Site icon Vistara News

Road Accident : ಯಮಸ್ವರೂಪಿ ಟ್ರಕ್‌ಗೆ ಮಸಣ ಸೇರಿದ ಬೆಂಗಳೂರಿಗರು; ಎರಡು ತುಂಡಾಯ್ತು ಬೈಕ್‌!

Bike Accident in Karnataka rider dead

ಹಾವೇರಿ/ ಧಾರವಾಡ/ಶಿರಸಿ: ಇತ್ತೀಚೆಗೆ ರಸ್ತೆ ಅಪಘಾತಗಳು (Road Accident) ಹೆಚ್ಚಾಗುತ್ತಿದ್ದು, ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾವೇರಿಯ ಶಿಗ್ಗಾವ್ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಕಾರು ಹಾಗೂ ಟ್ರಕ್‌ ನಡುವೆ ಡಿಕ್ಕಿಯಾಗಿ ಬೆಂಗಳೂರು ಮೂಲದ ಇಬ್ಬರು ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ದುರ್ಘಟನೆ ನಡೆದಿದೆ. ಕಾರಿನಲ್ಲಿದ್ದ ಮನೋಹರ್ (38), ಪ್ರಿಯಾಂಕ (23) ಎಂಬುವವರು ಮೃತಪಟ್ಟಿದ್ದಾರೆ.

ಛಿದ್ರಗೊಂಡ ಕಾರು

ಮೊನಾಲಿಸಾ (38), ಸೀಖಾ (07) ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಇವರಿಬ್ಬರನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಗಳೂರಿನಿಂದ ಬಾಂಬೆ ಕಡೆಗೆ ಕಾರಿನಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ತಡಸ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Electric Shock: ವಿದ್ಯುದಾಘಾತದಿಂದ ಒಂದೇ ಕುಟುಂಬದ ಮೂವರ ದುರ್ಮರಣ; ಮೊಮ್ಮಗಳ ರಕ್ಷಣೆಗೆ ಹೋದ ಅಜ್ಜ-ಅಜ್ಜಿ ಸಾವು

ಎರಡು ತುಂಡಾದ ಬೈಕ್‌, ಸವಾರ ಸಾವು

ಬೈಕ್‌ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜೋಡಳ್ಳಿ ಗ್ರಾಮದಲ್ಲಿ ನಡೆದಿದೆ. ಅನಿಲ್ ಬಾಳಿಕಾಯಿ (38) ಮೃತ ದುರ್ದೈವಿ.

ಬೈಕ್‌ ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ ಎರಡು ತುಂಡಾಗಿ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಅನಿಲ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಬೈಕ್‌ ಸ್ಕಿಡ್‌ ಆಗಿ ಸವಾರ ಸಾವು, ಮತ್ತೊಬ್ಬ ಗಂಭೀರ

ಉತ್ತರ ಕನ್ನಡದ ಶಿರಸಿ ತಾಲೂಕಿನ ಸಣ್ಣಕೇರಿ ಗ್ರಾಮದ ಸಮೀಪ ಬೈಕ್ ಸ್ಕಿಡ್ಡಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊರ್ವ ಗಂಭೀರ ಗಾಯಗೊಂಡಿದ್ದಾನೆ.

ಶಿರಸಿ-ಹಾವೇರಿ ರಾಜ್ಯ ಹೆದ್ದಾರಿ ಸಣ್ಣಕೇರಿ ಬಳಿ ಅಪಘಾತ ನಡೆದಿದೆ. ಹಾನಗಲ್ ಮೂಲದ ಪರಶುರಾಮ ಲಕ್ಷ್ಮಣ ಭಜಂತ್ರಿ (40) ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಣೇಶ ಸಾತನಳ್ಳಿ ಎಂಬಾತ ಗಂಭೀರ ಗಾಯಗೊಂಡಿದ್ದಾರೆ. ಇಬ್ಬರೂ ಹಾನಗಲ್ ಮೂಲದವರು ಎಂದು ತಿಳಿದು ಬಂದಿದೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version