Site icon Vistara News

ಮಂಗಳೂರು ಸ್ಫೋಟ | ಕುಕ್ಕರ್‌ ಬಾಂಬ್‌ಗೆ ಟೈಮರ್‌ ಫಿಕ್ಸ್‌ ಮಾಡಲು ಪಡೀಲ್‌ನಲ್ಲಿ ಇಳಿದನಾ ಉಗ್ರ ಶಾರಿಕ್?‌

ಮಂಗಳೂರು: ಮೈಸೂರಿನಿಂದ ಮಂಗಳೂರಿಗೆ ಬಸ್‌ನಲ್ಲಿ ಬಂದ ಉಗ್ರ ಶಾರೀಕ್‌ ಪಡೀಲ್‌ನಲ್ಲಿ ಇಳಿದಿದ್ದೇಕೆ? ಅವನು ರಿಕ್ಷಾದಲ್ಲಿ ಎಲ್ಲಿಗೆ ಹೊರಟಿದ್ದ ಎನ್ನುವ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಆತ ನಿರ್ದಿಷ್ಟ ಟಾರ್ಗೆಟ್‌ ಇಟ್ಟುಕೊಂಡು ಮಂಗಳೂರಿಗೆ ಬಂದಿದ್ದು ಸ್ಪಷ್ಟ. ಆದರೆ, ಅದಕ್ಕಿಂತ ಮೊದಲು ಕುಕ್ಕರ್‌ ಬಾಂಬ್‌ಗೆ ಟೈಮರ್‌ ಫಿಕ್ಸ್‌ ಮಾಡುವುದಕ್ಕಾಗಿ ಪಡೀಲ್‌ನಲ್ಲಿ ಇಳಿದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಪಡೀಲ್‌ ನಿಲ್ದಾಣದಲ್ಲಿ ಇಳಿದ ಆತ ಆತ ರೈಲ್ವೆ ಸ್ಟೇಷನ್‌ ರಸ್ತೆವರೆಗೆ ನಡೆದುಕೊಂಡೇ ಬಂದಿದ್ದ. ಇಲ್ಲಿ ಸ್ವಲ್ಪ ಪೊದೆಗಳಿದ್ದು, ಅಲ್ಲಿ ಕುಳಿತು ಟೈಮರ್‌ ಫಿಕ್ಸ್‌ ಮಾಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೆಚ್ಚು ಜನ ಸಂಚಾರವಿಲ್ಲದ ಜಾಗವನ್ನು ಆತ ಈ ಕೃತ್ಯಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಸಾಧ್ಯತೆಗಳಿವೆ. ಕೃತ್ಯಕ್ಕೆ ಮೊದಲು ಆತ ಕೆಲವು ಬಾರಿ ಮಂಗಳೂರಿಗೆ ಬಂದು ಈ ಜಾಗಗಳನ್ನೆಲ್ಲ ನೋಡಿಕೊಂಡು ಹೋಗಿರುವ ಸಾಧ್ಯತೆ ಇದೆ.

ಹೀಗೆ ನಿಗೂಢ ಜಾಗದಲ್ಲಿ ಕುಕ್ಕರ್‌ ಬಾಂಬ್‌ಗೆ ಟೈಮರ್ ಫಿಕ್ಸ್ ಮಾಡಿದ ಶಾರಿಕ್ ಅಲ್ಲಿಂದ ಮುಂದೆ ರಿಕ್ಷಾದಲ್ಲಿ ಹೊರಟಿದ್ದಾನೆ. ತನ್ನ ಟಾರ್ಗೆಟ್ ಜಾಗದ ಅಂದಾಜಿನಲ್ಲಿ ಇಂತಿಷ್ಟು ಅವಧಿಗೆ ಟೈಮ್ ಫಿಕ್ಸ್ ಮಾಡಿರೋ ಅನುಮಾನವಿದೆ. ಆದರೆ ನಾಗುರಿ ರಸ್ತೆಯಲ್ಲಿ ಸರ್ಕಿಟ್ ಅಲುಗಾಡಿ ಪರಸ್ಪರ ತಾಗಿ ಬಾಂಬ್ ಸ್ಫೋಟವಾಗಿರುವ ಶಂಕೆ ಇದೆ. ಅಥವಾ ಟೈಮ್‌ ಫಿಕ್ಸ್‌ ಮಾಡಿದ್ದರೂ ನಿಗದಿತ ಟೈಮ್‌ಗೆ ಟಾರ್ಗೆಟ್‌ ತಲುಪಲಾಗದೆ ಸ್ಫೋಟಗೊಂಡಿರುವ ಸಾಧ್ಯತೆಯೂ ಇದೆ.

ಶಾರಿಕ್‌ ಮೈಸೂರಿನಿಂದ ಹೊರಡುವಾಗ ಕೇವಲ ಸರ್ಕಿಟ್ ಆಪರೇಟಿಂಗ್ ಐಡಿಯಾದಲ್ಲಿ ಬಾಂಬ್ ತಯಾರಿಸಿ ತಂದಿದ್ದು, ಪಡೀಲ್ ತಲುಪುವವರೆಗೆ ಟೈಮರ್ ಫಿಕ್ಸ್ ಮಾಡಿರಲಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ | ಮಂಗಳೂರು ಸ್ಫೋಟ | ಪಿಎಫ್‌ಐ ನಾಯಕರ ಜತೆ ಶಾರಿಕ್‌ ನಂಟು ತನಿಖೆ

Exit mobile version