Site icon Vistara News

Rama Mandir : ಕೋಲಾರದಲ್ಲಿ ಶ್ರೀರಾಮನ ಕಟೌಟ್‌‌ಗೆ ಬ್ಲೇಡ್‌, ಬೆಂಗಳೂರಲ್ಲಿ ಫ್ಲೆಕ್ಸ್‌ ಹಾಕಿದವರ ಮೇಲೆ FIR

Kolara Flex incident

ಕೋಲಾರ/ಬೆಂಗಳೂರು: ಅಯೋಧ್ಯೆಯ ರಾಮ ಮಂದಿರ (Rama Mandir) ಲೋಕಾರ್ಪಣೆಗೆ ದೇಶಾದ್ಯಂತ ಸಂಭ್ರಮದ ಸಿದ್ಧತೆಗಳು ನಡೆಯುತ್ತಿವೆ. ಊರೂರಿನಲ್ಲಿ ಕಟೌಟ್‌, ಫ್ಲೆಕ್ಸ್‌‌, ಬ್ಯಾನರ್‌, ಬಂಟಿಂಗ್‌ಗಳನ್ನು ಕಟ್ಟಲಾಗುತ್ತಿದೆ. ಈ ನಡುವೆ, ಕೆಲವು ದುಷ್ಕರ್ಮಿಗಳು ಇದೇ ಸಮಯವನ್ನು ಕಾದು ಫ್ಲೆಕ್ಸ್‌, ಕಟೌಟ್‌ಗಳಿಗೆ ಹಾನಿಯುಂಟು (Damage to Flex and cutout) ಮಾಡುತ್ತಿದ್ದಾರೆ.

ಕೋಲಾರ ಜಿಲ್ಲೆಯ (Kolara News) ಮುಳಬಾಗಿಲು ನಗರದ ಗುಣಗಂಟೆಪಾಳ್ಯ ದಲ್ಲಿ ದುಷ್ಕರ್ಮಿಗಳು ಶ್ರೀರಾಮನ ಕಟೌಟ್ ಹಾಗೂ ಫ್ಲೆಕ್ಸ್‌ಗಳನ್ನು (Cut out and flex of Srirama) ಹರಿದು ಹಾಕಿದ್ದಾರೆ. ರಾತ್ರಿ 10.44ರ ಸುಮಾರಿಗೆ ದುಷ್ಕರ್ಮಿಗಳು ಬ್ಲೇಡ್ ಹಾಕಿ ಫ್ಲೆಕ್ಸ್‌ ಹರಿದು ಹಾಕಿದ್ದಾರೆ.

ಕೋಲಾರದಲ್ಲಿ ಫ್ಲೆಕ್ಸನ್ನು ಹರಿದು ಹಾಕಿರುವುದು.

ಜನವರಿ 22ರಂದು ನಡೆಯುವ ಕಾರ್ಯಕ್ರಮದ ಪ್ರಯುಕ್ತ ಮುಳಬಾಗಲಿನಲ್ಲಿ ಜನವರಿ 21ರಂದು ಶೋಭಾ ಯಾತ್ರೆ ನಡೆಸಲು ನಿರ್ಧರಿಸಲಾಗಿತ್ತು. ಅದಕ್ಕೆ ಸಂಬಂಧಿಸಿ ಫ್ಲೆಕ್ಸ್‌, ಕಟೌಟ್‌ಗಳನ್ನು ಹಾಕಲಾಗಿತ್ತು. ಈ ಕಟೌಟ್‌ಗಳ ಪೈಕಿ ಒಂದಕ್ಕೆ ಈಗ ದುಷ್ಕರ್ಮಿಗಳು ಬ್ಲೇಡ್‌ ಹಾಕಿ ಹರಿದಿದ್ದಾರೆ.

ಶ್ರೀರಾಮನ ಕಟೌಟ್‌ಗೆ ಬ್ಲೇಡ್ ಹಾಕಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಪೊಲೀಸರು ಸ್ಥಳದಲ್ಲಿರುವ ಸಿ.ಸಿ. ಟಿವಿ ಪರೀಶೀಲನೆ ನಡೆಸಿ ದುಷ್ಕರ್ಮಿಗಳನ್ನು ಗುರುತಿಸುವ ಪ್ರಯತ್ನ ನಡೆಸಿದ್ದಾರೆ.

