Site icon Vistara News

Assault on Child: ಪುಟ್ಟ ಹೆಣ್ಣು ಮಗು ಮೇಲೆ ಮಲತಂದೆ ಕ್ರೌರ್ಯ; ಹೀಟರ್, ಸಿಗರೇಟ್‌ನಿಂದ ಸುಟ್ಟು ಹಲ್ಲೆ

assault on child

ಆನೇಕಲ್: ಮೂರು ವರ್ಷದ ಮಗುವನ್ನು ತಾಯಿ ಕೂಡಿಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಘಟನೆ ನಡೆದ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಘಟನೆ (Assault on Child) ನಡೆದಿದೆ. ಪುಟ್ಟ ಮಗುವಿನ ಮೇಲೆ ಮಲತಂದೆ ಕ್ರೌರ್ಯ ಮೆರೆದಿರುವ ಘಟನೆ ನಗರದ ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದೆ. ಕೃತ್ಯಕ್ಕೆ ತಾಯಿಯೂ ಬೆಂಬಲ ನೀಡಿದ್ದಾಳೆ.

ಮಲತಂದೆ ಮಂಜುನಾಥ್ ಹಾಗೂ ತಾಯಿ ಮಂಜುಳಾ ಜತೆ ಮಗು

ನಾಲ್ಕು ವರ್ಷದ ಹೆಣ್ಣು ಮಗು ಮೇಲೆ ಕಳೆದೊಂದು ವರ್ಷದಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಚಿಕ್ಕಬಳ್ಳಾಪುರ ಮೂಲದ ಮಲತಂದೆ ಮಂಜುನಾಥ್ ಹಾಗೂ ತಾಯಿ ಮಂಜುಳಾ ಹಲ್ಲೆ ಆರೋಪಿಗಳು. ಪಾಪಿ ಮಲತಂದೆಯು ಮಗುವಿನ ಕೈ ಮತ್ತು ಕುತ್ತಿಗೆ ಭಾಗದಲ್ಲಿ ಹೀಟರ್ ಮತ್ತು ಸಿಗರೇಟ್‌ನಿಂದ ಸುಟ್ಟಿದ್ದು, ಹಲ್ಲೆಯಿಂದ ಮಗುವಿನ ತಲೆ, ಕೈಗಳು ಮತ್ತು ಹಣೆ ಭಾಗದಲ್ಲೂ ಗಾಯಗಳಾಗಿವೆ.

ತಮ್ಮ ಸರಸ ಸಲ್ಲಾಪಕ್ಕೆ ಅಡ್ಡಿಯಾಗುತ್ತಿದ್ದಾಳೆ ಎಂದು ಮಗುವಿನ ಮೇಲೆ ಮಲತಂದೆ ಹಲ್ಲೆ ನಡೆಸಿದ್ದಾನೆ. ಶುಕ್ರವಾರ ಸಂಜೆ ಕುಡಿದ ಮತ್ತಿನಲ್ಲಿ ಮಗುವಿನ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿ, ಕೇಬಲ್ ವೈರ್‌ನಿಂದ ಹಲ್ಲೆ ಮಾಡಿದ್ದಾನೆ. ಈ ಬಗ್ಗೆ ಸ್ಥಳೀಯರಿಗೆ ಮಗು ತಿಳಿಸಿದ ಹಿನ್ನೆಲೆ ದಂಪತಿಯನ್ನು ಸ್ಥಳೀಯರು ಥಳಿಸಿ ಹೆಬ್ಬಗೋಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ | Harihara News: ಮಲೆಬೆನ್ನೂರಿನಲ್ಲಿ ರಂಜಾನ್ ಉಪವಾಸ ಮುಗಿಸಿ ಪಾನಿಪೂರಿ ತಿಂದ 19 ಮಕ್ಕಳು ಅಸ್ವಸ್ಥ

ಇದಕ್ಕೂ ಮೊದಲು ನಾಲ್ಕು ತಿಂಗಳ ಹಿಂದೆ ಮಗುವಿನ ಅಣ್ಣನ‌ ಮೇಲೂ ಮಲತಂದೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಆಗಲೂ ಸ್ಥಳೀಯರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಪುನಃ ಇದೀಗ ಹೆಣ್ಣು ಮಗುವಿನ ಮೇಲೆ ದಂಪತಿ ಹಲ್ಲೆ ಮಾಡಿದ್ದಾರೆ. ಸದ್ಯ ಸಿಡಬ್ಲ್ಯುಸಿ ಆರೈಕೆ ಕೇಂದ್ರದಲ್ಲಿ ಮಗು ಇದ್ದಾಳೆ.

ಮಾಮೂಲು ಕೊಡಲಿಲ್ಲವೆಂದು ಸಿಟ್ಟು; ಲಾರಿ ಮಾಲೀಕ, ಚಾಲಕನ ಥಳಿಸಿದ ಪಿಎಸ್‌ಐ!

