Site icon Vistara News

Neha Murder Case: ನೇಹಾ ನಿವಾಸಕ್ಕೆ ಜೆ.ಪಿ.ನಡ್ಡಾ, ರಾಧಾ ಮೋಹನ್ ದಾಸ್ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ

JP Nadda

ಹುಬ್ಬಳ್ಳಿ: ನಗರದ ನೇಹಾ ಹಿರೇಮಠ್ ನಿವಾಸಕ್ಕೆ (Neha Murder Case) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರರ್ವಾಲ್ ಅವರು ಭಾನುವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನೇಹಾ ತಂದೆ ನಿರಂಜನ ಹಿರೇಮಠ, ತಾಯಿ ಗೀತಾಗೆ ನಡ್ಡಾ ಹಾಗೂ ರಾಧಾಮೋಹನ್‌ದಾಸ್ ಅವರು ಧೈರ್ಯ ಹೇಳಿದರು.

ರಾಜ್ಯ ಸರ್ಕಾರ ಕಠಿಣ ಕ್ರಮ ಜಾರಿಗೊಳಿಸಲಿ: ಜೆಪಿ ನಡ್ಡಾ ಆಗ್ರಹ

ನೇಹಾ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಜೆ.ಪಿ.ನಡ್ಡಾ ಅವರು, ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆಪಿ ನಡ್ಡಾ ಆಗ್ರಹಿಸಿದರು.

ನೇಹಾಳಿಗಾದ ದುಸ್ಥಿತಿ, ಅನ್ಯಾಯ ಇನ್ಯಾವ ವಿದ್ಯಾರ್ಥಿನಿ, ಯುವತಿಯರಿಗೂ ಆಗಬಾರದು. ಆ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಶಾಂತಿ ಕಾಪಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಇಂದು ಇಂಥ ಮತಾಂಧ ಯುವಕರಿಂದ ಹಿಂದೂ ಹೆಣ್ಣುಮಕ್ಕಳನ್ನು ರಕ್ಷಿಸಿಕೊಳ್ಳುವಂಥ ಪರಿಸ್ಥಿತಿ ತಲೆದೋರಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ | Love Jihad: ಲವ್ ಜಿಹಾದ್ ಪರ ನಿಂತ ರಾಜ್ಯ ಸರ್ಕಾರ; ನೇಹಾಳ ಮತಾಂತರ ಯತ್ನ ನಡೆಸಿದ್ದ ಫಯಾಜ್‌: ಪ್ರಲ್ಹಾದ್ ಜೋಶಿ

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಶಾಸಕರಾದ ಅರವಿಂದ ಬೆಲ್ಲದ್, ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಅಶೋಕ ಕಾಟವೇ, ಸಿಮಾ ಮಸೂತಿ, ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ಲಿಂಗರಾಜ ಪಾಟೀಲ್ ಮತ್ತಿತರರು ಇದ್ದರು.

ನೇಹಾ ಹತ್ಯೆ ಖಂಡಿಸಿ ಮುಸ್ಲಿಂರಿಂದ ಸೋಮವಾರ ಧಾರವಾಡ ಬಂದ್

ಧಾರವಾಡ/ಹುಬ್ಬಳ್ಳಿ: ನೇಹಾ ಹತ್ಯೆ ಪ್ರಕರಣವನ್ನು (Neha Murder Case) ಧಾರವಾಡ ಅಂಜುಮನ್ ಇಸ್ಲಾಂ ಶಿಕ್ಷಣ ಸಂಸ್ಥೆಯ ಮುಸ್ಲಿಂ ಮುಖಂಡರು ಖಂಡಿಸಿದ್ದಾರೆ. ಈ ಸಂಬಂಧ ಸೋಮವಾರ (ಏಪ್ರಿಲ್‌ 22) ಧಾರವಾಡ ಬಂದ್‌ಗೆ (Dharawada Bandh) ಕರೆ ನೀಡಿದೆ. ಅಲ್ಲದೆ, ನೇಹಾ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ನೇಹಾ ತಂದೆ, ಕಾರ್ಪೋರೇಟರ್‌ ನಿರಂಜನ ಹಿರೇಮಠ ಅವರು, ಇಂಥ ಘಟನೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ.

