Site icon Vistara News

NHM Workers Protest: ಉಪವಾಸನಿರತ ಎನ್‌ಎಚ್‌ಎಂ ಒಳಗುತ್ತಿಗೆ ನೌಕರರು ಅಸ್ವಸ್ಥ; ನಾ ಕೊಡೆ ನೀ ಬಿಡೆ ಪರಿಸ್ಥಿತಿ

NHM employees protest enters 30th day

NHM employees protest enters 30th day

ಬೆಂಗಳೂರು: ಆರೋಗ್ಯ ಇಲಾಖೆಯ ಗುತ್ತಿಗೆ- ಹೊರಗತ್ತಿಗೆ ನೌಕರರ (NHM Workers Protest) ಪ್ರತಿಭಟನೆಯು 30ನೇ ದಿನಕ್ಕೆ ಕಾಲಿಟ್ಟಿದೆ. ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಪ್ರತಿಭಟನಾನಿರತ ಎನ್‌ಎಚ್‌ಎಂ ನೌಕರರು ಅಸ್ವಸ್ಥಗೊಂಡಿದ್ದಾರೆ. ಆಂಬ್ಯುಲೆನ್ಸ್ ಮೂಲಕ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಯಿತು.

ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ-ಹೊರಗತ್ತಿಗೆ ನೌಕರರು ನೌಕರಿ ಕಾಯಂ ಹಾಗೂ ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಮಾ.14ಕ್ಕೆ 30 ದಿನ ಪೂರೈಸಿದ್ದು, ಬೇಡಿಕೆಗಳಿಗೆ ಮೇಲಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸಲು ತೀರ್ಮಾನಿಸಿದ್ದಾರೆ. ಮಂಗಳವಾರ 30 ಸಾವಿರ ನೌಕರರು ಒಗ್ಗಟ್ಟಾಗಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಯಾವುದೇ ಕಾರಣಕ್ಕೂ ನೌಕರಿ ಕಾಯಂ ಮಾಡಲು ಸಾಧ್ಯವಿಲ್ಲ. ಆದರೆ, ಯೋಜನೆ ಇರುವವರೆಗೆ ಸೇವೆಯಿಂದ ತೆಗೆಯುವುದಿಲ್ಲ ಎಂಬ ಬಗ್ಗೆ ಖಾತ್ರಿ ಕೊಡಬಹುದು ಎಂದು ಈ ಹಿಂದೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದರು. ಜತೆಗೆ ಆರೋಗ್ಯ ಇಲಾಖೆಯಲ್ಲಿ 21 ಸಾವಿರ ಗುತ್ತಿಗೆ ನೌಕರರು ಇದ್ದು, ಸರ್ಕಾರದ ಗಮನ ಸೆಳೆಯಲು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.

ಕೆಲಸಕ್ಕೆ ಹಾಜರಾಗದ ವೈದ್ಯರಿಗೆ ನೋಟಿಸ್ ಜಾರಿ

ರಾಮನಗರ ಜಿಲ್ಲಾಸ್ಪತ್ರೆಯ ದಂತ ತಜ್ಞ ಅರುಣ್‌ ಕೆ.ಪಿ ಅವರಿಗೆ ಆರೋಗ್ಯ ಇಲಾಖೆ ನೋಟಿಸ್‌ ಜಾರಿ ಮಾಡಿದೆ. ಕೆಲಸಕ್ಕೆ ಗೈರಾಗಿದ್ದರಿಂದ ಆಸ್ಪತ್ರೆ ಕೆಲಸಕ್ಕೆ ಸಮಸ್ಯೆಯಾಗಿದೆ. 3 ದಿನಗಳಲ್ಲಿ ಸಮಜಾಯಿಷಿ ಕೊಡಿ ಎಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಕಾರಣ ಹೇಳದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದು ಕಡೆ ಶೇ.15ರಷ್ಟು ವೇತನ ಹೆಚ್ಚಳದ ಆದೇಶ ಹೊರಡಿಸಿದರೂ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ಮುಂದುವರಿಸಿದ್ದಾರೆ, ಇದರಿಂದ ರೋಗಿಗಳಿಗೆ ಅಡಚಣೆ ಉಂಟಾಗಿದೆ. ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ. ಕೆಲಸಕ್ಕೆ ಹಾಜರಾಗದವರಿಗೆ ವೇತನ ನೀಡದಂತೆ, ಹಾಜರಾತಿ ಪರಿಶೀಲಿಸಿ ಎಂದು ನೋಟಿಸ್ ಜಾರಿ ಮಾಡಲಾಗಿದೆ.

ಏನಿದು ಪ್ರತಿಭಟನೆ?

ಮಣಿಪುರ, ಒಡಿಶಾ, ರಾಜಸ್ಥಾನ, ಪಂಜಾಬ್‌ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಈಗಾಗಲೇ ಎನ್‌ಎಚ್‌ಎಂ ನೌಕರರನ್ನು ಕಾಯಂ ಮಾಡಲಾಗುತ್ತಿದೆ. ರಾಜ್ಯದಲ್ಲೂ ಈ ಕೆಲಸ ಮಾಡಬೇಕು. ಎನ್‌ಎಚ್‌ಎಂ ನೌಕರರು ಮಳೆ, ಬಿಸಿಲು ಎನ್ನದೆ ಕೊರೊನಾ ಸಂದರ್ಭದಲ್ಲೂ ಸೇವೆ ಸಲ್ಲಿಸಿದ್ದರು. ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಅವರ ಕುಟುಂಬ ನಿರ್ವಹಣೆ ಕಷ್ಟವಾಗಿದೆ.

ಇದನ್ನೂ ಓದಿ: Toll collection : ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹ ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ

ಅಸ್ವಸ್ಥಗೊಂಡ ನೌಕರರನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡುತ್ತಿರುವ ವಿಡಿಯೊ ಇಲ್ಲಿದೆ

ಹಾಗಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೇಮಕವಾಗಿರುವ ಒಳಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡಿ ಅವರ ಹುದ್ದೆಯನ್ನು ಕಾಯಂಗೊಳಿಸಬೇಕು ಎಂದು ಎನ್‌ಎಚ್‌ಎಂ ಒಳಗುತ್ತಿಗೆ ನೌಕರರ ಸಂಘ ಒತ್ತಾಯಿಸಿದೆ.‌

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version