Site icon Vistara News

ದಿನವೂ ಕುಡಿತಕ್ಕೆ ಹಣ ಕೇಳುತ್ತಿದ್ದ ಅಣ್ಣನನ್ನು ಆಯುಧದಿಂದ ಚುಚ್ಚಿ ಕೊಂದ ತಮ್ಮ

murder

ವಿಜಯಪುರ: ಭೀಮಾ ತೀರದಲ್ಲಿರುವ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನಲ್ಲಿ ಸೋಮವಾರ ರಾತ್ರಿ ಬರ್ಬರ ಹತ್ಯೆಯೊಂದು ನಡೆದಿದೆ. ಇದು ಭೀಮಾ ತೀರದ ಸಹೋದರರ, ಗೆಳೆಯರ ನಡುವಿನ ರಕ್ತಪಾತವೇನೂ ಅಲ್ಲ. ಆದರೆ, ಈ ಭಾಗದಲ್ಲಿ ನಡೆಯುವ ಅಮಾನುಷ ಹತ್ಯೆಗಳ ಸಾಲಿಗೆ ಸೇರಬಲ್ಲ ಘಟನೆ. ಇಲ್ಲಿ ದಿನವೂ ಕುಡಿತಕ್ಕೆ ಹಣ ಕೊಡು ಎಂದು ಕಾಡುತ್ತಿದ್ದ ಅಣ್ಣನನ್ನು ತಮ್ಮ ಕೊಂದು ಹಾಕಿದ್ದಾನೆ.

ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಜಗ್ಗೇಶ್ ವಡ್ಡರ್‌ ಎಂಬಾತ ಕೊಲೆಯಾದವನು. ಅವನ ತಮ್ಮ ರಾಹುಲ್‌ ವಡ್ಡರ್‌ ಕೊಲೆ ಆರೋಪಿ. ಅಣ್ಣ ಮತ್ತು ತಮ್ಮ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಅಣ್ಣ ದಿನವೂ ಕುಡಿದು ಬರುವುದಲ್ಲದೆ, ಮನೆಯಲ್ಲಿ ಸಿಕ್ಕಾಪಟ್ಟೆ ಗಲಾಟೆ ಮಾಡುತ್ತಿದ್ದ. ಅಷ್ಟೇ ಅಲ್ಲ, ಕುಡಿತಕ್ಕೆ ಹಣ ಬೇಕು ಎಂದು ದಿನವೂ ತಮ್ಮನನ್ನು ಕಾಡುತ್ತಿದ್ದ.

ಪ್ರತಿ ದಿನವೂ ನಡೆಯುವ ಈ ಘಟನೆಗಳಿಂದ ತಮ್ಮ ರೋಸಿ ಹೋಗಿದ್ದ ತಮ್ಮ ರಾಹುಲ್‌ಗೆ ಸೋಮವಾರ ರಾತ್ರಿ ತಡೆಯಲಾಗಲೇ ಇಲ್ಲ. ಮಾತಿಗೆ ಮಾತು ಬೆಳೆದು ಅಂತಿಮವಾಗಿ ಒಂದು ಹರಿತವಾದ ಆಯುಧದಿಂದ ಚುಚ್ಚಿಯೇ ಬಿಟ್ಟ. ಕೊರಳಿಗೇ ಚುಚ್ಚಿದ್ದರಿಂದ ರಕ್ತ ಸ್ರಾವದಿಂದ ಜಗ್ಗೇಶ್‌ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.

ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿದ್ದಾನೆ.

ಇದನ್ನೂ ಓದಿ| Murder | ಯುವಕನ ಕೊಲೆಯಲ್ಲಿ ಅಂತ್ಯವಾದ ಅನೈತಿಕ ಸಂಬಂಧ; ಬಡಿಗೆಯಿಂದ ಬಡಿದು ಕೊಂದ!

Exit mobile version