Site icon Vistara News

Kolar News: ಬೆಂಗಳೂರು-ಕಡಪ ರಸ್ತೆಯಲ್ಲಿ ಕಾರು-ಬೈಕ್‌ ಡಿಕ್ಕಿ; ಇಬ್ಬರು ಸವಾರರ ದುರ್ಮರಣ

Kolar News

ಕೋಲಾರ: ಕಾರು ಮತ್ತು ಬೈಕ್‌ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ (Kolar News) ಶ್ರೀನಿವಾಸಪುರ ತಾಲೂಕಿನ ಕಮತಂಪಲ್ಲಿ ಕ್ರಾಸ್‌ನಲ್ಲಿ ಭಾನುವಾರ ನಡೆದಿದೆ.

ಶ್ರೀನಿವಾಸಪುರ ತಾಲೂಕಿನ ಬೈರಗಾನಪಲ್ಲಿಯ ಗೋಪಾಲಪ್ಪ(58), ಚಿಂತಾಮಣಿ ತಾಲೂಕಿನ ಕೋನಪಲ್ಲಿ ಗ್ರಾಮದ ವೆಂಕಟೇಶ್ (45) ಮೃತರು. ಇವರಿಬ್ಬರೂ ಬಾವ-ಬಾಮೈದ ಆಗಿದ್ದು, ಬೆಂಗಳೂರು-ಕಡಪ ರಸ್ತೆಯ ತಾಡಿಗೋಲ್ ಕ್ರಾಸ್ ಸಮೀಪದ ಕಮತಂಪಲ್ಲಿ ಕ್ರಾಸ್‌ನಲ್ಲಿ ಹೋಗುತ್ತಿದ್ದಾಗ ಬೈಕ್‌ ಹಾಗೂ ಕಾರಿನ ನಡುವೆ ಅಪಘಾತ ನಡೆದಿದೆ.

ಅಪಘಾತ ನಡೆದ ವೇಳೆ ರಸ್ತೆಯಿಂದ ಸುಮಾರು 15 ಅಡಿಗಳ ಆಳಕ್ಕೆ ಕಾರು ಹಾಗೂ ದ್ವಿಚಕ್ರವಾಹನ ಸಮೇತ ಸವಾರರು ಬಿದ್ದಿದ್ದಾರೆ. ಈ ವೇಳೆ ಬೈಕ್‌ನಲ್ಲಿದ್ದ ಬಾವ-ಬಾಮೈದ ಸ್ಥಳದಲ್ಲಿಯೇ ಮೃತಪಟಿದ್ದಾರೆ.

ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ; ಸವಾರ ಸಾವು

ಕಾರವಾರ: ಕಾರು-ಬೈಕ್ ಭೀಕರ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದು ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 766EEಯ ಹನುಮಂತಿ ಕ್ರಾಸ್ ಬಳಿ ನಡೆದಿದೆ.ಶ್ಯಾಮಸುಂದರ ಹೆಗಡೆ(58) ಮೃತ ದುರ್ದೈವಿ. ಕಾರು ಬಡಿದು ರಸ್ತೆ ಪಕ್ಕದ ಹೋರ್ಡಿಂಗ್ಸ್ ಮುರಿದುಬಿದ್ದಿದೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ಅಪಘಾತ ನಡೆದಿದೆ.

ವಿದ್ಯುತ್‌ ಸರಿಪಡಿಸಲು ಹೋಗಿ ಸುಟ್ಟು ಕರಕಲಾದ ರೈತ

Electric shock

ಚಿಕ್ಕಮಗಳೂರು: ರೈತರೊಬ್ಬರು ತಾವೇ ವಿದ್ಯುತ್ ಸರಿಪಡಿಸಲು ಹೋಗಿ ದುರಂತ ಅಂತ್ಯ ಕಂಡಿದ್ದಾರೆ. ಕಂಬ ಏರಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ರೈತ ಸುಟ್ಟು (Electric shock) ಕರಕಲಾಗಿದ್ದಾರೆ. ಚಿಕ್ಕಮಗಳೂರಿನ (Chikkamagaluru News) ತರೀಕೆರೆ ತಾಲೂಕಿನ ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ.

