Site icon Vistara News

ಮಾನಸಿಕ ರೋಗಿಗಳ ನೆರವಿಗಾಗಿ ಮೆಂಟಲ್‌ ಹೆಲ್ತ್‌ ಇನಿಶಿಯೇಟಿವ್‌ ಪ್ರಾಯೋಗಿಕ ಜಾರಿ: ಸಚಿವ ಸುಧಾಕರ್‌

ಸುಧಾಕರ್

ಬೆಂಗಳೂರು: ಮಾನಸಿಕ ರೋಗಿಗಳ ನೆರವಿಗಾಗಿ ರಾಜ್ಯದಲ್ಲಿ ಆರಂಭಿಸಿದ ʼಮೆಂಟಲ್‌ ಹೆಲ್ತ್‌ ಇನಿಶಿಯೇಟಿವ್‌ʼ ಅನ್ನು ಕೇಂದ್ರ ಸರ್ಕಾರ ಮೆಚ್ಚಿದ್ದು, ದೇಶಾದ್ಯಂತ ಈ ಕಾರ್ಯಕ್ರಮವನ್ನು ಜಾರಿ ಮಾಡುವುದಾಗಿ ಘೋಷಿಸಿದೆ. ಇದಕ್ಕಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ನಿಮ್ಹಾನ್ಸ್‌ ಸಂಸ್ಥೆಯನ್ನು ಅಭಿನಂದಿಸುತ್ತೇನೆ ಎಂದು ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಶುಕ್ರವಾರ ನಿಮ್ಹಾನ್ಸ್‌ನಲ್ಲಿ ವಿಶ್ವ ಮೆದುಳು ಆರೋಗ್ಯ ದಿನ ಹಾಗೂ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್‌ ಮಾಡಿದ ವೈದ್ಯರಿದ್ದಾರೆ. ಆದರೆ, ಇವರ ಬಳಿಗೆ ಮಾನಸಿಕ ರೋಗಿಗಳು ಬಂದಾಗ ಚಿಕಿತ್ಸೆ ನೀಡಲು ವಿಶೇಷ ತರಬೇತಿ ಇರಬೇಕು ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ನಿಮ್ಹಾನ್ಸ್‌ ತಜ್ಞರು ಈಗಾಗಲೇ 100 ವೈದ್ಯರಿಗೆ ತರಬೇತಿ ನೀಡಿದ್ದಾರೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಮಾನಸಿಕ ರೋಗಿಗಳು ನೇರವಾಗಿ ನಿಮ್ಹಾನ್ಸ್‌ಗೆ ಬಾರದೇ ಸ್ಥಳೀಯ ಮಟ್ಟದಲ್ಲೇ ಸೇವೆ ಪಡೆಯಬಹುದು ಎಂದು ತಿಳಿಸಿದರು. ನಿಮ್ಹಾನ್ಸ್‌ ಸಂಸ್ಥೆಯಲ್ಲಿ ಟ್ರಾಮಾ ಸೆಂಟರ್‌ ಆರಂಭಿಸುವ ಕುರಿತು ಕೇಂದ್ರ ಆರೋಗ್ಯ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ಶೀಘ್ರ ಅನುಮತಿ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ | ಮೈತ್ರಿ ಮುಟ್ಟಿನ ಕಪ್‌ ಯೋಜನೆಗೆ ಚಾಲನೆ ನೀಡಿದ ಸಚಿವ ಡಾ.ಕೆ.ಸುಧಾಕರ್‌

ವೈದ್ಯರಿಗೆ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡುವ ತರಬೇತಿ ಕೊಡುವ ಬಗ್ಗೆ ಎರಡು ವರ್ಷಗಳ ಹಿಂದೆಯೇ ಚರ್ಚೆ ನಡೆದಿತ್ತು. ಕೋವಿಡ್‌ ಬಂದ ಆರಂಭದಲ್ಲಿ ರೋಗಿಯೊಬ್ಬರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೊರೊನಾ ಪಾಸಿಟಿವ್‌ ಎಂದು ವರದಿ ಬಂದ ಕೂಡಲೇ ಅವರು ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದರು. ರೋಗದಿಂದ ಸಾಯುವುದಕ್ಕಿಂತ ಭಯದಿಂದಲೇ ಕೆಲವರು ಸತ್ತಿದ್ದರು. ಇಂತಹ ರೋಗಿಗಳಿಗೆ ಆಪ್ತ ಸಮಾಲೋಚನೆ ಅಗತ್ಯವಿತ್ತು. ಇದಕ್ಕಾಗಿ ನಿಮ್ಹಾನ್ಸ್‌ ಸಹಯೋಗದಲ್ಲಿ ಆಪ್ತ ಸಮಾಲೋಚನೆ ಆರಂಭಿಸಲಾಯಿತು. ಜತೆಗೆ ಇದರಲ್ಲೇ ಆನ್‌ಲೈನ್‌ ಸೇವೆಯನ್ನೂ ಆರಂಭಿಸಲಾಯಿತು. ಇದು ಯಶಸ್ವಿಯಾಗಿದ್ದು, ಒಂದೂವರೆ ವರ್ಷದಲ್ಲಿ  25 ಲಕ್ಷ ಜನರಿಗೆ ಆಪ್ತ ಸಮಾಲೋಚನೆ ಮಾಡಲಾಗಿದೆ. ದೇಶದಲ್ಲಿ ಬೇರೆಲ್ಲೂ ಇಂತಹ ಕಾರ್ಯ ಆಗಿಲ್ಲ ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯುವವರು, ಅನುತ್ತೀರ್ಣರಾದವರು ಕೂಡ ಆತ್ಮಹತ್ಯೆ ಮಾಡಿಕೊಳ್ಳುವುದು ಕಂಡುಬಂದಿದೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಮೂರು ದಿನ ಮುನ್ನ ಕೌನ್ಸೆಲಿಂಗ್‌ ಮಾಡುವಂತೆ ಆರೋಗ್ಯ ಇಲಾಖೆಯ ಆಯುಕ್ತರಿಗೆ ಸೂಚಿಸಲಾಯಿತು. ಎಷ್ಟೋ ವಿದ್ಯಾರ್ಥಿಗಳು ಈ ಸೇವೆ ಪಡೆದಿದ್ದಾರೆ. ಇದಕ್ಕಾಗಿ ಇಲಾಖೆಯನ್ನು ಅಭಿನಂದಿಸುತ್ತೇನೆ ಎಂದರು.

