Site icon Vistara News

Rama Mandir : ಮುಸ್ಲಿಂ ಏರಿಯಾದಲ್ಲಿ ಮಂತ್ರಾಕ್ಷತೆ ವಿತರಣೆಗೆ ಆಕ್ಷೇಪ; ಬಿಗು ವಾತಾವರಣ

Akshathe Hanchuvike galate

ವಿಜಯಪುರ. ಮುಸ್ಲಿಮರೇ ಅಧಿಕವಾಗಿ ವಾಸಿಸುತ್ತಿರುವ ಏರಿಯಾದಲ್ಲಿ (Muslim Populated Area) ಶ್ರೀ ರಾಮ ಮಂದಿರದ (Rama Mandir) ಉದ್ಘಾಟನೆಯ ನಿಮಿತ್ತ ಮಂತ್ರಾಕ್ಷತೆ ವಿತರಣೆ (Mantrakshathe distribution) ಮಾಡಲುವ ವೇಳೆ ಗಲಾಟೆ ನಡೆದಿದೆ. ವಿಜಯಪುರ ಜಿಲ್ಲೆಯ (Vijayapura News) ದೇವರ ಹಿಪ್ಪರಗಿ ‌ಪಟ್ಟಣದ ವಾರ್ಡ್‌ ನಂಬರ್‌ 8ರಲ್ಲಿ ಈ ಘಟನೆ ನಡೆದಿದ್ದು, ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಇದಾದ ಬಳಿಕ ಹಿಂದುಗಳು ಅದೇ ಪ್ರದೇಶದಲ್ಲಿ ಮತ್ತೆ ದೊಡ್ಡ ಸಂಖ್ಯೆಯಲ್ಲಿ ತೆರಳಿ ಸವಾಲು ಹಾಕಿದ್ದಾರೆ.

ರಾಮ ಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಕೆಲವು ಹಿಂದು ಯುವಕರು ಮನೆ ಮನೆಗೆ ಮಂತ್ರಾಕ್ಷತೆ ಹಂಚುವ ಕೆಲಸ ಮಾಡುತ್ತಿದ್ದರು. ಶುಕ್ರವಾರ ಇಲ್ಲಿನ ಎಂಟನೇ ವಾರ್ಡ್‌ನಲ್ಲಿ ಮಂತ್ರಾಕ್ಷತೆ ಹಂಚುತ್ತಿದ್ದ ವೇಳೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು ಹಲ್ಲೆ ಕೂಡಾ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ವಾರ್ಡ್ ನಂಬರ್ 8ರಲ್ಲಿ ಮುಸ್ಲಿಂಮರು ಅಧಿಕವಾಗಿದ್ದಾರೆ. ಹೀಗಾಗಿ ಈ ಏರಿಯಾದಲ್ಲಿ ಘೋಷಣೆ ಕೂಗಬೇಡಿ ಎಂದು ಕೆಲವರು ತಗಾದೆ ತೆಗೆದಿದ್ದರು. ಆ ಸಂದರ್ಭದಲ್ಲಿ ಹಿಂದು ಯುವಕರ ಮೇಲೆ ಹಲ್ಲೆ ಮಾಡಲಾಗಿತ್ತು.

ಇದನ್ನು ಕೇಳಿದ ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ ಮತ್ತಿತರ ಸಂಘಟನೆಗಳ ಕಾರ್ಯಕರ್ತರು ‌ ಸಿಟ್ಟಿಗೆದ್ದು ಶನಿವಾರ ಇದೇ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹೋಗಿ ಮಂತ್ರಾಕ್ಷತೆ ಹಂಚಲು ನಿರ್ಧರಿಸಿದವು. ಅದಕ್ಕೆ ಪೂರಕವಾಗಿ ದೇವರಹಿಪ್ಪರಗಿ ಪಟ್ಟಣದಲ್ಲಿ ಹಿಂದೂ ಪರ ಸಂಘಟನೆಗಳು ದೊಡ್ಡ ಜಾಥಾ ನಡೆಸಿವೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ರಾಮ ತಾರಕ ಮಂತ್ರ ಜಪ ಮಾಡುತ್ತಾ ಜಾಥಾದಲ್ಲಿ ಭಾಗಿಯಾದರು.

ಹಿಂದೂ ಯುವಕರ ಮೇಲಿನ ಹಲ್ಲೆ ಕುರಿತು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ಪೊಲೀಸರು ಹಿಂದು- ಮುಸ್ಲಿಂ ಸಮಾಜದ ಮುಖಂಡರನ್ನು ಕರೆದು ಸಭೆ ಕರೆದು ಮಾತುಕತೆ ನಡೆಸಿದರು. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದು ಉಭಯ ಸಮಾಜದ ಮುಖಂಡರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Ram Mandir: ರಾಮನಿಗಾಗಿ 21.5 ಅಡಿಯ ಕೊಳಲು ತಯಾರಿಸಿದ ಮುಸ್ಲಿಮರು; ವಿಶ್ವದಾಖಲೆ

ಪೊಲೀಸ್‌ ಭದ್ರತೆಯಲ್ಲಿ ಮಂತ್ರಾಕ್ಷತೆ ಹಂಚಿಕೆ

ಹಿಂದೂ ಕಾರ್ಯಕರ್ತರು ಶನಿವಾರ ದೇವರ ಹಿಪ್ಪರಗಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿದರು. ನಗರದ ಕೆಲವು ಕಡೆ ಜಾಥಾಗಳು ನಡೆದವು. ಅದರ ನಡುವೆ ಶನಿವಾರ ಸಂಜೆ ಪೊಲೀಸ್‌ ಭದ್ರತೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಿಂದುಗಳು ಸೇರಿ ವಾರ್ಡ್‌ ನಂಬರ್‌ 8ರಲ್ಲೇ ಮಂತ್ರಾಕ್ಷತೆ ಹಂಚಲು ಮುಂದಾಗಿದ್ದಾರೆ.

Exit mobile version