Site icon Vistara News

Elephant Attack : ಹಾಲು ತರಲು ಹೋಗುತ್ತಿದ್ದ ವೃದ್ಧನ ಬೆನ್ನಟ್ಟಿ ದಾಳಿ ಮಾಡಿದ ಕಾಡಾನೆ ಹಿಂಡು, ಗಂಭೀರ ಗಾಯ

Elephant Attack in Kodagu

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆನೆಗಳು ಮತ್ತು ಮಾನವ ಸಂಘರ್ಷ (Elephant and Human Conflict) ಮುಂದುವರೆದಿದ್ದು ಕಾಡಾನೆ ಹಿಂಡೊಂದು (Wild Elephants) ಹಾಲು ತರಲು ಹೋಗುತ್ತಿದ್ದ ವೃದ್ಧರೊಬ್ಬರ (Elephant attack on Old Man) ಮೇಲೆ ದಾಳಿ ಮಾಡಿದೆ. ಮೂರು ಆನೆಗಳ ಹಿಂಡು ನುಗ್ಗಿ ಬಂದಿದ್ದು, ಗಾಯಗೊಂಡ ವೃದ್ಧರ ಸ್ಥಿತಿ ಗಂಭೀರವಾಗಿದೆ.

ಕೊಡಗು ಜಿಲ್ಲೆ (Kodagu News) ವಿರಾಜಪೇಟೆ ತಾಲ್ಲೂಕಿನ ಕಡಂಗ ಮರೂರು ಗ್ರಾಮದಲ್ಲಿ‌ ನಡೆದಿದೆ. ಕಡಂಗ ಮರೂರು ಗ್ರಾಮದ 73 ವರ್ಷ ನಿವಾಸಿ ಅಮ್ಮಂಡ ಸುಬ್ರಹ್ಮಣಿ ಅವರು ಮನೆಯಿಂದ ಹಾಲು ತರಲು ಅಂಗಡಿಗೆ ತೆರಳುವ ಸಂದರ್ಭದಲ್ಲಿ ಕಡಂಗ ಮರೂರು ಗ್ರಾಮದ ಭದ್ರಕಾಳಿ ದೇವಾಲಯದ ಸಮೀಪದ ತೋಟದಿಂದ ಏಕಾ ಏಕಿ ಬಂದ ಮೂರು ಕಾಡಾನೆಗಳು ಸುಬ್ರಹ್ಮಣಿ ಮೇಲೆ ದಾಳಿ ನಡೆಸಿದೆ.

ಕಾಡಾನೆ ದಾಳಿಯಿಂದ ಕೈ ಕಾಲುಗಳಿಗೆ ತೀವ್ರ ಪಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾ‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ದಿನಬೆಳಗಾದರೆ ಸಾಕು ಕಾಡಿನಿಂದ ನಾಡಿಗೆ ಲಗ್ಗೆ ಇಡೋ ಕಾಡಾನೆಗಳು ರೈತರು ಬೆಳೆದ ಬೆಳೆಗಳನ್ನ ನಾಶ ಪಡಿಸುವುದರೊಂದಿಗೆ ಜನರ ಮೇಲು ಕೂಡ ದಾಳಿ ನಡೆಸುತ್ತಿವೆ.

ಜನರು ಓಡಾಲು ಕೂಡ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆನೆ ಮಾನವ ಸಂಘರ್ಷಕ್ಕೆ ಕಡಿವಾಣ ಹಾಕುವಂತ್ತೆ ಕೊಡಗಿನ ಜನತೆ ಒತ್ತಾಯಿಸುತ್ತಿದ್ದಾರೆ.

ಅರಣ್ಯ ಸಿಬ್ಬಂದಿಯನ್ನೇ ಬಲಿ ಪಡೆದಿತ್ತು ಕಾಡಾನೆ

ಕಳೆದ ಸೆಪ್ಟೆಂಬರ್‌ 4ರಂದು ಆನೆಗಳ ಹಾವಳಿಯನ್ನು ನಿಯಂತ್ರಿಸುವುದಕ್ಕಾಗಿ ರೂಪಿಸಲಾದ ರ‍್ಯಾಪಿಡ್‌ ರೆಸ್ಪಾನ್ಸ್‌ ಟೀಮ್‌ನ (Rapid Response Team- RRT) ಸದಸ್ಯರೊಬ್ಬರನ್ನೇ ಆನೆ ದಾಳಿ ಮಾಡಿ ಕೊಂದಿತ್ತು.

