Site icon Vistara News

Murder Case : ನಿಗೂಢವಾಗಿ ನಾಪತ್ತೆಯಾಗಿದ್ದ ಯುವಕ ಹೊಲದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆ

Missing youth found burnt in field

ರಾಯಚೂರು: ಗೆಳೆಯರ ಜತೆ ಪಾರ್ಟಿಗೆ ತೆರಳಿದ್ದ ಯುವಕ ಶವವಾಗಿ (Dead body found) ಪತ್ತೆಯಾಗಿದ್ದಾನೆ. ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಸುಟ್ಟಾಕಿದ್ದು, ಅರ್ಧಬರ್ಧ ಬೆಂದ ಸ್ಥಿತಿಯಲ್ಲಿ ಮೃತದೇಹ (Murder Case) ಪತ್ತೆಯಾಗಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಬಳಿಯ ಮಿಟ್ಟಿ ಕ್ಯಾಂಪ್‌ ಗ್ರಾಮದ ಹೊಲದಲ್ಲಿ ಮೃತದೇಹ ಸಿಕ್ಕಿದೆ.

ಸುರೇಶ್ ನಾಯಕ್ (20) ಮೃತ ದುರ್ದೈವಿ. ಮೂರು ದಿನಗಳ ಹಿಂದೆ ಮನೆಯಿಂದ ಹೊರ ಹೋದ ಸುರೇಶ್‌, ಸ್ನೇಹಿತರ ಜತೆಗೆ ಪಾರ್ಟಿ ಮಾಡಬೇಕೆಂದು ಹೇಳಿ ತೆರಳಿದ್ದ. ಆದರೆ ವಾಪಸ್‌ ಮನೆಗೆ ಬಾರದೆ ನಿಗೂಢವಾಗಿ ನಾಪತ್ತೆಯಾಗಿದ್ದ. ಹೀಗಾಗಿ ಕುಟುಂಬಸ್ಥರು ಮಿಸ್ಸಿಂಗ್‌ ಕಂಪ್ಲೇಟ್‌ ಕೊಟ್ಟಿದ್ದರು. ಇದೀಗ ಹೊಲದಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಮಾನ್ವಿ ಪಟ್ಟಣದ ಸ್ಥಳೀಯ ನಿವಾಸಿ ಆಗಿರು ಸುರೇಶ್ ಬೆಂಗಳೂರಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ. ಜಾತ್ರೆ ಕಾರಣಕ್ಕೆ ಊರಿಗೆ ಬಂದಿದ್ದ. ಹೀಗೆ ಬಂದವನು ಇದೀಗ ಹೆಣವಾಗಿದ್ದಾನೆ. ಈತನ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸುರೇಶ್‌ನನ್ನು ಪಾರ್ಟಿಗೆ ಕರೆದು, ಆತನ ಸ್ನೇಹಿತರೇ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಸುರೇಶ್ ಮೃತದೇಹವನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಮಾನ್ವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಪಾರ್ಟಿಗೆ ಕರೆದುಹೋದ ಸುರೇಶ್‌ನ ಸ್ನೇಹಿತರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Job Alert: ದ್ವಿತೀಯ ಪಿಯುಸಿ ಪಾಸ್‌ ಆದವರಿಗೆ ಗುಡ್‌ನ್ಯೂಸ್‌; 2,500 ಬಿಎಂಟಿಸಿ ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿ

ಬಡ್ಡಿ ವ್ಯವಹಾರಕ್ಕೆ ಯುವಕನ ಬರ್ಬರ ಹತ್ಯೆ

ವಿಜಯಪುರ: ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಬಬಲೇಶ್ವರ ರಸ್ತೆಯಲ್ಲಿ ವ್ಯಕ್ತಿಯೊಬ್ಬನ (Murder Case) ಬರ್ಬರ ಹತ್ಯೆಯಾಗಿದೆ. ಮಾರಕಾಸ್ತ್ರದಿಂದ ಹೊಡೆದು ಪರಶುರಾಮ ಮ್ಯಾಕೇರಿ (22) ಎಂಬಾತನನ್ನು ಹತ್ಯೆ ಮಾಡಲಾಗಿದೆ.

ಬಡ್ಡಿ ವ್ಯವಹಾರದ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎಸ್‌ಪಿ ಋಷಿಕೇಶ್ ಸೋನವಾಣೆ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ. ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ‌

Exit mobile version