Site icon Vistara News

Electric Shock: ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಲೈನ್‌ಮ್ಯಾನ್‌ ಸಾವು

electrocution

ಬೆಳಗಾವಿ: ಕೆಲಸ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ (Electric Shock) ಲೈನ್‌ಮ್ಯಾನ್ ಮೃತಪಟ್ಟಿರುವ ಘಟನೆ ಕಿತ್ತೂರಿನ ಕೆಇಬಿ ಆವರಣದಲ್ಲಿ ನಡೆದಿದೆ. ಲೈನ್‌ಮ್ಯಾನ್ ಸಾವಿಗೆ ಮೇಲಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪ್ರೇಮಾನಂದ ಅಶೋಕ್ ಎಮ್ಮಿ (28) ಮೃತರು. ಶುಕ್ರವಾರ ಸಂಜೆ ವೇಳೆ ವಿದ್ಯುತ್‌ ಮಾರ್ಗ ದುರಸ್ತಿ ಮಾಡುವ ವೇಳೆ ಅವಘಡ ನಡೆದಿದೆ. ಲೈನ್ ಕಡಿತ ಮಾಡಿಸದೆ ಅಧಿಕಾರಿಗಳು ಕೆಲಸ ಮಾಡಿಸಿದ್ದಾರೆ. ಇದರಿಂದಲೇ ದುರಂತ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಸ್ಪತ್ರೆಯ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ | Murder Case: ಚಿಂತಾಮಣಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಭೀಕರ ಕೊಲೆ

ಮಣ್ಣು ಕುಸಿದು ರೈತರ ಸಾವು

ವಿಜಯನಗರ: ಮರಳು ತುಂಬುವಾಗ ಆಕಸ್ಮಿಕ ಮಣ್ಣು ಕುಸಿದಿದ್ದರಿಂದ ಉಸಿರುಗಟ್ಟಿ ರೈತ ಮೃತಪಟ್ಟಿರುವ ಘಟನೆ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ನಡೆದಿದೆ. ಜಂಬಣ್ಣ (39) ಮೃತ ರೈತ. ಗ್ರಾಮದಲ್ಲಿ ರೈತ ಮನೆ ಕಟ್ಟಿಸುತ್ತಿದ್ದರು. ಹೀಗಾಗಿ ನಡುಮಾವಿನಹಳ್ಳಿ ಹಳ್ಳದಲ್ಲಿ ಮರಳು ತೆಗೆಯಲು ಹೋಗಿದ್ದರು. ಈ ವೇಳೆ ಮಣ್ಣು ಏಕಾಏಕಿ ಕುಸಿದಿದ್ದರಿಂದ ರೈತ ಮೃತಪಟ್ಟಿದ್ದಾರೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಳ್ಳಾಲ ಸಮುದ್ರದಲ್ಲಿ ಈಜಲು ಹೋದ ಇಬ್ಬರು ನೀರುಪಾಲು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ (Mangalore News) ಹೊರವಲಯದ ಉಳ್ಳಾಲ ಬಳಿ ಸಮುದ್ರದಲ್ಲಿ (Sea at Ullal in Mangalore) ಈಜಲು ತೆರಳಿದ ಇಬ್ಬರು ನೀರುಪಾಲಾಗಿದ್ದಾರೆ (Drowned in Sea). ಸಮುದ್ರ ಪಾಲಾದವರಲ್ಲಿ ಒಬ್ಬನ ಶವ ಪತ್ತೆಯಾಗಿದ್ದರೆ ಇನ್ನೊಬ್ಬ ಇನ್ನೂ ನಾಪತ್ತೆಯಾಗಿದ್ದಾನೆ. ಒಬ್ಬನನ್ನು ರಕ್ಷಿಸಲಾಗಿದೆ.

ಚಿಕ್ಕಮಗಳೂರು ಮೂಲದ ಮೂವರು ಯುವಕರಾದ ಬಶೀರ್ (23), ಸಲ್ಮಾನ್ (19), ಸೈಫ್ ಆಲಿ (27) ಅವರು ಉಳ್ಳಾಲ ದರ್ಗಾ ಸಂದರ್ಶನಕ್ಕೆ ಬಂದಿದ್ದರು. ಹಾಗೆ ಬಂದವರು ದರ್ಶನ, ಪ್ರಾರ್ಥನೆ ಮುಗಿಸಿ ಸಮೀಪದಲ್ಲೇ ಇರುವ ಸಮುದ್ರದ ಬಳಿಗೆ ಬಂದಿದ್ದರು.

ಅಲ್ಲಿ ಸಮುದ್ರದಲ್ಲಿ ಈಜಲು ಇಳಿದಾಗ ಮೂವರೂ ನೀರು ಪಾಲಾದರು. ಕೂಡಲೇ ಅಲ್ಲಿದ್ದ ಜೀವರಕ್ಷಕ ತಂಡ ಸಮುದ್ರಕ್ಕೆ ಜಿಗಿದು ಸೈಫ್‌ ಅಲಿಯನ್ನು ಮೇಲೆತ್ತಿ ಹಾಕಿತು. ಸಲ್ಮಾನ್‌ನನ್ನು ಕೂಡಾ ಮೇಲೆತ್ತಿತು. ಆದರೆ, ಉಳ್ಳಾಲ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿದ್ದಾನೆ. ಸಮುದ್ರ ಪಾಲಾದ ಬಶೀರ್‌ ಇನ್ನೂ ನಾಪತ್ತೆಯಾಗಿದ್ದು, ಶವ ಸಿಕ್ಕಿಲ್ಲ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕಾರವಾರ ಬಳಿ ಸೇತುವೆಯಿಂದ ನದಿಗೆ ಹಾರಿ ಯುವಕ ಆತ್ಮಹತ್ಯೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಕಾಳಿ ನದಿ ಸೇತುವೆಯ ಮೇಲೆ ರಾಷ್ಟ್ರೀಯ ಹೆದ್ದಾರಿ 66ರಿಂದ ಕಾಳಿ ನದಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕ ನದಿಗೆ ಹಾರಿದ್ದನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಕಾರವಾರ ನಗರ ಠಾಣೆ ಪೊಲೀಸರು, ಕರಾವಳಿ ಕಾವಲುಪಡೆ ಸಿಬ್ಬಂದಿ ಭೇಟಿ ನೀಡಿ ಬೋಟ್ ಮೂಲಕ ನಾಪತ್ತೆಯಾದ ಯುವಕನಿಗಾಗಿ ಶೋಧ ನಡೆಸಿದ್ದರು. ಆದರೆ, ಗುರುವಾರ ಸಂಜೆಯವರೆಗೂ ಶವ ಸಿಕ್ಕಿರಲಿಲ್ಲ.

ಇದನ್ನೂ ಓದಿ | Namma Metro: ಮೆಟ್ರೋದಲ್ಲಿ ಯುವತಿಯ ಹಿಂದೆ ನಿಂತು ಲೈಂಗಿಕ ಕಿರುಕುಳ; ಆರೋಪಿ ಅರೆಸ್ಟ್

ಶುಕ್ರವಾರ ಶವ ಕಾರವಾರದ ಅಳ್ವೇವಾಡದಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ಕಾರವಾರದ ಆದಿತ್ಯ ನಾಯ್ಕ(32) ಎಂದು ಗುರುತಿಸಲಾಗಿದೆ. ಆತ ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version