Site icon Vistara News

Elephants Death: ಉರಿ ಬಿಸಿಲು ತಾಳಲಾರದೆ, ನೀರು ಸಿಗದೆ ನಿತ್ರಾಣಗೊಂಡಿದ್ದ ಕಾಡಾನೆಗಳ ಸಾವು

elephants Death in Ramanagara

ರಾಮನಗರ: ಕನಕಪುರ ತಾಲೂಕಿನ ಯಲವನತ್ತ ಅರಣ್ಯಪ್ರದೇಶ ಹಾಗೂ ಬೆಟ್ಟಹಳ್ಳಿ ಬೀಟ್‌ನಲ್ಲಿ ಕಾಡಾನೆಗಳು (Elephants Death) ಮೃತಪಟ್ಟಿವೆ. 35 ಹಾಗೂ 14 ವರ್ಷದ ಎರಡು ಕಾಡಾನೆಗಳು ಉಸಿರು ನಿಲ್ಲಿಸಿದೆ. ಬಿಸಿಲಿನ ಬೇಗೆ ತಾಳಲಾರದೆ ಕಾಡಾನೆಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ರಾಮನಗರದ ಕನಕಪುರ ವಲಯದ ಬೆಟ್ಟಹಳ್ಳಿ ಬೀಟ್‌ನಲ್ಲಿ ಘಟನೆ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ 14 ವರ್ಷದ ಒಂಟಿ ಸಲಗ ನಿತ್ರಾಣಗೊಂಡಿತ್ತು. ನಿತ್ರಾಣಗೊಂಡಿದ್ದ ಕಾಡಾನೆಯನ್ನು ಗಮನಿಸಿದ ಅರಣ್ಯ ಸಿಬ್ಬಂದಿ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಿದ್ದರು. ಆದರೆ ಇದೀಗ ಕಾಡಂಚಿನಲ್ಲಿ ಕೊನೆಯುಸಿರೆಳೆದಿದೆ.

ಸ್ಥಳಕ್ಕೆ ಡಿಎಫ್‌ಓ ರಾಮಕೃಷ್ಣಪ್ಪ, ಕನಕಪುರ ಎಸಿಎಫ್ ಗಣೇಶ್ ಹಾಗು ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಕಾಡಾನೆ ಸಾವಿನ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ.

ಕಾಡಿನಲ್ಲಿ ಕುಡಿಯಲು ನೀರು ಸಿಗದೆ ಪರದಾಡಿ ನಿತ್ರಾಣಗೊಂಡು ಮೃತಪಟ್ಟಿರುವ ಶಂಕೆ ಇದೆ. 14 ವರ್ಷದ ಕಾಡಾನೆ ಕಳೆದ ಮೂರು ದಿನಗಳ ಹಿಂದೆ ನಿತ್ರಾಣಗೊಂಡಿತ್ತು. ಇದೀಗ ನಿತ್ರಾಣಗೊಂಡಿದ್ದ ಕಾಡಾನೆ ಸೇರಿ ಮತ್ತೊಂದು 35 ವರ್ಷದ ಕಾಡಾನೆಯೂ ಮೃತಪಟ್ಟಿದೆ. ಕನಕಪುರ -ತಮಿಳುನಾಡು ಗಡಿಭಾಗ ಯಲವನತ್ತ ಕಾಡಂಚಿನಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Murder Case : ಸೀರೆಯಿಂದ ಕುತ್ತಿಗೆ ಬಿಗಿದು ಹೆಂಡತಿಯನ್ನು ಕೊಂದು ಎಸ್ಕೇಪ್‌

ಕಲಬುರಗಿಯಲ್ಲಿ ಕುಡಿಯಲು ನೀರು‌ ಸಿಗದೆ ಒದ್ದಾಡಿದ ಆಕಳು ಸಾವು

ನೀರಿಗೆ ಎಲ್ಲೆಡೆ ಹಾಹಾಕಾರ ಶುರುವಾಗಿದೆ. ಜನ-ಜಾನುವಾರುಗಳಿಗೆ ನೀರು ಸಿಗದೇ ಕಂಗಲಾಗಿದ್ದಾರೆ. ಕಲವುರಗಿಯ ಅಫಜಲಪುರ ತಾಲೂಕಿನ ಗುಡ್ಡೆವಾಡಿ ಗ್ರಾಮದಲ್ಲಿ ಕುಡಿಯಲು ನೀರು ಸಿಗದೆ ಆಕಳೊಂದು ಒದ್ದಾಡಿ ಪ್ರಾಣ ಬಿಟ್ಟಿದೆ. ಗ್ರಾಮದ ಬಂಡೆಪ್ಪಾ ಪೂಜಾರಿ ಎಂಬುವವರಿಗೆ ಸೇರಿದ ಆಕಳು, ನೀರು ಇಲ್ಲದೆ ಉಸುಕಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದೆ.

ಅಫಜಲಪುರ ಸೊನ್ನ ಬ್ಯಾರೆಜ್‌ನಿಂದ ಗಾಣಗಾಪುರ ಬ್ಯಾರೆಜ್‌ಗೆ ನೀರು ಬಿಡುವಂತೆ ಒತ್ತಾಯಿಸಿ‌ ಪ್ರತಿಭಟನೆಯೂ ನಡೆದಿದೆ. ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತದ ಬಳಿ ರಸ್ತೆ ತಡೆದು ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಮಳೆ ಅಭಾವ ಹಿನ್ನೆಲೆಯಲ್ಲಿ ಭೀಮಾ ನದಿ‌ ಬತ್ತಿ‌ಹೋಗಿದೆ. ಕುಡಿಯಲು ‌ನೀರಿಲ್ಲದೆ ಜನ ಜಾನುವಾರು ಪರಿತಪಿಸುತ್ತಿವೆ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.

ತುಮಕೂರಿನಲ್ಲಿ ಮೀನುಗಳು ಮಾರಣಹೋಮ

ಬಿಸಿಲಿನ ತಾಪಕ್ಕೆ ಕೆರೆಯಲ್ಲಿದ್ದ ರಾಶಿ ರಾಶಿ ಮೀನುಗಳು ದಾರುಣವಾಗಿ ಮೃತಪಟ್ಟಿವೆ. ನೀರಿಲ್ಲದೇ ವಿಲವಿಲನೇ ಒದ್ದಾಡಿ ಸಾವಿರಾರು ಮೀನುಗಳು ಸಾವನ್ನಪ್ಪುತ್ತಿವೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕನ್ನಮೇಡಿ ಕೆರೆಯಲ್ಲಿ ಘಟನೆ ನಡೆದಿದೆ. ಸುಮಾರು 108 ಎಕರೆ ಪ್ರದೇಶದಲ್ಲಿರುವ ಕನ್ನಮೇಡಿ ಕೆರೆಯು ಮಳೆಯಿಲ್ಲದೇ ಸಂಪೂರ್ಣವಾಗಿ ಖಾಲಿ ಖಾಲಿಯಾಗಿದೆ. ಬಿಸಿಲಿನ ತಾಪಕ್ಕೆ ನೀರಿಲ್ಲದೇ ಕೆರೆಯಲ್ಲಿದ್ದ ಮೀನುಗಳು ವಿಲವಿಲನೇ ಒದ್ದಾಡಿ ಮೃತಪಟ್ಟಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version