನಿ ಬೆಟ್ಟದಲ್ಲಿ (Nishani Betta in Kodagu) ದುರಂತ ನಡೆದಿದೆ. ಗಾಳಿಬೀಡು ಗ್ರಾಮದ ನಿಶಾನಿಬೆಟ್ಟದಲ್ಲಿ ಗಾಳಿಬೀಡು ಗ್ರಾಮದ ವರಡ ನಿವಾಸಿ ಅಪ್ಪಚ್ಚ(60) ಅವರ ಶವ (Man dies of Elephant Attack) ಪತ್ತೆಯಾಗಿದೆ. ಅವರು ಕಾಡಾನೆ ತುಳಿದು ವ್ಯಕ್ತಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಅಪ್ಪಚ್ಚ ಅವರು ಶನಿವಾರ ಕೆಲಸಕ್ಕೆ ಹೋದವರು ಮರಳಿ ಬಂದಿರಲಿಲ್ಲ. ಹೀಗಾಗಿ ರಾತ್ರಿ ಇಡೀ ಮನೆಯವರು ಕಂಡ ಕಂಡಲ್ಲಿ ಹುಡುಕಿದ್ದರು. ಆದರೆ ಸಿಕ್ಕಿರಲಿಲ್ಲ. ಮುಂಜಾನೆ ನಿಶಾನಿ ಬೆಟ್ಟಕ್ಕೆ ಪ್ರವಾಸಿಗರು ಚಾರಣಕ್ಕೆ ತೆರಳುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ನಿಶಾನೆ ಬೆಟ್ಟದ ದಾರಿಯಲ್ಲಿ ಶವವೊಂದು ಬಿದ್ದಿರುವುದನ್ನು ಚಾರಣಿಗರು ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡಿದರು. ಕೂಡಲೇ ಬಂದು ನೋಡಿದಾಗ ಅದು ಅಪ್ಪಚ್ಚ ಅವರದಾಗಿತ್ತು. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳ ಮತ್ತು ಆಸುಪಾಸಿನಲ್ಲಿ ಆನೆ ನಡೆದಾಡಿದ ಹೆಜ್ಜೆ ಗುರುತುಗಳು ಕಂಡುಬಂದಿದ್ದರಿಂದ ಇದು ಆನೆ ದಾಳಿಯಿಂದ ನಡೆದ ಸಾವು ಎಂದು ಸಂಶಯಿಸಲು ಕಾರಣವಾಗಿದೆ.

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

ಇದನ್ನೂ ಓದಿ : Elephant Attack: ʼಕರ್ನಾಟಕದ ಪರಿಹಾರ ಬೇಕಿಲ್ಲ…ʼ ಕಾಡಾನೆ ಬಲಿ ಪಡೆದ ವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ರೂ. ಕೊಟ್ಟ ಕೇರಳ ಸರ್ಕಾರ

ಕೊಡಗಿನಲ್ಲಿ ಹೆಚ್ಚುತ್ತಿರುವ ಆನೆ ದಾಳಿ, ಸಾವು ನೋವು

ರಾಜ್ಯದಲ್ಲಿ ಆನೆಗಳ ದಾಳಿ ವಿಪರೀತವಾಗಿದ್ದು ಜನರು ಭಯದಿಂದ ನಡುಗುವಂತಾಗಿದೆ. ಅದರಲ್ಲೂ ಮುಖ್ಯವಾಗಿ ಕೊಡಗು ಜಿಲ್ಲೆಯಲ್ಲಿ ಅಪಾಯ ಮೇರೆ ಮೀರಿದೆ.

ಕೊಡಗಿನ ಆನೆಕಾಡು ಅರಣ್ಯ ಪ್ರದೇಶದಲ್ಲಿ ಕಳೆದ ಸೆಪ್ಟೆಂಬರ್‌ 4ರಂದು ಆನೆಗಳ ಹಾವಳಿಯನ್ನು ನಿಯಂತ್ರಿಸುವುದಕ್ಕಾಗಿ ರೂಪಿಸಲಾದ ರ‍್ಯಾಪಿಡ್‌ ರೆಸ್ಪಾನ್ಸ್‌ ಟೀಮ್‌ನ (Rapid Response Team- RRT) ಸದಸ್ಯರೊಬ್ಬರನ್ನೇ ಆನೆ ದಾಳಿ ಮಾಡಿ ಕೊಂದಿತ್ತು. RRT ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಗಿರೀಶ್ (35) ಅವರೇ ದಾಳಿಗೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದರು.

