Site icon Vistara News

Murder Case | ಅನೈತಿ‌ಕ ಸಂಬಂಧ ಶಂಕೆ; ನಾದಿನಿಯನ್ನು ಕೊಂದು ಶವ ಹೂತಿಟ್ಟ ಬಾವ

Murder Case

ಬಳ್ಳಾರಿ: ಅನೈತಿಕ‌ ಸಂಬಂಧದ ಶಂಕೆಯಿಂದ ನಾದಿನಿಯನ್ನು ಬಾವ ಕೊಲೆ ಮಾಡಿರುವ ಘಟನೆ ಬಳ್ಳಾರಿ ತಾಲೂಕಿನ ಕುಡತಿನಿ ಗ್ರಾಮದಲ್ಲಿ ನಡೆದಿದೆ. ಮಹಿಳೆಯನ್ನು ಆರೋಪಿ ಕೊಲೆ ಮಾಡಿ ಶವವನ್ನು ಕಿಟ್ಟ ಯಾರ್ಡ್‌ನಲ್ಲಿ (ಕಬ್ಬಿಣದ ತ್ಯಾಜ್ಯ ಸುರಿಯುವ ಸ್ಥಳ) ಹೂತಿಟ್ಟಿದ್ದ. ಈ ವಿಷಯ (Murder Case) ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ.

ಭಾಗ್ಯಮ್ಮ(29) ಕೊಲೆಯಾದ ಮಹಿಳೆ. ಕಾಸಿಮ್(49) ಬಂಧಿತ ಆರೋಪಿ. ಡಿ.20ರಂದು ಭಾಗ್ಯಮ್ಮ ಕಾಣೆಯಾಗಿದ್ದಾಳೆ ಎಂದು ಅತ್ತೆ ಶಂಕರಮ್ಮ ಕುಡತಿನಿ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಬೆನ್ನತ್ತಿದ ಪೊಲೀಸರು, ಕಾಸಿಂನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.

ಆರೋಪಿ ಕಾಸಿಂ, ಭಾಗ್ಯಮ್ಮಳನ್ನು ಕಿಟ್ಟ ಯಾರ್ಡ್‌ಗೆ ಕರೆದುಕೊಂಡಿ ಹೋಗಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿ, ತ್ಯಾಜ್ಯದ ರಾಶಿಯಲ್ಲಿ ಹೂತಿಟ್ಟಿರುವುದಾಗಿ ಹೇಳಿದ್ದ. ಸಹಾಯಕ ಆಯುಕ್ತರ ಸೂಚನೆ ಮೇರೆಗೆ ಸಂಡೂರು ತಹಸೀಲ್ದಾರ್, ಡಿವೈಎಸ್ಪಿ ಕಾಶೀಗೌಡ, ಸಿಪಿಐ ಚಂದನ್ ಗೋಪಾಲ್ ಸಮ್ಮುಖದಲ್ಲಿ ಬುಧವಾರ ಹೂತ್ತಿಟ್ಟ ಶವವನ್ನು ಹೊರತೆಗೆದು ಶವ ಪರೀಕ್ಷೆ ನಡೆಸಲಾಗಿದೆ.

ಕುಡತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮಹಿಳೆಗೆ ಮೂವರು ಮಕ್ಕಳಿದ್ದಾರೆ. ಆಕೆಯ ಗಂಡ ಬಾಬು ಮೂಕ ಎಂದು ತಿಳಿದುಬಂದಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Student Dies | ಈಜಲು ಹೋಗಿ ಹೊಂಡದಲ್ಲಿ ಮುಳುಗಿ ವಸತಿ ಶಾಲೆಯ ವಿದ್ಯಾರ್ಥಿ ಸಾವು

Exit mobile version