Site icon Vistara News

Tiger Nail: ನನ್ನ ಸಹೋದರನ ಬಳಿ ಇರೋದು ಪ್ಲಾಸ್ಟಿಕ್ ಹುಲಿ ಉಗುರು: ಚಿದಾನಂದ ಸವದಿ

Sumit Savadi and Chidanand Savadi

ಚಿಕ್ಕೋಡಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಬಳಿಕ ಕಾಂಗ್ರೆಸ್‌ ಶಾಸಕ, ಮಾಜಿ ಡಿಸಿಎಂ ಲಕ್ಷ್ಮಣ್‌ ಸವದಿ ಪುತ್ರನಿಗೂ ಹುಲಿ ಉಗುರು (Tiger Nail) ಸಂಕಷ್ಟ ಎದುರಾಗಿದೆ. ಸುಮಿತ್ ಸವದಿ ‘ಹುಲಿ ಉಗುರು’ ಪೆಂಡೆಂಟ್ ಧರಿಸಿದ ಹಿನ್ನೆಲೆಯಲ್ಲಿ ಲಕ್ಷ್ಮಣ್ ಸವದಿ ಹಿರಿಯ ಪುತ್ರ ಚಿದಾನಂದ ಸವದಿ ಸ್ಪಷ್ಟನೆ ನೀಡಿದ್ದು, ನನ್ನ ಸಹೋದರನ ಬಳಿ ಇರುವುದು ಅಸಲಿ ಅಲ್ಲ, ಅದು ಪ್ಲಾಸ್ಟಿಕ್‌ನಿಂದ ಮಾಡಿರುವ ಹುಲಿ ಉಗುರಿನ ಪೆಂಡೆಂಟ್‌ ಎಂದು ತಿಳಿಸಿದ್ದಾರೆ.

ಸುಮಿತ್ ಸವದಿ ಹುಲಿ ಉಗುರು ಪೆಂಡೆಂಟ್ ಧರಿಸಿದ (Tiger Claw Pendant:) ಫೋಟೊ ವೈರಲ್ ಆದ ಹಿನ್ನೆಲೆಯಲ್ಲಿ ಅಥಣಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ನನ್ನ ಸಹೋದರ ಬಳಿ ಇರುವುದು ಪ್ಲಾಸ್ಟಿಕ್ ಉಗುರು. ಬಂಗಾರದ ಸರದಲ್ಲಿ ‘ಹುಲಿ ಉಗುರು’ ಮಾದರಿಯ ಪ್ಲಾಸ್ಟಿಕ್‌ ಪೆಂಡೆಂಟ್ ಇದೆ. ಮದುವೆ ಸಮಾರಂಭದಲ್ಲಿ ಸುಮಿತ್ ಗೆಳೆಯರು ಉಡುಗೊರೆ ಕೊಟ್ಟಿದ್ದಾರೆ. ಅದನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸುತ್ತೇವೆ ಎಂದು ಹೇಳಿದ್ದಾರೆ.

ಕಾನೂನಿನಿಗಿಂತ ಯಾರೂ ದೊಡ್ಡವರಲ್ಲ, ತನಿಖೆಗೆ ಸಹಕರಿಸುತ್ತೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಹುಲಿ ಉಗುರು ಎಂದು ಧರಿಸುವುದು ಒಂದು ರೀತಿಯ ಶೋಕಿಯಾಗಿದೆ. ಇದನ್ನು ನನ್ನ ಸಹೋದರನ ಸ್ನೇಹಿತರು ಮದುವೆಯಲ್ಲಿ ಗಿಫ್ಟ್ ನೀಡಿದ್ದರು. ಆದರೆ ಇದು ಅಸಲಿ ಉಗುರು ಅಲ್ಲ, ಪ್ಲಾಸ್ಟಿಕ್‌ನಿಂದ ಮಾಡಿರುವ ಹುಲಿ ಉಗುರಿನ ಪೆಂಡೆಂಟ್‌ ಆಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸುತ್ತಿದ್ದೇವೆ, ಯಾವುದೇ ರೀತಿಯ ತನಿಖೆಗೆ ನಾವು ಸಹಕರಿಸಲಿದ್ದೇವೆ ಎಂದು ಚಿದಾನಂದ ಸವದಿ ತಿಳಿಸಿದ್ದಾರೆ.

