Site icon Vistara News

Self Harming: ಕೊಡಗು ರೆಸಾರ್ಟ್‌ನಲ್ಲಿ ಮಗುವನ್ನು ಕೊಂದು ತಂದೆ-ತಾಯಿ ಆತ್ಮಹತ್ಯೆ

Kerala Suicide

ಕೊಡಗು: ಕೇರಳ ಮೂಲದ ಕುಟುಂಬವೊಂದು ಕೊಡಗು ಜಿಲ್ಲೆ ಮಡಿಕೇರಿ ಸಮೀಪದ ಖಾಸಗಿ ರೆಸಾರ್ಟ್‌ನಲ್ಲಿ (Madikeri Resort) ಮಗುವನ್ನು ಕೊಂದು ಗಂಡ, ಹೆಂಡತಿ ಸಾಮೂಹಿಕವಾಗಿ ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ.

ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೇರಳದ ಕೊಲ್ಲಂನಿಂದ ಮಡಿಕೇರಿಗೆ ಆಗಮಿಸಿದ್ದ ಕುಟುಂಬ ಇದಾಗಿದೆ. ಆದರೆ, ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಕಾರಣ ಇನ್ನೂ ತಿಳಿದುಬಂದಿಲ್ಲ. ವಿನೋದ್‌ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಕುಟುಂಬದವರಿಗೆ ಈಗಾಗಲೇ ಮಾಹಿತಿಯನ್ನು ನೀಡಿದ್ದು, ಕೇರಳದಿಂದ ಆಗಮಿಸುತ್ತಿದ್ದಾರೆ. ಕುಟುಂಬದವರು ಸ್ಥಳಕ್ಕೆ ಆಗಮಿಸುವವರೆಗೂ ಮೃತದೇಹವನ್ನು ಅಲ್ಲಿಯೇ ಇಡಲಾಗುವುದು. ಅವರು ಬಂದ ಬಳಿಕಷ್ಟೇ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಸೇರಿ ಮುಂದಿನ ಪ್ರಕ್ರಿಯೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮಗುವನ್ನು ಉಸಿರು ಕಟ್ಟಿಸಿ ಕೊಂದು ಇವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಆದರೆ, ಶುಕ್ರವಾರ ರೆಸಾರ್ಟ್‌ಗೆ ಬಂದಿದ್ದ ದಂಪತಿ. ಶನಿವಾರ ಬೆಳಗ್ಗೆ ಚೆಕ್‌ಔಟ್‌ ಮಾಡುವುದಾಗಿ ಸಿಬ್ಬಂದಿಗೆ ಹೇಳಿದ್ದರು. ಹೀಗಾಗಿ ಬೆಳಗ್ಗೆಯಾದರೂ ಚೆಕ್‌ಔಟ್‌ ಮಾಡಲು ಬಾರದ ಕಾರಣ ರೆಸಾರ್ಟ್‌ ಸಿಬ್ಬಂದಿ ರೂಂಗೆ ಕರೆ ಮಾಡಿದ್ದಾರೆ. ಆದರೆ, ಕರೆ ಸ್ವೀಕರಿಸದ ಕಾರಣ, ಅನುಮಾನ ಬಂದು ಕೊಠಡಿಯತ್ತ ಬಂದಿದ್ದಾರೆ. ಆಗ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.

ಪಾರ್ಟ್‌ ಟೈಂ ಜಾಬ್‌ ಆಮಿಷ; ಲಿಂಕ್‌ ಕ್ಲಿಕ್ಕಿಸಿ ಕಾಸು ಲೂಟಿ, ಹೋಯಿತು ಕೋಟಿ ಕೋಟಿ!

