Site icon Vistara News

Prajwal Revanna Case: ನಿಖಿಲ್ ಎಲ್ಲಿದ್ದೀಯಪ್ಪಾ ಎಂದಿದ್ದಾಯ್ತು, ಈಗ ಪ್ರಜ್ವಲ್ ಎಲ್ಲಿದ್ದೀಯಪ್ಪಾ ಎನ್ನುತ್ತಿದ್ದಾರೆ ಬ್ರದರ್ ಸ್ವಾಮಿಗಳು!

ಬೆಂಗಳೂರು: ಲೈಂಗಿಕ ದೌರ್ಜನ್ಯ ಕೇಸ್‌ನಡಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ವಿಚಾರವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರನ್ನು ರಾಜ್ಯ ಕಾಂಗ್ರೆಸ್‌ ಕುಟುಕಿದೆ. “ನಿಖಿಲ್ ಎಲ್ಲಿದ್ದೀಯಪ್ಪಾ“ ಎಂದಿದ್ದಾಯ್ತು, ಈಗ ”ಪ್ರಜ್ವಲ್ ಎಲ್ಲಿದ್ದೀಯಪ್ಪಾ” ಎನ್ನುತ್ತಿದ್ದಾರೆ ಬ್ರದರ್ ಸ್ವಾಮಿಗಳು!” ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ಪ್ರಜ್ವಲ್‌ ಇರುವಿಕೆ ಬಗ್ಗೆ ಎಚ್‌ಡಿಕೆಗೆ ಪ್ರಶ್ನೆ ಮಾಡಿದೆ. ಈ ಹಿಂದೆ ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು “ನಿಖಿಲ್ ಎಲ್ಲಿದ್ದೀಯಪ್ಪಾ“ ಎಂದು ಕೇಳಿದ್ದ ಮಾತು ಚುನಾವಣೆ ವೇಳೆ ಸಾಕಷ್ಟು ಟ್ರೋಲ್‌ಗೊಳಗಾಗಿತ್ತು. ಈಗ ಆ ಮಾತನ್ನೇ ಬದಲಿಸಿ ”ಪ್ರಜ್ವಲ್ ಎಲ್ಲಿದ್ದೀಯಪ್ಪಾ” ಎನ್ನುತ್ತಿದ್ದಾರೆ ಬ್ರದರ್ ಸ್ವಾಮಿಗಳು!” ಎಂದು ಕಾಂಗ್ರೆಸ್‌ ಕುಟುಕಿದೆ.

ಕಾಂಗ್ರೆಸ್‌ ಪೋಸ್ಟ್‌ನಲ್ಲೇನಿದೆ?

“ನಿಖಿಲ್ ಎಲ್ಲಿದ್ದೀಯಪ್ಪಾ “ ಎಂದಿದ್ದಾಯ್ತು, ಈಗ ”ಪ್ರಜ್ವಲ್ ಎಲ್ಲಿದ್ದೀಯಪ್ಪಾ” ಎನ್ನುತ್ತಿದ್ದಾರೆ ಬ್ರದರ್ ಸ್ವಾಮಿಗಳು!” ಮಾಧ್ಯಮಗಳ ಮುಂದೆ ನಾಟಕ ಆಡುವ ಬ್ರದರ್ ಸ್ವಾಮಿಗಳಿಗೆ ಪ್ರಜ್ವಲ್ ಎಲ್ಲಿದ್ದಾನೆ? ಯಾರ ಸಖ್ಯದಲ್ಲಿದ್ದಾನೆ ಎಂಬ ಮಾಹಿತಿ ತಿಳಿದಿಲ್ಲವೇ? ತಿಳಿದಿಲ್ಲ ಎನ್ನುವುದು ಶತಮಾನದ ಜೋಕ್! ಬ್ರದರ್ ಸ್ವಾಮಿಗಳಿಗೆ ನಿಜಕ್ಕೂ ಕಳಕಳಿ ಇದ್ದರೆ ಎಸ್ಐಟಿಗೆ ಮಾಹಿತಿ ನೀಡಲಿ. ಇಂತಹ ನಾಟಕ ಮಾಡುವುದನ್ನು ಬಿಡಲಿ” ಎಂದು ಕಾಂಗ್ರೆಸ್ ಕಿಡಿಕಾರಿದೆ.