ಹಾವೇರಿ: ರಕ್ಷಕರೇ ಭಕ್ಷಕರಾದ ಸುದ್ದಿ ಇದು.. ಮಾಮೂಲಿ ಕೊಡಲಿಲ್ಲ ಎನ್ನುವ ಕಾರಣಕ್ಕೆ ಗುತ್ತಲ ಠಾಣೆ ಪಿಎಸ್‌ಐ, ಮರಳು ಲಾರಿ ಚಾಲಕ ಮತ್ತು ಮಾಲೀಕನನ್ನು ಥಳಿಸಿರುವ ಆರೋಪವೊಂದು (Assault Case) ಕೇಳಿ ಬಂದಿದೆ.

ಹಾವೇರಿ ಜಿಲ್ಲೆಯ ಗುತ್ತಲ ಠಾಣೆ ಪಿಎಸ್‌ಐ ಶಂಕರಗೌಡ ಪಾಟೀಲ ಎಂಬುವವರು ಲಾರಿ ಚಾಲಕ ದ್ಯಾಮಪ್ಪ ಕುರಿ, ಲಾರಿ ಮಾಲೀಕ ಗುಡ್ಡಪ್ಪನನ್ನು ಥಳಿಸಿದ್ದಾರೆ ಎನ್ನಲಾಗಿದೆ. ರಾಣೇಬೆನ್ನೂರು ತಾಲೂಕಿನ ಬೆಲೂರಿನಿಂದ ಚಿಕ್ಕೋಡಿಗೆ ಮರಳು ತುಂಬಿದ ಲಾರಿ ಹೊರಟಿತ್ತು. ಲಾರಿಯಲ್ಲಿ ಮರಳು ಸಾಗಿಸಲು ಪಾಸ್ ಪಡೆಯಲಾಗಿದೆ. ಆದರೂ ಲಾರಿ ತಡೆದು ಹಲ್ಲೆ ಮಾಡಿದ್ದಾರೆ. ಪಾಸ್ ಇದ್ದರೂ, ಪಾಸ್ ಪಡೆದಿರಲಿಲ್ಲ ಎಂದು ಪೊಲೀಸರು ಲಾರಿ ಮಾಲೀಕ, ಚಾಲಕನ ಮೇಲೆ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Plastic recycling : ಬೆಂಗಳೂರು ಶಾಲೆಗಳಲ್ಲಿ “ಮರುಬಳಕೆ” ಅಧ್ಯಾಯ; ಮಕ್ಕಳಿಗೆ ರಿಸೈಕಲ್‌ ಪಾಠ

ಗುತ್ತಲ ಪೊಲೀಸರು ಲಾರಿ ಮಾಲೀಕನ ಕೊರಳಲ್ಲಿದ್ದ ಮೂರು ತೊಲೆ ಚಿನ್ನದ ಸರವನ್ನು ಕಳ್ಳತನ ಮಾಡಿದ್ದಾರೆ ಎಂದು ಗುಡ್ಡಪ್ಪ ಆರೋಪಿಸಿದ್ದಾರೆ. ಜತೆಗೆ ಪಿಎಸ್‌ಐ ಶಂಕರಗೌಡ 80 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಪಿಎಸ್‌ಐ ಶಂಕರಗೌಡರ ದೌಜರ್ನ್ಯಕ್ಕೆ ಲಾರಿ ಚಾಲಕ ಹಾವೇರಿ ಎಸ್‌ಪಿ ಅಂಶುಕುಮಾರ್‌ಗೆ ದೂರು ನೀಡಿದ್ದಾರೆ.

ಹಿಂದೊಮ್ಮೆ ಪಿಎಸ್ಐ ಶಂಕರಗೌಡ ಪಾಟೀಲ ವಿರುದ್ಧ ಲಾಕಪ್ ಡೆತ್ ಆರೋಪ ಕೇಳಿ ಬಂದಿತ್ತು. ಹೊಸರಿತ್ತಿ ಠಾಣೆಯಲ್ಲಿ ಕಳ್ಳತನದ ಆರೋಪಿಯನ್ನು ಲಾಕಪ್ ಡೆತ್ ಮಾಡಿದ್ದರು ಎನ್ನುವ ಆರೋಪವಿದೆ. ಈಗ ಮರಳು ಲಾರಿ ಮಾಲೀಕ, ಚಾಲಕನನ್ನು ಥಳಿಸಿ, ಮತ್ತೇ ಸುದ್ದಿಯಾಗಿದ್ದಾರೆ. ಸದ್ಯ ತೀವ್ರ ಹಲ್ಲೆಗೊಳಾಗದ ಲಾರಿ ಮಾಲೀಕ ಗುಡ್ಡಪ್ಪ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version