ಕೊಡಗಿನ ಆನೆಕಾಡು ಅರಣ್ಯ ಪ್ರದೇಶದಲ್ಲಿ ಕ್ಷಿಪ್ರ ಪ್ರತಿಕ್ರಿಯೆ ದಳವೊಂದು (Rapid Response Team- RRT) ಕಾರ್ಯಾಚರಿಸುತ್ತಿದ್ದು, ಇದು ಆನೆಗಳ ಚಲನವಲನಗಳ ಮೇಲೆ ಗಮನ ಇಡುತ್ತದೆ. ಈ ತಂಡದಲ್ಲಿ RRT ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಗಿರೀಶ್ (35) ಅವರೇ ದಾಳಿಗೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದರು. ಮಡಿಕೇರಿ ಸಮೀಪದ ಕೆದಕಲ್ ಬಳಿ ಗಿರೀಶ್‌ ಅವರು ತಂಡದ ಇದರ ಸದಸ್ಯರ ಜತೆಗೆ ಆನೆ ಕಾರ್ಯಾಚರಣೆಗೆ ತೆರಳಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಾಡಾನೆ ದಾಳಿ ದಾಳಿ ನಡೆಸಿತ್ತು.

ಆಗಸ್ಟ್‌ 27ಕ್ಕೆ ಹಸುವನ್ನು ಹುಡುಕಲು ಹೋದ ರೈತ ಸಾವು

ಕಳೆದ ಆಗಸ್ಟ್‌ 27ರಂದು ಸೋಮವಾಪೇಟೆ ತಾಲ್ಲೂಕಿನ ಅಡಿಯನಾಡೂರು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಆನೆಯೊಂದು 60 ವರ್ಷದ ಕೃಷಿಕ ಈರಪ್ಪ ಎಂಬವರನ್ನು ಆನೆ ಕೊಂದು ಹಾಕಿತ್ತು.

ಅಂದು ಮುಂಜಾನೆ ಈರಪ್ಪ ತಮ್ಮ‌‌ ಮನೆಯ ಹಾಲು ಕರೆಯುವ ಹಸು ಕಾಣುತ್ತಿಲ್ಲ ಅಂತ ಹುಡುಕಿಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಗೌರಿ ಗದ್ದೆಯ ಸಮೀಪ ಏಕಾಏಕಿ ನುಗ್ಗಿ ಬಂದ ಕಾಡಾನೆ ಈರಪ್ಪ ಮೇಲೆ ದಾಳಿ ನಡೆಸಿದೆ.‌ ಆನೆ ಈರಪ್ಪ ಅವರ ಎದೆಯ ಮೇಲೆಯೇ ನೇರವಾಗಿ ಕಾಲಿಟ್ಟಿದೆ. ದಾಳಿಗೆ ಸಿಲುಕಿದ ಈರಪ್ಪ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.

ಇದನ್ನೂ ಓದಿ: Elephant attack : ಕಾಡಾನೆ ದಾಳಿಗೆ ಮತ್ತೊಬ್ಬ ವೃದ್ಧ ಬಲಿ!

ಆಗಸ್ಟ್‌ 20ರಂದು ವಾಕಿಂಗ್‌ ಮಾಡುತ್ತಿದ್ದ ಮಹಿಳೆ ಮೃತ್ಯು

ಕಳೆದ ಆಗಸ್ಟ್‌ 2೦ರಂದು ವಿರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲ ಗ್ರಾಮದಲ್ಲಿ ಮನೆ ಸಮೀಪ ವಾಕಿಂಗ್‌ ಮಾಡುತ್ತಿದ್ದ ಆಯಿಶಾ (63) ಎಂಬವರು ಆನೆ ದಾಳಿಗೆ ಒಳಗಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಅದಕ್ಕಿಂತ ಒಂದು ವಾರದ ಹಿಂದೆ ಕೂಡ ಆನೆ ದಾಳಿಗೆ ಟ್ರಾಕ್ಟರ್ ಚಾಲಕರೊಬ್ಬರು ಮೃತ ಪಟ್ಟಿದ್ದರು. ಕಳೆದ ಒಂದು ತಿಂಗಳಲ್ಲಿ ಮರಗೋಡು, ಸಿದ್ದಾಪುರ ಸಮೀಪದ ಬಾಣಂಗಾಲ ಇದೀಗ ಸೋಮವಾರಪೇಟೆ ಭಾಗದಲ್ಲಿ ಕಾಡಾನೆ ದಾಳಿಯಾಗಿದ್ದು ಕಾಡಾನೆ ದಾಳಿಯಲ್ಲಿ ಮೂರು ಜನ ಮೃತಪಟ್ಟಂತಾಗಿದೆ.

ನಾಲ್ಕು ದಿನದ ಹಿಂದೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಮಹಿಳೆ ಮೇಲೆ ಆನೆ ದಾಳಿ ಮಾಡಿ ಮೃತಪಟ್ಟಿದ್ದರು. ಕೆಲವು ತಿಂಗಳ ಹಿಂದೆ ಕೊಡಗಿನಲ್ಲಿ ಒಂದೇ ದಿನ ಅಜ್ಜ ಮತ್ತು ಮೊಮ್ಮಗನನ್ನು ಆನೆ ಬಲಿ ಪಡೆದಿತ್ತು.

Exit mobile version