400 ಮಹಿಳೆಯರ ಮೇಲೆ ಪ್ರಜ್ವಲ್‌ ಮಾಸ್‌ ರೇಪ್‌ ಆರೋಪ; ರಾಹುಲ್ ಗಾಂಧಿ ವಿರುದ್ಧ ಡಿಜಿಗೆ ಜೆಡಿಎಸ್‌ ದೂರು

ನಾನೂರು ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ (Prajwal Revanna Case) ಮಾಸ್ ರೇಪ್ ಮಾಡಿದ್ದಾರೆ ಎಂದು ಬಹಿರಂಗ ಸಭೆಗಳ ಭಾಷಣದಲ್ಲಿ ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಜೆಡಿಎಸ್ (JDS Karnataka) ದೂರು ನೀಡಿದೆ. ಈ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಪಕ್ಷ ಒತ್ತಾಯ ಮಾಡಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಹುಲ್ ಗಾಂಧಿ ಅವರು ಶಿವಮೊಗ್ಗ ಹಾಗೂ ರಾಯಚೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಗಳಲ್ಲಿ ಮಾಸ್ ರೇಪ್ ಬಗ್ಗೆ ಹೇಳಿದ್ದರು. ಇದೇ ಮಾಹಿತಿಯನ್ನು ಮಾಧ್ಯಮಗಳ ಮುಂದೆಯೂ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ರಾಹುಲ್‌ ಗಾಂಧಿಗೆ ಎಸ್‌ಐಟಿ ಸಮನ್ಸ್ ಜಾರಿ ಮಾಡಬೇಕು ಎಂದು ಜೆಡಿಎಸ್ ಒತ್ತಾಯ ಮಾಡಿದೆ.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ, ಮಂಜೇಗೌಡ, ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ. ರಂಗನಾಥ್, ಬೆಂಗಳೂರು ನಗರದ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ರಮೇಶ್ ಅವರಿದ್ದ ನಿಯೋಗ ಬುಧವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದರು.

ದೂರಿನಲ್ಲಿ ಇನ್ನೇನು ಇದೆ?

ಎಚ್.ಎಂ. ರಮೇಶ್ ಗೌಡ ಸಹಿ ಹಾಕಿರುವ ದೂರಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಅನೇಕ ಗಂಭೀರ, ಗುರುತರ ಆರೋಪಗಳನ್ನು ಮಾಡಲಾಗಿದೆ.

ಕಾಂಗ್ರೆಸ್ ನಾಯಕ, ವಯನಾಡು ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಅವರು, ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಮಾಸ್ ರೇಪ್ ಮಾಡಿ ಅದನ್ನು ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಇದು ಕೇವಲ ಅತ್ಯಾಚಾರ ಅಷ್ಟೇ ಅಲ್ಲ, ಇದೊಂದು ಸಾಮೂಹಿಕ ಅತ್ಯಾಚಾರ. ಒಬ್ಬ ಮಾಸ್ ರೇಪಿಸ್ಟ್ ಪರ ಪ್ರಧಾನಿ ನರೇಂದ್ರ ಮೋದಿ ಅವರು ಮತ ಯಾಚಿಸಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಇದೇ ಮೇ 2ರಂದು ಹೇಳಿಕೆ ನೀಡಿದ್ದರು.

ರಾಹುಲ್ ಗಾಂಧಿ ಅವರ ಹೇಳಿಕೆ, ಭಾಷಣ ಎಲ್ಲವೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಮುದ್ರಣ ಮಾಧ್ಯಮದಲ್ಲಿಯೂ ವರದಿಯಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದೆ.

400 ಮಹಿಳೆಯರ ಮಾಹಿತಿ ರಾಹುಲ್‌ ಗಾಂಧಿಗೆ ಇದೆ!