ಬೆಂಗಳೂರು: ಮನೆಗಳ್ಳರ ಕಾಟ ಒಂದು ಕಡೆಯಾದರೆ, ಸೈಬರ್‌ ವಂಚಕರ (Cyber Crime) ಮೋಸದಾಟ ಮತ್ತೊಂದು ಕಡೆ. ಡ್ರಗ್ಸ್ ಜಾಲಕ್ಕಿಂತ ಆಳವಾಗಿ ಬೇರೂರಿರುವುದು ಸೈಬರ್ ಕ್ರೈಂ. ಬೆರಳ ತುದಿಯಲ್ಲೇ ಸಿಗುವ ಟೆಕ್ನಾಲಜಿಯನ್ನು ದುರ್ಬಳಕೆ ಮಾಡಿಕೊಂಡು, ವಂಚನೆಗೆ ಹೊಸ ಹೊಸ ವಿಧಾನಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ. ನಗರದಲ್ಲಿ ಈಗ ಎರಡು ರೀತಿಯಲ್ಲಿ ಸೈಬರ್‌ ಕ್ರೈಂ ಮಾಡಲಾಗುತ್ತಿದೆ. ಅದುವೇ ಜಾಬ್ ಆಫರ್ ಹಾಗೂ ಕೋರಿಯರ್ ಕೇಸ್‌ಗಳು.

ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ಪ್ರಕಾರ ಜನವರಿಯಿಂದ ಈವರೆಗೆ ಒಟ್ಟು 16,300 ದೂರುಗಳು ದಾಖಲಾಗಿವೆ. ಈ ಮೊದಲು ವಂಚಕರು ತಾವು ಬ್ಯಾಂಕ್‌ ಅಧಿಕಾರಿಗಳೆಂದು ಹೇಳಿ ಒಟಿಪಿ ಪಡೆದು ಕ್ಷಣಾರ್ಧದಲ್ಲಿ ಖಾತೆಯನ್ನು ಖಾಲಿ ಮಾಡುತ್ತಿದ್ದರು. ಕೋವಿಡ್ ಬಳಿಕ ಚೈನೀಸ್ ಆ್ಯಪ್‌ಗಳ ಕಾಟ ಶುರುವಾಯಿತು. ನಂತರ ಬೆಸ್ಕಾಂ ಬಿಲ್ ಬಾಕಿ ಇದೆ ಎಂದು ಒಂದಷ್ಟು ದಿನ ವಂಚಿಸಿದ್ದಾರೆ. ಜನರು ಇದು ಫ್ರಾಡ್ ಎಂದು ಅರಿವಾಗಿ ಅದರಿಂದ ದೂರವಾಗುವಷ್ಟರಲ್ಲಿ ಮತ್ತೊಂದು ಹೊಸ ಉಪಾಯ ಹುಡುಕಿ ವಂಚನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Murder Case : ಕಗ್ಗತ್ತಲಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಪೈಂಟರ್‌ನ ಕೊಲೆ!

ಸದ್ಯ ಸೈಬರ್‌ ಕ್ರೈಂನಲ್ಲಿ ಟ್ರೆಂಡ್‌ನಲ್ಲಿರುವುದು ಕೋರಿಯರ್‌ ಕೇಸ್‌ಗಳು. ಮುಂಬೈ ಡಿಸಿಪಿ ಎಂದು ಕರೆ ಮಾಡುವ ವಂಚಕರು, ನಿಮ್ಮ ಹೆಸರಿನಲ್ಲಿ ಪಾರ್ಸಲ್‌ ಬಂದಿದೆ. ಅದರಲ್ಲಿ ಡ್ರಗ್ಸ್‌ ಜತೆಗೆ ಲೆಕ್ಕವಿಲ್ಲದಷ್ಟು ಗೋಲ್ಡ್‌ ಬಿಸ್ಕತ್ತು ಸಿಕ್ಕಿದೆ. ಈ ಕೇಸ್‌ ಕ್ಲಿಯರ್ ಮಾಡಬೇಕಾದರೆ ಇಂತಿಷ್ಟು ಹಣ ನೀಡಬೇಕು, ಇಲ್ಲದಿದ್ದರೆ ನಿಮ್ಮ ಬ್ಯಾಂಕ್‌ ಅಕೌಂಟ್‌ ಫ್ರಿಜ್‌ ಆಗುತ್ತದೆ ಎಂದು ಹೆದರಿಸಿ ಹಣ ಲೂಟಿ ಮಾಡುತ್ತಾರೆ.

