Site icon Vistara News

Murder Case: ಟೋಲ್‌ ವಿಚಾರಕ್ಕೆ ಕಿರಿಕ್‌; ಹಾಕಿ ಸ್ಟಿಕ್‌ನಿಂದ ಬಡಿದು ಕೊಂದೇಬಿಟ್ಟರು ದುರುಳರು

murder case

ರಾಮನಗರ: ಇಲ್ಲಿನ ಶೇಷಗಿರಿಹಳ್ಳಿ‌ ಟೋಲ್ ಪ್ಲಾಜಾ (Seshagirihalli Toll Plaza) ಬಳಿ ಟೋಲ್ ಪಡೆಯುವ ವಿಚಾರಕ್ಕೆ ಟೋಲ್ ಸಿಬ್ಬಂದಿ ಹಾಗೂ ಯುವಕರ ನಡುವೆ ಕಿರಿಕ್ ನಡೆದಿದೆ. ನಡು ರಸ್ತೆಯಲ್ಲೇ ಯುವಕರ ನಡುವೆ ಮಾರಾಮಾರಿ ನಡೆದಿದ್ದು, ಯುವಕನ ಕೊಲೆಯಲ್ಲಿ (Murder case) ಅಂತ್ಯವಾಗಿದೆ. ಪವನ್ ಕುಮಾರ್ (26) ಮೃತ ದುರ್ದೈವಿ.

ಮೃತ ಪವನ್‌ ಕುಮಾರ್‌

ಪವನ್‌ ಕುಮಾರ್‌ ಬೆಂಗಳೂರು ದಕ್ಷಿಣ ತಾಲೂಕಿನ ಕರಿಕಲ್ ತಾಂಡ್ಯ ನಿವಾಸಿ ಆಗಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಕಾರಲ್ಲಿ ಕಳೆದ ಭಾನುವಾರ (ಜೂ 4) ರಾತ್ರಿ ಹತ್ತು ಗಂಟೆ ಸುಮಾರಿಗೆ ಹೋಗುತ್ತಿದ್ದರು. ಈ ವೇಳೆ ಟೋಲ್‌ ಸಿಬ್ಬಂದಿ ಹಾಗೂ ಪವನ್‌ ಸ್ನೇಹಿತರ ನಡುವೆ ಗಲಾಟೆ ನಡೆದಿದೆ. ಟೋಲ್‌ ಮುಂಭಾಗವೇ ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ಈ ನಡುವೆ ಸ್ಥಳೀಯರು ಮಧ್ಯ ಪ್ರವೇಶಿಸಿ ಗಲಾಟೆಯನ್ನು ಬಿಡಿಸಿದ್ದಾರೆ.

ಆ ಬಳಿಕ ಪವನ್‌ನನ್ನು ಟೋಲ್‌ ಸಿಬ್ಬಂದಿ ಹಿಂಬಾಲಿಸಿಕೊಂಡು ಹೋಗಿ, ಹಾಕಿ ಸ್ಟಿಕ್‌ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಬಾರ್‌ ಮುಚ್ಚಲು ಸಮಯವಾಯ್ತು ಎಂದಿದ್ದಕ್ಕೆ ಕ್ಯಾಶಿಯರ್‌ನ ಕೊಲೆ, ಪೊಲೀಸರ ಎದುರೇ ಇರಿದರು!

ಶಿವಮೊಗ್ಗ: ಬಾರ್‌ ಮುಚ್ಚಲು ಸಮಯವಾಯ್ತು, ಹೊರಗೆ ಹೋಗಿ ಎಂದದ್ದಕ್ಕೆ ಬಾರ್ ಕ್ಯಾಶಿಯರ್ ತಲೆ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿ, ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ಆಯನೂರಿನ ನವರತ್ನ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದೆ. ರಾತ್ರಿ 11.30 ಆಗಿದೆ, ಬಾಗಿಲು ಮುಚ್ಚುವ ಸಮಯವಾಯ್ತು ಹೊರಡಿ ಎಂದು ಕ್ಯಾಶಿಯರ್‌, ಸೊರಬ ಮೂಲದ ಸಚಿನ್ (27) ಹೇಳಿದ್ದು, ಅಷ್ಟಕ್ಕೇ ಕೊಲೆಯಾಗಿದ್ದಾರೆ.

ಆಯನೂರು ಕೋಟೆ ತಾಂಡದ ನಿರಂಜನ, ಸತೀಶ್, ಅಶೋಕ್ ನಾಯ್ಕ್ ಎಂಬವರು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಇನ್ನೂ ಕುಡಿಯಬೇಕು ಎಂದು ನಿರಂಜನ್ ಹಾಗೂ ಸ್ನೇಹಿತರು ಕಿರಿಕ್ ತೆಗೆದಿದ್ದರು. ಈ ವೇಳೆ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಸಚಿನ್ ಮಾಹಿತಿ ನೀಡಿ ಕರೆಸಿದ್ದರು.