ಇದನ್ನೂ ಓದಿ | Tiger Nail : ಜನರ ದಾರಿ ತಪ್ಪಿಸಲು ಹುಲಿ ಉಗುರಿನ ನಾಟಕ; ಬೋಗಸ್‌ ಭಾಗ್ಯ ಮರೆಮಾಚಲು ಪ್ಲ್ಯಾನ್‌ ಎಂದ ಸಿ.ಟಿ. ರವಿ

ಲಕ್ಷ್ಮೀ ಹೆಬ್ಬಾಳ್ಕರ್‌ ಮನೆಗೂ ಅಧಿಕಾರಿಗಳ ಲಗ್ಗೆ; ಮಗ ಮೃಣಾಲ್‌ ಪೆಂಡೆಂಟ್‌ ವಶಕ್ಕೆ

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ (Mrunal Hebbalkar) ಅವರಿಗೂ ಹುಲಿ ಉಗುರಿನ (Tiger nail) ಸಂಕಷ್ಟ ಎದುರಾಗಿದೆ. ಅವರ ಕೊರಳಲ್ಲೂ ಹುಲಿಯುಗುರು ಇರುವ ಚಿತ್ರಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆದ ಹಿನ್ನೆಲೆಯಲ್ಲಿ ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳು (Forest officers) ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ನಿವಾಸಕ್ಕೆ ಲಗ್ಗೆ ಇಟ್ಟು ವಿಚಾರಣೆ ನಡೆಸಿದರು.

ಬೆಳಗಾವಿಯ ಡಿಸಿಎಫ್ ಶಂಕರ್ ಕಲ್ಲೋಳಿಕರ್ ನೇತೃತ್ವದಲ್ಲಿ ಸುಮಾರು 15 ಮಂದಿ ಅಧಿಕಾರಿಗಳ ತಂಡ ಬೆಳಗಾವಿಯ ಕುವೆಂಪು ನಗರಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮನೆಗೆ ಭೇಟಿ ನೀಡಿದೆ. ಅಧಿಕಾರಿಗಳು ಭೇಟಿ ನೀಡುವ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಮನೆಗೆ ಬಂದ ಅತಿಥಿಗಳನ್ನು ಬೀಳ್ಕೊಡಲು ಸಿದ್ಧರಾಗುತ್ತಿದ್ದರು.

ಅದಕ್ಕಿಂತ ಮೊದಲು ಮಾಧ್ಯಮಗಳ ಜತೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು, ನನ್ನ ಮಗನಿಗೆ ಮದುವೆ ಸಮಯದಲ್ಲಿ ಯಾರೋ ಗಿಫ್ಟ್‌ ಕೊಟ್ಟಿದ್ದರು. ಮೃಣಾಲ್ ಹಾಕಿದ ಪೆಂಡೆಂಟ್ ಪ್ಲಾಸ್ಟಿಕ್ ನದ್ದು, ಅದು ಒರಿಜಿನಲ್ ಪೆಂಡೆಂಟ್ ಅಲ್ಲ ಎಂದು ಹೇಳಿದ್ದರು.

ʻʻನಾನೂ ಸಸ್ಯಾಹಾರಿ. ಹುಲಿ, ಜಿಂಕೆ, ಕೋಳಿ, ಇನ್ಯಾವುದೇ ಬಲಿಯನ್ನು ನಾನು ಇಷ್ಟ ಪಡಲ್ಲ, ಸದ್ಯ ನಮ್ಮ ಸಂಬಂಧಿಕರು ಬಂದಿದ್ದಾರೆ. ಅವರನ್ನು ಬೀಳ್ಕೊಟ್ಟು ಬರ್ತೀನಿ. ನಂತರ ಅಧಿಕಾರಿಗಳು ಕೇಳುವ ಎಲ್ಲದಕ್ಕೂ ಉತ್ತರ ಕೊಡ್ತೀನಿʼʼ ಎಂದು ಹೆಬ್ಬಾಳ್ಕರ್‌ ಹೇಳಿದ್ದರು.