ಕೋಲಾರದಲ್ಲಿ ಫ್ಲೆಕ್ಸ್‌ಗೆ ಹಾನಿ ಮಾಡಿದವರ ವಿರುದ್ಧ ಹಿಂದೂ ಸಂಘಟನೆಗಳಿಂದ ಮುತ್ತಿಗೆ

ಹಿಂದು ಸಂಘಟನೆಗಳಿಂದ ಪ್ರತಿಭಟನೆ

ಲವಕುಶ ಜನ್ಮ ಭೂಮಿ ಟ್ರಸ್ಟ್ ನಿಂದ ಅಳವಡಿಸಲಾಗಿದ್ದ ಕಟೌಟ್‌, ಬ್ಯಾನರ್‌ಗಳನ್ನು ಹರಿದು ಹಾಕಿದ್ದರಿಂದ ಹಿಂದೂ ಸಂಘಟನೆಗಳು ಆಕ್ರೋಶಿತಗೊಂಡಿವೆ. ಸ್ಥಳಕ್ಕೆ ಸಂಸದ ಮುನಿಸ್ವಾಮಿ ಹಾಗೂ ಶಾಸಕ ಸಮೃದ್ದಿ ಮಂಜುನಾಥ ಭೇಟಿ ನೀಡಿ ಪ್ರತಿಭಟನೆ ನಡೆಸಿದ್ದಾರೆ.

ಕೋಲಾರದ ಮುಳಬಾಗಿಲು ನಗರದ ಜಹಾಂಗೀರ್ ಮೊಹಲ್ಲಾ ದಲ್ಲಿ ಬೇಕೆ ಬೇಕು ನ್ಯಾಯ ಬೇಕು, ಜೈ ಶ್ರೀರಾಮ್ ಎಂದು ಘೋಷಣೆಗಳನ್ನು ಮೊಳಗಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದುದರಿಂದ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿತ್ತು.

ಕೋಲಾರದಲ್ಲಿ ಕಸಾಯಿ ಖಾನೆಗೆ ಮುತ್ತಿಗೆ

ಕಸಾಯಿಗೆ ಖಾನೆಗೆ ಬಿಜೆಪಿ ಕಾರ್ಯಕರ್ತರಿಂದ ಮುತ್ತಿಗೆ

ಕೋಲಾರ ಜಿಲ್ಲೆ ಮುಳಬಾಗಲು ಪಟ್ಟಣದ ಜಹಾಂಗೀರ್ ಮೊಹಲ್ಲಾದಲ್ಲಿರುವ ಕಸಾಯಿ ಖಾನೆಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಕಸಾಯಿಖಾನೆಯ ಮುಜ್ನು ಎಂಬಾತ ಕಟೌಟ್‌ ಹರಿಯಲು ಕುಮ್ಮಕ್ಕು ನೀಡಿದ್ದ ಎಂದು ಆರೋಪಿಸಲಾಗಿದೆ.

ಇಬ್ಬರು ಆರೋಪಿಗಳ ಬಂಧನ

ಮುಳಬಾಗಿಲಿನಲ್ಲಿ ರಾಮನ ಫ್ಲೆಕ್ಸ್‌ ಹರಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಮುಳಬಾಗಿಲು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ಫ್ಲೆಕ್ಸ್‌ ಹರಿದು ಹಾಕುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Rama Mandir: ರಾಮ ಮಂದಿರ ಆಂದೋಲನದ ಕಥನ ʻಮಂದಿರವಲ್ಲೇ ಕಟ್ಟಿದೆವು!ʼ ದಾವಣಗೆರೆಯಲ್ಲಿ ನಾಳೆ ಬಿಡುಗಡೆ

ಬೆಂಗಳೂರಿನಲ್ಲಿ ಫ್ಲೆಕ್ಸ್‌ ಹಾಕಿದವರ ಮೇಲೆ ಎಫ್‌ಐಆರ್‌

ಜನವರಿ 22ರಂದು ನಡೆಯಲಿರುವ ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನ ರಾಜಾಜಿ ನಗರ ವೆಸ್ಟ್ ಆಫ್ ಕಾರ್ಡ್ ರೋಡ್ ವಾರಿಯರ್ ಬೇಕರಿ ಬಳಿ ಬೃಹತ್ ಕಟೌಟ್ ಅಳವಡಿಸಲಾಗಿದೆ.

ಈ ಕಟೌಟ್‌ ಹಾಕಿದವರ ವಿರುದ್ಧ ಪೊಲೀಸರು ಇದೀಗ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಕಟೌಟ್ ಆಳವಡಿಕೆಗೆ ಅನುಮತಿ ಪಡೆಯಲಾಗಿದೆ, ಬೆಸ್ಕಾಂಗೆ ಹಣ ಪಾವತಿಸಿ ಅನುಮತಿ ಪಡೆದು ಕಟೌಟ್‌ ನಿರ್ಮಿಸಲಾಗಿದೆ. ಆದರೂ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿರುವುದು ಕಾರ್ಯಕರ್ತರನ್ನು ಕೆರಳಿಸಿದೆ. ಕಳೆದ 15 ದಿನಗಳಿಂದ ಇಲ್ಲದ ಸಮಸ್ಯೆ ಈಗೇಕೆ ಎಂದು ಶಿವನಗರ ಯುವಕರ ಸಂಘ ಪ್ರಶ್ನೆ ಮಾಡಿದೆ.

Exit mobile version