Site icon Vistara News

ಮಂಗಳೂರು ಸ್ಫೋಟ | ಶಾರಿಕ್‌ ಮತ್ತೆ ಬಾಲ ಬಿಚ್ಚಲು ಪೊಲೀಸರ ನಿರ್ಲಕ್ಷ್ಯ ಕಾರಣ? UAPA ಕೂಡಾ ದುರ್ಬಲವೇ?

Shariq story: soppina gudda to ISIS

ಮಂಗಳೂರು: ಮಂಗಳೂರಿನಲ್ಲಿ‌ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಧಾನ ಆರೋಪಿಯಾಗಿರುವ ತೀರ್ಥಹಳ್ಳಿಯ ಸೊಪ್ಪಿನಗುಡ್ಡೆ ನಿವಾಸಿ ಮೊಹಮ್ಮದ್‌ ಶಾರಿಕ್‌ ಬಗ್ಗೆ ಮಂಗಳೂರು ಪೊಲೀಸರು ನಿರ್ಲಕ್ಷ್ಯ ವಹಿಸಿದ್ದೇ ಆತ ಬಾಲ ಬಿಚ್ಚಲು ಪ್ರಧಾನ ಕಾರಣ ಎಂಬ ಆರೋಪ ಕೇಳಿಬಂದಿದೆ. ೨೦೨೦ರಲ್ಲಿ ಮಂಗಳೂರಿನಲ್ಲಿ ದಾಖಲಾದ ಗೋಡೆಬರಹ ಪ್ರಕರಣದಲ್ಲಿ ಶಾರಿಕ್‌ ಪ್ರಧಾನ ಆರೋಪಿಯಾಗಿದ್ದ. ಆಗ ಆತನನ್ನು ಪೊಲೀಸರು ಬಂಧಿಸಿದ್ದರು. ಎನ್‌ಐಎ ತನಿಖೆ ಕೂಡಾ ನಡೆದಿತ್ತು. ಆತನ ಮೇಲೆ ಅತಿ ಕಠಿಣ ಎನ್ನಬಹುದಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ)ಯಡಿ ಪ್ರಕರಣವೂ ದಾಖಲಾಗಿತ್ತು. ಆದರೆ, ಮುಂದೆ ಕೋರ್ಟ್‌ ಆತನಿಗೆ ಜಾಮೀನು ನೀಡುತ್ತದೆ. ಮುಂದೆ ಆತನಿಗೆ ಕಠಿಣ ಷರತ್ತುಗಳನ್ನು ವಿಧಿಸಲಾಗುತ್ತದೆಯಾದರೂ ಆತ ಅದನ್ನು ಪಾಲಿಸುವುದೂ ಇಲ್ಲ. ಯಾರೂ ಕೇಳುವುದೂ ಇಲ್ಲ.

ಇದನ್ನು ಗಮನಿಸಿದರೆ ಪೊಲೀಸರು ಇಂಥ ದೇಶದ್ರೋಹದ ಪ್ರಕರಣಗಳನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಮತ್ತು ಯುಎಪಿಎ ಕಾಯಿದೆ ಕೂಡಾ ಇಂಥ ದುಷ್ಟರನ್ನು ಶಿಕ್ಷಿಸುವಷ್ಟು ಶಕ್ತಿಶಾಲಿಯಾಗಿಲ್ಲವೇ ಎನ್ನುವ ಪ್ರಶ್ನೆ ಎದುರಾಗುತ್ತದೆ.