ಅಧಿಕಾರಿಗಳಿಂದ ವಿಚಾರಣೆ, ಪೆಂಡೆಂಟ್‌ ವಶಕ್ಕೆ

ಮನೆಗೆ ಆಗಮಿಸಿದ ಅಧಿಕಾರಿಗಳು ಲಕ್ಷ್ಮೀ ಹೆಬ್ಬಾಳ್ಕರ್‌ ಸಮ್ಮುಖದಲ್ಲೇ ಮೃಣಾಲ್‌ ಅವರನ್ನು ವಿಚಾರಣೆಗೆ ಒಳಪಡಿಸಿದರು. ಹುಲಿ ಉಗುರಿನ ಮೂಲದ ಬಗ್ಗೆ ಪ್ರಶ್ನೆ ಮಾಡಿದರು. ಪೆಂಡೆಂಟ್ ಹೇಗೆ ಬಂತು? ಯಾರು ನೀಡಿದರು? ಯಾವಾಗ ನೀಡಿದರು ಎಂದು ಪ್ರಶ್ನೆ ಮಾಡಿದರು.

ಸುಮಾರು ಒಂದು ಗಂಟೆ ವಿಚಾರಣೆ ನಡೆಸುವ ವೇಳೆ ಪಶು ವೈದ್ಯಾಧಿಕಾರಿಗಳು ಉಗುರಿನ ಪ್ರಾಥಮಿಕ ಪರೀಕ್ಷೆ ನಡೆಸಿದರು. ಪೆಂಡೆಂಟ್ ತೂಕ ಕೂಡ ಪರಿಶೀಲನೆ ನಡೆಸಿದರು. ಬಳಿಕ ಅದನ್ನು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸುವುದಾಗಿ ಹೇಳಿದರು.

ಇದನ್ನೂ ಓದಿ | Tiger Nail : ನವಿಲು ಗರಿ ಇಟ್ಟುಕೊಂಡಿರುವ ದರ್ಗಾ, ಮಸೀದಿ ಮೇಲೂ ದಾಳಿ ಮಾಡಿ ಮೌಲ್ವಿಗಳ ಬಂಧಿಸಿ ಎಂದ ಬಿಜೆಪಿ

ಮೃಣಾಲ್‌ ಹೆಬ್ಬಾಳ್ಕರ್‌ ಅವರು ಹುಲಿಯುಗುರಿನದ್ದೆಂದು ಹೇಳಲಾದ ಪೆಂಡೆಂಟ್‌ನ್ನು ಒಪ್ಪಿಸಿದರು

ವಿಚಾರಣೆಯ ಬಳಿಕ ಹೇಳಿಕೆ ನೀಡಿದ ಡಿಸಿಎಫ್ ಶಂಕರ್ ಕಲ್ಲೋಳಕರ್ ಅವರು, ನಾವು ಇಲ್ಲಿ ವಶಪಡಿಸಿಕೊಂಡ ಉಗುರನ್ನು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳುಹಿಸುತ್ತೇವೆ. ಇದು ಅಸಲಿಯಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಹೇಳಿದ್ದಾರೆ. ಪರೀಕ್ಷೆಯ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ. ಪೆಂಡೆಂಟ್ ಸೈಜ್ ಎಷ್ಟಿದೆ ಅನ್ನೋದನ್ನ ನೋಡಿದ್ದೇವೆ. ಮೃಣಾಲ್‌ ಅವರ ಕಡೆಯಿಂದ ಹೇಳಿಕೆಯನ್ನು ಪಡೆದಿದ್ದೇವೆ. ಕಾನೂನಿನಡಿಯಲ್ಲಿ ಎಲ್ಲವನ್ನೂ ಮಾಡುತ್ತೇವೆ ಎಂದು ಹೇಳಿದರು.

Exit mobile version