Site icon Vistara News

Minister D Sudhakar : ದಲಿತರ ನಿಂದಿಸಿದ ಸುಧಾಕರ್‌ ಮೊದಲು ರಾಜೀನಾಮೆ ಕೊಡಲಿ: ಬೊಮ್ಮಾಯಿ

Former CM Basavaraj Bommai and minister D Sudhakar

ಬೆಂಗಳೂರು: ಸಚಿವ ಡಿ. ಸುಧಾಕರ್ (Minister D Sudhakar) ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರು ತಮ್ಮ ಖಾಸಗಿ ಜೀವನದಲ್ಲೂ ಕೂಡ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಚಿವರು ಮತ್ತು ಬೆಂಬಲಿಗರ ವರ್ತನೆ ತಪ್ಪು. ಈ ವಿಚಾರದಲ್ಲಿ ಪೊಲೀಸರು ಯಾವುದೇ ಒತ್ತಡಕ್ಕೆ ಒಳಗಾಗದೇ ಕೆಲಸ ಮಾಡಬೇಕು. ಸುಧಾಕರ್ ಮೊದಲು ರಾಜೀನಾಮೆ ನೀಡಬೇಕು‌ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Former CM Basavaraj Bommai) ಕಿಡಿಕಾರಿದ್ದಾರೆ.

ದಲಿತರ ಆಸ್ತಿ ಕಬಳಿಕೆ, ಹಲ್ಲೆ ಹಾಗೂ ಜಾತಿ ನಿಂದನೆ (Property grabbing, assault and casteist slurs) ಆರೋಪದ ಅಡಿಯಲ್ಲಿ ಸಚಿವ ಡಿ. ಸುಧಾಕರ್‌ (Minister D Sudhakar)​ ಮೇಲೆ ಎಫ್‌ಐಆರ್‌ (FIR registered) ದಾಖಲಾಗಿದೆ. ಇದು ಗಂಭೀರ ಆರೋಪವಾಗಿದೆ. ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಹೀಗಾಗಿ ಅವರ ರಾಜೀನಾಮೆಯನ್ನು ರಾಜ್ಯ ಸರ್ಕಾರ ಪಡೆಯಬೇಕು ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Minister D Sudhakar : ಡಿ. ಸುಧಾಕರ್‌ ಮೇಲೆ ಜಾತಿ ನಿಂದನೆ ಕೇಸ್‌ ದಾಖಲಾಗಿದೆಯಾ ಎಂದು ಕೇಳಿದ ಸಿಎಂ!

ಸುಧಾಕರ್ ರಾಜೀನಾಮೆ ನೀಡಬೇಕು‌

ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ಇದು‌. ಅಟ್ರಾಸಿಟಿ ಪ್ರಕರಣ ಸಾಬೀತಾದರೆ, ಮೊದಲು ಸುಧಾಕರ್ ರಾಜೀನಾಮೆ ನೀಡಬೇಕು‌. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾಮಾನ್ಯ ಆರೋಪಿಗಳನ್ನು ಹೇಗೆ ಠಾಣೆಯಲ್ಲಿ ಕರೆಸಿ ವಿಚಾರಣೆ ನಡೆಸುತ್ತಾರೋ, ಹಾಗೇ ವಿಚಾರಣೆ ಮಾಡಬೇಕು ಎಂಬುದಾಗಿ ಯಲಹಂಕ ಪೊಲೀಸರನ್ನು ನಾನು ಒತ್ತಾಯಿಸುತ್ತೇನೆ. ಅಟ್ರಾಸಿಟಿ ಪ್ರಕರಣ ಎಂದಾದರೆ ಮೊದಲು ಸಚಿವ ಸ್ಥಾನಕ್ಕೆ ಸುಧಾಕರ್ ರಾಜೀನಾಮೆ ನೀಡಬೇಕು‌ ಎಂದು ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.

ಸುಧಾಕರ್ ಅವರು ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಕಾನೂನು ರೀತಿ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸಿರುವುದು ಸರಿಯಲ್ಲ. ಈ ಪ್ರಕರಣದಲ್ಲಿ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯಬಾರದು. ಪೊಲೀಸರು ಒತ್ತಡಕ್ಕೆ ಮಣಿದರೆ, ರಾಜ್ಯದ ದಲಿತರು ಸರ್ಕಾರದ ವಿರುದ್ಧ ಹೋರಾಟ ನಡೆಸಲಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಎಚ್ಚರಿಸಿದರು.

ದಲಿತರು ಇವರನ್ನು ಕ್ಷಮಿಸುವುದಿಲ್ಲ

ಕಾಂಗ್ರೆಸ್ ನಾಯಕರು ಭಾಷಣದಲ್ಲಿ ಮಾತ್ರ ದಲಿತರ ಪರ ಮಾತನಾಡುತ್ತಾರೆ. ಆದರೆ, ಅವರ ಸಚಿವರ ನಡವಳಿಕೆ ಸಂಪೂರ್ಣ ದಲಿತ ವಿರೋಧಿಯಾಗಿದೆ. ಗ್ಯಾರಂಟಿ ಯೋಜನೆಗಳಿಗೆ ದಲಿತರಿಗೆ ಮೀಸಲಿಟ್ಟ 11 ಸಾವಿರ ಕೋಟಿ ರೂ. ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದಲಿತರು ಇವರನ್ನು ಕ್ಷಮಿಸುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಕಿಡಿಕಾರಿದರು.

ಇದನ್ನೂ ಓದಿ: Minister D Sudhakar : ಸುಧಾಕರ್‌ ರಾಜೀನಾಮೆ ಕೊಡಲ್ಲ, ಇದೊಂದು ಸುಳ್ಳು ಕೇಸ್‌: ಡಿ.ಕೆ. ಶಿವಕುಮಾರ್

ಸುಧಾಕರ್‌ರನ್ನು ಹಿಡಿದು ಒಳಗೆ ಹಾಕಬೇಕು: ಸದಾನಂದ ಗೌಡ

ಅಟ್ರಾಸಿಟಿ ಕೇಸ್ ಬಗ್ಗೆ ನನಗೆ ಗೊತ್ತಿದೆ. ಸಣ್ಣ ಪುಟ್ಟ ವ್ಯಕ್ತಿ ಮೇಲೆ ಅಟ್ರಾಸಿಟಿ ಬಂದ ತಕ್ಷಣ ಹಿಡಿದು ಒಳಗೆ ಹಾಕಲಾಗುತ್ತದೆ. ಸುಧಾಕರ್ ಅವರನ್ನೂ ಹಿಡಿದು ಒಳಗೆ ಹಾಕಬೇಕು. ವಿಚಾರಣೆ ಮಾಡಿ ನಂತರ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ಸರ್ಕಾರ ಪರಿಶಿಷ್ಟರ ಪರ ಎಂದು ಹೇಳುತ್ತಾರೆ. ಆದರೆ, ಈ ರೀತಿ ಅನ್ಯಾಯ ಮಾಡಿದವರ ರಕ್ಷಣೆ ಮಾಡುತ್ತಾರೆ ಎಂದು ಮಾಜಿ ಸಿಎಂ, ಸಂಸದ ಸದಾನಂದ ಗೌಡ ಹೇಳಿದರು.

Exit mobile version