Site icon Vistara News

Murder Case | ರೌಡಿಶೀಟರ್ ದಿವಾಕರ್ @ ಡಿಚ್ಚಿ ದಿವಾ ಭೀಕರ ಕೊಲೆ; ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದರು!

belagavi politics ೬

ತುಮಕೂರು: ಬೆಂಗಳೂರು ಸೇರಿದಂತೆ ಹಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ, ಕೊಲೆ ಯತ್ನ, ಸುಲಿಗೆ ಪ್ರಕರಣಗಳನ್ನು ಎದುರಿಸುತ್ತಿದ್ದ ರೌಡಿಶೀಟರ್ ದಿವಾಕರ್ @ ಡಿಚ್ಚಿ ದಿವಾ ಎಂಬಾತನನ್ನು ತಿಪಟೂರು ತಾಲೂಕಿನ ಹೊಸಹಳ್ಳಿ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ (Murder Case) ಮಾಡಲಾಗಿದೆ.

ದಿವಾಕರ್ (೩೨) ತಿಪಟೂರು ತಾಲೂಕಿನ ಹುಚ್ಚನಹಳ್ಳಿ ನಿವಾಸಿಯಾಗಿದ್ದ. ಹಳೇ ವೈಷಮ್ಯಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸೋಮವಾರ ರಾತ್ರಿ ತಿಪಟೂರಿನಿಂದ ಹುಚ್ಚನಹಳ್ಳಿ ಕಡೆಗೆ ದಿವಾಕರ್‌ ಹೋಗುತ್ತಿದ್ದ ಎನ್ನಲಾಗಿದೆ. ಹೊಸಹಳ್ಳಿ ಬಳಿ ಬರುತ್ತಿದ್ದಾಗ ಮಾರ್ಗ ಮಧ್ಯೆ ನಾಲ್ಕೈದು ಜನ ದುಷ್ಕರ್ಮಿಗಳು ಏಕಾಏಕಿ ದಾಳಿ ನಡಿಸಿದ್ದಾರೆ. ಮಾರಕಾಸ್ತ್ರಗಳಿಂದ ದಿವಾಕರ್‌ ಮೇಲೆ ದಾಳಿ ನಡೆಸಿ, ಭೀಕರವಾಗಿ ಕೊಚ್ಚಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಅಲ್ಲಿಯೇ ಬಿಟ್ಟು, ಪರಾರಿಯಾಗಿದ್ದಾರೆ.

ಇದನ್ನೂ ಓದಿ | ಕಾಫಿರರನ್ನು ಕೊಲ್ಲಿ ಎಂದು ಕೂಗುತ್ತಾ ಕೊಚ್ಚಿದರು! ಹರ್ಷ ಕೊಲೆ ನಡೆದದ್ದು ಹೀಗೆ | ಇಲ್ಲಿದೆ ಸ್ಫೋಟಕ ವಿವರ

ರಕ್ತದ ಮಡುವಿನಲ್ಲಿ ಬಿದಿದ್ದ ದಿವಾಕರ್‌ನನ್ನು ಹಾಸನ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ರೌಡಿಶೀಟರ್ ಆಗಿದ್ದ ಡಿಚ್ಚಿ ದಿವಾ ಮೇಲೆ ಬೆಂಗಳೂರು ಸೇರಿದಂತೆ ವಿವಿಧ ಕಡೆ ಪೊಲೀಸ್‌ ಠಾಣೆಗಳಲ್ಲಿ ಹಲವಾರು ಕೇಸ್‌ ದಾಖಲಾಗಿತ್ತು. ಹೊನ್ನವಳ್ಳಿ, ತಿಪಟೂರು ಟೌನ್, ಎನ್‌ಇಪಿಎಸ್ ಜಯನಗರ, ದಾಬಸ್‌ಪೇಟೆ, ಬೆಂಗಳೂರು ಸೇರಿದಂತೆ ಹಲವು ಕೊಲೆ, ಕೊಲೆ ಯತ್ನ, ಸುಲಿಗೆ ಪ್ರಕರಣಗಳು ದಾಖಲಾಗಿದ್ದವು.

ಈಗ ದಿವಾಕರ್‌ನನ್ನು ಕೊಲೆ ಮಾಡಿರುವ ನಾಲ್ವರ ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ. ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

ಇದನ್ನೂ ಓದಿ | Crime News | ದೊಡ್ಡಮ್ಮನ ಕಿವಿ ಕತ್ತರಿಸಿ ಓಲೆ ಕದ್ದ; ಕೊಲೆ ಮಾಡಿ ಪರಾರಿಯಾದ

Exit mobile version