ತೀರ್ಥಹಳ್ಳಿಯ ಎಕೆ ಕಾಲೊನಿಯ ಸೊಪ್ಪುಗುಡ್ಡೆ ನಿವಾಸಿ ಹಸೀಂ ಅಬ್ದುಲ್‌ ಮಜೀದ್‌ ಅವರ ಪುತ್ರನಾಗಿರುವ ಮೊಹಮ್ಮದ್‌ ಶಾರಿಖ್‌ಗೆ ಈಗ ೨೩ ವರ್ಷ. ೨೦೨೦ರಲ್ಲಿ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲದಿಂದಲೇ ಉಗ್ರ ಲೋಕವನ್ನು ಪ್ರವೇಶಿಸಿದ್ದ ಎನ್ನಲಾಗುತ್ತಿದ್ದ. ಆಗಲೇ ಸೌದಿ ಅರೇಬಿಯಾ ಮೂಲದ ವ್ಯಕ್ತಿಗಳ ಜತೆ ಸಂಪರ್ಕ ಸಾಧಿಸಿದ್ದ ಆತ, ಪುಣೆ ಮೂಲದ ವಾಟ್ಸಾಪ್‌ ಗ್ರೂಪ್‌ ಒಂದರಲ್ಲೂ ಸಕ್ರಿಯನಾಗಿದ್ದ. ಈ ಗ್ರೂಪ್‌ನ ಅಡ್ಮಿನ್‌ ನೀಡಿದ ಸೂಚನೆಯಂತೆ ಆತ ಮಂಗಳೂರಿನಲ್ಲಿ ಎರಡು ದುಷ್ಕೃತ್ಯಗಳನ್ನು ನಡೆಸಿದ್ದ.

೨೦೨೦ರ ನವೆಂಬರ್‌ ೨೭ರಂದು ಅಪಾರ್ಟ್‌ಮೆಂಟ್‌ನ ಗೋಡೆಯೊಂದರ ಮೇಲೆ ಹಿಂದುಗಳಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಬರಹ ಬರೆದಿದ್ದ. ಅದು ಹೆಚ್ಚಿನ ಗಮನ ಸೆಳೆಯದೆ ಇದ್ದ ಕಾರಣಕ್ಕೆ ಆತ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿರುವ ಗೋಡೆ ಮೇಲೆ ಮತ್ತೊಂದು ಬೆದರಿಕೆ ಹಾಕಿದ್ದ. ʻʻಏನು ನಿಮಗೆ ಪಾಠ ಕಲಿಸಲು ಲಷ್ಕರೆ ತಯ್ಬಾ ಸಂಘಟನೆಯನ್ನು ಕರೆಸಬೇಕಾʼʼ ಎನ್ನುವ ಧಾಟಿಯಲ್ಲಿ ಆ ಬರಹ ಇತ್ತು. ಈ ಪ್ರಕರಣದಲ್ಲಿ ೨೦೨೦ರ ಡಿಸೆಂಬರ್‌ ೬ರಂದು ಆತನ ಬಂಧನವಾಗಿತ್ತು. ಆದರೆ, ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಕಾರಣದಿಂದ ೨೦೨೧ರ ಸೆಪ್ಟೆಂಬರ್‌ನಲ್ಲಿ ಆತನ ಬಿಡುಗಡೆಯಾಗಿತ್ತು.

ಗೋಡೆ ಬರಹ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಚಾರ್ಜ್‌ಶೀಟ್‌ ಹಾಕಲು ಮಾಡಿದ ವಿಳಂಬ ಆರೋಪಿಗಳಾಗಿದ್ದ ಶಾರಿಕ್‌ ಮತ್ತು ಮಹಮ್ಮದ್‌ ಸಾದತ್‌ಗೆ ವರವಾಗಿ ಪರಿಣಮಿಸಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ಶಾಕೀರ್ ಹಾಗೂ ಸಾದತ್ ಹುಸೇನ್‌ಗೆ ರಾಜ್ಯ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು.

ಯುಎಪಿಎ ಕಾಯ್ದೆಯಡಿ ಬಂಧಿತನಾಗಿರುವ ಕಾರಣ ಆತನ ಜಾಮೀನಿಗೆ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ಚಾರ್ಜ್ ಶೀಟ್ ಸಲ್ಲಿಕೆಯಾಗುವವರೆಗೂ ವಾರಕ್ಕೊಮ್ಮೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕು, ವಿಚಾರಣಾ ನ್ಯಾಯಾಲಯದ ಅನುಮತಿ ಇಲ್ಲದೆ ಠಾಣಾ ವ್ಯಾಪ್ತಿ ಬಿಡುವಂತಿಲ್ಲ ಹೀಗೆ ಷರತ್ತು ವಿಧಿಸಿತ್ತು. ಆದರೆ, ಚಾರ್ಜ್‌ಶೀಟ್‌ ಹಾಕಿದ ಬಳಿಕ ಪೊಲೀಸರು ಶಾರಿಕ್‌ನನ್ನು ಮರೆತೇ ಬಿಟ್ಟಿದ್ದರು. ಆತ ಕೂಡಾ ಪೊಲೀಸ್‌ ಠಾಣೆಗೆ ಹಾಜರಾಗುವುದನ್ನೂ ಬಿಟ್ಟಿದ್ದ ಎನ್ನಲಾಗಿದೆ.

