Site icon Vistara News

Kuwait Fire: ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟ ವಿಜಯಕುಮಾರ್ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೊಟ್ಟ ಸಿಎಂ

Kuwait Fire

ಬೆಂಗಳೂರು: ಕುವೈತ್ ಅಗ್ನಿ ದುರಂತದಲ್ಲಿ (Kuwait Fire) ಮೃತಪಟ್ಟ ಕಲಬುರಗಿ ಮೂಲದ ವಿಜಯಕುಮಾರ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ದುಬೈನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರಸಂಬ ಗ್ರಾಮದ ವಿಜಯಕುಮಾರ್, ಜೂನ್‌ 12ರಂದು ಕುವೈತ್‌ನ ಮಂಗಾಫ್‌ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದರು. ಅನಿವಾಸಿ ಭಾರತೀಯ ಸಮಿತಿ ಮನವಿ ಮೇರೆಗೆ ಮೃತ ವ್ಯಕ್ತಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ನೀಡಲು ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ.

ಈ ಬಗ್ಗೆ ಅನಿವಾಸಿ ಭಾರತೀಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷೆ ಡಾ.ಆರತಿ ಕೃಷ್ಣ ಮಾಹಿತಿ ನೀಡಿದ್ದಾರೆ. ಪ್ರಪಂಚದಾದ್ಯಂತ ಹಲವು ರಾಷ್ಟ್ರಗಳಿಂದ ಅದರಲ್ಲೂ ಭಾರತೀಯರು ಕೆಲಸವನ್ನರಸಿ ಗಲ್ಫ್‌ ರಾಷ್ಟ್ರಗಳಿಗೆ ತಮ್ಮ ಜೀವನ ಗುಣಮಟ್ಟ ಸುಧಾರಣೆಗಾಗಿ ವಲಸೆ ಹೋಗುವುದು ಸರ್ವೆಸಾಮಾನ್ಯವಾಗಿದೆ. ಕುವೈತ್‌ನ ಮಂಗಾಫ್‌ನ ವಸತಿ ಸಮುಚ್ಚಯವೊಂದರಲ್ಲಿ ಜೂನ್12ರಂದು ಆಕಸ್ಮಿಕವಾಗಿ ನಡೆದ ಅಗ್ನಿ ದುರಂತದಲ್ಲಿ ಸುಮಾರು 45 ಭಾರತೀಯ ಪ್ರಜೆಗಳು ಸಾವನ್ನಪ್ಪಿದ್ದು, ಹಲವರು ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೊಂದು ದುರಾದೃಷ್ಟಕರ ಸಂಗತಿಯಾಗಿದ್ದು, ಘಟನೆಯ ಕುರಿತು ನಮ್ಮೆಲ್ಲರಿಗೂ ವಿಷಾಧವಿದೆ.

ಈ ಅಗ್ನಿ ದುರಂತದಲ್ಲಿ ಪ್ರಾಣ ಕಳಕೊಂಡವರ ಪೈಕಿ ಕೇರಳ ರಾಜ್ಯದವರೇ ಹೆಚ್ಚಿನವರಾಗಿದ್ದು, ನಮ್ಮ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರಸಂಬ ಗ್ರಾಮದ 40 ವರ್ಷ ವಯಸ್ಸಿನ ವಿಜಯಕುಮಾರ್ ಸಹ ಒಬ್ಬರಾಗಿದ್ದರು. ಇವರು ವಾಹನ ಚಾಲಕರಾಗಿ ಕುವೈತ್‌ನಲ್ಲಿ ಸುಮಾರು 8 ವರ್ಷಗಳಿಂದ ನೆಲೆಸಿತ್ತು. ಮೃತರ ಅವಲಂಬಿತ ಕುಟುಂಬದಲ್ಲಿ 8 ಸದಸ್ಯರಿದ್ದಾರೆ. ಅವರಿಗೆ ಮೃತ ದೇಹವನ್ನು ಕುವೈತ್‌ನಿಂದ ಭಾರತಕ್ಕೆ ತರುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿಯು, ಭಾರತ ಸರ್ಕಾರದೊಂದಿಗೆ ಹಾಗೂ ಕುವೈತ್‌ನ ರಾಯಭಾರಿ ಕಚೇರಿಯೊಂದಿಗೆ ನಿಕಟ ಸಂಪರ್ಕದಲ್ಲಿತ್ತು. ತದನಂತರ ಮೃತದೇಹವನ್ನು ಕೊಚ್ಚಿಯಿಂದ ಹೈದರಾಬಾದ್ ಮೂಲಕ ಮೃತರ ಸ್ವಗ್ರಾಮಕ್ಕೆ ತಲುಪಿಸುವಲ್ಲಿ ಸರ್ಕಾರದ ಅನೇಕ ಅಧಿಕಾರಿ ಸಿಬ್ಬಂದಿ ಸಹಕರಿಸಿದ್ದಾರೆ. ನಂತರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಈಗಾಗಲೇ ಕೇರಳ ರಾಜ್ಯ ಸರ್ಕಾರವು ಅಗ್ನಿ ದುರಂತದಲ್ಲಿ ಸತ್ತವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಆರ್ಥಿಕ ಪರಿಹಾರ ಘೋಷಿಸಿದೆ. ಮುಂದುವರಿದು ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ ವತಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ರಾಜ್ಯ ಸರ್ಕಾರವು ಮೃತ ವಿಜಯಕುಮಾರ್ ಕುಟುಂಬಕ್ಕೆ ಗರಿಷ್ಠ ಮಟ್ಟದ ಆರ್ಥಿಕ ನೆರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪಾವತಿಸುವಂತೆ ಕೋರಲಾಗಿತ್ತು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಅವಲಂಬಿತ ಕುಟುಂಬದವರಿಗೆ ಐದು ಲಕ್ಷಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡಲು ಅನುಮೋದಿಸಿದ್ದಾರೆ ಎಂದು ಡಾ.ಆರತಿ ಕೃಷ್ಣ ತಿಳಿಸಿದ್ದಾರೆ.

ಇದನ್ನೂ ಓದಿ | Electric shock : ಮೀನು ಹಿಡಿಯಲು ಹೋದಾಗ ವಿದ್ಯುತ್‌ ಪ್ರವಹಿಸಿ ಬಾಲಕರಿಬ್ಬರು ಮೃತ್ಯು; ಕುಟುಂಬಸ್ಥರ ಆಕ್ರಂದನ

Exit mobile version