Site icon Vistara News

love murder | ಪ್ರೇಮಿಗಳ ಜಗಳ ಕೊಲೆಯಲ್ಲಿ ಅಂತ್ಯ: ಲಿವ್‌ ಇನ್‌ ರಿಲೇಷನ್‌ಷಿಪ್‌ನಲ್ಲಿದ್ದ ಸುಂದರಿಯನ್ನು ಕೊಂದೇ ಹಾಕಿದ!

ಕೊಲೆಯಾದ ಕೃಷ್ಣ ಕುಮಾರಿ

ಬೆಂಗಳೂರು: ಕಳೆದ ಎರಡು ವರ್ಷದಿಂದ ಪ್ರೀತಿಸುತ್ತಿದ್ದ ಪ್ರೇಮಿಗಳ ನಡುವಿನ ಜಗಳ ಪ್ರೇಯಸಿಯ ಕೊಲೆಯಲ್ಲಿ (Love murder) ಅಂತ್ಯಗೊಂಡಿದೆ. ಕೃಷ್ಣಕುಮಾರಿ ಎಂಬ ೨೩ರ ಯುವತಿಯನ್ನು ಸಂತೋಷ್‌ ದಾಮಿ ಎಂಬ ೨೭ ವರ್ಷದ ಯುವಕ ಕೊಲೆ ಮಾಡಿದ್ದಾನೆ. ಘಟನೆ ನಡೆದಿರುವುದು ರಾಮಮೂರ್ತಿ ನಗರದಲ್ಲಿ.

ಕೃಷ್ಣ ಕುಮಾರಿ ಮತ್ತು ಸಂತೋಷ್‌ ಇಬ್ಬರೂ ನೇಪಾಳ ಮೂಲದವರು. ಕೃಷ್ಣಕುಮಾರಿ ಹೊರಮಾವು ಯೂನಿಸೆಕ್ಸ್ ಸ್ಪಾ ದಲ್ಲಿ ಬ್ಯೂಟಿಷಿಯನ್ ಆಗಿದ್ದರೆ, ಸಂತೋಷ್‌ ದಾಮಿ ಟಿಸಿಪಾಳ್ಯದಲ್ಲಿ ಬಾರ್ಬರ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ.

ಕೊಲೆ ಮಾಡಿದ ಸಂತೋಷ್‌ ದಾಮಿ ಮತ್ತು ಪ್ರಾಣ ಕಳೆದುಕೊಂಡ ಕೃಷ್ಣ ಕುಮಾರಿ

ಇಬ್ಬರೂ ಕೆಲವು ವರ್ಷದ ಹಿಂದೆ ಬೆಂಗಳೂರಿಗೆ ಉದ್ಯೋಗ ನಿಮಿತ್ತ ಬಂದಿದ್ದರು. ಅಲ್ಲಿಂದ ಬರುವಾಗ ಇವರು ಪರಿಚಿತರೇನಲ್ಲ. ಇಲ್ಲಿ ಎರಡು ವರ್ಷದ ಹಿಂದೆ ಪರಿಚಯವಾಗಿ ಒಂದೇ ಭಾಗದವರು ಎಂದು ತಿಳಿದು ಹತ್ತಿರವಾಗಿದ್ದರು. ಪರಿಚಯ ಪ್ರೇಮವಾಗಿ ಮಾರ್ಪಟ್ಟು ಕಳೆದ ಕೆಲವು ಸಮಯದಿಂದ ಲಿವ್‌ ಇನ್‌ ರಿಲೇಷನ್‌ಷಿಪ್‌ನಲ್ಲಿದ್ದರು. ರಾಮಮೂರ್ತಿ ನಗರದ ಟಿಸಿಪಾಳ್ಯದಲ್ಲಿ ಒಂದೇ ಬಾಡಿಗೆ ರೂಮ್‌ನಲ್ಲಿದ್ದರು.