ಆತ ಏನು ಮಾಡುತ್ತಿದ್ದಾನೆ, ಯಾರ ಜತೆಗೆ ಸಂಪರ್ಕ ಹೊಂದಿದ್ದಾನೆ, ಎಲ್ಲೆಲ್ಲಿ ಹೋಗುತ್ತಿದ್ದಾನೆ ಎನ್ನುವುದರ ಬಗ್ಗೆಯೂ ಕಣ್ಣಿಡಲಿಲ್ಲ. ಹೀಗಾಗಿ ಆತ ಮತ್ತೆ ಬಾಲ ಬಿಚ್ಚಿ ತನ್ನ ದುಷ್ಕೃತ್ಯಗಳನ್ನು ಶುರು ಮಾಡಿದ್ದ. ಉಗ್ರ ಬರಹದ ಗಂಭೀರ ಆರೋಪವಿದ್ದರೂ ಆತನನ್ನು ಗಮನಿಸದೆ ಹೋಗಿದ್ದು ಆತ ಇನ್ನಷ್ಟು ಮಂದಿಯನ್ನು ಈ ಕೃತ್ಯಕ್ಕೆಳೆಯಲು ಕಾರಣವಾಯಿತು.

ಸುಮ್ಮನೆ ಇರಲಿಲ್ಲ!
ಜಾಮೀನು ಪಡೆದು ತೀರ್ಥಹಳ್ಳಿಗೆ ಹೋಗಿದ್ದ ಆರೋಪಿ ಶಾರಿಕ್‌ ಸುಮ್ಮನೆ ಹೋಗಿ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಮಂಗಳೂರಿನ ಮಹಮ್ಮದ್‌ ಮಾಝ್‌ ಮತ್ತು ಶಿವಮೊಗ್ಗದ ಸಿದ್ದೇಶ್ವರ ನಗರದ ಸೈಯದ್‌ ಯಾಸಿನ್‌ ಎಂಬವರನ್ನು ಸೇರಿಸಿಕೊಂಡು ಬಾಂಬ್‌ ತಯಾರಿಕೆಯ ಕೃತ್ಯಕ್ಕೆ ಮುಂದಾಗಿದ್ದ. ಶಿವಮೊಗ್ಗ ತುಂಗಾ ತೀರ ಮತ್ತು ಮಂಗಳೂರಿನ ಬಂಟ್ವಾಳದ ನೇತ್ರಾವತಿ ತೀರದಲ್ಲಿ ಬಾಂಬ್‌ಗಳ ಟ್ರಯಲ್‌ ಬ್ಲಾಸ್ಟ್‌ ಮಾಡಿಸಿದ್ದ! ತನ್ನ ಮನೆಯ ಪಕ್ಕದವನೇ ಆದ ಇಂಟರ್‌ನ್ಯಾಷನಲ್‌ ಹ್ಯಾಂಡ್ಲರ್‌ ಮತೀನ್‌ ಖಾನ್‌ ಜತೆಗೆ ಸಂಪರ್ಕ ಸಾಧಿಸಿ ಬಾಂಬ್‌ ತಯಾರಿಕೆಯ ತರಬೇತಿ ಪಡೆದಿದ್ದ.

