Site icon Vistara News

Murder Case : ಹಣಕಾಸು ವಿಚಾರಕ್ಕೆ ಕಿರಿಕ್‌; ಮೇಸ್ತ್ರಿಯ ಕತ್ತು ಕೊಯ್ದ ಸಹ ಕೆಲಸಗಾರ

Murder case in Mandya

ಮಂಡ್ಯ: ಹಣಕಾಸು ವಿಚಾರಕ್ಕೆ ಮೇಸ್ತ್ರಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ (Murder Case) ಮಾಡಿರುವ ಘಟನೆ ಮಂಡ್ಯ ಜಿಲ್ಲೆ (Mandya News) ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಯಲಾದಹಳ್ಳಿ ಗ್ರಾಮದ ಮಂಟೇಸ್ವಾಮಿ (32) ಹತ್ಯೆಯಾದವರು.

ಕೆ.ಎಂ.ದೊಡ್ಡಿಯ ಮೆಳ್ಳಹಳ್ಳಿಯಲ್ಲಿ ವಾಸವಿದ್ದ ಮಂಟೇಸ್ವಾಮಿಯನ್ನು ಸಹ ಕೆಲಸಗಾರ ಕಬ್ಬನಹಳ್ಳಿಯ ರವಿ ಎಂಬಾತ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇವರಿಬ್ಬರು ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದರು. ಈ ಹಿಂದೆ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದಿತ್ತು. ಮತ್ತೆ ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.

ಮನೆಯಲ್ಲಿದ್ದ ಮಂಟೇಸ್ವಾಮಿಯನ್ನು ಮಾತುಕತೆಗೆಂದು ನಿನ್ನೆ ಸೋಮವಾರ ರವಿ ಹೊರಗೆ ಕರೆದುಹೋಗಿದ್ದ. ಬಳಿಕ ಮಾತಿಗೆ ಮಾತು ಬೆಳೆದು ಸಿಟ್ಟಿಗೆದ್ದ ರವಿ ಮೇಸ್ತ್ರಿ ಮಂಟೇಸ್ವಾಮಿಯ ಕತ್ತು ಕೊಯ್ದು ಕೊಲೆ ಮಾಡಿದ್ದ. ಹತ್ಯೆಯ ಬಳಿಕ ಆರೋಪಿ ರವಿ ಸ್ಥಳದಿಂದ ನಾಪತ್ತೆ ಆಗಿದ್ದ.

ಮಂಗಳವಾರ ಮಂಡ್ಯ ರಸ್ತೆಯ ಪಕ್ಕದ ಜಮೀನಿನ ಬಳಿ ಮಂಟೇಸ್ವಾಮಿಯ ಶವ ಪತ್ತೆ ಆಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಹುಡುಕಾಟವನ್ನು ನಡೆಸಿದ್ದಾರೆ.

ಇದನ್ನೂ ಓದಿ : Murder Case : ಪೊಲೀಸನೇ ಇಲ್ಲಿ ಕ್ರಿಮಿನಲ್; ಬಾಣಂತಿ ಪತ್ನಿಯ ಉಸಿರುಗಟ್ಟಿಸಿ ಕೊಂದ ಧೂರ್ತ

ಪುತ್ತೂರಿನ ಹುಲಿವೇಷ ತಂಡದ ಮುಖ್ಯಸ್ಥನ ಬರ್ಬರ ಹತ್ಯೆ; ರಸ್ತೆಯಲ್ಲೇ ಅಟ್ಟಾಡಿಸಿ ಕೊಲೆ

ಮಂಗಳೂರು: ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್‌ (Kallega Tigers) ಹುಲಿ ತಂಡದ ಮುಖ್ಯಸ್ಥ ಅಕ್ಷಯ್‌ ಕಲ್ಲೇಗ (26) ಎಂಬವರನ್ನು ಅತ್ಯಂತ ಬರ್ಬರವಾಗಿ ಕೊಲೆ (Murder Case) ಮಾಡಲಾಗಿದೆ. ಪುತ್ತೂರಿನ ನೆಹರು ನಗರ ಜಂಕ್ಷನ್‌ನಲ್ಲಿ ರಸ್ತೆಯಲ್ಲೇ ಅಟ್ಟಾಡಿಸಿ ಕೊಲೆ (Tiger team leader Murdered) ಮಾಡಲಾಗಿದೆ.

ಕೊಲೆ ನಡೆದ ನೆಹರೂ ನಗರ ಜಂಕ್ಷನ್‌

ಅಕ್ಷಯ್‌ ಕಲ್ಲೇಗ ಇಲ್ಲಿನ ಹುಲಿ ತಂಡದ ಮುಖ್ಯಸ್ಥರಾಗಿ ಸಾಕಷ್ಟು ಜನಪ್ರಿಯರಾಗಿದ್ದರು. ಅವರ ತಂಡವೂ ಅಷ್ಟೇ ಖ್ಯಾತಿಯನ್ನು ಹೊಂದಿತ್ತು. ಕಲರ್ಸ್‌ ಕನ್ನಡ ಚಾನೆಲ್‌ನಲ್ಲೂ ಇವರ ಹುಲಿ ವೇಷ ಕಾಣಿಸಿಕೊಂಡಿತ್ತು. ಅಂಥ ಜನಪ್ರಿಯತೆ ಹೊಂದಿದ್ದ ಯುವಕನನ್ನು ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ.

