ರಾಯಚೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election 2023) ಸಮೀಪಿಸುತ್ತಿರುವುದರಿಂದ ಎಲ್ಲ ವಿಷಯಗಳನ್ನೂ ರಾಜಕೀಯಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಈಗ ಸಿಂಧನೂರಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಪುತ್ಥಳಿ ವಿಚಾರದಲ್ಲಿ ಕ್ರೆಡಿಟ್ ವಾರ್ ಪ್ರಾರಂಭವಾಗಿದೆ. ಈ ಸಂಬಂಧ ರಾಜಕೀಯ ಗುದ್ದಾಟ ನಡೆದಿದ್ದು, ಶಾಸಕ ವೆಂಕಟರಾವ್ ನಾಡಗೌಡ ಪುತ್ರ ಅಭಿಷೇಕ್ ನಾಡಗೌಡ ಅವರಿಂದ ಪಿಎಸ್ಐ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ರಂಗಮಂದಿರದಲ್ಲಿ ಪುನೀತ್ ಪುತ್ಥಳಿ ಅನಾವರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಭಿಷೇಕ್ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ರಾಜಕಾರಣಿಗಳ ನಡೆಗೆ ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ: KS Eshwarappa: ನನಗಷ್ಟೇ ಅಲ್ಲ, ಮಗನಿಗೆ ಟಿಕೆಟ್ ಕೊಡದಿದ್ದರೂ ಪರ್ವಾಗಿಲ್ಲ ಎಂದರೇ ಕೆ.ಎಸ್. ಈಶ್ವರಪ್ಪ?
ಸುಕಾಲಪೇಟೆ ರಸ್ತೆಯಲ್ಲಿರುವ ನವೀಕರಣಗೊಂಡಿರುವ ರಂಗಮಂದಿರದಲ್ಲಿ ಅಪ್ಪು ಪುತ್ಥಳಿ ಅನಾವರಣ ಮಾಡಲು ಅಭಿಷೇಕ್ ಮುಂದಾಗಿದ್ದರು. ಹಲವು ವರ್ಷಗಳಿಂದ ಈ ರಂಗಮಂದಿರ ಪಾಳು ಬಿದ್ದಿದೆ. ಅಲ್ಲದೆ, ಈ ರಂಗಮಂದಿರಕ್ಕೆ ಸ್ಥಳೀಯ ಕಲಾವಿದರ ಹೆಸರಿಡಲು ಸ್ಥಳೀಯರು ಒತ್ತಾಯ ಮಾಡಿಕೊಂಡು ಬಂದಿದ್ದಾರೆ. ಆದರೆ, ಚುನಾವಣೆ ಸಮಯವಾಗಿರುವ ಹಿನ್ನೆಲೆಯಲ್ಲಿ ಪುನೀತ್ ಪುತ್ಥಳಿ ನಿರ್ಮಾಣಕ್ಕೆ ಶಾಸಕರ ಪುತ್ರ ಮುಂದಾಗಿರುವುದಕ್ಕೆ ಗಲಾಟೆ ನಡೆದಿದೆ.
ವಿರೋಧದ ನಡುವೆಯೂ ಅಭಿಷೇಕ್ ಅವರು ಪುನೀತ್ ಪುತ್ಥಳಿಯನ್ನು ಮೆರವಣಿಗೆ ಹೊರಡಿಸಲು ಅನುವಾಗಿದ್ದೇ ಗಲಾಟೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರನ್ನೂ ನಿಯೋಜನೆ ಮಾಡಲಾಗಿತ್ತು. ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಹಾಕಲಾಗಿದ್ದರೂ ಟ್ರ್ಯಾಕ್ಟರ್ ಮೂಲಕ ಮೆರವಣಿಗೆಗೆ ಮುಂದಾಗಲಾಗಿದೆ.
ಈ ವೇಳೆ ಗಲಾಟೆಯಾಗಿದ್ದು, ಪಿಎಸ್ಐ ಮಣಿಕಂಠ ಅವರ ಮೇಲೆ ಸ್ಥಳೀಯರಿಂದ ಹಲ್ಲೆ ನಡೆದಿದೆ. ಗಲಾಟೆ ತಾರಕಕ್ಕೇರಿದ ಬಳಿಕ ಗುಂಪು ಚದುರಿಸಲು ಮುಂದಾಗಿದ್ದಾಗ ಹೀಗಾಗಿದೆ. ಈ ವೇಳೆ ಅಭಿಷೇಕ ನಾಡಗೌಡ ಅವರಿಂದಲೂ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.
ತಳ್ಳಾಟ-ನೂಕಾಟ
ಮೆರವಣಿಗೆ ಹೊರಡುತ್ತಿದ್ದಂತೆ ಪೊಲೀಸರು ತಡೆಯಲು ಸಜ್ಜಾಗಿದ್ದಾರೆ. ಆಗ ಜೆಡಿಎಸ್ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಕೆಲವರಿಗೆ ಪೊಲೀಸರು ಲಾಠಿಯಿಂದ ಹೊಡೆದರು ಎಂದು ಹೇಳಲಾಗಿದೆ. ಆಗ ಸಿಂಧನೂರು ಟ್ರಾಫಿಕ್ ಪಿಎಸ್ಐ ಮಣಿಕಂಠ ಅವರನ್ನು ತಳ್ಳಾಡಿದ ಕಾರ್ಯಕರ್ತರು ಅವರ ಮೇಲೆ ಹಲ್ಲೆ ಯತ್ನ ಮಾಡಿದರು ಎಂದು ಹೇಳಲಾಗಿದೆ. ಸದ್ಯ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.