ಆದರೆ, ಇದ್ಯಾವುದೂ ಮಂಗಳೂರು ಪೊಲೀಸರಿಗಾಗಲೀ, ಶಿವಮೊಗ್ಗ ಪೊಲೀಸರಿಗಾಗಲೀ ಗೊತ್ತಾಗಲೇ ಇಲ್ಲ. ಒಂದೊಮ್ಮೆ ಪೊಲೀಸರು ಒಂಚೂರು ಅಲರ್ಟ್ ಆಗಿದ್ದರೂ ಶಾರಿಕ್ ಇಷ್ಟು ದೈರ್ಯವಾಗಿ ತಿರುಗಾಡಲು ಆಗ್ತಾ ಇರಲಿಲ್ಲ.

ಗೊತ್ತಾಗಿದ್ದೇ ಜಬಿ ಸಿಕ್ಕಿಬಿದ್ದ ನಂತರ
ಪೊಲೀಸರು ಶಾರಿಕ್‌ ಬಗ್ಗೆ ಎಷ್ಟೊಂದು ನಿರ್ಲಕ್ಷ್ಯ ವಹಿಸಿದ್ದರೆಂದರೆ ಆಗಸ್ಟ್‌ ೧೬ರಂದು ಜಬಿಯುಲ್ಲಾ ಎಂಬಾತನ ಬಂಧನದ ವೇಳೆ ಆ ಕ್ಲೂ ಸಿಗದೆ ಹೋಗಿದ್ದರೆ ಶಾರಿಕ್‌ನ ಕಡೆ ಅವರು ತಿರುಗಿಯೂ ನೋಡುತ್ತಿರಲಿಲ್ಲ!

ಇದೆಲ್ಲ ಬಯಲಿಗೆ ಬಂದಿದ್ದು ೨೦೨೨ರ ಆಗಸ್ಟ್‌ ೧೫ರಂದು ನಡೆದ ಸಾವರ್ಕರ್‌ ಗಲಾಟೆಯ ಬಳಿಕ. ಶಿವಮೊಗ್ಗದ ಟಿಪ್ಪು ನಗರದ ವೃತ್ತದಲ್ಲಿ ಪ್ರತಿ ವರ್ಷ ಟಿಪ್ಪು ಸುಲ್ತಾನ್‌ ಫ್ಲೆಕ್ಸ್‌ ಹಾಕುವ ಜಾಗದಲ್ಲಿ ಸಾವರ್ಕರ್‌ ಫ್ಲೆಕ್ಸ್‌ ಹಾಕಿದ್ದರಿಂದ ಗಲಾಟೆ ಶುರುವಾಗಿತ್ತು. ಆವತ್ತೇ ಸಂಜೆ ಪ್ರೇಮ್‌ ಸಿಂಗ್‌ ಎಂಬ ವ್ಯಾಪಾರಿ ಅಂಗಡಿ ಬಂದ್‌ ಮಾಡಿ ಮನೆಗೆ ಹೋಗುತ್ತಿದ್ದಾಗ ಚೂರಿ ಇರಿತಕ್ಕೆ ಒಳಗಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಮರು ದಿನ ಜಬಿಯುಲ್ಲಾ ಎಂಬಾತನನ್ನು ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಯಿತು. ಆತನ ವಿಚಾರಣೆಯ ವೇಳೆ ಶಿವಮೊಗ್ಗ ಉಗ್ರ ಚಟುವಟಿಕೆಗಳ ಬಗ್ಗೆ ಮಹತ್ವದ ಮಾಹಿತಿಗಳು ಪೊಲೀಸರಿಗೆ ಸಿಗುತ್ತಾ ಹೋದವು.

