Site icon Vistara News

Kannada Film Festival: ಮೇ 2, 3ರಂದು ಶ್ರೀಲಂಕಾದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಕನ್ನಡ ಚಲನಚಿತ್ರೋತ್ಸವ

Nagathihalli Chandrasekhar Film Festival to be held in Sri Lanka on May 2 and 3

ಕೊಲಂಬೊ: ಶ್ರೀಲಂಕಾ ಫಿಲ್ಮ್‌ ಕಾರ್ಪೋರೇಷನ್ ಮತ್ತು ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರ ಕಚೇರಿ ಸಹಯೋಗದಲ್ಲಿ ಶ್ರೀಲಂಕಾ ಏಷ್ಯನ್ ಮೀಡಿಯಾ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಮೇ 2 ಮತ್ತು 3ರಂದು ಕನ್ನಡ ಚಲನಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಲಂಕಾದಲ್ಲಿ ಏರ್ಪಡಿಸಿರುವ ಮೊಟ್ಟಮೊದಲ ಕನ್ನಡ ಚಲನಚಿತ್ರೋತ್ಸವ (Kannada Film Festival) ಇದಾಗಿದ್ದು, ಕನ್ನಡದ ಖ್ಯಾತ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ನಾಲ್ಕು ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.

ಶ್ರೀಲಂಕಾದ ಕೊಲಂಬೊದ ನ್ಯಾಷನಲ್ ಫಿಲ್ಮ್‌ ಕಾರ್ಪೋರೇಷನ್ ಥಿಯೇಟರ್‌ನಲ್ಲಿ ಮೇ 2ರ ಬೆಳಗ್ಗೆ 10 ಗಂಟೆಗೆ ಶ್ರೀಲಂಕಾದ ವಾರ್ತಾ ಸಚಿವ ಡಾ. ಬಂಡೂಲಾ ಗುಣವರ್ಧನೆ ಅವರ ಅಧ್ಯಕ್ಷತೆಯಲ್ಲಿ ಚಿತ್ರೋತ್ಸವ ಉದ್ಘಾಟನೆಗೊಳ್ಳಲಿದೆ. ಭಾರತೀಯ ರಾಯಭಾರಿ ಗೋಪಾಲ್ ಬಾಗ್ಲೆ, ಶ್ರೀಲಂಕಾದ ಭಾರತೀಯ ಸಿನಿಮಾಟೋಗ್ರಾಫರ್ಸ್ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ವಿದುರ ವಿಕ್ರಮನಾಯ್ಕೆ ಮತ್ತು ಉನ್ನತ ಶಿಕ್ಷಣ ಸಚಿವ ಸುರೇನು ರಾಘವನ್ ಉಪಸ್ಥಿತರಿರಲಿದ್ದಾರೆ.

ಚಲನಚಿತ್ರ ನಿರ್ಮಾಪಕ ಶಂಕರೇಗೌಡ, ಸಿನಿಮಾಟೋಗ್ರಾಫರ್ ಎಸ್.ಕೆ. ರಾವ್, ಪ್ರತಿಭಾನ್ವಿತ ನಟಿ ಕಾವ್ಯಾ ಶೆಟ್ಟಿ, ಪ್ರತಿಭಾನ್ವಿತ ನಟ ನಿರೂಪ್ ಭಂಡಾರಿ, ಹಿರಿಯ ಪತ್ರಕರ್ತರಾದ ಜಿ.ಎನ್. ಮೋಹನ್ ಮತ್ತು ಎಚ್.ಬಿ ಮದನ್ ಗೌಡ ಅವರು ನಿಯೋಗದಲ್ಲಿದ್ದಾರೆ. ಹಾಗೆಯೇ ಚಿತ್ರೋತ್ಸವದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಚಿತ್ರ ಉದ್ಯಮದ ಹಾಗೂ ಮಾಧ್ಯಮ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ | Rajkumar Birthday: ಸೋತಾಗ ಧೈರ್ಯ ತುಂಬುವ ಅಣ್ಣಾವ್ರ 7 ಹಾಡುಗಳು!

ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಅಮೆರಿಕ ಅಮೆರಿಕ’, ‘ಮಾತಾಡ್ ಮಾತಾಡ್ ಮಲ್ಲಿಗೆ’, ‘ಇಷ್ಟಕಾಮ್ಯ’ ಮತ್ತು ‘ಅಮೃತಧಾರೆ’ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಚಿತ್ರಗಳಾಗಿವೆ. ಈ ಎಲ್ಲ ಚಿತ್ರಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವುದಲ್ಲದೆ, ತಮ್ಮದೇ ಆದ ವಿಶಿಷ್ಟ ಶೈಲಿ ಕಥೆ ಮತ್ತು ನಿರೂಪಣೆ ಹಾಗೂ ಅತ್ಯುತ್ತಮ ಸಿನಿಮಾಟೋಗ್ರಫಿಗಾಗಿ ಸಾಕಷ್ಟು ಮೆಚ್ಚುಗೆಯನ್ನೂ ಗಳಿಸಿಕೊಂಡಿವೆ. ಈ ಚಿತ್ರಗಳನ್ನು ವೀಕ್ಷಿಸುವ ಮೂಲಕ ಭಾರತೀಯ ಸಿನಿಮಾರಂಗದ ಶ್ರೀಮಂತಿಕೆ ಮತ್ತು ವೈವಿಧ್ಯತೆಯನ್ನು ಅರ್ಥ ಮಾಡಿಕೊಳ್ಳಲು ಶ್ರೀಲಂಕಾದ ಚಲನಚಿತ್ರರಸಿಕರಿಗೆ ಅನುಕೂಲವಾಗಲಿದೆ.

ಶ್ರೀಲಂಕಾದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಚಲನಚಿತ್ರ ವಿಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚಿತ್ರೋತ್ಸವಕ್ಕೆ ಪೂರಕವಾಗಿ ಕಾರ್ಯಾಗಾರವನ್ನೂ ಏರ್ಪಡಿಸಲಾಗಿದೆ. ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. ಚಿತ್ರ ನಿರ್ಮಾಣ, ಕಥೆ ಮತ್ತು ನಿರೂಪಣೆ, ನಿರ್ದೇಶನ, ಸಿನಿಮಾಟೋಗ್ರಫಿ ಮತ್ತು ಸಂಕಲನದ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚಿಸಲಿದ್ದಾರೆ. ಬಳಿಕ ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಸಂವಾದವನ್ನೂ ಹಮ್ಮಿಕೊಳ್ಳಲಾಗಿದೆ.

ಇದರ ಜತೆಯಲ್ಲಿಯೇ ಪರ್ಯಾಯವಾಗಿ ಕನ್ನಡ ಚಲನಚಿತ್ರ ನಿಯೋಗದ ಸದಸ್ಯರಿಗಾಗಿ ಶ್ರೀಲಂಕಾದಲ್ಲಿನ ಸಿನಿಮಾ ಚಿತ್ರೀಕರಣ ತಾಣಗಳನ್ನು ಶ್ರೀಲಂಕಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿಯು ಪರಿಚಯಿಸಲಿದೆ. ಶ್ರೀಲಂಕಾದ ಸಿನಿಮಾ ಉದ್ಯಮದ ಪ್ರಚಾರ ಮತ್ತು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪೂರಕವಾಗಿ ಕಾರ್ಯಾಗಾರವು ಕಾರ್ಯನಿರ್ವಹಿಸಲಿದೆ. ಚಿತ್ರರಂಗದಲ್ಲಿ ಈಗಾಗಲೇ ನೆಲೆ ಕಂಡುಕೊಂಡಿರುವವರ ಮೂಲಕ ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಂಡು, ಶ್ರೀಲಂಕಾದ ಸಿನಿರಂಗದ ಬೆಳವಣಿಗೆಗೆ ಸಹಕರಿಸುವ ನಿಟ್ಟಿನಲ್ಲಿ ಯುವ ಚಿತ್ರ ನಿರ್ಮಾಪಕರು ಮತ್ತು ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ ಸಿಕ್ಕಂತಾಗಲಿದೆ.

ಇದನ್ನೂ ಓದಿ | Kannada New Movie: ಸೆಟ್ಟೇರಿದ ‘ಮಾರ್ಗರೇಟ್​ ಲವರ್​ ಆಫ್​​ ರಾಮಾಚಾರಿ’: ಡಾಲಿ ಧನಂಜಯ್ ಶುಭ ಹಾರೈಕೆ

ಭಾರತೀಯ ಸಿನಿಮಾ ರಂಗದ ಅತ್ಯುತ್ತಮ ಒಳನೋಟ ಒದಗಿಸುವ ಜತೆಗೆ, ಶ್ರೀಲಂಕಾದೊಂದಿಗೆ ಕನ್ನಡ ಸಿನಿಮಾ ಉದ್ಯಮದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ವಿಶ್ವಾಸದೊಂದಿಗೆ ಈ ಕನ್ನಡ ಚಿತ್ರೋತ್ಸವವನ್ನು ಸಂಘಟಿಸಲಾಗಿದೆ. ಶ್ರೀಲಂಕಾದಲ್ಲಿ ಜರುಗುತ್ತಿರುವ ಈ ಉತ್ಸವದ ನಿರ್ವಹಣೆಯನ್ನು ‘ಅವಧಿ ಫೌಂಡೇಷನ್’ ನಿರ್ವಹಿಸುತ್ತಿದೆ ಎಂದು ಏಷ್ಯನ್ ಮೀಡಿಯಾ ಆ್ಯಂಡ್ ಕಲ್ಚರಲ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಪಾತುಮ್ ವಿಕ್ರಮರತ್ನೆ ಹಾಗೂ ಅವಧಿ ಫೌಂಡೇಷನ್ ಸಂಸ್ಥಾಪಕ ಜಿ.ಎನ್. ಮೋಹನ್ ತಿಳಿಸಿದ್ದಾರೆ.

Exit mobile version