Site icon Vistara News

Drowned In water : ಈಜಲು 20 ಅಡಿ ಎತ್ತರದಿಂದ ನೀರಿನ ಬುಗ್ಗೆಗೆ ಜಿಗಿದವನು ಮತ್ತೆ ಏಳಲೇ ಇಲ್ಲ!

Drowned in water mysuru

ಮೈಸೂರು: ರಣ ಬೇಸಿಗೆ ಹಿನ್ನೆಲೆಯಲ್ಲಿ ಸೆಕೆ ತಾಳಲಾರದೆ ಯುವಕನೊಬ್ಬ ಕೆರೆಯಲ್ಲಿ ಈಜಲು (Drowned In water) ಹೋಗಿ ನೀರುಪಾಲಾಗಿದ್ದಾನೆ. ಮೈಸೂರಿನ ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದ ಕೆರೆಯಲ್ಲಿ ಘಟನೆ ನಡೆದಿದೆ. ಚಾಮರಾಜನಗರದ ರಾಮಸಮುದ್ರ ಗ್ರಾಮದ ದೊಡ್ಡ ಬೀದಿ ನಿವಾಸಿ ಗುಣಶೇಖರ್(22) ಮೃತ ದುರ್ದೈವಿ.

ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋಗಿದ್ದ ಗುಣಶೇಖರ್‌ ಕಪಿಲಾ ನದಿಯಿಂದ ಕೆರೆಗೆ ನೀರು ಹರಿಯುತ್ತಿತ್ತು. ಈ ವೇಳೆ ನೀರಿನ ಬುಗ್ಗೆಯ ಮೇಲೆ ಜಿಗಿದಿದ್ದಾನೆ. ಸುಮಾರು 20 ಅಡಿ ಎತ್ತರವಿದ್ದ ನೀರು ಚಿಮ್ಮುವ ಬುಗ್ಗೆಗೆ ಮೇಲಿನಿಂದ ಕೆಳಗೆ ಜಂಪ್ ಮಾಡಿದ್ದಾನೆ. ಮೇಲಿಂದ ಜಂಪ್ ಮಾಡಿದ ಪರಿಣಾಮ ಕೆಳಗಡೆ ಬಿದ್ದವನು ಮತ್ತೆ ಮೇಲೆ ಏಳಲೇ ಇಲ್ಲ.

ಸ್ಥಳಕ್ಕೆ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣಕಾಂತ ಕೋಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮೇಲೆಯೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಲಿದ್ದಾರೆ. ಕವಲಂದೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಹೆತ್ತವರ ಕಣ್ಣೇದುರಿಗೆ ನೇತ್ರಾವತಿ ನದಿಯಲ್ಲಿ ಕೊಚ್ಚಿ ಹೋದರು ಪುತ್ರಿಯರು

ಪುತ್ತೂರು: ಪೋಷಕರ ಎದುರೇ ಮಕ್ಕಳಿಬ್ಬರು ನೀರುಪಾಲಾಗಿದ್ದಾರೆ. ದಕ್ಷಿಣ ಕನ್ನಡದ ಬಂಟ್ವಾಳದ ನಾವೂರು ಎಂಬಲ್ಲಿ ಈ ದುರಂತ (Drowned In water) ನಡೆದಿದೆ. ಉಳ್ಳಾಲ ನಿವಾಸಿಗಳಾದ ಅನ್ಸಾರ್ ಎಂಬುವವರ ಪುತ್ರಿ ಆಶ್ರಾ (11), ಇಲಿಯಾಸ್ ಎಂಬುವವರ ಪುತ್ರಿ ನಾಶಿಯಾ (14) ನೀರುಪಾಲಾಗಿದ್ದಾರೆ.

ಎರಡು ಕುಟುಂಬಗಳು ತಮ್ಮ ಮಕ್ಕಳೊಂದಿಗೆ ನೇತ್ರಾವತಿ ನದಿ ತೀರಕ್ಕೆ ತೆರಳಿದ್ದರು. ಈ ವೇಳೆ ನೀರಿನಲ್ಲಿ ಆಟವಾಡುವಾಗ ಏಕಾಏಕಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ. ಪೋಷಕರ ಮುಂದೆಯೇ ಬಾಲಕಿಯರು ನೀರುಪಾಲಾಗಿದ್ದಾರೆ. ಈಜು ಬಾರದ ಹಿನ್ನೆಲೆಯಲ್ಲಿ ಮಕ್ಕಳನ್ನು ರಕ್ಷಿಸಲಾಗದೆ ಪೋಷಕರು ಅಸಹಾಯಕರಾಗಿದ್ದರು.

ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ಇದನ್ನೂ ಓದಿ: Channapatna News: ಮದುವೆಯಲ್ಲಿ ಐಸ್ ಕ್ರೀಂ ತಿಂದು 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಮುಂಡರಗಿ ಬಳಿ ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರ ಸಾವು

ಗದಗ: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆ ಮುಂಡರಗಿ ತಾಲೂಕಿನ ಹೈತಾಪುರ ಗ್ರಾಮದಲ್ಲಿ ನಡೆದಿದೆ. ತಂಗಿಯ ಮಗನೊಂದಿಗೆ ಮಹಿಳೆಯೊಬ್ಬರು ನೀರು ತರಲು‌ ಕೃಷಿ ಹೊಂಡಕ್ಕೆ ಹೋದಾಗ ಘಟನೆ ನಡೆದಿದೆ.

ಗೀತಾ ಹೆಸರೂರು (34), ಮನೋಜ ಕವಲೂರು (5) ಮೃತರು. ಮೊದಲಿಗೆ ಮನೋಜ್ ಹೊಂಡದಲ್ಲಿ ಕಾಲು‌ ಜಾರಿ ಬಿದ್ದಿದ್ದಾನೆ. ಬಾಲಕನ ರಕ್ಷಣೆಗೆ ಹೋಗಿದ್ದ ಗೀತಾ ಕೂಡ ನೀರಿನಲ್ಲಿ ಮುಳುಗಿದ್ದಾರೆ. ಶಾಲೆ ರಜೆ ಹಿನ್ನೆಲೆ ದೊಡ್ಡಮ್ಮನ ಮನೆಗೆ ಮನೋಜ್ ಬಂದಿದ್ದ. ಬಾಲಕನ ಜತೆಗೆ ಕೃಷಿ ಹೊಂಡಕ್ಕೆ ಗೀತಾ ಹೋಗಿದ್ದಾಗ ದುರ್ಘಟನೆ ನಡೆದಿದೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version