ಹುಬ್ಬಳ್ಳಿಯ ನೇಹಾ ನಿವಾಸದ ಎದುರು ಅಂಜುಮನ್ ಸಂಸ್ಥೆಯ ಮುಖಂಡರು ಸಭೆ ನಡೆಸಿದ್ದಾರೆ. ನೇಹಾ ಕುಟುಂಬಕ್ಕೆ ಭಾರಿ ಆಘಾತವಾಗಿದೆ. ಅವರ ದುಃಖದಲ್ಲಿ ನಾವು ಸಹ ಭಾಗಿಯಾಗಿದ್ದೇವೆ ಎಂದು ಹೇಳಿದರು. ಆಗ ಪ್ರತಿಕ್ರಿಯೆ ನೀಡಿದ ನಿರಂಜನ ಹಿರೇಮಠ, ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು. ನನ್ನ‌ ಮಗಳಿಗೆ ಆದ ಅನ್ಯಾಯ ಯಾರಿಗೂ ಆಗಬಾರದು ಎಂದು ಬೇಸರ ವ್ಯಕ್ತಪಡಿಸಿದರು.
ಸೋಮವಾರ ಅರ್ಧ ದಿನ ಬಂದ್

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ನೇಹಾ ಹತ್ಯೆ ಪ್ರಕರಣವನ್ನು ಸಮಸ್ತ ಮುಸ್ಲಿಂ ಸಮುದಾಯದವರು ಖಂಡನೆ ಮಾಡುತ್ತೇವೆ. ಪೊಲೀಸರಿಗೂ ಆತನ ಮೇಲೆ ಶಿಕ್ಷೆಗೆ ಮನವಿ ಕೊಟ್ಟಿದ್ದೇವೆ. ಅಪರಾಧ ದಿನ ನಿತ್ಯ ಆಗುತ್ತದೆ. ಆದರೆ, ಈ ಪ್ರಕರಣದಲ್ಲಿ ವಿದ್ಯಾರ್ಥಿನಿ ಮೇಲೆ ಚಾಕು ಹಾಕಿ ಕೊಂದಿರುವುದು ನಮಗೆ ಬಹಳ ನೋವು ತಂದಿದೆ. ನಮ್ಮಲ್ಲಿ ಸಹ ವಿದ್ಯೆ ಕೊಡಲು ಶಿಕ್ಷಣ ಸಂಸ್ಥೆಗಳಿವೆ. ಮುಂದಿನ ದಿನಗಳಲ್ಲಿ ಯಾವ ಸಂಸ್ಥೆಯಲ್ಲಿಯೂ ಈ ಘಟನೆ ನಡೆಯಬಾರದು. ಯಾವುದೇ ಸಮಾಜದವರು ಇಂಥ ಕೃತ್ಯ ನಡೆಸಿದರೂ ಅಂಥವರಿಗೆ ತಕ್ಕ ಶಿಕ್ಷೆ ಆಗಬೇಕು. ಕಾನೂನು ಪ್ರಕ್ರಿಯೆಗಳು ತ್ವರಿತಗತಿಯಲ್ಲಿ ಸಾಗಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: Lok Sabha Election 2024: ಮೋದಿಯ ಖಾಲಿ ಚೆಂಬು ದೇವೇಗೌಡರಿಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದ್ದು ಹೇಗೆ? ಸಿಎಂ ಸಿದ್ದರಾಮಯ್ಯ

