Site icon Vistara News

ಪ್ರತಿಭಟನೆ ಪರಿಣಾಮಗಳ ಬಗ್ಗೆ ತಿಳಿಹೇಳಿ: ಮುಸ್ಲಿಂ ಧರ್ಮಗುರುಗಳಿಗೆ ಪೊಲೀಸ್‌ ಆಯುಕ್ತರ ಸಭೆ

ಪೊಲೀಸ್‌ ಮೀಟಿಂಗ್

ಬೆಂಗಳೂರು: ಯಾವುದೇ ರೀತಿಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಾರದು, ಸಾಮಾಜಿಕ‌ ಜಾಲತಾಣದಲ್ಲಿ ಬರುವ ಯಾವುದೇ ವದಂತಿಗಳ ಬಗ್ಗೆ ಕಿವಿಗೊಡಬಾರದು ಎಂದು ಮುಸ್ಲಿಂ ಸಮುದಾಯಕ್ಕೆ ತಿಳಿಸಬೇಕು ಎಂದು ಮುಸ್ಲಿಂ ಧರ್ಮಗುರುಗಳಿಗೆ ಬೆಂಗಳೂರು ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ಮನವಿ ಮಾಡಿದ್ದಾರೆ.

ಪ್ರವಾದಿ ಪೈಗಂಬರ್‌ ವಿರುದ್ಧ ವಿರುದ್ಧ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಹಾಗೂ ಬಿಜೆಪಿ ಮುಖಂಡ ನವೀನ್‌ ಜಿಂದಾಲ್‌ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಮುಸ್ಲಿಂ ಧರ್ಮಗುರುಗಳ ಶಾಂತಿಸಭೆಯಲ್ಲಿ ಮಾತನಾಡಿದರು.

ಪ್ರತಿಭಟನೆ ನಡೆಸಿದರೆ ಕಾನೂನಾತ್ಮಕವಾಗಿ ಆಗುವ ಪರಿಣಾಮಗಳ ಕುರಿತು ಅವರಿಗೆ ತಿಳಿ ಹೇಳಬೇಕು. ಯಾವುದೇ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ನೋಡಿಕೊಳ್ಳಬೇಕು. ಚಾಮರಾಜಪೇಟೆ ಈದ್ಗಾ ಮೈದಾನ ವಿವಾದವನ್ನು ಕಾನೂನಾತ್ಮಕ ಹಾಗೂ ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಪ್ರತಾಪ್‌ ರೆಡ್ಡಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಪ್ರತಿಭಟನೆ ಮಾಡುವುದಿಲ್ಲ ಎಂದು ಮುಸ್ಲಿಂ ಧರ್ಮಗುರುಗಳು ಹೇಳಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೆಲ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಮುಸ್ಲಿಂ ಧರ್ಮಗುರುಗಳು ಹಾಗೂ ಮುಖಂಡರ ಸಭೆ ನಡೆಸಲಾಗಿದೆ. ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ತಿಳಿಸಲಾಗಿದೆ. ಬೆಂಗಳೂರಿನಲ್ಲಿ ಈಗಾಗಲೆ ಹಲವೆಡೆ ಬಂದೋಬಸ್ತ್ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಧರ್ಮಗುರು ಮುಲಾನಾ ಮಕ್ಸೂದ್ ಇಮ್ರಾನ್ ಮಾತನಾಡಿ, ನೂಪುರ್ ಶರ್ಮಾ ಹೇಳಿಕೆಯಿಂದ ಮುಸ್ಲಿಮರಿಗೆ ನೋವಾಗಿದೆ. ಬೆಂಗಳೂರು ಮತ್ತು ರಾಜ್ಯದಲ್ಲಿ ಯಾವುದೇ ರೀತಿಯ ರ‍್ಯಾಲಿ, ಪ್ರತಿಭಟನೆ ಮಾಡಲ್ಲ. ನಮ್ಮ ನೋವಿನ ಬಗ್ಗೆ ಕಮಿಷನರ್‌ಗೆ ತಿಳಿಸಿದ್ದೇವೆ. ಯಾವ ಧರ್ಮದಲ್ಲಿ ಯಾರು ಪ್ರಮುಖರು ಇರುತ್ತಾರೆ ಅವರ ಬಗ್ಗೆ ಯಾರು ಮಾತನಾಡಬಾರದು. ಮುಸಲ್ಮಾನ ಮೌಲ್ವಿಗಳ ಆಗ್ರಹ ಒಂದೇ ವಿವಾದಾತ್ಮಕ ಹೇಳಿಕೆ ನೀಡಿದವರ ವಿರುದ್ಧ ಕ್ರಮ ಆಗಬೇಕು‌ ಎಂದರು.

