Site icon Vistara News

Anchor Aparna: ನಟನೆ, ನಿರೂಪಣೆ, ಕನ್ನಡ, ಹಾಸ್ಯ; ಅಪರ್ಣಾ ಸಾಗಿದ ಜೀವನದ ಹಾದಿ ಇಲ್ಲಿದೆ

Anchor Aparna

Life Story Of Famous Kannada Anchor Aparna

ಬೆಂಗಳೂರು: ಅಪರ್ಣಾ ವಸ್ತಾರೆ. ಇವರು ವೇದಿಕೆ ಮೇಲೆ ನಿಂತು ಕನ್ನಡ ಮಾತನಾಡುತ್ತಿದ್ದರೆ ಇಂಪಾದ ಹಾಡು ಕೇಳಿದ ಹಾಗೆ ಆಗುತ್ತಿತ್ತು. ಕನ್ನಡ ಪದಗಳ ಉಚ್ಚಾರ, ಸ್ಫುಟತೆ, ಪದಗಳ ಬಳಕೆ, ಹಾವ-ಭಾವದ ಮೂಲಕವೇ ಅವರು ಎಂತಹವರೂ ಕನ್ನಡವನ್ನು ಪ್ರೀತಿಸುವಂತೆ ಮಾಡುತ್ತಿದ್ದರು. ನಟನೆ, ನಿರೂಪಣೆ, ರೇಡಿಯೊ ಜಾಕಿ, ಹಾಸ್ಯದ ಮೂಲಕವೇ ಮನೆಮಾತಾಗಿದ್ದ ಅಪರ್ಣಾ ವಸ್ತಾರೆ (Aparna Vastarey) ಅವರು ನಿಧನರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಗುರುವಾರ (ಜುಲೈ 11) ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇವರ ನಿಧನಕ್ಕೆ ಕನ್ನಡದ ಸಿನಿಮಾ ನಟರು ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ನಟನೆ, ರೇಡಿಯೊ ಜಾಕಿ ಜತೆಗೆ ಕನ್ನಡದಿಂದಲೇ ಗುರುತಿಸಿಕೊಂಡಿದ್ದ ಅಪರ್ಣಾ (Anchor Aparna) ಅವರು ಸಾಗಿಬಂದ ಹಾದಿ ಇಲ್ಲಿದೆ.

ಸಿನಿಮಾ ಪಯಣ

ಚಿಕ್ಕಮಗಳೂರು ಜಿಲ್ಲೆಯ ಪಂಚನಹಳ್ಳಿಯಲ್ಲಿ 1973ರ ಜನವರಿ 7ರಂದು ಜನಿಸಿದ ಅಪರ್ಣಾ ವಸ್ತಾರೆ ಅವರು ಮೊದಲು ಬೆಳ್ಳಿ ತೆರೆಯ ಮೂಲಕವೇ ಸಿನಿಮಾ ರಂಗವನ್ನು ಪ್ರವೇಶಿಸಿದರು. ಅದರಲ್ಲೂ, 1984ರಲ್ಲಿ ಬಿಡುಗಡೆಯಾದ, ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಮಸಣದ ಹೂವು ಸಿನಿಮಾದ ಮೂಲಕ ಪದಾರ್ಪಣೆ ಮಾಡಿದ ಅವರು, ಮೊದಲ ಸಿನಿಮಾದಲ್ಲಿಯೇ ಅಪಾರವಾದ ಖ್ಯಾತಿ ಗಳಿಸಿದರು. ಅಲ್ಲದೆ, ಸಂಗ್ರಾಮ (1987), ನಮ್ಮೂರ ರಾಜ (1988), ಸಾಹಸ ವೀರ (1988), ಮಾತೃ ವಾತ್ಸಲ್ಯ (1988), ಒಲವಿನ ಆಸರೆ (1989), ಇನ್ಸ್‌ಪೆಕ್ಟರ್‌ ವಿಕ್ರಮ್‌ (1989), ಒಂದಾಗಿ ಬಾಳು (1989), ಡಾಕ್ಟರ್‌ ಕೃಷ್ಣ (1989), ಒಂಟಿ ಸಲಗ (1989), ಚಕ್ರವರ್ತಿ (1990) ಸೇರಿ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು.

ಸಾಲು ಸಾಲು ಸಿನಿಮಾಗಳ ಮೂಲಕ ಮಿಂಚಿದ ಅಪರ್ಣಾ ಅವರು ಸಿನಿಮಾ ಬಿಟ್ಟು ಕಿರುತೆರೆ, ನಿರೂಪಣೆಯಲ್ಲಿಯೇ ಹೆಚ್ಚು ತೊಡಗಿಸಿಕೊಂಡರು. ಆದರೂ, ಇತ್ತೀಚೆಗೆ ಅವರು ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಗ್ರಾಮಾಯಣ ಸಿನಿಮಾವು ಶೂಟಿಂಗ್‌ ಹಂತದಲ್ಲಿದೆ. ಈಗ ವಿಜಯ ರಾಘವೇಂದ್ರ ಅವರ ನಟನೆಯ ಗ್ರೇ ಗೇಮ್ಸ್‌ ಸಿನಿಮಾದಲ್ಲಿ ಅವರ ಕೊನೆಯ ಸಿನಿಮಾ ಆಗಿದೆ.

