Site icon Vistara News

Road accident : ಏನಿದು ದುರಂತ ಸರಣಿ?; ನಿನ್ನೆ ತಾಯಿ-ಮಗ ಮೃತ್ಯು; ಇಂದು ತಂದೆ-ಮಗಳು ಅಪಘಾತಕ್ಕೆ ಬಲಿ

Accident near Bhadravati

ಶಿವಮೊಗ್ಗ: ರಾಜ್ಯದಲ್ಲಿ ಭೀಕರ ಅಪಘಾತಗಳ ಸರಣಿ (Accident series) ಮುಂದುವರಿದೆ. ಗುರುವಾರ ಬೆಳಗ್ಗೆ ತರೀಕೆರೆ ಬಳಿ ಖಾಸಗಿ ಬಸ್‌ (Tarikere Private bus accident) ಒಂದರ ಅಟ್ಟಹಾಸಕ್ಕೆ ಶಾಲೆಗೆ ಹೊರಟಿದ್ದ 15 ವರ್ಷದ ಬಾಲಕಿ ಪ್ರಾಣವನ್ನೇ ಕಳೆದುಕೊಂಡರೆ ಮಧ್ಯಾಹ್ನದ ಹೊತ್ತಿಗೆ ಶಿವಮೊಗ್ಗದ ಭದ್ರಾವತಿ ತಾಲೂಕಿನ ಜಾವಳ್ಳಿಯಲ್ಲಿ ಅಪಘಾತದಲ್ಲಿ ತಂದೆ ಮತ್ತು ಮಗಳು (Father and daughter dead in accident) ಪ್ರಾಣ ಕಳೆದುಕೊಂಡಿದ್ದಾರೆ. ಬುಧವಾರವಷ್ಟೇ ಚಿಕ್ಕಮಗಳೂರಿನ ಕಣಿವೆ ಕ್ರಾಸ್‌ನಲ್ಲಿ ಕಾರಿನಲ್ಲಿ ಸಾಗುತ್ತಿದ್ದ ತಾಯಿ ಮತ್ತು ಮಗ ಇಬ್ಬರೂ ಮೃತಪಟ್ಟಿದ್ದರು (Mother and son dead). ತಾಯಿ-ಮಗನ ಸಾವಿನ ಬೆನ್ನಿಗೇ ಈಗ ತಂದೆ- ಮಗಳ ಸಾವು ಭಾರಿ ನೋವನ್ನು ಉಂಟು ಮಾಡಿದೆ.

ಭದ್ರಾವತಿಯಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಜಾವಳ್ಳಿ ಬಳಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ತಂದೆ ಮತ್ತು ಮಗಳು ಪ್ರಾಣ ಕಳೆದುಕೊಂಡಿದ್ದಾರೆ. ಎರಡು ಕಾರುಗಳಲ್ಲಿದ್ದ ಒಟ್ಟು 8 ಮಂದಿಗೆ ಗಾಯಗಳಾಗಿವೆ.

ನಜ್ಜುಗುಜ್ಜಾಗಿರುವ ಕಾರು

ಶಿವಮೊಗ್ಗದ ಟಿಪ್ಪು ನಗರದ ನಿವಾಸಿಗಳಾದ ತಂದೆ ಅಫ್ತಾಬ್‌ (35) ಮತ್ತು ಮಗಳು ಮದೀಯಾ ಮೃತ ದುರ್ದೈವಿಗಳು. ಜಾವಳ್ಳಿ ಬಳಿ ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡ ರಭಸಕ್ಕೆ ಅಫ್ತಾಬ್‌ ಮತ್ತು ಮದೀಯಾ ಅವರು ಪ್ರಯಾಣಿಸುತ್ತಿದ್ದ ಕಾರು ಹೊಂಡಕ್ಕೆ ಉರುಳಿದೆ. ಈ ಹಂತದಲ್ಲಿ ಕಾರು ಉರುಳಿದ ಹೊಡೆತಕ್ಕೆ ಅಫ್ತಾಬ್‌ ಅವರು ಡ್ರೈವಿಂಗ್‌ ಸೀಟಿನಲ್ಲಿ ಕುಳಿತಲ್ಲೇ ಗಂಭೀರ ಗಾಯಕ್ಕೊಳಗಾದರು.

