Site icon Vistara News

Panchamasali Community | ಮುರುಗೇಶ್ ನಿರಾಣಿ ಸಾಹೇಬ್ರು ಸ್ವಲ್ಪ ದಿನದಲ್ಲೇ ಸಿಎಂ ಆಗ್ತಾರೆ: ರಾಮಣ್ಣ ಲಮಾಣಿ

ರಾಮಣ್ಣ ಲಮಾಣಿ ಮುರುಗೇಶ್‌ ನಿರಾಣಿ ಪಂಚಮಸಾಲಿ ಸಮಾವೇಶ

ಗದಗ: ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಎಂಬ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಧ್ಯೆ ಹೇಳಿಕೆಗಳು ಬರುತ್ತಿರುವ ಸಮಯದಲ್ಲೇ ಬಿಜೆಪಿಯಲ್ಲಿ ಮತ್ತೆ ಮುಖ್ಯಮಂತ್ರಿ ಚರ್ಚೆ ಮುನ್ನೆಲೆಗೆ ಬಂದಿದೆ. ಮುರುಗೇಶ್‌ ನಿರಾಣಿ ಮುಂದಿನ ಸಿಎಂ ಎಂದು ಪಂಚಮಸಾಲಿ (Panchamasali Community) ಸಮಾವೇಶದಲ್ಲಿ ಶಾಸಕ ರಾಮಣ್ಣ ಲಮಾಣಿ ಹೇಳಿದ್ದಾರೆ.

ಲಕ್ಷ್ಮೇಶ್ವರ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಿಂದ ಭಾನುವಾರ (ಡಿ.೪) ಆಯೋಜಿಸಲಾಗಿದ್ದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಈಗ ಮುರಗೇಶ್ ನಿರಾಣಿ ಸಾಹೇಬರು ಸಚಿವರಿದ್ದಾರೆ. ಇನ್ನು ಸ್ವಲ್ಪ ದಿನದಲ್ಲೇ ರಾಜ್ಯದ ಮುಖ್ಯಮಂತ್ರಿ ಆಗಿಯೇ ತೀರುತ್ತಾರೆ. ಇಂಥವರು‌ ಮುಖ್ಯಮಂತ್ರಿಗಳಾದರೆ ನಮ್ಮಂಥ ಶಾಸಕರು ಬದುಕುತ್ತೇವೆ ಎಂದು ಹೇಳಿದರು.

ಮುರಗೇಶ್ ನಿರಾಣಿ ಸಮಾರಂಭಕ್ಕೆ ಆಗಮಿಸಿದ್ದು ಬಹಳ ಸಂತೋಷ ತಂದಿದೆ. ಪಂಚಮಸಾಲಿ ಸಮಾಜದಿಂದ ಬಡತನದಲ್ಲಿ ಬಂದು ರಾಜ್ಯದಲ್ಲಿಯೇ ಶ್ರೀಮಂತ ಆಗಿದ್ದಾರೆ. ಅವರಿನ್ನೂ ಹೆಚ್ಚು ಬೆಳೆಯಬೇಕು. ಅವರ ನೆರಳಿನಲ್ಲಿ ನಾವೂ ಸಹ ಬೆಳೆಯೋಣ ಎಂದು ತಿಳಿಸಿದರು.

ಇದನ್ನೂ ಓದಿ | ಕುರುಬ ಸಮುದಾಯದವರನ್ನು ಗ್ರಾಪಂ ಅಧ್ಯಕ್ಷೆ ಮಾಡಿದ್ದಕ್ಕೆ ಜಿ.ಟಿ. ದೇವೇಗೌಡ ವಿರುದ್ಧ ತಿರುಗಿ ಬಿದ್ದ ಸ್ವಜಾತಿಯರು

ನಮಗೆ ಲೈಫ್‌ಲೈನ್‌ ಬೇಕುವಚನಾನಂದ ಶ್ರೀಗಳು
ಹರಿಹರ ಪೀಠದ ವಚನಾನಂದ ಶ್ರೀಗಳು ಮಾತನಾಡಿ, ಯಡಿಯೂರಪ್ಪ ಅವರು ಯಾವಾಗ ತಮ್ಮ ಮುಖ್ಯಮಂತ್ರಿ ಕುರ್ಚಿಯಿಂದ ಎದ್ದರೋ ಅಂದೇ ನಮ್ಮ ಪಂಚಮಸಾಲಿ ಸಮಾಜವೂ ಎದ್ದು ನಿಂತಿತು. ಹಾಲು ಕರೆಯೋರು ನಾವಾಗಿದ್ದರೆ, ಬೆಣ್ಣೆ-ತುಪ್ಪವನ್ನು ಬೇರೆಯವರು ತಿನ್ನುತ್ತಿದ್ದರು. ಪ್ರಾಣ ಬಿಟ್ಟೇವು ಮೀಸಲಾತಿ ಬಿಡೆವು. ಇಷ್ಟು‌ ದಿನ ತಾವು ಹೋರಾಟಕ್ಕೆ ಬರದೇ ಇರುವುದಕ್ಕೆ ಕಾರಣ ಇದೆ. ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಾ ಬಂದಿದ್ದೆವು. ನಾವು ಬೀದಿರಂಪವನ್ನು ಮಾಡುತ್ತಿಲ್ಲ. ಪ್ರತಿ ನಿತ್ಯ ಪೇಪರ್‌ ಹೆಡ್‌ಲೈನ್ ಆಗಬೇಕಂತ ಏನಿಲ್ಲ. ನಮಗೆ ಬೇಕಾಗಿರುವುದು ಲೈಫ್‌ಲೈನ್ ಆಗಿದೆ ಎಂದು ಪರೋಕ್ಷವಾಗಿ ಕೂಡಲಸಂಗಮ‌ ಶ್ರೀಗಳಿಗೆ ತಿರುಗೇಟು ನೀಡಿದರು.

ಪಂಚಮಸಾಲಿ 2ಎ ಮೀಸಲಾತಿಗಾಗಿ ಜನ ಜಾಗೃತಿ ಸಮಾವೇಶಕ್ಕೂ ಮೊದಲು ಲಕ್ಷ್ಮೇಶ್ವರ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. ಹರಿಹರ ಪೀಠದ ವಚನಾನಂದ ಸ್ವಾಮಿಗಳ ನೇತೃತ್ವದಲ್ಲಿ ಮೆರವಣಿಗೆ ನಡೆದಿದ್ದು, ಸಮುದಾಯದ ಪರವಾಗಿ ಘೋಷಣೆಗಳನ್ನು ಕೂಗಲಾಯಿತು. ಪಟ್ಟಣದ ಮಾರುತಿ ಮಂದಿರದಿಂದ ಪುಲಗೇರಿ ಸೋವನಾಥ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು. ವಾದ್ಯಮೇಳಗಳು ಮೆರವಣಿಗೆಗೆ ಕಳೆ ಕಟ್ಟಿದವು. ಪಂಚಮಸಾಲಿ‌ ಸಮುದಾಯದ ನೂರಾರು ಮುಖಂಡರು, ಶಾಸಕರು ಭಾಗಿಯಾಗಿದ್ದರು.

ಇದನ್ನೂ ಓದಿ | 50 ವರ್ಷದ ಹಿಂದೆಯೇ ಶಿಗ್ಗಾಂವ್‌ಗೆ ಪ್ರಗತಿಪರ ಕೃಷಿಯನ್ನು ಪರಿಚಯಿಸಿದವರು ಹನುಮಂತಗೌಡ್ರು: ಸಿಎಂ ಬೊಮ್ಮಾಯಿ

Exit mobile version