ಜನರು ಯಾವುದೇ ಮಾನಸಿಕ ಸಮಸ್ಯೆ ಇದ್ದರೂ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು. ಪ್ರತಿ ದಿನ ಒಂದು ಕ್ರೀಡೆ ಆಡಬೇಕು ಅಥವಾ ಒಂದು ಸಂಗೀತ ಸಾಧನವನ್ನು ಕಲಿಯಬೇಕು. ಇದರಿಂದಾಗಿ ಮೆದುಳಿನ ಆರೋಗ್ಯ ಉತ್ತಮವಾಗುತ್ತದೆ. ಜನಪ್ರಿಯ ಕ್ರಿಕೆಟಿಗ ರಾಬಿನ್‌ ಉತ್ತಪ್ಪ, ಕರ್ನಾಟಕದ ಮೆದುಳು ಆರೋಗ್ಯ ಉಪಕ್ರಮದ ರಾಯಭಾರಿಯಾಗಿದ್ದಾರೆ. ಅವರು ಉಚಿತವಾಗಿ ಈ ಕೆಲಸ ಮಾಡುತ್ತಿದ್ದು, ನಿಜವಾದ ಹೀರೋ ಆಗಿದ್ದಾರೆ ಎಂದು ಸಚಿವರು ಶ್ಲಾಘಿಸಿದರು.

ಆರಂಭ ಹಂತದಲ್ಲೇ ಚಿಕಿತ್ಸೆ ಪಡೆಯಿರಿ

ಮಾನಸಿಕ ರೋಗವನ್ನು ಜನರು ತಪ್ಪಾಗಿ ಭಾವಿಸುತ್ತಿದ್ದು, ಮಾನಸಿಕ ಆರೋಗ್ಯ ತಜ್ಞರ ಬಳಿ ಹೋದರೆ ಆ ವ್ಯಕ್ತಿಗೆ ತಲೆ ಸರಿ ಇಲ್ಲ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇದರಿಂದಾಗಿ ಅನೇಕರು ವೈದ್ಯರ ಬಳಿ ಹೋಗುವುದೇ ಇಲ್ಲ. ಆರಂಭಿಕ ಹಂತದಲ್ಲೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದರೆ ರೋಗ ನಿವಾರಣೆ ಸಾಧ್ಯ. ಆದರೆ, ಬಡತನ, ಸಮಾಜದ ಬಗ್ಗೆ ಆತಂಕ, ಅರಿವಿನ ಕೊರತೆ, ಸೌಲಭ್ಯಗಳ ಕೊರತೆ ಮೊದಲಾದ ಕಾರಣಗಳಿಂದ ಮಾನಸಿಕ ಅನಾರೋಗ್ಯಕ್ಕೊಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಫಿಟ್ಸ್‌, ಪಾರ್ಶ್ವವಾಯು, ಡಿಮೆನ್ಶಿಯ, ಮೆದುಳು ಟ್ಯೂಮರ್‌ ಸೇರಿದಂತೆ ಹಲವಾರು ನರ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ. ಪಾರ್ಕಿನ್‌ಸನ್‌ ರೋಗಕ್ಕೂ ಅನೇಕರು ತುತ್ತಾಗುತ್ತಿದ್ದಾರೆ. ಈ ರೋಗಗಳನ್ನು ಆರಂಭದಲ್ಲೇ ಪತ್ತೆ ಮಾಡಿದರೆ ಉತ್ತಮವಾಗಿ ಚಿಕಿತ್ಸೆ ನೀಡಬಹುದು ಎಂದು ಸಲಹೆ ನೀಡಿದರು.

ಖಾಸಗಿ ಆಂಬ್ಯುಲೆನ್ಸ್‌ ದರ

ಖಾಸಗಿ ಆಂಬ್ಯುಲೆನ್ಸ್‌ ದರ ಪರಿಷ್ಕರಣೆ ಮಾಡುವ ಅಧಿಕಾರ ಸಾರಿಗೆ ಇಲಾಖೆಗಿದೆ. ರೋಗಿಗಳಿಗೆ ದುಬಾರಿಯಾದರೆ ಕಡಿವಾಣ ಹಾಕಲಾಗುವುದು. ಈ ಬಗ್ಗೆ ಸಾರಿಗೆ ಸಚಿವರು ಹಾಗೂ ಅಧಿಕಾರಿಗಳ ಬಳಿ ಚರ್ಚಿಸಲಾಗುವುದು. ಬೇಕಾಬಿಟ್ಟಿ ದರ ನಿಗದಿ ಮಾಡುವುದನ್ನು ಸರ್ಕಾರ ಒಪ್ಪುವುದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.‌

ಇದನ್ನೂ ಓದಿ | ಕುಟುಂಬ ಯೋಜನೆ ಅಳವಡಿಕೆ ಜನಾಂದೋಲನವಾಗಲಿ; ಸಚಿವ ಡಾ.ಕೆ.ಸುಧಾಕರ್‌ ಕರೆ

Exit mobile version