ಜಬಿಯುಲ್ಲಾ ಪೊಲೀಸರ ಕೈಗೆ ಸಿಕ್ಕಿದ ಕೆಲವೇ ದಿನಗಳಲ್ಲಿ ಅಂದರೆ ಆಗಸ್ಟ್‌ ೨೩ರಂದು ಶಾರಿಖ್‌ ಕಣ್ಮರೆಯಾಗಿದ್ದ. ಯಾಕೆಂದರೆ, ಜಬಿಯುಲ್ಲಾ ತನ್ನ ಬಗ್ಗೆ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ ಎಂಬ ಸುಳಿವು ಆತನಿಗೆ ಸಿಕ್ಕಿತ್ತು. ಈ ನಡುವೆ, ಪೊಲೀಸರು ಜಬಿಯುಲ್ಲಾನ ಮಾಹಿತಿ ಆಧರಿಸಿ, ದಾಖಲೆಗಳನ್ನು ಸಂಗ್ರಹಿಸಿಕೊಂಡು ಬಂದು ಪ್ರಕರಣ ದಾಖಲಿಸುವ ಹೊತ್ತಿಗೆ ಒಂದು ತಿಂಗಳು ಕಳೆದಿತ್ತು. ಅಂದರೆ, ಸೆಪ್ಟೆಂಬರ್‌ ೧೯ರಂದು ಪ್ರಕರಣ ದಾಖಲಾಯಿತು. ಶಾರಿಖ್‌, ಮಂಗಳೂರಿನ ಮಾಝ್‌ ಮುನೀರ್‌ ಮತ್ತು ಶಿವಮೊಗ್ಗದ ಸಿದ್ದೇಶ್ವರ ನಗರದ ಸೈಯ್‌ ಯಾಸಿನ್‌ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಯಿತು. ಮಹಮ್ಮದ್‌ ಜಾಝ್‌ ಮತ್ತು ಯಾಸಿನ್‌ ಸೆರೆ ಸಿಕ್ಕರೆ ಶಾರಿಖ್‌ ಕಣ್ಮರೆಯಾಗಿ ಆಗಲೇ ಹತ್ತಿರ ಹತ್ತಿರ ಒಂದು ತಿಂಗಳು ಕಳೆದಿತ್ತು.

ಆ ಬಳಿಕವೂ ಸರಿಯಾಗಿ ಬೆನ್ನಟ್ಟಲಿಲ್ಲ!
ನಿಜವೆಂದರೆ, ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌ ನಡೆದು, ಇಬ್ಬರು ಅರೆಸ್ಟ್‌ ಆಗಿ ಶಾರಿಕ್‌ ತಪ್ಪಿಸಿಕೊಂಡ ಬಳಿಕವೂ ಆತನ ಬೆನ್ನಟ್ಟಲು ಪೊಲೀಸರು ಯಶಸ್ವಿಯಾಗಲಿಲ್ಲ. ಆತ ಕೊಯಮತ್ತೂರು ಬ್ಲಾಸ್ಟ್‌ನಲ್ಲಿ ಭಾಗಿಯಾದ, ಕೇರಳಕ್ಕೆ ಹೋದ. ಮೈಸೂರಿನ ಮನೆ ಮಾಡಿ ಬಾಂಬ್‌ ತಯಾರಿಸಿದ, ಮಂಗಳೂರಿಗೆ ಬಂದಾದ ಅದು ಸಿಡಿಯಿತು. ಒಂದೊಮ್ಮೆ ಆತ ಬ್ಲಾಸ್ಟ್‌ ಸೈಟಿನಿಂದ ತಪ್ಪಿಸಿಕೊಳ್ಳುತ್ತಿದ್ದರೆ ಇವತ್ತಿಗೂ ಆತನನ್ನು ಹಿಡಿಯುವುದು ಪೊಲೀಸರಿಗೆ ಸಾಧ್ಯವಾಗುತ್ತಿರಲಿಲ್ಲ. ಶಾರಿಕ್‌ ಕೈಯಲ್ಲೇ ಇದ್ದರೂ ಆತನೇ ಶಾರಿಕ್‌ ಎಂದು ಗುರುತಿಸಲು ಅವರು ಭರ್ತಿ ಎರಡು ದಿನ ತೆಗೆದುಕೊಂಡರು!

ಇದನ್ನೂ ಓದಿ | ಮಂಗಳೂರು ಸ್ಫೋಟ: ಮೈಸೂರಿನಲ್ಲಿ ಶಾರಿಖ್‌ಗೆ ಸಹಾಯ ಮಾಡಿದ ಇಬ್ಬರು ಆರೋಪಿಗಳ ಸೆರೆ, ಕೇರಳ ಲಿಂಕ್‌?

Exit mobile version