Site icon Vistara News

Puttur Suicide case: ಪುತ್ತೂರು ನಗರಸಭಾ ಸದಸ್ಯ ನೇಣಿಗೆ ಶರಣು

Puttur municipal councillor commits suicide case registered

ಮಂಗಳೂರು: ಪುತ್ತೂರು ನಗರಸಭಾ ಸದಸ್ಯರೊಬ್ಬರು (Puttur Suicide case) ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶಿವರಾಮ ಸಫಲ್ಯ ಆತ್ಮಹತ್ಯೆ ಮಾಡಿಕೊಂಡ ನಗರಸಭಾ ಸದಸ್ಯರಾಗಿದ್ದಾರೆ. ವಾರ್ಡ್ ನಂಬರ್ 1ರ ಸದಸ್ಯರಾಗಿ ಇವರು ಆಯ್ಕೆಯಾಗಿದ್ದರು. ಪುತ್ತೂರಿನ ಉರಮಾಲ್‌ನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Malali Masjid: ಮಳಲಿ ಮಸೀದಿಯಲ್ಲಿ ಮಂದಿರ ನಿರ್ಮಾಣ ಸಂಕಲ್ಪ; ಹಿಂದು ಸಂಘಟನೆಗಳಿಂದ ಮಸೀದಿ ಮಣ್ಣು ಸಮರ್ಪಿಸಿ ಗಣಹೋಮ

ಸ್ಥಳಕ್ಕೆ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ. ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೊಬೈಲ್‌ ಕಾಲ್‌ ಲಿಸ್ಟ್‌ ಸೇರಿದಂತೆ ಮನೆಯವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

ಕಾರವಾರ: ಅಂಕೋಲಾ ತಾಲೂಕಿನ ಬೆಳಂಬಾರದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ (Suicide case) ಮಾಡಿಕೊಂಡಿದ್ದಾಳೆ. ಬೆಳಂಬಾರ ತಾಳೇಬೈಲಿನ ನಿವಾಸಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶಿಲ್ಪಾ ಗೌಡ (17) ಮೃತ ದುರ್ದೈವಿ. ಇವಳು ಸರ್ಕಾರಿ ಪದವಿ ಪೂರ್ವ ಕಾಲೇಜು ಅಂಕೋಲಾದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದಳು.

ಮಾರ್ಚ್ 9ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಆಕೆ ಆರಂಭದ ಎರಡು ಪರೀಕ್ಷೆಗಳನ್ನು ಎದುರಿಸಿದ್ದಳು. ಬುಧವಾರ ಬೆಳಗ್ಗೆ ಪಾಲಕರು ಎಂದಿನಂತೆ ಕೂಲಿ ಕೆಲಸಕ್ಕೆ ಮನೆಯಿಂದ ಹೊರಗಡೆ ಹೋಗಿದ್ದ ವೇಳೆ ವಿಷ ಸೇವಿಸಿದ್ದಾಳೆ. ಕೆಲ ಹೊತ್ತಿನ ಬಳಿಕ ಆಕೆ ವಾಂತಿ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಂಕೋಲಾದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿ ಆಕೆ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದುಬಂದಿದೆ.

ಬಡ, ಸಾಮಾನ್ಯ ವರ್ಗಕ್ಕೆ ಸೇರಿದ ವಿದ್ಯಾರ್ಥಿನಿಯ ಸಾವಿಗೆ ಏನು ಕಾರಣ ಎನ್ನುವುದು ಸ್ಪಷ್ಟವಾಗಿಲ್ಲ. ಯಾವುದೇ ಡೆತ್‌ ನೋಟ್‌ ಬರೆದಿಟ್ಟಂತೆ ಕಾಣುತ್ತಿಲ್ಲ. ಆಕೆಗೆ ಪರೀಕ್ಷೆಗಳು ಕಷ್ಟವಾಗಿ ಇಲ್ಲವೇ ನಿರೀಕ್ಷಿತ ಅಂಕಗಳು ಬರಲಾರದು ಎಂಬ ಆತಂಕದಲ್ಲಿ ಈ ತೀವ್ರ ಹೆಜ್ಜೆಯನ್ನು ಇಟ್ಟಳೇ ಎನ್ನುವುದು ತನಿಖೆಯಿಂದ ಗೊತ್ತಾಗಬೇಕಾಗಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Mad Love : ಮದುವೆ ಮನೆಗೆ ನುಗ್ಗಿ ಪಾಗಲ್‌ ಪ್ರೇಮಿಯ ಹುಚ್ಚಾಟ; ಅರ್ಧದಲ್ಲೇ ನಿಂತು ಹೋಯಿತು ಹುಡುಗಿ ಮದುವೆ

ಪ್ರೇಮ ವೈಫಲ್ಯಕ್ಕೆ ನೊಂದು ಯುವತಿ ಆತ್ಮಹತ್ಯೆ

ಗದಗ ಜಿಲ್ಲೆ ಕಣಗಿನಹಾಳ ಗ್ರಾಮದಲ್ಲಿ ಪ್ರೀತಿ ವೈಫಲ್ಯ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಪಾರ್ವತಿ ಬಾಯಿ (24) ಮೃತ ಯುವತಿ. ರೈಲ್ವೆ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಪಾರ್ವತಿ ಅನ್ಯ ಕೋಮಿನ ಯುವಕನೊಬ್ಬನನ್ನು ಪ್ರೀತಿ ಮಾಡುತ್ತಿದ್ದಳು. ಆದರೆ, ಬುಧವಾರ (ಮಾ. 15) ಇದ್ದಕ್ಕಿದ್ದಂತೆ ನೇಣಿಗೆ ಶರಣಾಗಿದ್ದಾಳೆ. ಪ್ರೇಮಿಗಳಿಬ್ಬರೂ ಜಗಳ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮನನೊಂದ ಯುವತಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಸಾಯುವ ಮುಂಚೆ ಡೆತ್‌ನೋಟ್ ಬರೆದಿಟ್ಟಿದ್ದಾಳೆ ಎಂದು ಕುಟುಂಬಸ್ಥರು ಹೇಳುತ್ತಿದ್ದರೆ, ಪೊಲೀಸರು ಮಾತ್ರ ಡೆತ್‌ನೋಟ್ ಬಹಿರಂಗಪಡಿಸಿಲ್ಲ.

Exit mobile version