Site icon Vistara News

Obituary | ಗುರುಲಿಂಗಸ್ವಾಮಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಕೆಯುಡಬ್ಲ್ಯುಜೆ

obituary

ಬೆಂಗಳೂರು: ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾಗಿದ್ದ ಗುರುಲಿಂಗಸ್ವಾಮಿ ಹೊಳಿಮಠ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ. ಗುರುಲಿಂಗ ಸ್ವಾಮಿ ಅವರ ಗೌರವಾರ್ಥ ಕಂದಾಯ ಭವನದಲ್ಲಿನ ಕೆಯುಡಬ್ಲ್ಯುಜೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಪತ್ರಕರ್ತರು, ಅವರ ಸಾವಿಗೆ ಮರುಗಿದರು. ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದರು. ಎರಡು ನಿಮಿಷ ಮೌನಾಚರಣೆ ಮಾಡಿ
ಸಂತಾಪ ಸೂಚಿಸಲಾಯಿತು.

ಎರಡು ದಶಕಗಳಿಗೂ ಹೆಚ್ಚು ಕಾಲ ಸುದ್ದಿ ಮನೆಯಲ್ಲಿ ಕೆಲಸ ಮಾಡಿದ ಗುರುಲಿಂಗ ಸ್ವಾಮಿ ಅವರ ಕುಟುಂಬಕ್ಕೆ ಸರ್ಕಾರ ನೆರವು ನೀಡಬೇಕು. ಆ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂದು ಇದೇ ಸಂದರ್ಭದಲ್ಲಿ ಕೆಯುಡಬ್ಲ್ಯುಜೆ ಒತ್ತಾಯಿಸಿತು.

ರಾಜ್ಯ ಸಂಘದ ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ್, ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯರಾದ ಹನುಮಂತ ಭೈರಮಡಗಿ, ವಿಜಯಪುರದ ಮೋಹನ ಪಿ. ಕುಲಕರ್ಣಿ, ಟಿವಿ5 ಸಂಪಾದಕ ಸತೀಶ್ ಎಂ., ದಶರಥ, ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್, ಉದಯವಾಣಿ ಮುಖ್ಯ ವರದಿಗಾರ ಲಕ್ಷ್ಮೀನಾರಾಯಣ್, ಎನ್. ಶಿವಾನಂದ, ಶಶಿಕಲಾ ಅವರು ಮಾತನಾಡಿ, ಗುರುಲಿಂಗಸ್ವಾಮಿ ಅವರ ಒಡನಾಟ ಹಾಗೂ ಅವರ ಆದರ್ಶಗಳ ಗುಣಗಾನ ಮಾಡಿದರು.

ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಗುರುಲಿಂಗಸ್ವಾಮಿ ಹೊಳಿಮಠ ಅವರು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾಗಿದ್ದಾಗ ಪತ್ರಕರ್ತರಿಗೆ ಆರ್ಥಿಕ ನೆರವಿನ ಸಂದರ್ಭ ಬಂದಾಗಲೆಲ್ಲಾ ಹೆಚ್ಚಿನ ಕಾಳಜಿ ವಹಿಸಿ ಮುಖ್ಯ ಮಂತ್ರಿಗಳಿಂದ ನೆರವು ಕೊಡಿಸುವಲ್ಲಿ ಅವರ ಶ್ರಮ ಅಪಾರವಾಗಿತ್ತೆಂಬುದನ್ನು ಸ್ಮರಿಸಿದರು.

ಎರಡೂ ದಶಕಗಳಿಗೂ ಹೆಚ್ಚು ಕಾಲ ಸುದ್ದಿ ಮನೆಯಲ್ಲಿ ಸುದ್ದಿಮೂಲ, ಕನ್ನಡ ಪ್ರಭ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಯಲ್ಲಿ ಮತ್ತು ಈ ಟಿವಿ, ಟಿವಿ5 ವಾಹಿನಿಯಲ್ಲಿ ಪತ್ರಕರ್ತರಾಗಿ, ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾಗಿಯೂ ಕ್ರಿಯಾಶೀಲವಾಗಿ ಕೆಲಸ ಮಾಡಿದ ಗುರುಲಿಂಗ ಸ್ವಾಮಿ ಹೊಳಿಮಠ ಅವರ ಕಾರ್ಯ ವೈಖರಿ ಮಾದರಿಯಾಗಿತ್ತು ಎಂದು ಹೇಳಿದರು.

ಸರ್ಕಾರ ಅವರ ಕುಟುಂಬಕ್ಕೆ ನೆರವಾಗಬೇಕು. ಸಿಎಂ ಈ ಬಗ್ಗೆ ಗಮನಹರಿಸಿ ತ್ವರಿತವಾಗಿ ಆರ್ಥಿಕ ಸಹಾಯ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಮಾತನಾಡಿ, ಗುರುಲಿಂಗ ಸ್ವಾಮಿ ಅವರ ನಿಧನದ ಸುದ್ದಿ ತಿಳಿದು ಅಂತಿಮ ದರ್ಶನ ಪಡೆಯಲು ಅಂದು ಸೇರಿದ ಜನಸಾಗರವನ್ನು ನೋಡಿದರೆ ಅವರು ಎಷ್ಟು ಜನಮುಖಿಯಾಗಿದ್ದರು ಎನ್ನುವುದಕ್ಕೆ ಸಾಕ್ಷಿ ಎಂದರು. ಇದೇ ಸಂದರ್ಭದಲ್ಲಿ ಅವರ ಪರೋಪಕಾರದ ಹೃದಯವಂತಿಕೆಯನ್ನು ಸ್ಮರಿಸಿದರು.

ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ಕೆ.ಕೆ. ಕುಲಕರ್ಣಿ, ವಾಸುದೇವ ಹೊಳ್ಳ, ದೇವರಾಜ್, ಸೋಮಶೇಖರ್ ಗಾಂಧಿ, ಸಂಘದ ನಗರ ಘಟಕದ ಅಧ್ಯಕ್ಷ ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಖಜಾಂಚಿ ಶಿವರಾಜ್, ಜಕ್ರಿಯಾ, ರಾಜ್ಯ ಪತ್ರಿಕಾ ವಿತರಕರ ರಾಜ್ಯಾಧ್ಯಕ್ಷ ಶಂಭುಲಿಂಗ ಹಾಜರಿದ್ದರು.

ಇದನ್ನೂ ಓದಿ | ಹುಟ್ಟೂರಿನಲ್ಲಿ ಗುರುಲಿಂಗಸ್ವಾಮಿ ಅಂತ್ಯಕ್ರಿಯೆ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Exit mobile version