Site icon Vistara News

BY Vijayendra : ನ. 17ಕ್ಕೆ ವಿಪಕ್ಷ ನಾಯಕನ ಆಯ್ಕೆ ಫಿಕ್ಸ್;‌ ಬಿ.ವೈ. ವಿಜಯೇಂದ್ರ ಮಾತಿನ ಅರ್ಥ ಇದು

BJP Karnataka leader of opposition

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ (BJP State President) ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಅವರ ಪುತ್ರ, ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಅವರನ್ನು ಆಯ್ಕೆ ಮಾಡಿರುವ ಬಿಜೆಪಿ ಹೈಕಮಾಂಡ್‌, ಇದೀಗ ನವೆಂಬರ್‌ 17ರಂದು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿಯೇ ವಿಪಕ್ಷ ನಾಯಕನ (Leader of the Opposition) ಆಯ್ಕೆ ಬಳಿಕವೇ ತಾವು ನವ ದೆಹಲಿಗೆ ಭೇಟಿ ನೀಡುವುದು ಎಂದು ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ದೀಪಾವಳಿ ಹಬ್ಬ ಇರುವ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರ ಪದಗ್ರಹಣ ಎರಡು ದಿನ ಮುಂದೂಡಿಕೆ ಆಗಿದೆ. ಈ ಕಾರಣಕ್ಕಾಗಿ ಅವರು ಬುಧವಾರ (ನ. 15) ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪದಗ್ರಹಣ ಸಮಾರಂಭವನ್ನು ಇಟ್ಟುಕೊಂಡಿದ್ದಾರೆ. ಅದಾದ ಬಳಿಕ ಗುರುವಾರ (ನ. 16) ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಕ್ಷದ ಕಾರ್ಯಕರ್ತರ ಬೃಹತ್‌ ಸಭೆಯನ್ನು ಇಟ್ಟುಕೊಂಡಿದ್ದಾರೆ. ಇದರ ಮರುದಿನವೇ ವಿಪಕ್ಷ ನಾಯಕನ ಆಯ್ಕೆ ಆಗುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: HD Kumaraswamy : ಸಿದ್ದರಾಮಯ್ಯ ಮನೆಗೆ ಕೋಟಿ ಬೆಲೆಯ ಸೋಫಾ ಸೆಟ್‌ ಗಿಫ್ಟ್‌; ಹ್ಯೂಬ್ಲೋಟ್‌ ವಾಚ್‌ ವರ್ಷನ್‌ 2 ಎಂದ ಎಚ್‌ಡಿಕೆ

ಬಿಜೆಪಿ ಕೇಂದ್ರ ವರಿಷ್ಠರು ಪಂಚ ರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ನ. 17ರ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ನಡೆಸಿ, ಅಂದೇ ವಿರೋಧ ಪಕ್ಷದ ನಾಯಕನ ನೇಮಕ ಮಾಡಲು ದೆಹಲಿ ವರಿಷ್ಠರು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮುಂದಿನ ಪ್ರಶ್ನೆ ಪ್ರತಿಪಕ್ಷ ನಾಯಕ ಯಾರು?

ರಾಜ್ಯ ಬಿಜೆಪಿ ಎದುರಿಸುತ್ತಿದ್ದ ಎರಡು ಮುಜುಗರದ ಪ್ರಶ್ನೆಗಳಲ್ಲಿ ಒಂದಕ್ಕೆ ಈಗ ಉತ್ತರ ಸಿಕ್ಕಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ‌ (BJP State President) ಬಿ.ವೈ. ವಿಜಯೇಂದ್ರ (BY Vijayendra) ಅವರನ್ನು ನೇಮಕ ಮಾಡಲಾಗಿದ್ದರಿಂದ ಇದೀಗ ಎರಡನೇ ಪ್ರಶ್ನೆ ಎದ್ದು ನಿಂತಿದೆ. ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ (Opposition leader in Assembly) ಯಾರನ್ನು ನೇಮಿಸಬಹುದು ಎಂಬ ಕುತೂಹಲ ಎಲ್ಲ ಕಡೆ ಇದೆ.