ಆಗಸ್ಟ್‌ 27ಕ್ಕೆ ಹಸುವನ್ನು ಹುಡುಕಲು ಹೋದ ರೈತ ಸಾವು

ಕಳೆದ ಆಗಸ್ಟ್‌ 27ರಂದು ಸೋಮವಾಪೇಟೆ ತಾಲ್ಲೂಕಿನ ಅಡಿಯನಾಡೂರು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಆನೆಯೊಂದು 60 ವರ್ಷದ ಕೃಷಿಕ ಈರಪ್ಪ ಎಂಬವರನ್ನು ಆನೆ ಕೊಂದು ಹಾಕಿತ್ತು.

ಅಂದು ಮುಂಜಾನೆ ಈರಪ್ಪ ತಮ್ಮ‌‌ ಮನೆಯ ಹಾಲು ಕರೆಯುವ ಹಸು ಕಾಣುತ್ತಿಲ್ಲ ಅಂತ ಹುಡುಕಿಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಗೌರಿ ಗದ್ದೆಯ ಸಮೀಪ ಏಕಾಏಕಿ ನುಗ್ಗಿ ಬಂದ ಕಾಡಾನೆ ಈರಪ್ಪ ಮೇಲೆ ದಾಳಿ ನಡೆಸಿದೆ.‌ ಆನೆ ಈರಪ್ಪ ಅವರ ಎದೆಯ ಮೇಲೆಯೇ ನೇರವಾಗಿ ಕಾಲಿಟ್ಟಿದೆ. ದಾಳಿಗೆ ಸಿಲುಕಿದ ಈರಪ್ಪ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.

ಆಗಸ್ಟ್‌ 20ರಂದು ವಾಕಿಂಗ್‌ ಮಾಡುತ್ತಿದ್ದ ಮಹಿಳೆ ಮೃತ್ಯು

ಕಳೆದ ಆಗಸ್ಟ್‌ 2೦ರಂದು ವಿರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲ ಗ್ರಾಮದಲ್ಲಿ ಮನೆ ಸಮೀಪ ವಾಕಿಂಗ್‌ ಮಾಡುತ್ತಿದ್ದ ಆಯಿಶಾ (63) ಎಂಬವರು ಆನೆ ದಾಳಿಗೆ ಒಳಗಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಅದಕ್ಕಿಂತ ಒಂದು ವಾರದ ಹಿಂದೆ ಕೂಡ ಆನೆ ದಾಳಿಗೆ ಟ್ರಾಕ್ಟರ್ ಚಾಲಕರೊಬ್ಬರು ಮೃತ ಪಟ್ಟಿದ್ದರು. ಕಳೆದ ಒಂದು ತಿಂಗಳಲ್ಲಿ ಮರಗೋಡು, ಸಿದ್ದಾಪುರ ಸಮೀಪದ ಬಾಣಂಗಾಲ ಇದೀಗ ಸೋಮವಾರಪೇಟೆ ಭಾಗದಲ್ಲಿ ಕಾಡಾನೆ ದಾಳಿಯಾಗಿದ್ದು ಕಾಡಾನೆ ದಾಳಿಯಲ್ಲಿ ಮೂರು ಜನ ಮೃತಪಟ್ಟಂತಾಗಿದೆ.

ನಾಲ್ಕು ದಿನದ ಹಿಂದೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಮಹಿಳೆ ಮೇಲೆ ಆನೆ ದಾಳಿ ಮಾಡಿ ಮೃತಪಟ್ಟಿದ್ದರು. ಕೆಲವು ತಿಂಗಳ ಹಿಂದೆ ಕೊಡಗಿನಲ್ಲಿ ಒಂದೇ ದಿನ ಅಜ್ಜ ಮತ್ತು ಮೊಮ್ಮಗನನ್ನು ಆನೆ ಬಲಿ ಪಡೆದಿತ್ತು.

Exit mobile version