Site icon Vistara News

leopard attack: ತಿ.ನರಸೀಪುರದಲ್ಲಿ ಬೋನಿಗೆ ಬಿತ್ತು ಒಂದು ಚಿರತೆ ಮತ್ತು ಮೂರು ಮರಿಗಳು

Leopard attack news A leopard and three cubs fall into a cage in T. Narasipur

ಮೈಸೂರು: ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ಚಿರತೆ ದಾಳಿಯಿಂದ (leopard attack) 11 ವರ್ಷದ ಬಾಲಕ ಬಲಿಯಾಗಿರುವ ಪ್ರಕರಣ ಜನರಲ್ಲಿ ಭೀತಿ ಹುಟ್ಟಿಸಿದೆ. ಇದರ ಬೆನ್ನಲ್ಲೇ ಚಿದರವಳ್ಳಿ ಗ್ರಾಮದಲ್ಲಿ ಚಿರತೆಯೊಂದು ಬೋನಿಗೆ‌ (Trapped) ಬಿದ್ದಿದ್ದು, ಅದರ ಮೂರು ಮರಿಗಳು ಪತ್ತೆಯಾಗಿವೆ.

ಚಿದರವಳ್ಳಿ ಗ್ರಾಮದ ಮಾದೇಗೌಡ ಎಂಬುವವರ ಜಮೀನಿನಲ್ಲಿ ಚಿರತೆಗಳು ಪತ್ತೆಯಾಗಿವೆ. ಶನಿವಾರವೇ ಕಬ್ಬಿನ ಗದ್ದೆಯಲ್ಲಿ ೩ ಚಿರತೆ ಮರಿ ಪ್ರತ್ಯಕ್ಷವಾಗಿದ್ದವು. ಈ ಹಿನ್ನೆಲೆಯಲ್ಲಿ ಬೋನನ್ನು ಇಡಲಾಗಿತ್ತು. ಈ ಬೋನಿಗೆ ಭಾನುವಾರ ತಾಯಿ ಚಿರತೆ ಬಿದ್ದಿದೆ.

ತಾಯಿ ಚಿರತೆ ಬೋನಿನಲ್ಲಿ ಕೂಗಾಟ ನಡೆಸಿದ್ದರಿಂದ ಎಲ್ಲರಿಗೂ ವಿಷಯ ತಿಳಿದಿದೆ. ಸ್ಥಳಕ್ಕೆ ಸಾರ್ವಜನಿಕರು ಬಂದು ಭೇಟಿ ನೀಡಿದಾಗ ಚಿರತೆಯು ಬೋನಿನಲ್ಲಿ ಸೆರೆಯಾಗಿದ್ದು ಕಂಡಿದೆ. ಅಲ್ಲದೆ, ಬೋನಿನ ಒಳಗೆ ಚಿರತೆ ಚೀರಾಡುತ್ತಿದ್ದರೆ, ಹೊರಗಡೆ ಮೂರು ಮರಿಗಳು ಓಡಾಡಿಕೊಂಡಿದ್ದವು. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆ ಮರಿಗಳನ್ನು ಹಿಡಿದು ರಕ್ಷಿಸಿದ್ದಾರೆ. ಅರಣ್ಯಾಧಿಕಾರಿಗಳು ಚಿರತೆ ಹಾಗೂ ಮರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Pathaan Movie, ಯಾರು ಶಾರುಖ್ ಎಂದು ಕೇಳಿದ ಅಸ್ಸಾಮ್ ಸಿಎಂಗೆ ಖಾನ್ ಫೋನ್ ಕಾಲ್!

ಶನಿವಾರ ತಡರಾತ್ರಿ ಚಿರತೆ ದಾಳಿ ಪ್ರಕರಣ

ಹೊರಳಹಳ್ಳಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ಚಿರತೆಯೊಂದು ದಾಳಿ ನಡೆಸಿದ್ದು, ೧೧ ವರ್ಷದ ಜಯಂತ್‌ನನ್ನು ಎಳೆದುಕೊಂಡು ಹೋಗಿತ್ತು. ಜಯಂತ್ ಶವಕ್ಕಾಗಿ ಗ್ರಾಮಸ್ಥರು ರಾತ್ರಿಯಿಡಿ ಹುಡುಕಾಟ ನಡೆಸಿದ್ದರು. ಭಾನುವಾರ ಬೆಳಗ್ಗೆ ಜಯಂತ್‌ ಮೃತದೇಹ ಪತ್ತೆಯಾಗಿದೆ. ಬಾಲಕನ ರುಂಡವನ್ನು ಚಿರತೆ ಹೊತ್ತೊಯ್ದಿತ್ತು. ಇದು ಎಲ್ಲರನ್ನೂ ಆತಂಕಕ್ಕೆ ದೂಡಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರು, ಜಿಲ್ಲಾಧಿಕಾರಿಗಳು ಹೊರಳಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಿ.ನರಸೀಪುರ ತಾಲೂಕಲ್ಲಿ ನವೆಂಬರ್‌ನಿಂದ ನಡೆದಿರುವ ದಾಳಿ