ಬೆಂಗಳೂರಿನಲ್ಲಿ ಹೋರಾಟ ಉಗ್ರರೂಪ ಪಡೆಯಬಹುದು ಎಂದು ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದ್ದು, ಮಸೀದಿಗಳ ಬಳಿ ಪೊಲೀಸ್‌ ತುಕಡಿಗಳನ್ನು ನಿಯೋಜಿಸಲಾಗಿದೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಎಸ್‌ಐಗಳು ಮುಸ್ಲಿಂ ಧರ್ಮಗುರುಗಳು, ಮುಖಂಡರೊಂದಿಗೆ ಶಾಂತಿಸಭೆ ನಡೆಸಿ ಶಾಂತಿ ಸುವ್ಯವಸ್ಥೆಗೆ ಸಹಕರಿಸಲು ಮನವಿ ಮಾಡಿದ್ದಾರೆ.

ಮೌಲಾನಾ ಮಕ್ಸೂದ್ ಇಮ್ರಾನ್ ರಶೀದಿ, ಮೌಲಾನಾ ಮಫ್ತಿ ಇಫ್ತಿಕರ್ ಅಹ್ಮದ್ ಖಸ್ಮಿ ಸಾಹೇಬ್, ಮೌಲಾನಾ ಸೈಯದ್ ಜುಲ್ಫಿಖರ್ ಅಹ್ಮದ್ ನೂರಿ ಸಾಹೇನ್ ಸೇರಿ 16 ಮೌಲ್ವಿಗಳು ಭಾಗಿಯಾಗಿದ್ದರು.

ಟಿವಿ ಚಾನೆಲ್‌ ಚರ್ಚೆಗಳಲ್ಲಿ ಭಾಗವಹಿಸಬೇಡಿ
ಪೈಗಂಬರ್‌ ವಿರುದ್ಧದ ಹೇಳಿಕೆ ವಿವಾದದ ಬಗ್ಗೆ ಮುಸ್ಲಿಂ ವಿದ್ವಾಂಸರು ಹಾಗೂ ಉಲೇಮಾಗಳು ಟಿವಿ ಚಾನೆಲ್‌ ಚರ್ಚೆಗಳಲ್ಲಿ ಭಾಗವಹಿಸಬಾರದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಸೂಚಿಸಿದೆ. ಇಸ್ಲಾಂ ಧರ್ಮವನ್ನು ಅಪಹಾಸ್ಯ ಮಾಡುವ ಉದ್ದೇಶದಿಂದ ಕೆಲ ನ್ಯೂಸ್‌ ಚಾನೆಲ್‌ಗಳು ಮುಸ್ಲಿಂ ವಿಚಾರವಾದಿಗಳನ್ನು ಆಹ್ವಾನಿಸುತ್ತವೆ. ಅವು ಟಿಇಆರ್‌ಪಿಗಾಘಗಿ ತಮ್ಮ ವಾದವನ್ನು ಸಾಬೀತುಪಡಿಸಲು ಮುಸ್ಲಿಮರನ್ನು ಆಹ್ವಾನಿಸುತ್ತವೆ. ಹೀಗಾಗಿ ಸಮುದಾಯದವರು ಟಿವಿ ಡಿಬೇಟ್‌ಗಳಲ್ಲಿ ಭಾಗವಹಿಸಬಾರದು ಎಂದು ಮಂಡಳಿ ಸೂಚಿಸಿದೆ.