ಕೊಲೆ ಆರೋಪಿಗಳಾದ ಚೇತು, ಮಂಜ, ಮನೀಷ್

ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ನೆಹರು ನಗರ ಜಂಕ್ಷನ್ ನಲ್ಲಿದ್ದಾಗ ಅಕ್ಷಯ್‌ ಮೇಲೆ ಮೂವರು ದುಷ್ಟರು ದಾಳಿ ಮಾಡಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಅಕ್ಷಯ್‌ ಸಾಕಷ್ಟು ಪ್ರಯತ್ನಪಟ್ಟರೂ ಅದು ಸಾಧ್ಯವಾಗಲಿಲ್ಲ. ಪೊದೆಗಳ ನಡುವೆ ಓಡಿದರೂ ಬೆನ್ನಟ್ಟಿದ ತಂಡ ಅಕ್ಷಯ್‌ನನ್ನು ಕೊಂದು ಹಾಕಿದ್ದಾರೆ.

ಈ ಕೊಲೆ ಮಾಡಿದ್ದು ಮನೀಷ್‌, ಚೇತು ಮತ್ತು ಇನ್ನೊಬ್ಬ ವ್ಯಕ್ತಿ. ಇವರಲ್ಲಿ ಬನ್ನೂರು ನಿವಾಸಿ ಮನೀಷ್, ಚೇತು ಪೊಲೀಸ್ ಠಾಣೆಗೆ ಶರಣಾಗಿದ್ದರೆ, ಮತ್ತೋರ್ವ ಆರೋಪಿ ತಲೆಮಲೆಸಿಕೊಂಡಿದ್ದಾನೆ.

ಯಾಕೆ ನಡೆಯಿತು ಕೊಲೆ?

ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತ ವಿಚಾರದಲ್ಲಿ ಗಲಾಟೆಯಾಗಿ ಅದು ಕೊಲೆಗೆ ಕಾರಣವಾಗಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿರುವ ಮಾಹಿತಿ. ಬಸ್‌ ಚಾಲಕ ಚೇತು ಎಂಬಾತನ ಬೆಂಬಲಿಗ ಹಾಗೂ ಅಕ್ಷಯ್‌ ನಡುವೆ ದ್ವಿಚಕ್ರ ವಾಹನ ಅಪಘಾತದ ವಿಚಾರದಲ್ಲಿ ತೀವ್ರ ವಾಗ್ವಾದ ನಡೆದಿತ್ತು. ಅಪಘಾತದ ಬಳಿಕ ರಿಪೇರಿ ಖರ್ಚಿನ ಸಂಬಂಧ ಎರಡು ಸಾವಿರ ರೂ. ನೀಡುವ ವಿಚಾರದಲ್ಲಿ ಸಣ್ಣ ಮಟ್ಟಿನ ತಗಾದೆ ಎದ್ದು ಅದು ವಿಕೋಪಕ್ಕೆ ಹೋಗಿದೆ ಎನ್ನಲಾಗಿದೆ. ಈ ವಿಚಾರ ಚೇತು ಮತ್ತು ಗ್ಯಾಂಗ್‌ಗೆ ತಲುಪಿ ಆ ತಂಡ ಆಗಮಿಸಿ ದಾಳಿ ನಡೆಸಿದೆ.

ಚೇತು ಮತ್ತು ತಂಡ ಅಕ್ಷಯ್ ಕಲ್ಲೇಗ ಅವರನ್ನು ಅಟ್ಟಾಡಿಸಿ ತಲವಾರಿನಿಂದ ದಾಳಿ ಮಾಡಿದೆ. ಅಕ್ಷಯ್‌ ಸತ್ತು ಬಿದ್ದುದನ್ನು ದೃಢಪಡಿಸಿಕೊಂಡ ತಂಡದ ಇಬ್ಬರು ಪೊಲೀಸ್‌ ಠಾಣೆಗೆ ಹೋಗಿ ತಾವು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ನಿಜಕ್ಕೂ ಅಪಘಾತದ ಕಾರಣಕ್ಕಾಗಿಯೇ ಈ ಕೊಲೆ ನಡೆದಿದೆಯೇ ಅಥವಾ ಬೇರೆ ಏನಾದರೂ ಕಾರಣಗಳಿವೆಯೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಹುಲಿಕುಣಿತದಲ್ಲಿ ಕಲ್ಲೇಗ ಟೈಗರ್ಸ್ ತಂಡದ ನೇತೃತ್ವ ವಹಿಸಿಕೊಂಡಿದ್ದ ಅಕ್ಷಯ್‌ನ ಜನಪ್ರಿಯತೆ ಸಹಿಸದೆ ಅಪಘಾತದ ಕಾರಣ ಮುಂದಿಟ್ಟುಕೊಂಡು ಕೊಲೆ ಮಾಡಿದರೇ ಎಂಬುದು ಕೆಲವರ ಸಂಶಯ. ಈ ನಡುವೆ ಹುಲಿ ಕುಣಿತಗಳ ಸ್ಪರ್ಧೆಯೂ ಇಲ್ಲಿ ದೊಡ್ಡ ಮಟ್ಟದಲ್ಲಿ ಘರ್ಷಣೆಗೆ ಕಾರಣವಾಗುತ್ತಿದೆ. ಹೀಗಾಗಿ ಈ ಕೊಲೆಗೆ ಹಲವು ಆಯಾಮಗಳು ಇವೆ ಎಂದು ಹೇಳಲಾಗುತ್ತಿದೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ತನಿಖೆ ನಡೆಯುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version