ಎರಡೂ ಕಾರಿನಲ್ಲಿದ್ದ ಗಾಯಾಳುಗಳನ್ನು ಕೂಡಲೇ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ನಿನ್ನೆಯಷ್ಟೇ ತಾಯಿ-ಮಗ ಪ್ರಾಣ ಕಳೆದುಕೊಂಡಿದ್ದರು

ಚಿಕ್ಕಮಗಳೂರು (Chikkamagaluru news) ತಾಲೂಕಿನ ಕಣಿವೆ ಕ್ರಾಸ್ ಬಳಿ ಕಾರೊಂದು ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ತಾಯಿ ಚೆನ್ನಮ್ಮ (67) ಮತ್ತು ಅವರ ಮಗ ನಿರಂಜನ್‌ (42) ಮೃತಪಟ್ಟ ಘಟನೆ ಬುಧವಾರವಷ್ಟೇ ಸಂಭವಿಸಿತ್ತು.

ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆ ನಿವಾಸಿಯಾಗಿರುವ ನಿರಂಜನ್‌ ಅವರು ತಮ್ಮ ತಾಯಿಯನ್ನು ಕರೆದುಕೊಂಡು ಚಿಕ್ಕಮಗಳೂರಿನಿಂದ ಕಡೂರಿಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ.

ನಿರಂಜನ್‌ ಅವರು ಖಾಸಗಿ ಆಸ್ಪತ್ರೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅಮ್ಮನ ಜತೆಗೆ ಹೋಗುವಾಗಲೇ ದುರಂತ ಸಂಭವಿಸಿದ್ದನ್ನು ನೋಡಿ ಮನೆಯವರು ಕಣ್ಣೀರು ಹಾಕಿದ್ದರು.

ಜಾಲಿ ರೈಡ್‌ಗೆ ಬಂದಿದ್ದ ಯುವಕರು ದುರ್ಮರಣ

ಇಷ್ಟೇ ಅಲ್ಲ ದಾವಣಗೆರೆ (Davanagere News) ಬಳಿಯ ರಾಷ್ಟ್ರೀಯ ಹೆದ್ದಾರಿ 54ರಲ್ಲಿ (NH 54) ತಡೆಗೋಡೆಗೆ ಬೈಕ್‌ ಡಿಕ್ಕಿ (Bike Accident)ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಾಲಿ ರೈಡ್‌ಗೆಂದು ಕೇರಳದಿಂದ ಬಂದಿದ್ದ ಅತುಲ್(25), ಋಷಿಕೇಶ್ ( 24) ಅಪಘಾತದಲ್ಲಿ (Road Accident) ಪ್ರಾಣ ಕಳೆದುಕೊಂಡಿದ್ದಾರೆ.

ದಾವಣಗೆರೆಯ ಎಸ್‌ಎಸ್ ಆಸ್ಪತ್ರೆ ಪಕ್ಕದಲ್ಲಿರುವ ರೈಲ್ವೆ ಬ್ರಿಡ್ಜ್ ಬಳಿ ಅಪಘಾತ ನಡೆದಿದೆ. ಕೇರಳದಿಂದ ಜಾಲಿ ರೈಡ್‌ಗೆ ಬೈಕ್‌ನಲ್ಲಿ ಬಂದಿದ್ದರು ಎಂದು ಪೊಲೀಸರು ಪ್ರಾಥಮಿಕ ಮಾಹಿತಿ‌ ನೀಡಿದ್ದಾರೆ. ಬೈಕ್ ಸವಾರನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಬ್ರಿಡ್ಜ್ ಮೇಲಿಂದ ಹಾರಿ ರೈಲ್ವೆ ಹಳಿ ಪಕ್ಕದಲ್ಲಿ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿದೆ.

ಶಿರಸಿಯಲ್ಲಿ ಟ್ಯಾಂಕರ್-ಮಿನಿ ಲಾರಿ ನಡುವೆ ಮುಖಾಮುಖಿ

ಶಿರಸಿ: ಶಿರಸಿ ತಾಲೂಕಿನ ಬನವಾಸಿ ಭಾಗದ ಗುಡ್ನಾಪುರದಲ್ಲಿ ಘಟನೆ ಗುರುವಾರ ಟ್ಯಾಂಕರ್‌ ಮತ್ತು ಮಿನಿ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಚಾಲಕ ಹಾಗೂ ಕ್ಲೀನರ್ ಗೆ ಗಾಯಗಳಾಗಿವೆ.

ಎದುರಿನಿಂದ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ನಡೆದ ಅವಘಡ ಇದಾಗಿದೆ. ಶಿವಮೊಗ್ಗ ಜಿಲ್ಲೆ ಜಡೆ ಗ್ರಾಮದ ಆನಂದ ಹಾಗೂ ಹರೀಶ್ ನಾಗಪ್ಪಗೆ ಗಾಯಗಳಾಗಿದ್ದು, ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Exit mobile version