Site icon Vistara News

Murder Case : ಹೆಂಡ್ತಿಯನ್ನು ಕಡಿದು ಹಾಕಿ ಆತ್ಮಹತ್ಯೆಗೆ ಶರಣಾದ!

Husband kills wife and commits suicide

ಹುಬ್ಬಳ್ಳಿ: ಮನೆಯಲ್ಲಿದ್ದ ಪತ್ನಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder case) ಮಾಡಿ, ಬಳಿಕ ಆಕೆಯ ಸೀರೆಯಲ್ಲಿ ನೇಣು ಬಿಗಿದುಕೊಂಡು (Self Harming) ಮೃತಪಟ್ಟಿದ್ದಾನೆ. ಹುಬ್ಬಳ್ಳಿಯ ಕಟಕರ ಓಣಿಯಲ್ಲಿ ಘಟನೆ ನಡೆದಿದೆ.

ಶಾಹಿಸ್ತಾಬಾನು ಬೇಪಾರಿ ಪತಿಯಿಂದಲೇ ಹತ್ಯೆಯಾದವಳು. ಈಕೆಯ ಪತಿ ಮಲೀಕ್ ಬೇಪಾರಿ ಹತ್ಯೆ ಮಾಡಿ ನೇಣಿಗೆ ಶರಣಾಗಿದ್ದಾನೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಸಬಾಪೇಟ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ಸ್‌ಪೆಕ್ಟರ್ ರಾಘವೇಂದ್ರ ಹಳ್ಳೂರ ತಂಡದವರು ಪರಿಶೀಲನೆ ನಡೆಸಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ .ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಕೆಲಸ ಮಾಡುವಂತೆ ಒತ್ತಾಯಿಸಿದ್ದಳು ಪತ್ನಿ!

ಪತ್ನಿ ಶಾಹಿಸ್ತಾಬಾನುಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಅದೇ ಕೊಠಡಿಲ್ಲಿ ಮಲೀಕ್ ಬೇಪಾರಿ ನೇಣಿಗೆ ಶರಣಾದ್ದ. ಮೊದಲ ಪತಿ ತೀರಿಕೊಂಡಿದ್ದ ಕಾರಣಕ್ಕೆ ಶಾಹಿಸ್ತಾಬಾನುಗೂ ಮಲೀಕ್‌ನನ್ನು 2ನೇ ಮದುವೆ ಆಗಿದ್ದಳು. ಮೊದಲ ಪತಿಯಿಂದ ಶಾಹಿಸ್ತಾಬಾನುಗೆ ಎರಡು ಗಂಡು ಮಕ್ಕಳಿದ್ದು, ಇತ್ತ 2ನೇ ಪತಿ ಮಲೀಕ್‌ ಉಂಡಾಡಿ ಗುಂಡನಂತೆ ಅಲೆದಾಡುತ್ತಿದ್ದ. ಹೀಗಾಗಿ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದಳು.

ಇತ್ತ ಕೆಲಸಕ್ಕೆ ಹೋಗು ಎಂದರೆ ಮಲೀಕ್‌, ಶಾಹಿಸ್ತಾಬಾನು ಜತೆಗೆ ಜಗಳ ತೆಗೆಯುತ್ತಿದ್ದ. ಕೆಲಸದ ವಿಷಯವಾಗಿ ದಂಪತಿ ನಡುವೆ ನಿತ್ಯ ಜಗಳಾಡುತ್ತಿದ್ದರು. ಇಂದು ಜಗಳ ವಿಕೋಪಕ್ಕೆ ತಿರುಗಿದ್ದು ಕೋಪದಲ್ಲಿ ಬಾನುಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: Road Accident : ಬಸ್‌- ಕಾರು ಡಿಕ್ಕಿ; ಒಂದೇ ಕುಟುಂಬದ ನಾಲ್ವರ ಸಹಿತ ಐವರು ಬಲಿ

ಮಕ್ಕಳಿಬ್ಬರನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ!

ಚಿತ್ರದುರ್ಗ: ತನ್ನ ಮುದ್ದಾದ ಮಕ್ಕಳಿಬ್ಬರನ್ನು ಕೊಂದು (Murder case) ಬಳಿಕ ತಾನೂ ಆತ್ಮಹತ್ಯೆಗೆ (Self Harming) ಶರಣಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಚಿತ್ರದುರ್ಗದ ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಲತಾ ಹಾಗೂ ಜ್ಞಾನ (3), ಪ್ರಣೀತ (5) ಮೃತಪಟ್ಟ ದುರ್ದೈವಿಗಳು. ದಾಂಪತ್ಯ ಕಲಹದಿಂದ ಲತಾ ಬೇಸತ್ತು ಹೋಗಿದ್ದರು. ಇದರಿಂದ ಮಾನಸಿಕ ಖಿನ್ನತೆಗೆ ಜಾರಿದ್ದ ಲತಾ ಮನನೊಂದಿದ್ದರು. ಇಂದು ಏಕಾಏಕಿ ತನ್ನಿಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ, ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಆ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸದ್ಯ ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಚಳ್ಳಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Namma Metro : ಮೆಟ್ರೋಗೆ ಹರಾಜಲ್ಲಿ ಸಿಕ್ತು 7 ಲಕ್ಷ ರೂ.; ಇವು ಪ್ರಯಾಣಿಕರ ವಸ್ತುಗಳು!

ಅದಾನಿ ಗ್ರೂಪ್‌ ಕಾರ್ಖಾನೆಯ ಡೆಪ್ಯೂಟಿ ಮ್ಯಾನೇಜರ್ ಸೂಸೈಡ್‌!

ವಾಡಿ ಎಸಿಸಿ ಸಿಮೆಂಟ್ ಕಾರ್ಖಾನೆಯ ಡೆಪ್ಯೂಟಿ ಮ್ಯಾನೇಜರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ವಾಡಿ ಪಟ್ಟಣದಲ್ಲಿರುವ ಅದಾನಿ ಗ್ರೂಪ್ ಮಾಲೀಕತ್ವದ ಎಸಿಸಿ ಕಾರ್ಖಾನೆಯ ಆಡಳಿತ ಮಂಡಳಿಯವರ ಕಿರುಕುಳಕ್ಕೆ ಬೇಸತ್ತು ಡೆಪ್ಯೂಟಿ ಮ್ಯಾನೇಜರ್ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ.

ರಮೇಶ ಪವಾರ (47) ಆತ್ಮಹತ್ಯೆ ಮಾಡಿಕೊಂಡ ಎಸಿಸಿ ಕಾರ್ಖಾನೆ ಡೆಪ್ಯೂಟಿ ಮ್ಯಾನೇಜರ್ ಆಗಿದ್ದಾರೆ. ಎಸಿಸಿ ಕಾಲೋನಿಯ ಮನೆಯ ಬಾಲ್ಕನಿಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಕಾರ್ಖಾನೆ ಹಿರಿಯ ಅಧಿಕಾರಿಗಳ ಮೇಲೆ ಆರೋಪ ಮಾಡಿರುವ ವಿಡಿಯೊ ಮಾಡಿ ಹರಿಬಿಟ್ಟಿದ್ದಾರೆ. ಈ ರಮೇಶ ಪವಾರ್ ಚಿತ್ತಾಪೂರದ ಮಾಜಿ ಶಾಸಕ ದಿ.ವಾಲ್ಮಿಕಿ ನಾಯಕ್ ಅವರ ಅಳಿಯರಾಗಿದ್ದಾರೆ.

ವಾಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version