Site icon Vistara News

Parental Control: ಪೋಷಕರು ಬುದ್ಧಿ ಹೇಳಿದ್ದಕ್ಕೆ ಮಧ್ಯ ವಯಸ್ಕನ ಜತೆ ಅಪ್ರಾಪ್ತೆ ಪರಾರಿ!

Hemavathi and Manjunath

ರಾಮನಗರ: ಅಪ್ರಾಪ್ತೆಯೊಬ್ಬಳು ಮಧ್ಯ ವಯಸ್ಕನ ಜತೆ ಪರಾರಿ ಆಗಿರುವ ಆರೋಪ (Parental Control) ಕೇಳಿ ಬಂದಿದೆ. ಪೋಷಕರು ಬುದ್ಧಿ ಹೇಳಿದ್ದಕ್ಕೆ ಸಿಟ್ಟು ಮಾಡಿಕೊಂಡು ಮನೆ ಬಿಟ್ಟು ತೆರಳಿದ್ದಾಳೆ. ರಾಮನಗ‌ರ ಜಿಲ್ಲೆಯ (Ramanagar News) ಮಾಗಡಿ ತಾಲೂಕಿನ ಕೆ.ವಿ ತಂಡ್ಯಾದಲ್ಲಿ ಘಟನೆ ನಡೆದಿದೆ.

ಹೇಮಾವತಿ (17) ಮನೆ ಬಿಟ್ಟು ಹೋದಾಕೆ. ದ್ವಿತೀಯ ಪಿಯುಸಿ ಓದುತ್ತಿದ್ದ ಹೇಮಾವತಿಯನ್ನು ಹುಳಿಯಾರಿನ ಮಂಜುನಾಥ್ (36)‌ ಎಂಬಾತ ಕರೆದುಕೊಂಡು ಹೋಗಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

ಆರು ದಿನ ಕಳೆದರೂ ಮಗಳು ಮನೆಗೆ ವಾಪಸ್ ಆಗದ ಹಿನ್ನೆಲೆಯಲ್ಲಿ ಪೋಷಕರು ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದಕ್ಕೂ ಮೊದಲು ಹೇಮಾವತಿ ಪೋಷಕರು ಸೋಮವಾರ ಸಂಜೆ ಮಂಜುನಾಥ್‌ನಿಗೆ ಕರೆ ಮಾಡಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಮನೆಗೆ ಬರುವುದಿಲ್ಲ. ಹೇಮಾವತಿಯನ್ನು ನಾನು‌ ಮನೆಗೆ ಕರೆದುಕೊಂಡು ಬಂದರೂ ಅವಳು ಮತ್ತೆ ನನ್ನ ಬಳಿ ಬರುತ್ತಾಳೆ ಎಂದು ಹೇಳಿ ಫೋನ್‌ ಕಟ್‌ ಮಾಡಿದ್ದಾರೆ.

ಹೀಗಾಗಿ ಹೇಮಾವತಿ ಪೋಷಕರು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲೂಕಿನ ಹುಳಿಯಾರ್‌ನಲ್ಲಿರುವ ಮಂಜುನಾಥ್ ಮನೆಯನ್ನು ಹುಡುಕಿಕೊಂಡು ಹೋಗಿದ್ದಾರೆ. ಮನೆಗೆ ತೆರಳಿ ಹುಡುಕಿದರೆ ಮಂಜುನಾಥ್ ಹಾಗೂ ಹೇಮವತಿ ಇಬ್ಬರು ಅಲ್ಲಿಂದ ಪರಾರಿ ಆಗಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರುವ ಮಾಗಡಿ ಪೊಲೀಸರು ಮಂಜುನಾಥ್‌ಗಾಗಿ ಹುಡುಕಾಟವನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Theft Case : ಈತ ಸೆಲೆಬ್ರಿಟಿ ಮನೆಗಳ್ಳ; ಖಾಲಿ ಸೈಟ್‌ಗಳೇ ಕದ್ದ ಒಡವೆಗಳ ಸೀಕ್ರೆಟ್‌ ಲಾಕರ್‌!