ಇದು ಒಂದು ರೀತಿ ದಂಧೆಯಾದರೆ ಮತ್ತೊಂದು ಹೆಚ್ಚು ಟ್ರೆಂಡ್‌ನಲ್ಲಿರುವುದು ಜಾಬ್ ಆಫರ್. ನಿಮ್ಮ ಮೊಬೈಲ್‌ಗೆ ಲಿಂಕ್ ಕಳಿಸಿ ಪಾರ್ಟ್ ಟೈಂ ಜಾಬ್ ಇದೆ. ಟಾಸ್ಕ್‌ಗಳನ್ನು ಪೂರ್ತಿ ಮಾಡಿದರೆ ಕೂತಲ್ಲೆ ದುಡ್ಡು ಮಾಡಬಹುದೆಂದು ಆಮಿಷವೊಡ್ಡುತ್ತಾರೆ. ಲಿಂಕ್‌ ಕ್ಲಿಕ್‌ ಮಾಡಿದವರಿಗೆ ಮೊದಲು ಇಂತಿಷ್ಟು ಹಣವನ್ನು ಅಕೌಂಟ್‌ಗೆ ಹಾಕಿ ನಂಬಿಕೆಯನ್ನು ವಂಚಕರು ಗಿಟ್ಟಿಸಿಕೊಳ್ಳುತ್ತಾರೆ.

ನಂತರ ಇನ್ವೆಷ್ಟ್ ಮಾಡಿ ಡಬಲ್ ಹಣ ಬರುತ್ತೆ ಎಂದು ಆಸೆ ತೋರಿಸುತ್ತಾರೆ. ಆಸೆಗೆ ಬಿದ್ದ ಜನರು ಹಣ ಡಬಲ್‌ ಆಗುತ್ತೆ ಎಂದು ಲಕ್ಷಗಟ್ಟಲೆ ಹೂಡಿಕೆ ಮಾಡುತ್ತಾರೆ. ಹೀಗೆ ಲಕ್ಷ ಲಕ್ಷ ಹಣ ಸಿಕ್ಕಾಗಲೇ ಸೈಬರ್ ವಂಚಕರ ಅಸಲಿ ಆಟ ಶುರುವಾಗುತ್ತದೆ. ಬಂದಷ್ಟು ಬರಲಿ ಎಂದು ದೋಚಿಕೊಳ್ಳುವ ವಂಚಕರು ಮೊಬೈಲ್ ಸ್ವಿಚ್ಡ್‌ ಆಫ್ ಮಾಡಿಕೊಳ್ಳುತ್ತಾರೆ. ಈ ಸಂಬಂಧ ಈವರೆಗೆ ಒಟ್ಟು 5,300 ದೂರು ಬಂದಿವೆ.

ಎಂಟು ವಿಭಾಗದಲ್ಲಿ ದಾಖಲಾದ ಪ್ರಕರಣಗಳು

ವೈಟ್ ಫೀಲ್ಡ್ ವಿಭಾಗ – 2,500
ಉತ್ತರ ವಿಭಾಗ – 2,400
ಈಶಾನ್ಯ ವಿಭಾಗ – 2,200
ಆಗ್ನೇಯ ವಿಭಾಗ – 2,100
ಕೇಂದ್ರ ವಿಭಾಗ – 1,980
ದಕ್ಷಿಣ ವಿಭಾಗ – 1,750
ಪೂರ್ವ ವಿಭಾಗ – 1,700
ಪಶ್ಚಿಮ ವಿಭಾಗ – 1,560

ಸಾರ್ವಜನಿಕರು ಯಾರಾದರೂ ಫೋನ್‌ ಕರೆ ಮಾಡಿದರೆ ಒಟಿಪಿ ನೀಡುವುದು, ಗೊತ್ತಿಲ್ಲದ ಲಿಂಕ್‌ಗಳನ್ನು ಕ್ಲಿಕ್‌ ಮಾಡುವುದು ಮಾಡಬಾರದು. ಇದರಿಂದ ಸೈಬರ್ ವಂಚನೆಗೆ ಕಡಿವಾಣ ಹಾಕಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version