ಮಂಜುನಾಥ್ (35) ಮೃತ ದುರ್ದೈವಿ. ಗಂಟೆ ಕಾಲ ವಿದ್ಯುತ್ ಇಲ್ಲದಿರುವುದನ್ನು ಕಂಡು ಸರಿಪಡಿಸಲು ಹೋಗಿದ್ದಾರೆ. ಮೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡದೇ ಮಂಜುನಾಥ್‌ ತಾವೇ ವಿದ್ಯುತ್ ಸಮಸ್ಯೆ ಸರಿಪಡಿಸಲು ಹೋಗಿದ್ದಾರೆ. ವಿದ್ಯುತ್ ಕಂಬಕ್ಕೆ ಏರಿ ಸರಿಪಡಿಸುವಾಗ ಒಮ್ಮೆ ಕರೆಂಟ್‌ ಪಾಸಾಗಿದೆ.

ಕ್ಷಣಾರ್ಧದಲ್ಲೇ ಕರೆಂಟ್‌ ಶಾಕ್‌ ಹೊಡೆದು, ಮಂಜುನಾಥ್‌ ಸುಟ್ಟು ಕರಕಲಾಗಿದ್ದಾರೆ. ವಿದ್ಯುತ್ ಕಂಬದಲ್ಲೇ ಮೃತದೇಹವು ಸಿಲುಕಿದ್ದು, ಮೃತ ಕುಟುಂಬಸ್ಥರು ಹಾಗೂ ಸ್ಥಳೀಯರ ರೋಧನೆ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಕಂಬದಲ್ಲಿ ಸಿಲುಕಿರುವ ಮೃತದೇಹವನ್ನು ಕೆಳಗಿಳಿಸು ತಯಾರಿಗೆ ಮುಂದಾಗಿದ್ದಾರೆ.

ಪೆಟ್ಟಿಗೆ ಅಂಗಡಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು

ಕಿಡಿಗೇಡಿಗಳಿಂದ ಪೆಟ್ಟಿಗೆ ಅಂಗಡಿಗೆ ಬೆಂಕಿ ಹೊತ್ತಿ ಉರಿದಿದ್ದು, ಪಕ್ಕದಲ್ಲಿದ್ದ ಐದಾರು ಅಂಗಡಿಗಳು ಸುಟ್ಟು ಭಸ್ಮವಾಗಿದೆ. ತುಮಕೂರಿನ ಪಾವಗಡ ತಾಲೂಕಿನ ನಿಡಗಲ್ ಹೋಬಳಿ ಮಂಗಳವಾಡದ ಅಂಬೇಡ್ಕರ್ ವೃತ್ತದ ಬಳಿ ಘಟನೆ ನಡೆದಿದೆ. ನಾಗರಾಜು ಎಂಬುವರಿಗೆ ಸೇರಿದ ಪೆಟ್ಟಿಗೆ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ಇದನ್ನೂ ಓದಿ | Bengaluru News : ರಂಗೋಲಿ ಅಳಿಸ್ತಾಳೆ, ಚಪ್ಪಲಿ ಸ್ಟ್ಯಾಂಡ್‌ ಬೀಳಿಸ್ತಾಳೆ; ಪಕ್ಕದ ಮನೆಯವರ ಗೋಳು

ಪಕ್ಕದಲ್ಲಿದ್ದ ಐದಾರು ಅಂಗಡಿಗಳಿಗೆ ಬೆಂಕಿ ಆವರಿಸಿಕೊಂಡು ಹೊತ್ತಿಉರಿದಿದೆ. ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಸ್ಥಳಕ್ಕೆ ಪಾವಗಡ ತಾಲೂಕಿನ ಅರಸಿಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version