ಅಷ್ಟಕ್ಕೂ ಬಿಡದ ದುರುಳರು, ಪೊಲೀಸರನ್ನು ಕರೆಸುತ್ತೀಯಾ ಎಂದು ಹೇಳಿ ಬಿಯರ್ ಬಾಟಲಿಯಿಂದ ಸಚಿನ್‌ಗೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಮಧ್ಯೆ ಪ್ರವೇಶಿಸಿದರೂ ಬಿಡದೆ ಪೊಲೀಸರೆದುರೇ ಚಾಕುವಿನಿಂದ ಚುಚ್ಚಿದ್ದಾರೆ. ಎದೆ, ಹೊಟ್ಟೆ, ಪಕ್ಕೆ ಭಾಗಕ್ಕೆ ನಿರಂಜನ ಚುಚ್ಚಿದ್ದಾನೆ. ಬಳಿಕ ಆಯನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಸಚಿನ್‌ನನ್ನು ಸ್ನೇಹಿತರು ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆಗೆ ಬಂದು ಅಲ್ಲಿಯೂ ಕೂಡ ನಿರಂಜನ್ ಹಾಗೂ ಸ್ನೇಹಿತರು ಹಲ್ಲೆ ಮಾಡಿದ್ದರು. ಬಳಿಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸಚಿನ್‌ನನ್ನು ಸ್ಥಳಾಂತರಿಸಲಾಗಿದ್ದು, ಅಲ್ಲಿ ಸಚಿನ್ ಸಾವಿಗೀಡಾಗಿದ್ದಾರೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಗಂಡನಿಂದಲೇ ಹೆಂಡತಿಯ ಬರ್ಬರ ಕೊಲೆ

ಬೆಂಗಳೂರು: ಮಹಿಳೆಯೊಬ್ಬರನ್ನು ಆಕೆಯ ಗಂಡನೇ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಬಸವೇಶ್ವನಗರದ ಮಂಜುನಾಥನಗರದಲ್ಲಿ ದುರ್ಘಟನೆ ನಡೆದಿದ್ದು, ನಾಗರತ್ನ (32) ಎಂಬವರು ಕೊಲೆಯಾದ ಮಹಿಳೆ. ನಾಗರತ್ನ ಅವರ ಗಂಡ ಅಯ್ಯಪ್ಪ ಎಂಬಾತ ಚಾಕುವಿನಿಂದ ಮನಸೋ ಇಚ್ಛೆ ಚುಚ್ಚಿ ಕೊಲೆ ಮಾಡಿದ್ದಾನೆ.

ಅನೈತಿಕ ಸಂಬಂಧದ ಅನುಮಾನದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ಇದೆ. ಅಪ್ಪ ಅಮ್ಮ‌ ಇಲ್ಲದೆ ಅನಾಥಾಶ್ರಮದಲ್ಲಿದ್ದ ನಾಗರತ್ನ ಅವರನ್ನು 12 ವರ್ಷಗಳ ಹಿಂದೆ ಅಯ್ಯಪ್ಪ ಮದುವೆಯಾಗಿದ್ದ. ದಂಪತಿಗೆ 11 ವರ್ಷದ ಮಗ ಹಾಗೂ 7 ವರ್ಷದ ಮಗಳು ಇದ್ದಾರೆ. ತನ್ನ ಅಕ್ಕನ ಮನೆಯಲ್ಲಿ ಅಯ್ಯಪ್ಪ ಮಕ್ಕಳನ್ನು ಬಿಟ್ಟಿದ್ದ.

ಇತ್ತೀಚೆಗೆ ಹೆಂಡತಿಯ ನಡತೆ ಮೇಲೆ ಅಯ್ಯಪ್ಪ ಅನುಮಾನ ಪಡುತ್ತಾ ಇದ್ದ. ಮೂರು ದಿನಗಳಿಂದ ದಂಪತಿ ಮಧ್ಯೆ ಗಲಾಟೆ ನಡೆಯುತ್ತಿತ್ತು. ಗಲಾಟೆ ಉಲ್ಬಣಗೊಂಡು ಕೊಲೆ ಮಾಡಿದ್ದಾನೆ. ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಬಸವೇಶ್ವರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೊಲೆ ಮಾಡಿ ಪರಾರಿಯಾಗಿದ್ದ ಅಯ್ಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Elephant Attack: ರಾಷ್ಟ್ರೀಯ ಹೆದ್ದಾರಿ ಅಡ್ಡಗಟ್ಟಿದ ಆನೆ, ಮರಿಯಾನೆ; ವಾಹನ ಸವಾರರಿಗೆ ಗಂಟೆಗಟ್ಟಲೇ ತಲೆಬೇನೆ!

ಮೃತ ಬಾಲಕಿ ವಿದ್ಯಾ

ಕರೆಂಟ್‌ ಶಾಕ್‌ನಿಂದ ಬಾಲಕಿ ಮೃತ್ಯು

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ಕರೆಂಟ್‌ ಶಾಕ್‌ನಿಂದ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಕುಮಚಹಳ್ಳಿ ಗ್ರಾಮದ ವಿದ್ಯಾ (12) ಮೃತ ದುರ್ದೈವಿ. ಅಜ್ಜಿಯ ಮನೆ ಮಡಹಳ್ಳಿಗೆ ಹೋಗಿದ್ದ ವಿದ್ಯಾ, ಮನೆಯಲ್ಲಿದ್ದ ನೀರಿನ ಪಂಪ್ ಸ್ವಿಚ್ ಆಫ್ ಮಾಡುವಾಗ ಈ ಅವಘಡ ಸಂಭವಿಸಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version