ನಿರೂಪಣೆಯಲ್ಲಿ ಎತ್ತಿದ ಕೈ

ಸಿನಿಮಾಗಳಿಂದ ದೂರವೇ ಉಳಿದ ಅಪರ್ಣಾ ಅವರು ನಿರೂಪಣೆಗೆ ಹೆಚ್ಚಿನ ಆದ್ಯತೆ ನೀಡಿದರು. 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದ ನಂತರ ಭಾರತ ಸರ್ಕಾರದ ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. 1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರವೊಂದನ್ನು ಎಂಟು ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು. ಕಿರುತೆರೆಯಲ್ಲಿ ಮೂಡಲಮನೆ, ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ನಟನೆ ಮಾಡಿದ್ದರು.

ಬಿಗ್‌ಬಾಸ್‌ ಸ್ಪರ್ಧಿ, ಹಾಸ್ಯ ನಟಿಯಾಗಿ ಬಡ್ತಿ

ನಟನೆ, ನಿರೂಪಣೆಯಿಂದ ಮನೆಮಾತಾಗಿದ್ದ ಅಪರ್ಣಾ ಅವರು 2013ರಲ್ಲಿ ಆರಂಭವಾದ ಬಿಗ್‌ಬಾಸ್‌ ಸೀಸನ್‌ 1ರ ಸ್ಪರ್ಧಿಯಾಗಿದ್ದರು. ಇದಾದ ನಂತರ ಹಾಸ್ಯನಟಿಯಾಗಿ ಕಾಣಿಸಿಕೊಂಡ ಅವರು, ಸೃಜನ್‌ ಲೋಕೇಶ್‌ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್‌, ಮಜಾ ಟಾಕೀಸ್‌ ಸೂಪರ್‌ ಸೀಸನ್‌ನಲ್ಲಿ ಅವರು ವರಲಕ್ಷ್ಮೀ ಪಾತ್ರದಲ್ಲಿ ನಾಡಿನ ಜನರನ್ನು ನಗಿಸಿದ್ದರು. ಮೂಡಲಮನೆ, ಮುಕ್ತ, ಇವಳು ಸುಜಾತಾ, ನನ್ನರಸಿ ರಾಧೆ ಧಾರಾವಾಹಿಗಳಲ್ಲೂ ಇವರು ನಟಿಸಿ ಸೈ ಎನಿಸಿಕೊಂಡಿದ್ದರು. ಇವರು ಹಲವು ಪತ್ರಿಕೆಗಳಿಗೆ ಅಂಕಣಗಳನ್ನೂ ಬರೆದಿದ್ದಾರೆ.

ನಮ್ಮ ಮೆಟ್ರೋದ ಧ್ವನಿ ಇವರದ್ದೇ

2014ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋಗೆ ಧ್ವನಿಯಾಗಿದ್ದು ಕೂಡ ಇವರೇ. “ಪ್ರಯಾಣಿಕರೇ ಗಮನಿಸಿ, ಮುಂದಿನ ನಿಲ್ದಾಣ, ಬಾಗಿಲು ಈಗ ಎಡಕ್ಕೆ ತೆರೆಯುತ್ತವೆ” ಎಂಬುದು ಸೇರಿ ಹಲವು ಉದ್ಘೋಷಗಳು ಇವರದ್ದೇ ಆಗಿವೆ. ಈಗಲೂ ಬೆಂಗಳೂರಿನ ಜನ ಪ್ರತಿದಿನ ಮೆಟ್ರೋದಲ್ಲಿ ಅಪರ್ಣಾ ಅವರ ಧ್ವನಿಯನ್ನೇ ಕೇಳುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಂತಾಪ

ವೈಯಕ್ತಿಕ ಜೀವನದಲ್ಲಿ ಇವರು ಹಲವು ಏಳುಬೀಳುಗಲನ್ನು ಕಂಡಿದ್ದರು. ಮೊದಲ ಪತಿಯು ಇವರಿಗೆ ಕಿರುಕುಳ ನೀಡಿದ ಕಾರಣ ಅವರಿಂದ ದೂರವಾಗಿದ್ದರು. ಅವರು ಎರಡನೇ ಬಾರಿಗೆ ನಾಗರಾಜ್ ಆರ್ಕಿಟೆಕ್ಟ್‌ ಒಬ್ಬರನ್ನು ಮದುವೆಯಾಗಿ, ಸುಖ ಸಂಸಾರ ಸಾಗಿಸುತ್ತಿದ್ದರು. ಆದರೆ, ಕ್ಯಾನ್ಸರ್‌ ಎಂಬ ಮಹಾಮಾರಿಯು ಅವರನ್ನು ಬಲಿಪಡೆದಿರುವುದು ದುರದೃಷ್ಟವೇ ಸರಿ.

ಇದನ್ನೂ ಓದಿ: Anchor Aparna: ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ, ಕಳಚಿತು ಅಚ್ಚ ಕನ್ನಡದ ಕೊಂಡಿ

Exit mobile version