ತಿ.ನರಸೀಪುರ ತಾಲೂಕಿನ ಕಳೆದ ನವೆಂಬರ್‌ನಿಂದ ನಿರಂತರವಾಗಿ ಚಿರತೆ ದಾಳಿ ನಡೆದಿದ್ದು, ನಾಲ್ವರು ಬಲಿಯಾದಂತಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಜನತೆ ತೀವ್ರ ಆತಂಕ ಹಾಗೂ ಭಯದಲ್ಲಿದ್ದಾರೆ. ಮೃತಪಟ್ಟವರ ವಿವರ ಇಂತಿದೆ. ೨೦೨೨ ನವೆಂಬರ್‌ 1: ಉಕ್ಕಲಗೆರೆ ಮಂಜುನಾಥ್, ೨೦೨೨ ಡಿಸೆಂಬರ್‌ 2: ಎಸ್.ಕೆಬ್ಬೇಹುಂಡಿ ಮೇಘನಾ, ೨೦೨೩ ಜನವರಿ 20: ಕನ್ನಾಯಕನಹಳ್ಳಿ ಸಿದ್ದಮ್ಮ, ೨೦೨೩ ಜನವರಿ 22: ಹೊರಳಹಳ್ಳಿ ಜಯಂತ್ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಒಂಟಿ ಓಡಾಟ ಬೇಡ: ಅರಣ್ಯ ಇಲಾಖೆ ಪ್ರಕಟಣೆ

ತಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ ನಾಲ್ಕನೇ ಬಲಿಯಾಗಿರುವ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಮಕ್ಕಳು, ಮಹಿಳೆಯರು, ವೃದ್ಧರು ಒಂಟಿಯಾಗಿ ಓಡಾಡಬಾರದು. ಸಂಜೆ 6 ಗಂಟೆಯೊಳಗೆ ಎಲ್ಲರೂ ಮನೆ ಸೇರಿಕೊಳ್ಳಬೇಕು. ಬಯಲು ಬಹಿರ್ದೆಸೆಗೆ ಹೋಗಬಾರದು. ಚಿರತೆಯ ಚಲನವಲನ ಕಂಡರೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

ಗ್ರಾಮಸ್ಥರಿಂದ ಪ್ರತಿಭಟನೆ

ಹೊರಳಹಳ್ಳಿಯ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಚಿರತೆ ದಾಳಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಚಿರತೆಗಳ ದಾಳಿ ಹೆಚ್ಚಾಗುತ್ತಿದ್ದು, ಮನುಷ್ಯರು, ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಲೇ ಇವೆ. ನಮಗೆ ಮನೆಯಿಂದ ಹೊರಗೆ ಕಾಲಿಡಲೂ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: SSLC Workshop | ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವುದು ಹೇಗೆ?: ವಿಸ್ತಾರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

ಸೌಜನ್ಯಕ್ಕಾದರೂ ಉಸ್ತುವಾರಿ ಸಚಿವರು, ಅರಣ್ಯ ಇಲಾಖೆ ಸಚಿವರು ಭೇಟಿ ನೀಡಿಲ್ಲ. ಚಿರತೆ ದಾಳಿಯಿಂದ ದಿನನಿತ್ಯ ಸಾಯುತ್ತಿರುವ ಬಡ ಜೀವಗಳಿಗೆ ಬೆಲೆಯಿಲ್ಲವೇ ಎಂದೂ ಜನರು ಆಕ್ರೋಶ ಹೊರಹಾಕಿದ್ದಾರೆ. ತಾಲೂಕಿನ ಜನತೆ ನೆಮ್ಮದಿಯಿಂದ ಬದುಕುವ ವಾತಾವರಣವನ್ನು ಸೃಷ್ಟಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಚಿರತೆ ಸೆರೆ ಕಾರ್ಯಾಚರಣೆಯನ್ನು ಪ್ರಾರಂಭಿಸಬೇಕಿದೆ. ಇಲ್ಲದಿದ್ದರೆ ಜನತೆಯೇ ಅಧಿಕಾರಿಗಳು, ಸರ್ಕಾರ ಮತ್ತು ಆಡಳಿತದ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂದು ಮಾಜಿ ತಾಪಂ ಸದಸ್ಯ ರಮೇಶ್ ಎಚ್ಚರಿಸಿದ್ದಾರೆ.

Exit mobile version