Site icon Vistara News

Love Case : ಮಂಡ್ಯದಲ್ಲಿ ಲವ್, ಸೆಕ್ಸ್ ದೋಖಾ; ಕೈ ಕೊಟ್ಟ ಪ್ರಿಯಕರನಿಂದ ಹೊಡಿಬಡಿ

Ramashree and manju love fraud

ಮಂಡ್ಯ: ಮಂಡ್ಯದಲ್ಲಿ ಲವ್, ಸೆಕ್ಸ್ ದೋಖಾ ಮಾಡಿರುವ (Love Case) ಆರೋಪವೊಂದು ಕೇಳಿ ಬಂದಿದೆ. 8 ವರ್ಷ ಪ್ರೀತಿಸಿ ನಂತರ ದೈಹಿಕವಾಗಿ ಬಳಸಿಕೊಂಡು ಮದುವೆ ವಿಚಾರ ಬಂದಾಗ ಅನ್ಯಜಾತಿ ನೆಪವೊಡ್ಡಿ, ಅಂತರ ಕಾಯ್ದುಕೊಂಡು ವಂಚಿಸುತ್ತಿದ್ದಾನೆ (Fraud Case) ಎಂದು ಯುವತಿ ದೂರಿದ್ದಾಳೆ.

ಮಂಡ್ಯದ ಮಳವಳ್ಳಿ ತಾಲೂಕಿನ ಬಳ್ಳಗೆರೆ ಗ್ರಾಮದ ಮಂಜು.ಬಿ.ಆರ್ ಎಂಬಾತ ನಂಜನಗೂಡಿನ ಮಹದೇಶ್ವರ ಲೇಔಟ್‌ನ ರಮಶ್ರೀ ಎಂಬಾಕೆಗೆ ವಂಚಿಸಿದ್ದಾನೆ. ರಮಶ್ರೀಯ ಅಜ್ಜಿ ಊರು ಬಳಗೆರೆ. ಹೀಗಾಗಿ ಒಂದೇ ಊರಿನಲ್ಲಿ ವಾಸವಾಗಿದ್ದರಿಂದ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು. ಕಳೆದ ಎಂಟು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ರಮಶ್ರೀ ಮದುವೆ ವಿಚಾರ ತೆಗೆದಾಗ ಕುಂಟು ನೆಪಗಳನ್ನು ಹೇಳಲು ಮಂಜು ಶುರು ಮಾಡಿದ್ದ.

ಈ ನಡುವೆ ಜಾತಿಯ ನೆಪವೊಡ್ಡಿ ಮದುವೆಗೆ ನಿರಾಕರಿಸಿ, ರಮಶ್ರೀಯಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದ. ರಮಶ್ರೀ ಮತ್ತೆ ಮದುವೆಗೆ ಪಟ್ಟು ಹಿಡಿದಾಗ ಬೇರೆ ಬೇರೆ ಕಾರಣ ಹೇಳಿಕೊಂಡು ಮದುವೆ ಮುಂದೆ ಆಗುವುದಾಗಿ ಭರವಸೆ ನೀಡಿದ್ದ. ಅದರೆ ಏಕಾಏಕಿ, ಪ್ರೀತಿಸಿದಾಕೆ ಬಿಟ್ಟು ಮತ್ತೊಂದು ಹುಡುಗಿಯೊಂದಿಗೆ ಮದುವೆಯಾಗಲು ಮುಂದಾಗಿದ್ದ.

ವಿಷಯ ತಿಳಿದ ರಮಶ್ರೀ ಪ್ರಿಯಕರ ಮಂಜನ ಮನೆ ಮುಂದೆ ರಾತ್ರಿ ಪೂರ್ತಿ ಕುಳಿತು ಮದುವೆ ಆಗುವಂತೆ ಆಗ್ರಹಿಸಿದ್ದಾಳೆ. ಆದರೆ ಇದ್ಯಾವುದಕ್ಕೂ ಕ್ಯಾರೆ ಎನ್ನದ ಮಂಜು ಹಾಗೂ ಕುಟುಂಬಸ್ಥರು, ಮನೆಮುಂದೆ ಕುಳಿತಿದ್ದ ರಮಶ್ರೀ ಮೇಲೆ ಹಲ್ಲೆ ನಡೆಸಿದ್ದಾರೆ. ದೊಣ್ಣೆ ಹಿಡಿದು ರಮಶ್ರೀ ಸಂಬಂಧಿಕರ‌ ಮೇಲೂ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ಎಲ್ಲ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಸದ್ಯ ಗಾಯಾಳು ರಮಶ್ರೀಯನ್ನು ಚಿಕಿತ್ಸೆಗಾಗಿ ಮಂಡ್ಯದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಬೆಳಕವಾಡಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version