ಚಿತ್ರದುರ್ಗದಲ್ಲಿ ಆಕ್ರೋಶ

ಪ್ರವಾದಿ ಮೊಹಮ್ಮದ್ ಪೈಗಂಬರ್‌ ವಿರುದ್ಧ ಅವಹೇಳನಕಾರಿ ನೀಡಿದವರ ಬಂಧನಕ್ಕೆ ಆಗ್ರಹಿಸಿ
ಚಿತ್ರದುರ್ಗದಲ್ಲಿ ನೂರಿ ತಂಜೀಮ್ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಮುಸ್ಲಿಮರು ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಭಾರತ ಇಸ್ಲಾಮಿಕ್ ರಿಪಬ್ಲಿಕ್ ಅಲ್ಲ : ಚಕ್ರವರ್ತಿ ಸೂಲಿಬೆಲೆ

ಉತ್ತರ ಕನ್ನಡ: ಮುಸಲ್ಮಾನರು ಕೋಮು ಸಂಘರ್ಷಕ್ಕೆ ಪ್ರಯತ್ನ ಪಡುತ್ತಲೇ ಇರುತ್ತಾರೆ. ರಾಜ್ಯದಲ್ಲಿ ಹಿಜಾಬ್ ಗಲಾಟೆ ನಂತರ ಹೇಗೆ ಅವರ ಹೋರಾಟವನ್ನು ಹತ್ತಿಕ್ಕಬೇಕು ಎಂಬುದು ಜನಸಾಮಾನ್ಯರಿಗೆ ಗೊತ್ತಿದೆ ಯುವಾ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ. ನೂಪೂರ್ ಶರ್ಮಾ ಹಾಗೂ ನವೀನ್ ಜಿಂದಾಲ್‌ ವಿರುದ್ಧ ಮುಸ್ಲಿಮರ ಹೋರಾಟದ ಬಗ್ಗೆ ಜಿಲ್ಲೆಯ ಯಲ್ಲಾಪುರದಲ್ಲಿ ಶನಿವಾರ ಮಾತನಾಡಿದ ಅವರು, ಭಾರತ ಇಸ್ಲಾಮಿಕ್ ರಿಪಬ್ಲಿಕ್ ಅಲ್ಲ, ಸೆಕ್ಯುಲರ್ ಕಂಟ್ರಿ ಎಂಬುದನ್ನು ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಅರ್ಥ ಮಾಡಿಸಲು ಪ್ರೀತಿಯ ಮಾತುಗಳಿಂದ ಆಗದಿದ್ದರೇ ದಂಡಂ ದಶಗುಣಮ್ ಭವೇತ್ ಎನ್ನುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಶಿಕ್ಷಿಸಬೇಕು ಎಂದರು. ಹಿಂದುಗಳಿಗೆ ನೀವು ಒಂದು ಹೆಜ್ಜೆ ಮುಂದೆ ಬರಬೇಕು ಎನ್ನುತ್ತಾರೆ. ಮಹಾತ್ಮ ಗಾಂಧಿ ಕಾಲದಿಂದಲೂ ಹಿಂದೂಗಳನ್ನು ಬಗ್ಗಿಸುವ ಪ್ರಯತ್ನ ನಡೆದಿದೆ, ಮುಸಲ್ಮಾನರಿಂದ ಭಿನ್ನವಾದುದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅವರಿಗೆ ಗೊತ್ತಿರುವುದು ಒಂದೇ ಕಲ್ಲು ಎಸೆಯಬೇಕು, ಯಾರನ್ನೂ ಸುಡಬೇಕು ಎಂಬುದು. ಅವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ, ಪ್ರಜಾಪ್ರಭುತ್ವದ ಮೇಲೆ ಗೌರವ ಇಲ್ಲ ಎಂದರು.

ಇದನ್ನೂ ಓದಿ | ನೂಪುರ್‌ ಶರ್ಮಾ ವಿರುದ್ಧ ಪ್ರತಿಭಟನೆ; ಪೊಲೀಸರತ್ತ ಆಕ್ರೋಶದಿಂದ ಕಲ್ಲು ಎಸೆದ ಮಕ್ಕಳು !

Exit mobile version