ರಾಜ್ಯಾಧ್ಯಕ್ಷರಾಗುತ್ತಿದ್ದಂತೆಯೇ ಬಿ.ವೈ ವಿಜಯೇಂದ್ರ ಅವರು, ಮುಂದಿನ ಶುಕ್ರವಾರದ ಒಳಗೆ ಸದನ ನಾಯಕನ ಆಯ್ಕೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದರು. ಶುಕ್ರವಾರದಂದು ಬಿಜೆಪಿ ಶಾಸಕಾಂಗ ಪಕ್ಷ ಸಭೆ ನಡೆಯಲಿದ್ದು, ಅದರಲ್ಲಿ ಕೇಂದ್ರದ ವೀಕ್ಷಕರ ಸಮ್ಮುಖದಲ್ಲಿ ಪ್ರತಿಪಕ್ಷ ನಾಯಕ ಎನ್ನುವುದು ತೀರ್ಮಾನವಾಗಲಿದೆ ಎಂದು ಹೇಳಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಲಿಂಗಾಯತರನ್ನು ನೇಮಕ ಮಾಡಿರುವುದರಿಂದ ವಿರೋಧ ಪಕ್ಷದ ನಾಯಕನ ಹುದ್ದೆ ಒಂದೋ ಒಕ್ಕಲಿಗರಿಗೆ ಒಲಿಯಲಿದೆ. ಇಲ್ಲವೇ ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದ ಶಾಸಕರಿಗೆ ಸಿಗಲಿದೆ ಎಂಬ ಲೆಕ್ಕಾಚಾರವಿದೆ.

ವಿರೋಧ ಪಕ್ಷದ ನಾಯಕನಾಗುವ ದೊಡ್ಡ ಅವಕಾಶವನ್ನು ಬಸವರಾಜ ಬೊಮ್ಮಾಯಿ (Basavaraja Bommai) ಮತ್ತು ಆರಗ ಜ್ಞಾನೇಂದ್ರ ಅವರು ಕಳೆದುಕೊಂಡಿದ್ದಾರೆ. ಬಸವರಾಜ ಬೊಮ್ಮಾಯಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಈ ಅವಕಾಶ ಅವರಿಗೆ ಕೊಡುವುದು ಕಷ್ಟ. ಆರಗ ಜ್ಞಾನೇಂದ್ರ ಅವರು ಒಕ್ಕಲಿಗರಾದರೂ ಶಿವಮೊಗ್ಗ ಜಿಲ್ಲೆಯವರು. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಮತ್ತು ವಿರೋಧ ಪಕ್ಷದ ನಾಯಕ ಎರಡೂ ಸ್ಥಾನಗಳನ್ನು ಒಂದೇ ಜಿಲ್ಲೆಗೆ ಕೊಡುವುದು ಸಾಧ್ಯವೇ ಇಲ್ಲ. ಹೀಗಾಗಿ ಅವರು ಅವಕಾಶವನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದೇ ಹೇಳಲಾಗುತ್ತಿದೆ.

