Site icon Vistara News

murder | ಒಂದು ಗುಂಟೆ ಜಾಗಕ್ಕಾಗಿ ಅಪ್ಪನನ್ನೇ ಕಟ್ಟಿಗೆಯಿಂದ ತಲೆಗೆ ಬಡಿದು ಕೊಂದ ಮಗ

son kills Father

ಬಾಗಲಕೋಟೆ: ಹೆಣ್ಣು, ಹೊನ್ನು, ಮಣ್ಣಿಗಾಗಿ ಮಹಾಯುದ್ಧಗಳೇ ನಡೆದಿವೆ ಎನ್ನುತ್ತಾರೆ. ದಾಯಾದಿ ಕಲಹಗಳು, ಕುಟುಂಬ ಸಂಘರ್ಷಗಳು, ಕೊಲೆಗಳು ತುಂಡು ಭೂಮಿಗಾಗಿ ನಡೆದಿದೆ. ಬೇಕು ಎನ್ನುವ ಹಠ, ಬಿಡಲಾರೆ ಎನ್ನುವ ಛಲದ ನಡುವೆ ಪ್ರಾಣಗಳೇ ಬಲಿಯಾಗಿವೆ. ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದಲ್ಲಿ ತುಂಡು ಭೂಮಿಗಾಗಿ ಮಗನೊಬ್ಬ ತಂದೆಯನ್ನೇ ಕೊಂದು ಹಾಕಿದ್ದಾನೆ.

ಬನಹಟ್ಟಿಯ ತುಕ್ಕಪ್ಪ ಹಳ್ಳೂರ(೨೪) ಎಂಬಾತನೇ ತನ್ನ ತಂದೆ ಮಾಳಪ್ಪ ಹಳ್ಳೂರ (೬೫) ಅವರನ್ನು ಕೊಲೆ ಮಾಡಿರುವ ಹಂತಕ. ಅಷ್ಟಕ್ಕೂ ಅವರಿಬ್ಬರ ಮಧ್ಯೆ ನಡೆಯುತ್ತಿದ್ದುದು ದೊಡ್ಡ ಗಾತ್ರದ ಭೂಮಿಗಾಗಿ ಅಲ್ಲ. ಕೇವಲ ಒಂದು ಗುಂಟೆ ಭೂಮಿಗಾಗಿ!

ಬನಹಟ್ಟಿ ಪಟ್ಟಣದ ಕೆರೆ ಬಳಿ ಇದ್ದ ಒಂದು ಗುಂಟೆ ಜಾಗವನ್ನು ತನಗೆ ಬಿಟ್ಟು ಕೊಡಬೇಕು ಎಂದು ಮಗ ತಂದೆಯ ಬಳಿ ಆಗಾಗ ಜಗಳ ಮಾಡುತ್ತಿದ್ದ. ಆದರೆ, ಅಪ್ಪ ಇದಕ್ಕೆ ಸುತಾರಾಂ ಒಪ್ಪುತ್ತಿರಲಿಲ್ಲ. ಹಿಂದಿನಿಂದಲೇ ಈ ವಿಷಯದಲ್ಲಿ ಹಲವು ಬಾರಿ ಜಗಳ ನಡೆದಿತ್ತು.

ಕೊಲೆ ನಡೆದ ಜಾಗದಲ್ಲಿ ಸಾರ್ವಜನಿಕರು ಸೇರಿರುವುದು.

ಶುಕ್ರವಾರ ಮಧ್ಯಾಹ್ನ ತಂದೆ ಮಾಳಪ್ಪ ಅದೇ ಜಾಗದಲ್ಲಿರುವ ಶೆಡ್‌ನಲ್ಲಿ ಮಲಗಿದ್ದರು. ಆಗ ಅಲ್ಲಿಗೆ ಬಂದ ಮಗ ತುಕ್ಕಪ್ಪ ಮಾಳಪ್ಪ ಅವರ ತಲೆಗೆ ಕಟ್ಟಿಗೆಯ ತುಂಡಿನಿಂದ ಹೊಡೆದು ಕೊಲೆ ಮಾಡಿದ್ದಾನೆ.

ಬನಹಟ್ಟಿ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಆರೋಪಿ ಮಗನನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ| Murder | ಒಂಟಿಯಾಗಿ ವಾಸಿಸುತ್ತಿದ್ದ ನಿವೃತ್ತ ಶಿಕ್ಷಕಿಯ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Exit mobile version