Site icon Vistara News

Ganeshotsav | ಬೆಳಗಾವಿಯಲ್ಲಿ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಗೆ ಚಾಲನೆ

Ganeshotsav

ಬೆಳಗಾವಿ: ನಗರದಲ್ಲಿ ಅದ್ಧೂರಿ ಸಾಮೂಹಿಕ ಗಣಪತಿ ವಿಸರ್ಜನಾ ಮೆರವಣಿಗೆ (Ganeshotsav) ಶುಕ್ರವಾರ ಸಂಜೆ ಚಾಲನೆ ನೀಡಲಾಯಿತು. ಹುತಾತ್ಮ ಚೌಕ್‌ನಿಂದ ನಗರದ 382 ಸಾರ್ವಜನಿಕ ಗಣಪತಿಗಳು, 26 ಸಾವಿರ ಮನೆ ಗಣಪತಿಗಳನ್ನು ಮೆರವಣಿಗೆ ಮೂಲಕ ವಿಸರ್ಜನೆ ಮಾಡಲು ಕೊಂಡೊಯ್ಯಲಾಯಿತು.

ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸ್ಥಳೀಯ ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ಸಂಸದೆ ಮಂಗಳಾ ಅಂಗಡಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮತ್ತಿತರರು ಭಾಗಿಯಾಗಿದ್ದರು.

ಇದನ್ನೂ ಓದಿ | ಜನಸ್ಪಂದನ | ವ್ಯಕ್ತಿ ಪೂಜೆಗೆ ಸಮಾವೇಶವಲ್ಲ ಎಂದ ಸುಧಾಕರ್‌: ಸಿದ್ದರಾಮೋತ್ಸವಕ್ಕೆ ಟೀಕೆ

ಶನಿವಾರ ಬೆಳಗ್ಗೆ 9 ಗಂಟೆವರೆಗೂ ಮೆರವಣಿಗೆ ನಡೆಯಲಿದ್ದು, 9 ಕಡೆಗಳಲ್ಲಿ ಗಣಪತಿ ವಿಸರ್ಜನೆಗೆ ಮಹಾನಗರ ಪಾಲಿಕೆಯಿಂದ ವ್ಯವಸ್ಥೆ ಮಾಡಲಾಗಿದೆ. ಗಣಪತಿ ಮೆರವಣಿಗೆಯ ವಾಹನಗಳಿಗೆ ಲೋಕಮಾನ್ಯ ತಿಲಕ್ ಗಣೇಶ ಮಂಡಳದಿಂದ ವೀರ ಸಾವರ್ಕರ್, ಲೋಕಮಾನ್ಯ ತಿಲಕ್ ಭಾವಚಿತ್ರ ಹಾಗೂ ಕೇಸರಿ ಧ್ವಜಗಳನ್ನು ಅಳವಡಿಸಲಾಗಿತ್ತು. ಕೈಯಲ್ಲಿ ಭಗವಾಧ್ವಜ ಹಿಡಿದು, ಭಂಡಾರ ಎರಚಿ ಜನರು ಸಂಭ್ರಮಿಸಿದರು. ಗಲ್ಲಿ ಗಲ್ಲಿಗಳಲ್ಲಿ ಡೋಲ್, ತಾಷಾ- ಡೋಜ್ ಪತಕ್, ಜಾನಪದ ಕಲಾತಂಡಗಳ ಸಾಮೂಹಿಕ ನೃತ್ಯ ಮೆರವಣಿಗೆ ರಂಗು ನೀಡಿತು.

ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 7 ಜನ ಎಸ್‌ಪಿ, 28 ಜನ ಡಿವೈಎಸ್‌ಪಿ, 68 ಪೊಲೀಸ್‌ ಇನ್‌ಸ್ಪೆಕ್ಟರ್, 104 ಪಿಎಸ್ಐ, 164 ಎಎಸ್‌ಐ, 3000 ಸಾವಿರ ಪೊಲೀಸ್ ಪೇದೆಗಳು, 10‌ ಕೆಎಸ್ಆರ್‌ಪಿ, 7 ಸಿಎಆರ್, ಒಂದು ಆರ್‌ಎಎಫ್‌ ತುಕಡಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

ಇಡೀ ನಗರದ ಮೇಲೆ ನಿಗಾ ಇಡಲು 20 ಡ್ರೋನ್‌ ಕ್ಯಾಮೆರಾ, ಪ್ರಮುಖ ಸ್ಥಳಗಳಲ್ಲಿ 700 ಸಿಸಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗಿದೆ. ಒಂದು ವಾಟರ್ ಜೆಟ್ ವಾಹನ, ವಜ್ರ ವಾಹನ, 100 ಸ್ಕೈ ಸೆಂಟ್ರಿಗಳು, 15 ವಾಚ್ ಟವರ್, 5 ಕ್ಯೂಆರ್‌ಟಿ ಟೀಂ ನಿಯೋಜನೆ ಮಾಡಲಾಗಿದೆ.

ರಾತ್ರಿಯಿಡೀ ನಡೆಯಲಿರುವ ಗಣಪತಿ ವಿಸರ್ಜನಾ ಮೆರವಣಿಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆ ಏರ್ಪಡಿಸಲಾಗಿದೆ. ಮಸೀದಿಗಳ ಮುಂಭಾಗದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ | ಜನಸ್ಪಂದನ | ವ್ಯಕ್ತಿ ಪೂಜೆಗೆ ಸಮಾವೇಶವಲ್ಲ ಎಂದ ಸುಧಾಕರ್‌: ಸಿದ್ದರಾಮೋತ್ಸವಕ್ಕೆ ಟೀಕೆ

Exit mobile version