ಒಕ್ಕಲಿಗರಾದರೆ ಎರಡು ಆಯ್ಕೆ

ಒಂದು ವೇಳೆ ಈ ಬಾರಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಒಕ್ಕಲಿಗರಿಗೆ ನೀಡುವುದೇ ಹೌದಾದರೆ ಪ್ರಮುಖವಾಗಿ ಸ್ಪರ್ಧೆಯಲ್ಲಿ ಮೇಲ್ನೋಟಕ್ಕೆ ಕಾಣುವವರು ಮಾಜಿ ಡಿಸಿಎಂಗಳಾದ ಆರ್‌. ಅಶೋಕ್‌ (R Ashok) ಮತ್ತು ಡಾ. ಸಿ.ಎನ್‌. ಅಶ್ವತ್ಥನಾರಾಯಣ (Dr. CN Ashwathnarayana). ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರು ಆರ್‌. ಅಶೋಕ್‌ ಅವರನ್ನು ಬೆಂಬಲಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಒಂದು ಹಂತದಲ್ಲಿ ಬಿಜೆಪಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಿಟ್ಟು ಕೊಡಬಹುದಾ ಎಂಬ ಚರ್ಚೆಯೂ ನಡೆದಿತ್ತು. ಆದರೆ, ಜೆಡಿಎಸ್‌ನ ಕೋರ್‌ ಕಮಿಟಿ ಅಧ್ಯಕ್ಷರಾಗಿರುವ ಜಿ.ಟಿ. ದೇವೇಗೌಡ ಅವರು ಯಾವ ಕಾರಣಕ್ಕೂ ಇಂಥ ಸಾಧ್ಯತೆಗಳಿಲ್ಲ ಎಂದಿದ್ದಾರೆ.

ಒಂದು ವೇಳೆ ಒಕ್ಕಲಿಗರಿಗೆ ಬೇಡ, ಇತರ ಹಿಂದುಳಿದ ವರ್ಗಗಳ ನಾಯಕರಿಗೆ ಈ ಅವಕಾಶ ನೀಡೋಣ ಎಂಬ ತೀರ್ಮಾನಕ್ಕೆ ಬಂದರೆ ಕಾರ್ಕಳದ ಶಾಸಕ ಸುನಿಲ್‌ ಕುಮಾರ್‌ (V Sunil Kumar) ಅವರು ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ.

ನಾನೂ ಆಕಾಂಕ್ಷಿ ಎಂದಿರುವ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ

ಈ ನಡುವೆ, ವಿರೋಧಪಕ್ಷದ ನಾಯಕನ ಹುದ್ದೆಗೆ ನಾನೂ ಆಕಾಂಕ್ಷಿ ಎಂದು ಮಾಜಿ ಡಿಸಿಎಂ ಹಾಗೂ ಮಲ್ಲೇಶ್ವರ ಶಾಸಕ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಶನಿವಾರ ಹೇಳಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ನೇಮಕ ಆಗಿದೆ. ಸೂಕ್ತವಾದ ವ್ಯಕ್ತಿಯನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುತ್ತಾರೆ. ವಿಧಾನ ಸಭೆಯಲ್ಲಿರುವ 66 ಜನ ಶಾಸಕರಿದ್ದಾರೆ. ಎಲ್ಲರೂ ವಿರೋಧ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾರೆ. ನಾನೂ ಕೂಡ ಆಕಾಂಕ್ಷಿಯಾಗಿದ್ದೇನೆ‌ ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ : BY Vijayendra : ನ.15ಕ್ಕೆ ಪದಗ್ರಹಣ, ವಿಪಕ್ಷ ನಾಯಕನ ಆಯ್ಕೆ ಬಳಿಕವೇ ದೆಹಲಿಗೆ ಹೋಗುವೆ: ಬಿ.ವೈ. ವಿಜಯೇಂದ್ರ

ʻʻವಿಧಾನಸಭೆಯಲ್ಲಿ ಬಿಜೆಪಿ ಕಾನೂನಾತ್ಮಕವಾಗಿ ವಿರೋಧ ಪಕ್ಷ.‌ ನಮ್ಮಲ್ಲೇ ಬೇಕಾದಷ್ಟು ನಾಯಕರಿದ್ದಾರೆ.
ಜೆಡಿಎಸ್ ಜತೆ ಮೈತ್ರಿ ಆಗಿರಬಹುದು. ಅಂದ ಮಾತ್ರಕ್ಕೆ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾ‌ನ ಕೊಡಬೇಕು ಅಂತ ಏನೂ ಇಲ್ಲ‌ʼʼ ಎಂದು ಅಶ್ವತ್ಥನಾರಾಯಣ ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version