ರಾಮಮೂರ್ತಿ ನಗರದಲ್ಲಿ ಕೊಲೆ ನಡೆದ ಜಾಗ

ಮಂಗಳವಾರ ರಾತ್ರಿ ಅವರಿಬ್ಬರ ಮಧ್ಯೆ ಯಾವುದೋ ಕಾರಣಕ್ಕೆ ಜಗಳವಾಗಿದೆ. ಜಗಳ ತಾರಕಕ್ಕೇರಿ ಸಂತೋಷ್‌ ದಾಮಿ ಕೃಷ್ಣಕುಮಾರಿಯನ್ನು ಕೊಂದು ಹಾಕಿದ್ದಾನೆ. ಘಟನೆ ಸಂಬಂಧ ರಾಮೂರ್ತಿನಗರ ಪೊಲೀಸರು ಸ್ಥಳಕ್ಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವರು ವಾಸಿಸುತ್ತಿದ್ದ ಕೋಣೆಯ ಹೊರಭಾಗದಲ್ಲಿ ಈ ಕೊಲೆ ನಡೆದಿದ್ದು, ಅವರು ಕೋಣೆಯಿಂದ ಹೊರಬಂದ ವೇಳೆ ಜಗಳ ಜೋರಾಗಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ಮನೆಗೆ ಬಂದ ಮೇಲೂ ವಿಪರೀತ ಫೋನ್‌ ಕಾಲ್‌!
ಕೃಷ್ಣಕುಮಾರಿ ಕೊಲೆಗೆ ಸಂಬಂಧಿಸಿ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿಕೆ ಇಲ್ಲಿದೆ.
ಮಂಗಳವಾರ ರಾತ್ರಿ 1:30 ಕ್ಕೆ ಆಸ್ಪತ್ರೆಯಿಂದ ಪೊಲೀಸ್‌ ಠಾಣೆಗೆ ಮಾಹಿತಿ ಬಂದಿದ್ದು, ಕೂಡಲೇ ಪೊಲೀಸರು ಆಸ್ಪತ್ರೆಗೆ ಹೋಗಿ ನೋಡಿದ್ದಾರೆ. ಆ ವೇಳೆ ಕೃಷ್ಣ ಕುಮಾರಿ ಸಾವನ್ನಪ್ಪಿದ್ದಳು. ನಂತರ ಕೊಲೆ ಕೇಸ್ ದಾಖಲಿಸಲಾಗಿದೆ.

ಕೃಷ್ಣ ಕುಮಾರಿ ಮತ್ತು ಸಂತೋಷ್‌ ಎರಡು ವರ್ಷಗಳಿಂದ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಇಬ್ಬರೂ ನೇಪಾಳ ಮೂಲದವರು. ಬೇರೆಯವರ ಜತೆ ಸಂಬಂಧ ಹೊಂದಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಅವರಿಬ್ಬರೂ ಜಗಳ ಮಾಡಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಸಂತೋಷ್‌ ಬೇರೆಯವರ ಜತೆ ಸಂಬಂಧ ಹೊಂದಿದ್ದಾನೆ ಎನ್ನುವುದು ಕೃಷ್ಣಕುಮಾರಿ ಸಂಶಯವಾದರೆ, ಮನೆಗೆ ಬಂದ ಮೇಲೂ ಬರೀ ಫೋನ್‌ನಲ್ಲಿ ಬ್ಯುಸಿಯಾಗಿರುತ್ತಿದ್ದಳು ಎನ್ನುವುದು ಸಂತೋಷನ ಆಕ್ರೋಶದ ಮೂಲ ಎನ್ನಲಾಗಿದೆ.

ಈ ಜಗಳ ತಾರಕಕ್ಕೇರಿ ಆರೋಪಿ ಆಕೆಗೆ ಹಲ್ಲೆ ಮಾಡಿದ್ದಾನೆ. ಕೈಯ ಹೊಡೆತಕ್ಕೇ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗ ಆಕೆಯ ಕುಟುಂಬಿಕರನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ | ಅಪರಿಚಿತ ಶವದ ಬೆನ್ನು ಹತ್ತಿದ ಪೊಲೀಸರಿಗೆ ಸಿಕ್ಕಿತು ಪ್ರೇಮಿಗಳ ಆತ್ಮಹತ್ಯೆ, ಕೊಲೆ ರಹಸ್ಯ

Exit mobile version