ನೊಂದ ಮಹಿಳೆಯರ ನ್ಯಾಯ ಕೊಡಿಸುವುದನ್ನು ಕಡೆಗಣಿಸಿ ಒಬ್ಬ ಜನಪ್ರತಿನಿಧಿಯಾಗಿ ರಾಹುಲ್ ಗಾಂಧಿ ಅವರು ಇಂಥ ಹೇಳಿಕೆ ನೀಡಿರುವುದು ಕಾನೂನು ಉಲ್ಲಂಘನೆ ಆಗಿರುತ್ತದೆ. ನಾನೂರು ಮಹಿಳೆಯರ ಮೇಲೆ ಮಾಸ್ ರೇಪ್ ಆಗಿರುವ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಎಲ್ಲ ಮಾಹಿತಿ ಇದೆ. ಜತೆಗೆ ಅತ್ಯಾಚಾರಕ್ಕೆ ತುತ್ತಾದ ಅಷ್ಟೂ ಮಹಿಳೆಯರ ಮಾಹಿತಿ ಅವರಲ್ಲಿ ಇದೆ ಎನ್ನುವುದು ಅವರದೇ ಹೇಳಿಕೆಯಿಂದ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 1860ರ ಅಡಿಯಲ್ಲಿ ಕೇಸ್ ದಾಖಲಿಸಬೇಕು ಎಂದು ಪೊಲೀಸ್ ಮಹಾ ನಿರ್ದೇಶಕರಲ್ಲಿ ಜೆಡಿಎಸ್ ಪಕ್ಷ ಒತ್ತಾಯ ಮಾಡಿದೆ.

ರಾಜ್ಯ ಸರ್ಕಾರವೂ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚನೆ ಮಾಡಿದ್ದು, ಕೂಡಲೇ ಈ ತಂಡವು ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿ ಇಲ್ಲಿಗೆ ಕರೆಸಬೇಕು. ನಾನೂರು ಮಹಿಳೆಯರು ಎಂದು ತಪ್ಪು ಮಾಹಿತಿ ನೀಡಿ, ಸಮಾಜಕ್ಕೆ ಕೆಟ್ಟ ಸಂದೇಶ ಹೋಗುವಂತೆ ಮಾಡಿದ ಅವರ ವಿರುದ್ಧ ಕೂಡಲೇ ಸೆಕ್ಷನ್ 202, 1860ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಜೆಡಿಎಸ್ ಆಗ್ರಹಪಡಿಸಿದೆ.

ಇದನ್ನೂ ಓದಿ: Nandini Milk: ಹಾಲು ಉತ್ಪಾದಿಸಿದ ರೈತರಿಗಿಲ್ಲ ಹಣ; ವಿದೇಶಿ ಕ್ರಿಕೆಟ್‌ ಟೀಂಗೆ ಪ್ರಾಯೋಜಕತ್ವ: ಸರ್ಕಾರದ ವಿರುದ್ಧ ಅಶೋಕ್‌ ಗರಂ

ಅಲ್ಲದೆ, ಪೆನ್ ಡ್ರೈವ್ ಹಂಚಿಕೆಯ ಬಗ್ಗೆಯೂ ಜೆಡಿಎಸ್ ಡಿಜಿ ಅವರ ಜತೆ ಮಾತುಕತೆ ನಡೆಸಿತು. ಎಸ್‌ಐಟಿ ಏಕಪಕ್ಷೀಯವಾಗಿ ತನಿಖೆ ನಡೆಸುತ್ತಿದೆ. ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ವಿನಾಕಾರಣ ಕಿರುಕುಳ ನೀಡುತ್ತಿದೆ. ಆದರೆ, ಪೆನ್ ಡ್ರೈವ್ ಹಂಚಿಕೆ ಆರೋಪಿಗಳ ಬಗ್ಗೆ ಮೌನ ವಹಿಸಿದೆ. ನ್ಯಾಯಾಲಯ ಜಾಮೀನು ನಿರಾಕರಿಸಿದ್ದರೂ ಈವರೆಗೆ ಅವರನ್ನು ಎಸ್ ಐಟಿ ಬಂಧನ ಮಾಡಿಲ್ಲ ಎಂದು ನಿಯೋಗ ದೂರಿತು.

Exit mobile version