3 ವರ್ಷದ ಹಿಂದೆ ಯುವತಿ ಮೇಲೆ ಅತ್ಯಾಚಾರ ಎಸಗಿದರು, ಜೈಲಿಂದ ಬಂದು ಆಕೆಯನ್ನೇ ಕೊಂದರು

ಲಖನೌ: ದೇಶದಲ್ಲಿ ಹೆಣ್ಣುಮಕ್ಕಳ ಸುರಕ್ಷತೆಗಾಗಿ ಎಷ್ಟೇ ಕಠಿಣ ಕಾನೂನು ಜಾರಿಯಾಗಲಿ, ಯಾವುದೇ ಕ್ರಮ ತೆಗೆದುಕೊಳ್ಳಲಿ, ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು (Physical Abuse) ನಿಲ್ಲುತ್ತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದ (Uttar Pradesh) ಕೌಶಂಬಿ ಜಿಲ್ಲೆಯಲ್ಲಿ 19 ವರ್ಷದ ಯುವತಿಯೊಬ್ಬರಳನ್ನು ಇಬ್ಬರು ದುಷ್ಕರ್ಮಿಗಳು ಹಾಡಹಗಲೇ ಕೊಚ್ಚಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದು ದುರಂತ ಅಂದರೆ, ಇದೇ ಯುವತಿಯು ಮೂರು ವರ್ಷದ ಹಿಂದೆ ಅತ್ಯಾಚಾರಕ್ಕೀಡಾಗಿದ್ದಳು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮತ್ತೊಂದು ಕೊಲೆ ಪ್ರಕರಣದಲ್ಲಿ ಎರಡು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಅಶೋಕ್‌ ಹಾಗೂ ಪವನ್‌ ನಿಶಾದ್‌ ಎಂಬುವರು ಯುವತಿಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿದ್ದಾರೆ. ಅತ್ಯಾಚಾರ ಸಂತ್ರಸ್ತೆಯನ್ನು ಬೆನ್ನತ್ತಿಕೊಂಡು ಬಂದ ಯುವಕರು ಆಕೆಯನ್ನು ಕೊಲೆ ಮಾಡಿದ್ದಾರೆ. ಅಶೋಕ್‌ ಹಾಗೂ ಪವನ್‌ ನಿಶಾದ್‌ ಎಂಬುವರು ಯುವತಿಯನ್ನು ಬೆನ್ನತ್ತಿ, ಆಕೆಯನ್ನು ಕೊಡಲಿಯಿಂದ ಕೊಚ್ಚಿದರೂ ಗ್ರಾಮಸ್ಥರು ಮೂಕ ಪ್ರೇಕ್ಷಕರಾಗಿ ನಿಂತಿದ್ದರು ಎಂದು ತಿಳಿದುಬಂದಿದೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ಪೊಲೀಸರು

ಇದನ್ನೂ ಓದಿ: Physical Abuse : ಹುಡುಗಿ ಒಪ್ಪದೆ ಪುರುಷ ಅತ್ಯಾಚಾರ ಮಾಡಲಾಗದು!; ಕಾಂಗ್ರೆಸ್‌ ನಾಯಕನ ಸಂಶೋಧನೆ!

ಕೇಸ್‌ ವಾಪಸ್‌ ತೆಗೆದುಕೊಳ್ಳುವಂತೆ ಒತ್ತಾಯ

ಪವನ್‌ ನಿಶಾದ್‌ ಹಾಗೂ ಆತನ ಸ್ನೇಹಿತರು ಮೂರು ವರ್ಷಗಳ ಹಿಂದೆ ಅಂದರೆ, ಯುವತಿಯು ಬಾಲಕಿಯಾಗಿದ್ದಾಗ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ಇದಾದ ಬಳಿಕ ಬಾಲಕಿಯ ಪೋಷಕರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಇದೇ ಪ್ರಕರಣದಲ್ಲಿ ಪವನ್‌ ನಿಶಾದ್‌ ಸೇರಿ ಹಲವರು ಜೈಲಿಗೆ ಹೋಗಿದ್ದರು. ಜೈಲಿನಿಂದ ಬಳದ ಪವನ್‌ ನಿಶಾದ್‌, ಅದೇ ಯುವತಿ ದಾಖಲಿಸಿದ ಪ್ರಕರಣವನ್ನು ಹಿಂಪಡೆಯಬೇಕು ಎಂದು ಒತ್ತಡ ಹೇರಿದ್ದರು. ಇದಕ್ಕೆ ಯುವತಿ ಹಾಗೂ ಆಕೆಯ ಕುಟುಂಬಸ್ಥರು ನಿರಾಕರಿಸಿದ್ದು, ಕುಪಿತಗೊಂಡ ಪವನ್‌ ನಿಶಾದ್‌, ಆತನ ಸಹೋದರ ಅಶೋಕ್‌ ಎಂಬುವರು ಕೊಚ್ಚಿ ಕೊಂದಿದ್ದಾರೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

“ಕೌಶಂಬಿ ಜಿಲ್ಲೆಯ ದೆರ್ಹಾ ಎಂಬ ಗ್ರಾಮದಲ್ಲಿ ಭೀಕರ ಘಟನೆ ನಡೆದಿದೆ. ಯುವತಿ ಹಾಗೂ ಆರೋಪಿಗಳು ಒಂದೇ ಸಮುದಾಯದವರಾಗಿದ್ದಾರೆ. ಇವರ ಮಧ್ಯೆ ಮೊದಲಿನಿಂದಲೂ ದ್ವೇಷ ಇತ್ತು ಎಂದು ತಿಳಿದುಬಂದಿದೆ. ಇದು ಕೂಡ ಮಹಿಳೆಯ ಹತ್ಯೆಗೆ ಕಾರಣವಾಗಿರಬಹುದು. ಇಬ್ಬರೂ ಯುವಕರ ಬಂಧನಕ್ಕೆ ಬಲೆ ಬೀಸಲಾಗಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಂದಹಾಗೆ, ಅಶೊಕ್‌ ಹಾಗೂ ಪವನ್‌ ನಿಶಾದ್‌ ವಿರುದ್ಧ ಬೇರೊಂದು ಕೊಲೆ ಪ್ರಕರಣ ದಾಖಲಾಗಿದೆ. ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಇಬ್ಬರೂ ಜೈಲುಪಾಲಾಗಿದ್ದು, ಎರಡು ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದರು ಎಂದು ತಿಳಿದು ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version