ಪ್ರತಿ ಅಂಗಡಿಯಲ್ಲಿ ಜಸ್ಟಿಸ್‌ ಫಾರ್ ನೇಹಾ ಸ್ಟಿಕ್ಕರ್‌

ಸೋಮವಾರ ಬೆಳಗ್ಗೆ 10 ಗಂಟೆಗೆ ಡಿಸಿ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಲಾಗುವುದು. ಈ ವೇಳೆ ಮೌನ ಮೆರವಣಿಗೆ ಇರಲಿದೆ. ಬಳಿಕ ಜಿಲ್ಲಾಧಿಕಾರಿಗೆ ಮನವಿ ಕೊಡುತ್ತೇವೆ. ಆರೋಪಿಗೆ ಸೂಕ್ತ ಶಿಕ್ಷೆ ನೀಡುವಂತೆ ಆಗ್ರಹಿಸುತ್ತೇವೆ. ಈ ಹಿನ್ನೆಲೆಯಲ್ಲಿ ಎಲ್ಲ ಮುಸ್ಲಿಂ ಬಾಂಧವರು ಸೇರಿ ತಮ್ಮ ತಮ್ಮ ಅಂಗಡಿಗಳನ್ನು ಬಂದ್ ಮಾಡುತ್ತಿದ್ದೇವೆ. “ಜಸ್ಟಿಸ್‌ ಫಾರ್ ನೇಹಾ” ಎನ್ನುವ ಸ್ಟಿಕ್ಕರ್”ಗಳನ್ನು ಅಂಗಡಿಗೆ ಅಂಟಿಸಲಾಗುವುದು. ಸೋಮವಾರ ಮಧ್ಯಾಹ್ನ 3 ಗಂಟೆಯವರೆಗೆ ಸ್ವಯಂ ಪ್ರೇರಿತ ಬಂದ್ ಮಾಡುತ್ತೇವೆ. ಈ ಬಗ್ಗೆ ವ್ಯಾಪಾರಸ್ಥರಿಗೆ ಸೂಚನೆ ನೀಡಿದ್ದೇವೆ ಎಂದು ಇಸ್ಮಾಯಿಲ್ ತಮಟಗಾರ ಹೇಳಿದರು.
ಮುಸ್ಲಿಂ ವಕೀಲರು ಕೇಸ್‌ ತೆಗೆದುಕೊಳ್ಳಲ್ಲ

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ನೇಹಾ ಕೊಲೆ ಬಹಳ‌ ದುರ್ದೈವದ ಸಂಗತಿ. ನಾವು ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿದ್ದೇವೆ. ಶೀಘ್ರ ತನಿಖೆ ಆಗಬೇಕು, ಹೀನ ಕೆಲಸ ಮಾಡಿದ ಹುಡುಗನಿಗೆ ಶಿಕ್ಷೆ ಆಗಬೇಕು. ನೇಹಾ ನಮ್ಮ ಮಗಳು ಎಂದು ಭಾವಿಸಿದ್ದೇವೆ. ನಿರಂಜನ ಮತ್ತು ನಾವು ಬಹಳ ವರ್ಷದಿಂದ ಸಂಪರ್ಕದಲ್ಲಿ ಇದ್ದೇವೆ. ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಇದರ‌ ಹಿಂದೆ ಯಾರಾದರೂ ಇದ್ದರೆ ಪತ್ತೆ ಹಚ್ಚಬೇಕು. ಫಾಸ್ಟ್‌ಟ್ರ್ಯಾಕ್ ಕೋರ್ಟ್ ಮಾಡಿ ಕೇಸ್ ಕೊಡಬೇಕು. 90 ದಿನಗಳಲ್ಲಿ ಕೇಸ್ ಇತ್ಯರ್ಥವಾಗಬೇಕು. ಮುಸ್ಲಿಂ ವಕೀಲರು ಈ ಕೇಸ್‌ನಲ್ಲಿ ಭಾಗಿಯಾಗಬಾರದು. ಈ ಕುರಿತು ಅಂಜುಮನ್ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಈ ಪ್ರಕರಣದಲ್ಲಿ ನಾವು ನಿರಂಜನ್ ಕುಟುಂಬದ ಜತೆಗೆ ಇದ್ದೇವೆ. ಇಂತಹ ಹೀನ ಕೆಲಸ ಮಾಡಬೇಕು ಎಂದು ಯಾವುದೇ ಧರ್ಮ ಹೇಳಲ್ಲ. ಅವನಿಗೆ ಶಿಕ್ಷೆ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದು ಹೇಳಿದರು.

Exit mobile version