Site icon Vistara News

Road Accident : ನಾಳೆ ಇಬ್ಬರು ಹೆಣ್ಣುಮಕ್ಕಳ ಮದುವೆ ಇತ್ತು; ಇವತ್ತು ಅಪಘಾತದಲ್ಲಿ ಅಪ್ಪನೇ ಇಲ್ಲವಾದರು!

Manjunath gowda died in accident

ಶಿವಮೊಗ್ಗ: ಆ ಮನೆಯಲ್ಲಿ ನಾಳೆ ಇಬ್ಬರು ಹೆಣ್ಮಕ್ಕಳ ಮದುವೆ ಇತ್ತು (Daughters Marriage). ಇಡೀ ಮನೆ ಬಂಧು ಮಿತ್ರರಿಂದ ಖುಷಿಖುಷಿಯಾಗಿ ನಲಿದಾಡುತ್ತಿತ್ತು. ಆದರೆ, ಒಮ್ಮಿಂದೊಮ್ಮೆಗೇ ಈ ಮನೆಯಲ್ಲಿ ಸೂತಕದ ಕಳೆ ಆವರಿಸಿದೆ. ಯಾಕೆಂದರೆ, ನಾಳೆ ಮದುವೆಯಾಗಬೇಕಾದ ಆ ಇಬ್ಬರು ಹೆಣ್ಣು ಮಕ್ಕಳ ತಂದೆ ಅಪಘಾತದಲ್ಲಿ (Road accident) ಪ್ರಾಣ ಕಳೆದುಕೊಂಡಿದ್ದರು.

ಇಂಥ ದುರದೃಷ್ಟಕರ ಘಟನೆ ನಡೆದಿರುವುದು ಶಿವಮೊಗ್ಗ ಜಿಲ್ಲೆಯ (Shivamogga News) ಸಾಗರ ತಾಲೂಕಿನ ಆನಂದಪುರ ಸಮೀಪದ ಚೆನ್ನಕೊಪ್ಪದಲ್ಲಿ ನಡೆದಿದೆ. ಮೃತಪಟ್ಟವರು ಬನವಾಸಿ ನಿವಾಸಿಯಾಗಿರುವ ಮಂಜುನಾಥ ಗೌಡ. ಮಂಜುನಾಥ್‌ ಅವರು ಯಾವುದೇ ಕಾರ್ಯ ನಿಮಿತ್ತ ಪೇಟೆಗೆ ಬಂದಿದ್ದರು. ಆಗ ಅಪರಿಚಿತ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಅವರು ಅಲ್ಲೇ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಮಂಜುನಾಥ ಗೌಡ ಅವರ ಇಬ್ಬರು ಮಕ್ಕಳ ಮದುವೆ ನಾಳೆ (ಜೂನ್‌ 28) ಕೆಂಜಗಾಪುರದಲ್ಲಿ ಆಯೋಜನೆಯಾಗಿದೆ. ಕಳೆದ ಹಲವು ಸಮಯದಿಂದ ಈ ಮದುವೆಗಾಗಿ ಮಂಜುನಾಥ್‌ ಓಡಾಟದಲ್ಲಿದ್ದರು. ಹೆಣ್ಣುಮಕ್ಕಳು ಅವರ ಮಾವ ರುದ್ರಪ್ಪ ಗೌಡ ಚನಕೊಪ್ಪ ಅವರ ಮನೆಯಲ್ಲಿದ್ದರು. ಅಲ್ಲಿಂದಲೇ ನಾಳೆ ದಿಬ್ಬಣ ಹೊರಡುವುದಕ್ಕಿತ್ತು.

ಹೀಗೆ ಅತ್ಯಂತ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಒಮ್ಮಿಂದೊಮ್ಮೆಗೇ ಸೂತಕ ಆವರಿಸಿದೆ. ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಂಜುನಾಥ ಗೌಡ ಅವರಿಗೆ ಡಿಕ್ಕಿ ಹೊಡೆದ ವಾಹನದ ಪತ್ತೆಗಾಗಿ ಪ್ರಯತ್ನಿಸುತ್ತಿದ್ದಾರೆ.

ದುರ್ದೈವವೆಂದರೆ, ಮಂಜುನಾಥ್‌ ಅವರು ಕೆಲವು ಸಮಯದ ಹಿಂದೆ ತಮ್ಮ ಹೆಂಡತಿಯನ್ನು ಅಪಘಾತದಲ್ಲಿ ಕಳೆದುಕೊಂಡಿದ್ದರು.

ಹಿಟ್‌ ಆ್ಯಂಡ್‌ ರನ್‌ಗೆ ಬಲಿಯಾದ ರೈತರು

ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಗಳಿ ತಾಂಡಾದಿಂದ ಬೆಣ್ಣಿಕಲ್ಲು ರಸ್ತೆ ಮಾರ್ಗ ಮಧ್ಯೆ ಟಿವಿಎಸ್‌ ಎಕ್ಸೆಲ್‌ ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು (Hit and run) ಇಬ್ಬರು ರೈತರು (Two Farmers) ಪ್ರಾಣ ಕಳೆದುಕೊಂಡಿದ್ದಾರೆ.

ಕೋಗಳಿ ತಾಂಡಾ ನಿವಾಸಿಗಳು ಟೀಕ್ಯಾನಾಯ್ಕ( 51) ನೀಲ್ಯಾನಾಯ್ಕ (55) ಎಂಬ ರೈತರು ಬೆಳಗಿನ ಜಾವ ಟಿವಿಎಸ್ ಎಕ್ಸೆಲ್ ನಲ್ಲಿ ಹೊಲಕ್ಕೆ ಹೋಗುವಾಗ ಅಪಘಾತ ಸಂಭವಿಸಿದೆ. ಅವರು ಹೋಗುತ್ತಿದ್ದಾಗ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಅವರಿಬ್ಬರು ಹೊಲದಲ್ಲಿ ನೀರು ಹಾಯಿಸಲು ಹೋದಾಗ ದುರಂತ ನಡೆದಿದೆ.

ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮೈಲಾಪುರ, ಹಗರಿಬೊಮ್ಮನಹಳ್ಳಿ ಸಿಪಿಐ ಟಿ.ಮಂಜಣ್ಣ, ಪಿಎಸ್ಐ ಸರಳ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರೈತರ ಸಾವಿನ ಸುದ್ದಿ ಕೇಳಿ ಸ್ವತಃ ವಿಜಯನಗರ ಎಸ್‌ಪಿ ಶ್ರೀಹರಿ ಬಾಬು ಕೂಡಾ ಧಾವಿಸಿದರು.

ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accident: ಬೆಳಗಾವಿಯಲ್ಲಿ ಭೀಕರ ಅಪಘಾತಕ್ಕೆ ಒಬ್ಬ ಬಲಿ; ಹತ್ತಕ್ಕೂ ಹೆಚ್ಚು ಜನ ಗಂಭೀರ

ಇದನ್ನೂ ಓದಿ Road accident: ಹಿಟ್‌ ಆ್ಯಂಡ್‌ ರನ್‌ಗೆ ಇಬ್ಬರು ರೈತರು ಬಲಿ, ಟಿಪ್ಪರ್‌ ಬಡಿದು ಇಬ್ಬರು ಯುವಕರು ಸಾವು

Exit mobile version